ಮಳೆಗಾಲದಲ್ಲಿ ಬಾಯಿ ಚಪ್ಪರಿಸಲು ಇದನ್ನು ಟ್ರೈ ಮಾಡಿ
ಮಳೆಗಾಲದಲ್ಲಿ ಅಜ್ಜಿಮನೆ ಎಂದಿಗಿಂತಲೂ ಚಂದ. ಕಾರಣ, ಅಜ್ಜಿ ಮಳೆಗಾಲಕ್ಕೆಂದೇ ಮಾಡಿಟ್ಟಿರುವ ತಿನಿಸುಗಳು.
- ಸುಜಯ್ ಪಿ
ಬೇಸಿಗೆಯಲ್ಲಿ ಫಲ ನೀಡುವ ಮಾವು, ಹಲಸುಗಳು ತುಂಬು ಮಳೆಗಾಲದಲ್ಲಿ ಬರಿದಾಗಿಬಿಡುತ್ತವೆ.
ಆಗಲೂ ಮಾವು, ಹಲಸಿನ ಸಿಹಿ ಖಾರ ತಿನಿಸುಗಳನ್ನು ಸವಿಯಬೇಕೆಂದರೆ ಅಜ್ಜಿಮನೆ ಬೇಕು, ಅಜ್ಜಿಯೂ ಬೇಕು.
‘ಮಾಂಬಳ’
ಮಾವಿನಹಣ್ಣಿನ ಮಾಂಸದ ಭಾಗವನ್ನು ಮಾತ್ರ ತೆಗೆದು ಚೂರು ಒಣಮೆಣಸಿನ ಖಾರವನ್ನು ಮತ್ತು ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿ ಮಂದವಾದ ದ್ರಾವಣ ರೀತಿ ಮಾಡಿ ಅಡಿಕೆ ಹಾಳೆಯಲ್ಲಿ ದೋಸೆ ತರ ಹುಯ್ದು ಒಣಗಿಸಿ ಬಿಟ್ಟರೆ ಹುಳಿ, ಸಿಹಿ, ಖಾರದ ‘ಮಾಂಬಳ’ ಸಿದ್ದ.
ಇದನ್ನು ಹಾಗೆಯೇ ತಿನ್ನಬಹುದು ಅಥವಾ ಊಟದ ಜೊತೆ ನೆಚ್ಚಿಕೊಂಡು ತಿನ್ನುತ್ತೀರಾದರೆ ಅದೂ ಓಕೆ.
‘ಒಣ ಮಾವಿನ ಸ್ಲೈಸ್’
ಇದರಲ್ಲಿ ಮಾಂಬಳದಷ್ಟು ಕೆಲಸವಿಲ್ಲ, ದೊಡ್ಡ ದೊಡ್ಡ ಮಾವಿನಹಣ್ಣಿನ ಸ್ಲೈಸ್ಗಳನ್ನು ಕತ್ತರಿಸಿ, ಹತ್ತು ಹದಿನೈದು ಬಿಸಿಲಿಗೆ ಒಣಗಿಸಿದರೆ ‘ಮಾವಿನಕೆತ್ತೆ’ ರೆಡಿ.
ನೀವುಇದನ್ನುಇಷ್ಟಪಡಬಹುದು: ಕೊಟ್ಟಿಗೆಹಾರದ ನೀರುದೋಸೆ: ನಂದೀಶ್ ಬಂಕೇನಹಳ್ಳಿ ರುಚಿಕಟ್ಟು ಬರಹ
ಒಣಗಿದ ಮೇಲೆ ರಬ್ಬರಿನಂತಾಗುವ ಹಣ್ಣಿನ ಸ್ಲೈಸ್ಗಳು ಸಿಹಿಯಾಗಿದ್ದು ಬೇರೆಲ್ಲೂ ಸಿಗದ ರುಚಿ ಕೊಡುತ್ತದೆ.
‘ಹಪ್ಪಳ’
ಅರೆ ಹಣ್ಣಾದ ಹಲಸಿನ ತೊಳೆಗಳನ್ನು ತೆಗೆದು ಚೂರು ಬೇಯಿಸಿ, ಹಿಟ್ಟಿನ ರೀತಿ ಕಡೆದು (ಉಪ್ಪು ಮತ್ತು ಬೇಕಾದರೆ ಜೀರಿಗೆ ಸೇರಿಕೊಳ್ಳಬಹುದು) ಒತ್ತುಮಣೆಯಲ್ಲಿ ಚಪಾತಿಯಂತೆ ಮಾಡಿ ಬಿಸಿಲಿಗೆ ಒಣಗಿಸಿಡಬೇಕು.
ಮಳೆಗಾಲದ ಚಳಿಗೆ ಎಣ್ಣೆಯಲ್ಲಿ ಕರಿದು ಅಥವಾ ಅರ್ಜೆಂಟಾದರೆ ಕೆಂಡದಲ್ಲೇ ಸುಟ್ಟು ತಿಂದರೆ ಇದರಷ್ಟು ಅಪ್ಯಾಯಮಾನವಾದದ್ದು ಬೇರೆಬೇರೆ ಇಲ್ಲ.
‘ಬೇಯಿಸಿ ಒಣಗಿಸಿದ ಹಲಸಿನ ಬೀಜ’
ಇದರಲ್ಲಿ ಹೆಚ್ಚೇನೂ ಕೆಲಸವಿಲ್ಲ. ಹಲಸಿನ ಹಣ್ಣು ತಿಂದಾದ ಮೇಲೆ ಹಲಸಿನ ಬೀಜ ಉಳಿಯುತ್ತದೆ ಅಲ್ವ ಅದನ್ನು ನೀರಿನಲ್ಲಿ ಬೇಯಿಸಬೇಕು ಸ್ವಲ್ಪ ಉಪ್ಪೂ ಸೇರಿಸಿಕೊಳ್ಳಿ.
ಬೆಂದ ಮೇಲೆ ನೀರನ್ನು ಸೋಸಿ ಬೀಜಗಳನ್ನು ಕಡು ಬಿಸಿಲಿಗೆ ಒಣಗಿಸಿ ಅಲ್ಲಿಗೆ ರೆಡಿ. ಮತ್ತೇನಿಲ್ಲ ಅಟ್ಟದ ಮೇಲೆ ಇಟ್ಟುಬಿಡಿ ಜೋರು ಮಳೆ ಬರುವಾಗ ಬೇಡವೆಂದರೂ ನೆನಪಾಗುತ್ತದೆ ನೋಡಿ.
ಸಂಜೆಯ ಸಮಯ, ಆಕಾಶ ತೂತು ಬಿದ್ದಂತೆ ಧೋ ಎಂದು ಸುರಿಯುವ ಮಳೆ, ಮಳೆಗೆ ಕತ್ತಲಾಗಿದೆ, ಲೈಟ್ ಹಾಕೋಣವೆಂದರೆ ಕರೆಂಟ್ ಇಲ್ಲ, ಅಲ್ಲೆಲ್ಲೋ ಕಂಬದ ಮೇಲೆ ಮರ ಬಿದ್ದಿದೆಯಂತೆ.
ಆಗ ನೆನಪಾಗುತ್ತೆ ನೋಡಿ ಈ ಹಪ್ಪಳ, ಮಾಂಬಳ ಮತ್ತು ಒಣಗಿಸಿದ ಮಾವಿನಹಣ್ಣು.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ