ಮಡಿಕೇರಿಯಲ್ಲಿ ನಿರ್ಮಾಣಗೊಂಡಿದೆ ಕರ್ನಾಟಕದ ಮೊದಲ ಗಾಜಿನ ಸೇತುವೆ
![Karnataka's first 32 metre long glass Skywalk Bridge](https://kannada.travel/wp-content/uploads/2023/06/Madikeri-Skywalk-780x470.jpg)
ಇನ್ನೇನು ಮಳೆಗಾಲ ಆರಂಭಗೊಳ್ಳುತ್ತಿದೆ. ಯಾವ ಸ್ಥಳಕ್ಕೆ ಪ್ರವಾಸ ಕೈಗೊಳ್ಳುವುದು ಎಂಬ ಸಂದೇಹವಿದ್ದರೆ, ನಿಮಗೆ “ಮಡಿಕೇರಿ” ಯನ್ನು ಆಯ್ದುಕೊಳ್ಳಲು ಹೊಸ ಕಾರಣ ದೊರೆತಿದೆ. ಅದುವೇ ಮಡಿಕೇರಿ ಸಮೀಪದ ಉಡೋತ್ ಮೊಟ್ಟೆಯ ಪಪ್ಪೀಸ್ ಪ್ಲಾಂಟೇಷನ್ನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕರ್ನಾಟಕದ ಮೊದಲ ಗಾಜಿನ ಸೇತುವೆ.
▪︎ ಉಜ್ವಲಾ ವಿ. ಯು.
![](https://kannada.travel/wp-content/uploads/2023/06/Untitled-design-13-9-1024x576.jpg)
“ದಕ್ಷಿಣದ ಕಾಶ್ಮೀರ” ಎಂದೇ ಪ್ರಸಿದ್ಧವಾದ ಮಡಿಕೇರಿಯು ಎಲ್ಲಾ ಕಾಲದಲ್ಲಿಯೂ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಹಸಿರಿನಿಂದ ಕಂಗೊಳಿಸುವ ಪಶ್ಚಿಮ ಘಟ್ಟ, ಧುಮ್ಮಿಕ್ಕುವ ಜಲಪಾತ, ಕಣ್ಮನ ಸೆಳೆಯುವ ಟೀ ಮತ್ತು ಕಾಫೀ ತೋಟಗಳು, ತಣ್ಣನೆ ಗಾಳಿ, ಅಲ್ಲಿ ಎಲ್ಲವೂ ಚಂದವೇ. ಪ್ರವಾಸಿಗರ ಮನಸ್ಸನ್ನು ಮುದಗೊಳಿಸಲು ಅತ್ಯಂತ ಸೂಕ್ತ ತಾಣ ಅದು.
ಪ್ರಾಕೃತಿಕ ಸೌಂದರ್ಯದ ಮೂಲಕ ಎಂದಿಗೂ ಗಮನ ಸೆಳೆಯುವ ಕೊಡಗು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸದ್ಯ “ಗಾಜಿನ ಸೇತುವೆ” (Glass Skywalk Bridge) ಹೊಸ ಸೇರ್ಪಡೆಯಾಗಿದೆ. ಪಶ್ಚಿಮ ಘಟ್ಟದ ಕಾಡು ಮತ್ತು ಬೆಟ್ಟಗಳ ನಡುವೆ ಇರುವ ಈ ಅದ್ಭುತ ಗಾಜಿನ ಸೇತುವೆ ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಸಂದೇಹವೇ ಇಲ್ಲ.
![](https://kannada.travel/wp-content/uploads/2023/06/Untitled-design-14-8-1024x576.jpg)
32 ಮೀಟರ್ ಉದ್ದದ 2 ಮೀಟರ್ ಅಗಲದ 78 ಅಡಿ ಎತ್ತರದಲ್ಲಿರುವ ಗ್ಲಾಸ್ ಸ್ಕೈವಾಕ್ ಸೇತುವೆಯು ಸುಮಾರು 5 ಟನ್ ಭಾರ ಹೊರುವ ಸಾಮರ್ಥ್ಯ ಹೊಂದಿದೆ. ಹಾಗೂ ಒಮ್ಮೆಗೆ 40 ರಿಂದ 50 ಮಂದಿ ನಿಂತು ಪ್ರಕೃತಿಯ ಸೌಂದರ್ಯವನ್ನು ಸವಿಯಬಹುದಾಗಿದೆ. ಇದರ ಪ್ರವೇಶ ಶುಲ್ಕ 200 ರೂ ಇದ್ದು, 15 ನಿಮಿಷಗಳಷ್ಟೇ ಪ್ರವಾಸಿಗರು ಇಲ್ಲಿ ಕಾಲ ಕಳೆಯಬಹುದಾಗಿದೆ.
ನೀವು ಇದನ್ನು ಇಷ್ಟಪಡಬಹುದು: ಕೊಡಗಿನಲ್ಲಿರುವ ಚೆಂದದ ಅಬ್ಬಿ ಜಲಪಾತ
![](https://kannada.travel/wp-content/uploads/2023/06/Untitled-design-20-1-1024x576.jpg)
ಈ ಗಾಜಿನ ಸೇತುವೆಯ ಮೇಲೆ ನಿಂತು ನೋಡಿದರೆ ಹಸಿರಿನಿಂದ ತುಂಬಿದ ಬೆಟ್ಟ ಗುಡ್ಡದ ಸಾಲುಗಳು ಪ್ರವಾಸಿಗರನ್ನು ರೋಮಾಂಚನಗೊಳಿಸುತ್ತವೆ. ಸೇತುವೆಯ ಮೇಲೆ ನಿಂತು ನೋಡಿ ಆಕಾಶವನ್ನು ನೋಡಿದರೆ, ಆಕಾಶ ಕೈಗೆ ಸಿಕ್ಕಂತೆ ಭಾಸವಾಗುತ್ತದೆ. ಗಾಜಿನ ಮೇಲೆ ಹೆಜ್ಜೆ ಹಾಕುತ್ತಾ ಪ್ರಕೃತಿಯನ್ನು ಸವಿಯುವ ಪ್ರವಾಸಿಗರು ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತೆ ಖುಷಿ ಅನುಭವಿಸುತ್ತಿದ್ದಾರೆ.
![](https://kannada.travel/wp-content/uploads/2023/06/Untitled-design-12-11-1024x576.jpg)
ದಕ್ಷಿಣ ಭಾರತದ ಮೊದಲ ಗಾಜಿನ ಸೇತುವೆಯು ಕೇರಳದಲ್ಲಿದೆ. ಇಲ್ಲಿನ ವಯನಾಡಿನ ತೊಲ್ಲಾಯಿರಂ ಕಂಡಿಯಲ್ಲಿ ಈ ಸೇತುವೆ ನಿರ್ಮಾಣವಾಗಿದೆ. ನೆಲದಿಂದ 100 ಅಡಿ ಎತ್ತರದಲ್ಲಿ ಇದರ ನಿರ್ಮಾಣವಾಗಿದ್ದು, ಖಾಸಗಿ ರೆಸಾರ್ಟ್ ಜಾಗದಲ್ಲಿ ಇದನ್ನು ನಿರ್ಮಿಸಲಾಗಿದೆ.
![](https://kannada.travel/wp-content/uploads/2023/06/Untitled-design-19-3-1024x576.jpg)
ಈಗ “ದಕ್ಷಿಣ ಭಾರತದ ಎರಡನೇ ಗಾಜಿನ ಸೇತುವೆ” ಎಂಬ ಖ್ಯಾತಿಗೆ ಕೊಡಗಿನ ಈ ಸೇತುವೆ ಪಾತ್ರವಾಗಿದೆ. ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಅವರು ಜೂನ್ 12 ರಂದು ಈ ಆಕರ್ಷಕ ಸೇತುವೆಯನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಪೊನ್ನಣ್ಣ ಅವರು, “ಕೊಡಗು ಪ್ರಕೃತಿ ದತ್ತವಾದ ಜಿಲ್ಲೆಯಾಗಿದೆ. ನಿಸರ್ಗಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು. ಈ ಅಪರೂಪದ ಯೋಜನೆಯಿಂದ ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ” ಎಂದರು.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ಕನ್ನಡ.ಟ್ರಾವೆಲ್ (Kannada.travel) ಜಾಲತ ಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ