ಅ.18.2023; ನವರಾತ್ರಿಯ ನಾಲ್ಕನೆಯ ದಿನ “ಕುಷ್ಮಾಂಡ ದೇವಿ” ಯ ಆರಾಧನೆ:
ಆಶ್ವಯುಜ ಮಾಸದ ಶುಕ್ಲಪಕ್ಷದ ಚತುರ್ಥಿಯಂದು ಕುಷ್ಮಾಂಡ ದೇವಿಯನ್ನು ಆರಾಧಿಸಲಾಗುತ್ತದೆ. ಕುಷ್ಮಾಂಡ ದೇವಿಯ ಹಿನ್ನೆಲೆಯ ಕುರಿತು ಮತ್ತು ಇಂದು ಮೈಸೂರು ದಸರಾ 2023 ರ ಪ್ರಯುಕ್ತ ನಡೆಯುವ ಆಯೋಜಿತ ಕಾರ್ಯಕ್ರಮಗಳ ವಿವರ ಇಲ್ಲಿದೆ.
● ಉಜ್ವಲಾ ವಿ.ಯು
ನವರಾತ್ರಿ ಹಬ್ಬದ 4ನೇ ದಿನದಂದು ಪೂಜಿಸಲ್ಪಡುವ ಕೂಷ್ಮಾಂಡ ದೇವಿಯು ಸೃಷ್ಟಿಯ ಸಂಕೇತವಾಗಿ ಪರಿಗಣಿಸಲ್ಪಡುತ್ತಾಳೆ. ಇವಳು ಇಡೀ ವಿಶ್ವವನ್ನು ಸೃಷ್ಟಿಸಿದಳು ಎಂದು ನಂಬಲಾಗಿದೆ.
ಜಗತ್ತಿನಲ್ಲಿ ಸೃಷ್ಟಿಯ ಅಸ್ತಿತ್ವವೇ ಇಲ್ಲದಾಗ ಎಲ್ಲೆಡೆ ಅಂಧಕಾರ ಕವಿದಿತ್ತು. ಆಗ ದೇವಿಯು ತನ್ನ ಶಕ್ತಿಯಿಂದ ಇಡೀ ಬ್ರಹ್ಮಾಂಡವನ್ನು ಸೃಷ್ಟಿಸಿದಳು. ಆದ್ದರಿಂದಲೇ ಇವಳು ಆದಿಶಕ್ತಿಯ ರೂಪದಲ್ಲಿ ಪೂಜಿಸಲ್ಪಡುತ್ತಾಳೆ. ಕೂಷ್ಮಾಂಡ ದೇವಿಯ ವಾಸವು ಸೌರವ್ಯೂಹದ ಒಳಗಿನ ಪ್ರಪಂಚದಲ್ಲಿದೆ ಎಂದು ನಂಬಲಾಗಿದೆ.
ತಾಯಿ ಕೂಷ್ಮಾಂಡಾ ದೇವಿ (Kushmanda Devi) ಯು ಎಂಟು ತೋಳುಗಳನ್ನು ಹೊಂದಿದ್ಡಾಳೆ. ಈ ಕಾರಣಕ್ಕಾಗಿ ತಾಯಿಯನ್ನು “ಅಷ್ಟಭುಜಾದೇವಿ” ಎಂದೂ ಕರೆಯುತ್ತಾರೆ. ಅವಳ ಕೈಗಳಲ್ಲಿ ಕ್ರಮವಾಗಿ ಕಮಂಡಲ, ಬಿಲ್ಲು, ಬಾಣ, ಕಮಲದ ಹೂವು, ಮಕರಂದ ತುಂಬಿದ ಮಡಿಕೆ, ಚಕ್ರ ಮತ್ತು ಗದೆಗಳು ಇವೆ. ಹಾಗೂ ಎಂಟನೇ ಕೈಯಲ್ಲಿ ಜಪಮಾಲೆಯನ್ನು ಹಿಡಿದುಕೊಂಡಿದ್ದಾಳೆ. ದೇವಿಯ ವಾಹನ ಸಿಂಹ.
ನಗುಮೊಗದ ಶಾಂತ ಸ್ವರೂಪಳಾದ ತಾಯಿಯು ಶಿಷ್ಟರನ್ನು ರಕ್ಷಿಸುವ, ದುಷ್ಟರನ್ನು ಶಿಕ್ಷಿಸುವವಳಾಗಿದ್ದಾಳೆ.
ಮೈಸೂರು ದಸರಾ 2023 ಇಂದು ನಡೆಯುವ ಕಾರ್ಯಕ್ರಮಗಳ ವಿವರ:
ಮೈಸೂರು ದಸರಾ (Mysore Dasara 2023) ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇಂದು ಬೆಳಗ್ಗೆ 11 ಗಂಟೆಗೆ ಚಿಗುರು ಕವಿಗೋಷ್ಠಿ, ಮಹಿಳಾ ಕವಿಗೋಷ್ಠಿಯು ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಆರಂಭವಾಯಿತು. ಈ ಕಾರ್ಯಕ್ರಮಕ್ಕೆ ಖ್ಯಾತ ಕವಯಿತ್ರಿ ಸವಿತಾ ನಾಗಭೂಷಣ್ ಅವರು ಚಾಲನೆ ನೀಡಿದರು.
ಇನ್ನು ಬೆಳಗ್ಗೆ 11 ಗಂಟೆಗೆ ಜಗನ್ಮೋಹನ ಅರಮನೆಯಲ್ಲಿ “ಮಕ್ಕಳ ದಸರಾ”ವನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಉದ್ಘಾಟಿಸಿದರು.
ಸಂಜೆ 5.30ಕ್ಕೆ ಅಪರ್ಣ ವಿನೋದ್ ಮೆನನ್ ಮತ್ತು ತಂಡದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಗಂಟೆಗೆ ಡಾ.ಕಿಕ್ಕೇರಿ ಕೃಷ್ಣ ಮೂರ್ತಿ, ಡಾ. ಅಪ್ಪಗೆರೆ ತಿಮ್ಮರಾಜು ಮತ್ತು ತಂಡದಿಂದ ಕನ್ನಡವೇ ಸತ್ಯ ಭಾವಗೀತೆ ಮತ್ತು ಜನಪದ ಗೀತೆಗಳ ಸಂಭ್ರಮ ನಡೆಯಲಿದೆ. ಸಂಜೆ 7ಗಂಟೆಗೆ ಪೊಲೀಸ್ ಬ್ಯಾಂಡ್ ಹಾಗೂ ರಾತ್ರಿ 8 ಗಂಟೆಗೆ ಪದ್ಮಶ್ರೀ ಶುಭಾ ಮುದ್ಗಲ್ ಅವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ನಡೆಯಲಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತ ಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ