ನಿರ್ಮಾಣ ಹಂತದಲ್ಲಿರುವ ಅಯೋಧ್ಯಾ ರಾಮ ಮಂದಿರದ ಕುರಿತು ಕುತೂಹಲಕಾರಿ ಮಾಹಿತಿ
ಅಯೋಧ್ಯೆಯ ರಾಮಮಂದಿರದಲ್ಲಿ ಜನವರಿ 22 ರಂದು ರಾಮನ ಮೂರ್ತಿಯ ‘ಪ್ರಾಣ ಪ್ರತಿಷ್ಠಾನೆ” ಕಾರ್ಯಕ್ರಮವು ನಡೆಯಲಿದೆ. ಕೆಲವೇ ದಿನಗಳು ಬಾಕಿ ಇರುವುದರಿಂದ ಎಲ್ಲಾ ಕಾಮಗಾರಿಗಳು ಭರದಿಂದ ಸಾಗಿದೆ.
ರಾಮ ಮಂದಿರವನ್ನು (Ayodhya Ram Mandir) ಅತ್ಯದ್ಭುತವಾದ ವಾಸ್ತುಶಿಲ್ಪವನ್ನು ಬಳಸಿ ನಿರ್ಮಾಣ ಮಾಡಲಾಗುತ್ತಿದೆ. ಈ ರಾಮ ಮಂದಿರದ ಕೆಲವು ಚಿತ್ರಣಗಳ ಜೊತೆಗೆ ದೇವಾಲಯದ ಕುರಿತಾದ ಕುತೂಹಲಕರವಾದ ಮಾಹಿತಿ ಇಲ್ಲಿದೆ.
ಅಯೋಧ್ಯೆ ರಾಮ ಮಂದಿರ ವಿಶೇಷತೆ ಎಂದರೆ ರಾಮ ಮಂದಿರವು 1000 ರಿಂದ 2500 ವರ್ಷಗಳವರೆಗೆ ಹವಾಮಾನದ ವೈಪರೀತ್ಯವನ್ನು ತಡೆದುಕೊಳ್ಳುವಷ್ಟು ಪ್ರಬಲವಾಗಿದೆ ಎಂದು ರಾಮಮಂದಿರದ ಪ್ರಾಜೆಕ್ಟ್ ಎಂಜಿನಿಯರ್ ಗಿರೀಶ್ ಸಾಹಸಬುಜಿನಿ ಅವರು ಹಂಚಿಕೊಂಡಿದ್ದಾರೆ.
70 ಎಕರೆ ವಿಸ್ತೀರ್ಣದ ಸಂಕೀರ್ಣದಲ್ಲಿ ಶೇ 70 ರಷ್ಟು ಹಸಿರು ಪ್ರದೇಶವಿದ್ದು, 600 ಮರಗಳನ್ನು ಸಂರಕ್ಷಿಸಲಾಗಿದೆ. ದೇವಾಲಯದ ಸಂಕೀರ್ಣವು ಎರಡು ಕೊಳಚೆ ನೀರಿನ ಸಂಸ್ಕರಣಾ ಘಟಕಗಳು (STP), ಒಂದು ನೀರಿನ ಸಂಸ್ಕರಣಾ ಘಟಕ (WTP) ಮತ್ತು ಪವರ್ ಹೌಸ್ನಿಂದ ಮೀಸಲಾದ ವಿದ್ಯುತ್ ಮಾರ್ಗವನ್ನು ಹೊಂದಿದ್ದು, ಆತ್ಮನಿರ್ಭರವಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ.
ಅಯೋಧ್ಯಾ ರಾಮ ಮಂದಿರದ ರಚನೆಯು ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಪ್ರಸಿದ್ಧ ವಾಸ್ತುಶಿಲ್ಪದ ಮಿಶ್ರಣವಾಗಿದೆ. ದೇವಾಲಯದ ಮುಖ್ಯ ರಚನೆಯನ್ನು ನಾಗರ ಶೈಲಿಯಲ್ಲಿ ರಚಿಸಲಾಗಿದೆ.
ದೇವಾಲಯದ ಆವರಣದಲ್ಲಿ ದ್ರಾವಿಡ ಶೈಲಿಯ ಪ್ರಭಾವ ಇರಲಿದೆ. ಈ ದೇವಾಲಯದ ಸಂಕೀರ್ಣವು 380 ಅಡಿ ಉದ್ದ, 250 ಅಡಿ ಅಗಲ ಮತ್ತು 161 ಅಡಿ ಎತ್ತರವಿದೆ.
ಇಡೀ ದೇವಾಲಯವು ಮೂರು ಅಂತಸ್ತನ್ನು ಹೊಂದಿದೆ. ದೇವಾಲಯದ ಪ್ರವೇಶ ದ್ವಾರವು ಪೂರ್ವ ದಿಕ್ಕಿನಲ್ಲಿ ಮತ್ತು ನಿರ್ಗಮನ ದ್ವಾರವು ದಕ್ಷಿಣ ದಿಕ್ಕಿನಲ್ಲಿ ಇದೆ.
ಭಕ್ತರು ಮುಖ್ಯ ದೇವಾಲಯವನ್ನು ತಲುಪಲು ಪ್ರವೇಶ ದ್ವಾರದಿಂದ 32 ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ.
ದೇವಾಲಯದ ಪ್ರತಿ ಅಂತಸ್ತಿನಲ್ಲೂ 20 ಅಡಿ ಎತ್ತರದ ಸ್ಥಂಭಗಳಿವೆ. ದೇವಾಲಯವು ಒಟ್ಟು 392 ಕಂಬಗಳು ಮತ್ತು 44 ದ್ವಾರಗಳನ್ನು ಹೊಂದಿರುತ್ತದೆ. ದೇಗುಲದ ಮುಖ್ಯ ಆವರಣದೊಳಗೆ ಆಯತಾಕಾರದ ಪರದಿ ಇದ್ದು, ಇದಕ್ಕೆ ಪಕೋಟಾ ಎಂದು ಕರೆಯುತ್ತಾರೆ. ಪಕೋಟಾವು ದಕ್ಷಿಣ ಭಾರತದ ದೇವಾಲಯಗಳ ಮಾದರಿಯದ್ದಾಗಿರುತ್ತದೆ.
ಈ ಪಕೋಟಾದ ನಾಲ್ಕು ದಿಕ್ಕುಗಳಲ್ಲಿ ಸೂರ್ಯ, ಗಣೇಶ, ಶಿವ, ದುರ್ಗಾ, ವಿಷ್ಣು ಮತ್ತು ಬ್ರಹ್ಮ ದೇವರಿಗೆ ಸಮರ್ಪಿತವಾದ ಆರು ದೇವಾಲಯಗಳನ್ನು ನಿರ್ಮಿಸಲಾಗಿದೆ. ಉತ್ತರ ಭಾಗದಲ್ಲಿ ಅನ್ನಪೂರ್ಣ ಮಾತೆಯ ದೇವಸ್ಥಾನವಿದ್ದು, ದಕ್ಷಿಣ ಭಾಗದಲ್ಲಿ ಹನುಮಂತ ದೇವರ ದೇವಸ್ಥಾನವಿರುತ್ತದೆ.
ದೇವಾಲಯದ ಆವರಣದಲ್ಲಿ ಇನ್ನೂ 7 ಗುಡಿಗಳನ್ನು ನಿರ್ಮಿಸಲು ಯೋಚಿಸಿದ್ದು, ಇದರಲ್ಲಿ ಮಹರ್ಷಿ ವಾಲ್ಮೀಕಿ, ಮಹರ್ಷಿ ವಶಿಷ್ಠ, ಮಹರ್ಷಿ ವಿಶ್ವಾಮಿತ್ರ, ಮಹರ್ಷಿ ಅಗಸ್ತಯ ನಿಶಾದ್ ರಾಜ್, ಮಾತಾ ಶಬರಿ ಮತ್ತು ಅಹಲ್ಯಾ ದೇವಿಯನ್ನು ಪೂಜಿಸಲಾಗುತ್ತದೆ.
ಅಯೋಧ್ಯೆಯ ರಾಮಮಂದಿರದ ಮೇಲೆ ಹಾರಿಸಲು ಧ್ವಜವನ್ನು ಸಿದ್ಧಪಡಿಸಲಾಗಿದೆ. ಇದು 40 ಅಡಿ ಉದ್ದ ಮತ್ತು 42 ಅಡಿ ಅಗಲವಿದೆ. ಈ ಧ್ವಜವು ಒಂದು ಬದಿಯಲ್ಲಿ ಹನುಮಾನ್ ಮತ್ತು ಇನ್ನೊಂದು ಬದಿಯಲ್ಲಿ ಹನುಮಂತನ ಭುಜದ ಮೇಲೆ ರಾಮ ಮತ್ತು ಲಕ್ಷ್ಮಣನ ಚಿತ್ರಗಳನ್ನು ಹೊಂದಿದೆ.
ರಾಮ ಮಂದಿರದ ಬುನಾದಿ ಕಾರ್ಯಕ್ಕೆ ಬೆಂಗಳೂರಿನ ದೇವನಹಳ್ಳಿ ಬಳಿಯ ಸಾದರಹಳ್ಳಿ ಹಾಗೂ ಕೋಯಿರಾ ಪ್ರದೇಶ ಬಲಿಷ್ಠ ಶಿಲೆಗಳನ್ನು ಬಳಕೆ ಮಾಡಲಾಗಿದೆ. ಒಟ್ಟು 17000 ಶಿಲೆಗಳನ್ನು ಬಳಸಲಾಗಿದ್ದು, 21 ಅಡಿ ಎತ್ತರದವರೆಗೂ ಕಲ್ಲಿನ ಹಾಸುಗಳನ್ನು ಹಾಕಲಾಗಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.