ವಿಮಾನ ಪ್ರಯಾದಲ್ಲಿ ಪ್ರಯಾಣಿಕರೊಬ್ಬರ ಜೀವ ಕಾಪಾಡಿದ್ದ ಡಾಕ್ಟರ್
ಡಾಕ್ಟರ್ ಅನ್ನುವ ಪದ ನಮ್ಮ ಬದುಕಲ್ಲಿ ಯಾವ ಸಂದರ್ಭದಲ್ಲಿ ಬರುತ್ತದೆ ಅಂತ ಖಚಿತವಾಗಿ ಹೇಳಲಾಗದು. ಹಲವಾರು ಕ್ಲಿಷ್ಟ ಸಂದರ್ಭಗಳಲ್ಲಿ ಸೇವೆ ನೀಡಿ ಜೀವ ಕಾಪಾಡುವ ಡಾಕ್ಟರುಗಳ ಕಥೆಯನ್ನು ನಾವು ಕೇಳುತ್ತಲೇ ಇರುತ್ತೇವೆ.
ಪ್ರವಾಸ ಅಥವಾ ಪಯಣದ ಸಮಯದಲ್ಲಿ ಅಸೌಖ್ಯ ಉಂಟಾದರೆ ಆಗ ಡಾಕ್ಟರರ ಬಳಿ ತೆರಳುವದು ಕಷ್ಟದ ಕೆಲಸ.
ಅದೂ ವಿಮಾನ ಪ್ರಯಾದಲ್ಲಿ ಅಂತಹ ತುರ್ತು ಸಂದರ್ಭ ಎದುರಾದರೆ? ಇಲ್ಲೊಂದು ಅಂಥದ್ದೇ ಘಟನೆಯಿದೆ, ಮತ್ತು ಆ ಡಾಕ್ಟರ್ ಕರ್ನಾಟಕದವರು ಎನ್ನುವುದು ನಮಗೆ ಖುಷಿಯ ವಿಷಯ. ವಿಶ್ವ ಡಾಕ್ಟರುಗಳ ದಿನದಂದು ಈ ಲೇಖನ.
- ಸುಜಯ್.ಪಿ.
ಇದು ನಡೆದದ್ದು 2018ರ ನವೆಂಬರ್ 13ರಂದು. ಘಟನೆಯಲ್ಲಿ ಭಾರತದ ಈ ಡಾಕ್ಟರರ ನಿಸ್ವಾರ್ಥ ಕಾರ್ಯ ಏರ್ ಫ್ರಾನ್ಸ್ನಿಂದ ಮೆಚ್ಚುಗೆಯನ್ನು ಗಳಿಸಿತು. ಕಂಪನಿಯು ಅವರ ಕೃತಜ್ಞತೆಯನ್ನು ವ್ಯಕ್ತಪಡಿಸಲು ಅವರಿಗೆ ಕೃತಜ್ಞತಾ ಪತ್ರ ಕೂಡಾ ಬರೆದಿತ್ತು.
ಅಂದು ಮೈಸೂರಿನ 69 ವರ್ಷದ ವೈದ್ಯರಾದ ಪ್ರಭುಲಿಂಗಸ್ವಾಮಿ ಸಂಗನಾಲ್ಮತ್ ಅವರು ಏರ್ ಫ್ರಾನ್ಸ್ ವಿಮಾನದಲ್ಲಿನ ನ್ಯೂಯಾರ್ಕ್ನಿಂದ ಬೆಂಗಳೂರಿಗಿನ ತಮ್ಮ ಪ್ರಯಾಣದಲ್ಲಿ, ಕಡಿಮೆ ರಕ್ತದೊತ್ತಡದಿಂದಾಗಿ ಯಾವುದೇ ನಾಡಿಮಿಡಿತವಿಲ್ಲದ
ರೋಗಿಯೊಬ್ಬನನ್ನು ತಮ್ಮ ಸಮಯೋಚಿತ ಹಸ್ತಕ್ಷೇಪದಿಂದ ತುರ್ತಾಗಿ ಮೇಲ್ವಿಚಾರಣೆ ಮಾಡುವ ಮೂಲಕ ಜೀವವುಳಿಸಿದ್ದರು.
ತಮ್ಮ ಮಕ್ಕಳನ್ನು ಭೇಟಿ ಮಾಡಲು ಆಗಾಗ್ಗೆ ವಿದೇಶಕ್ಕೆ ಹೋಗುತ್ತಿದ್ದ ಈ ವೈದ್ಯರಿಗೆ, ಈ ಪ್ರಸಂಗದ ನಂತರ ಚೇತರಿಸಿಕೊಂಡ ರೋಗಿಯು ನೀಡಿದ ಅಪ್ಪುಗೆಯು ಜೀವನ ಶ್ರೇಷ್ಠ ಅನುಭವವಾಗಿತ್ತು.
ಅಂದು ತಮ್ಮ ಪ್ರಯಾಣವನ್ನು ವಿವರಿಸಿದ ಪ್ರಭುಲಿಂಗಸ್ವಾಮಿ ಅವರು, “ನಾನು ನ್ಯೂಯಾರ್ಕ್ನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದೆ, ಪ್ಯಾರಿಸ್ನಿಂದ ಏರ್ ಫ್ರಾನ್ಸ್ ವಿಮಾನ ಹೊರಟು ಎರಡು ಗಂಟೆಗಳ ನಂತರ ಸುಮಾರು 6 ಅಡಿಗಿಂತಲೂ ಹೆಚ್ಚು ಎತ್ತರವಿದ್ದ ಯುರೋಪಿನ್ ಸಹ ಪ್ರಯಾಣಿಕನೊಬ್ಬ ನೀರು ಕುಡಿಯಲು ಹೋದಾಗ ಕುಸಿದು ಬಿದ್ದ.
ಪೈಲಟ್ ವೈದ್ಯಕೀಯ ತುರ್ತುಸ್ಥಿತಿ ಘೋಷಿಸಿ ಪ್ರಯಾಣಿಕರಲ್ಲಿ ವೈದ್ಯ ಅಥವಾ ದಾದಿಯರ ಸಹಾಯವನ್ನು ಕೋರಿದ, ವೈದ್ಯನಾದ ನಾನು ತಕ್ಷಣ ಸಹಾಯಕ್ಕೆ ಧಾವಿಸಿದೆ.
ಆ ಪ್ರಯಾಣಿಕ ನೆಲದ ಮೇಲೆ ಮಲಗಿದ್ದ. ಯಾವುದೇ ರೀತಿಯ ನಾಡಿ ಇಲ್ಲದ ಕಾರಣ ನಾನು ಅವನಿಗೆ ನಾಲ್ಕು ನಿಮಿಷಗಳ ಕಾಲ ಹೃದಯ ಮಸಾಜ್ ನೀಡಿದೆ, ಅದಕ್ಕವನು ಪ್ರತಿಕ್ರಿಯಿಸಿದಾಗ, ನಮ್ಮ ಜೊತೆ ಸೇರಿಕೊಂಡ ದಾದಿಯೊಬ್ಬರ ಬಳಿ ಆಕ್ಸಿಜನ್ ಇರಿಸಲು ಸೂಚನೆ ನೀಡಿದೆ. ಆ ವ್ಯಕ್ತಿಯ ಬಿಪಿ ತುಂಬಾ ಕಡಿಮೆ ಇದರಿಂದ ಪ್ರಯಾಣದ ಮುಂದಿನ ಆರು ಗಂಟೆಗಳ ಕಾಲ ತೀರಾ ಎಚ್ಚರಿಕೆಯಿಂದ ನೋಡಿಕೊಳ್ಳಲಾಯಿತು.
ಮತ್ತು ರೋಗಿಯು ಸಂಪೂರ್ಣವಾಗಿ ಚೇತರಿಸಿಕೊಂಡಾಗ, ಅವನಿಗೆ ಕಾಫಿ ಮತ್ತು ಜ್ಯೂಸ್ ನೀಡಿ, ಹೆಚ್ಚಿನ ವಿಚಾರಣೆಗಾಗಿ ಕರೆದೊಯ್ಯಲಾಯಿತು.” ಈ ರೀತಿ ವಿವರಿಸಿದ್ದರು.
ನೀವುಇದನ್ನುಇಷ್ಟಪಡಬಹುದು: ನೀವು ವಿದೇಶಕ್ಕೆ ಹೋಗುವವರಾದರೆ, ಪಾಸ್ ಪೋರ್ಟಿಗೆ ಲಸಿಕೆ ಪ್ರಮಾಣ ಪತ್ರವನ್ನು ನೀವೇ ಲಿಂಕ್ ಮಾಡಿ.
ಆ ವ್ಯಕ್ತಿಗೆ ಚಿಕಿತ್ಸೆ ನೀಡಿದ ನಂತರ, ವಿಮಾನದ ಸಿಬ್ಬಂದಿಗಳು, ಪ್ರಭುಲಿಂಗಸ್ವಾಮಿಯವರ ಸಂಪರ್ಕ ವಿವರಗಳನ್ನು ಕೇಳಿದಾಗ ಇವರಿಗೆ ಆಶ್ಚರ್ಯವಾಯಿತಂತೆ. ಪೈಲಟ್ ಮತ್ತು ಸಿಬ್ಬಂದಿಗಳು ಇವರ ಐಡಿ, ಮೇಲ್ ಐಡಿ, ಫೋನ್ ಸಂಖ್ಯೆ ಮತ್ತು ಇತರ ವಿವರಗಳನ್ನು ಕೇಳಿದಾಗ ಇದೊಂದು ಪ್ರಕರಣ ಆಗುತ್ತದೆ ಎಂದು ನಾನು ಭಾವಿಸಿದರಂತೆ. ಆದರೆ ಪೈಲಟ್ ಇದನ್ನು ಸ್ಪಷ್ಟಪಡಿಸಿ, ವಿಮಾನಯಾನ ಸಂಸ್ಥೆಯು ಸ್ವಾಮಿ ಅವರಿಗೆ ಮೆಚ್ಚುಗೆ ಪತ್ರ ಕಳುಹಿಸಲಿಕ್ಕಾಗಿ ವಿವರ ಕೇಳಿದ್ದು ಎಂದಾಗ ಸಮಾಧಾನದ ನಿಟ್ಟುಸಿರು ಬಿಟ್ಟರಂತೆ.
ವಿಮಾನ ಮಾತ್ರವಲ್ಲ, ಯಾವುದೇ ಪರಿಸ್ಥಿತಿಯಲ್ಲಿ ಕೂಡಾ ಯಾವುದೇ ರೋಗಿಗಾದರೂ ಸೇವೆ ಸಲ್ಲಿಸುವುದು ನನ್ನಂತಹ ಡಾಕ್ಟರರ ಕರ್ತವ್ಯ ಎಂಬುದು ಪ್ರಭುಲಿಂಗಸ್ವಾಮಿಯವರು ಅಂದು ಹೇಳಿದ್ದ ಮಾತು.
ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ಸುಮ್ಮನೆ ಹೇಳುವುದಲ್ಲ, ‘ಡಾಕ್ಟರ್ ಭೂಮಿ ಮೇಲಿನ ದೇವರು’ ಎಂದು. ಜುಲೈ ಒಂದರ ವಿಶ್ವ ಡಾಕ್ಟರುಗಳ ಈ ದಿನದಂದು ನಮ್ಮ ಸುತ್ತಲಿನ ಡಾಕ್ಟರುಗಳನ್ನು ಗೌರವಿಸೋಣ ಮತ್ತು ಅವರಿಂದಲೂ ಪ್ರೀತಿಯನ್ನೇ ನಿರೀಕ್ಷಿಸೋಣ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ