ನಾನೇಕೆ ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರ ಮಾಡಿದೆ: ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಅಮೋಘವರ್ಷ ಅನುಭವ ಕಥನ

ಕರ್ನಾಟಕದ ಅತಿ ಶ್ರೀಮಂತ ಕಾಡಿನ ಕತೆಗಳನ್ನು ತೋರಿಸಿದ ಅದ್ಭುತ ಸಾಕ್ಷ್ಯಚಿತ್ರ ವೈಲ್ಡ್ ಕರ್ನಾಟಕ. ಆ ಸಾಕ್ಷ್ಯ ಚಿತ್ರಕ್ಕೆ ಎರಡು ರಾಷ್ಟ್ರಪ್ರಶಸ್ತಿಗಳು ದೊರೆತಿವೆ. ಹುಲಿ, ಚಿರತೆ, ಕರಡಿ ಜಗತ್ತನ್ನು ಮೈನವಿರೇಳಿಸುವಂತೆ ಕಣ್ಮುಂದೆ ತಂದ ಈ ಸಾಕ್ಷ್ಯಚಿತ್ರದ ನಿರ್ದೇಶನದ ಹೊಣೆ ಹೊತ್ತುಕೊಂಡಿದ್ದು ಅಮೋಘವರ್ಷ, ಕಲ್ಯಾಣ್ ವರ್ಮಾ, ವಿಜಯ್ ಮೋಹನ್ ರಾಜ್. ಈ ಸಾಕ್ಷ್ಯಚಿತ್ರದ ರೂವಾರಿ ಬೆಂಗಳೂರಿನ ಹುಡುಗ ಅಮೋಘವರ್ಷ ಈ ಡಾಕ್ಯುಮೆಂಟರಿ ಮಾಡಿದ ಕತೆ ಜೊತೆಗೆ ತಮ್ಮ ಕತೆಯನ್ನೂ ಹೇಳಿದ್ದಾರೆ. ಈ ಸ್ಫೂರ್ತಿ ಕತೆ ನಿಮಗಾಗಿ.
- ನವ್ಯಶ್ರೀ ಶೆಟ್ಟಿ
ತಮ್ಮ ವೃತ್ತಿ ಬದುಕಿನಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ವನ್ಯ ಜೀವಿಗಳ ಕುರಿತು ಡಾಕ್ಯುಮೆಂಟರಿ ಮಾಡಿದ್ದ ಅಮೋಘವರ್ಷ ಜೆಎಸ್(Amoghavarsha J S) ಅವರ ಕನಸು ವೈಲ್ಡ್ ಕರ್ನಾಟಕ. ನಮ್ಮ ಕನ್ನಡ ನೆಲದಲ್ಲಿ ಇಂತಹ ಪ್ರಯೋಗಾತ್ಮಕ ಪ್ರಯತ್ನಗಳು ಆಗಿದ್ದು ಕಡಿಮೆ. ಈ ಕಾರಣದಿಂದ ತನ್ನ ನೆಲದ ವನ್ಯ ಪ್ರಪಂಚದ ಕುರಿತು ಜಗತ್ತಿಗೆ ತೋರಿಸಬೇಕು ಅನ್ನುವ ಆಸೆಯಿಂದ ಅಮೋಘವರ್ಷ ಕರ್ನಾಟಕದ ವೈಲ್ಡ್ ಕರ್ನಾಟಕ(Wild Karnataka) ಪ್ರಯೋಗಕ್ಕೆ ಕೈ ಹಾಕಿದರು. ಇವರ ಕನಸಿಗೆ ಮೊದಲು ಬೆಂಬಲ ನೀಡಿದ್ದು ಅರಣ್ಯ ಇಲಾಖೆ. ಈ ಸಾಕ್ಷ್ಯಚಿತ್ರವನ್ನು ಮೆಚ್ಚಿ ವಿಶ್ವವಿಖ್ಯಾತ ಡಾಕ್ಯುಮೆಂಟರಿ ನಿರೂಪಕ ಡೇವಿಡ್ ಅಟೆನ್ ಬರೋ(David attenborough) ಧ್ವನಿ ನೀಡಿದ್ದು ಅಮೋಘವರ್ಷ ತಂಡದ ಹೆಗ್ಗಳಿಕೆ.

ಕಾಡಿನ ಕುತೂಹಲ
2019ರಲ್ಲಿ ಬಿಡುಗಡೆಯಾದ ಸಾಕ್ಷ್ಯಚಿತ್ರ ಸುಮಾರು 4 ವರ್ಷಗಳ ಪ್ರಯತ್ನದ ಫಲ. ಸಾವಿರಾರು ಗಂಟೆಗಳ ಚಿತ್ರೀಕರಣದ ವಿಡಿಯೋ ಇದ್ದ ಈ ಸಾಕ್ಷ್ಯಚಿತ್ರವನ್ನು ಅತಿ ಸುಂದರವಾಗಿ ರೂಪಿಸಲಾಗಿತ್ತು. ಹಾಗಾಗಿ ಈ ಡಾಕ್ಯುಮೆಂಟರಿ(documentary) ಬಿಡುಗಡೆ ಬಳಿಕ ಹೊಸ ಸಂಚಲನ ಸೃಷ್ಟಿಸಿ, ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿತ್ತು. ವೈಲ್ಡ್ ಲೈಫ್ ಕುರಿತಾದ ಸಿನಿಮಾವೊಂದು ಥಿಯೇಟರ್ ನಲ್ಲಿ 50 ದಿನಗಳ ಕಾಲ ಪ್ರದರ್ಶನ ಕಂಡಿದ್ದು ಇದೇ ಮೊದಲು.ಉತ್ತಮ ಚಿತ್ರ ಕೊಡುವ ಅಸೆಯಿದ್ದ ತಂಡಕ್ಕೆ ಈ ಮಟ್ಟಿಗಿನ ಯಶಸ್ಸಿನ ನಂಬಿಕೆ ಇರಲಿಲ್ಲ.

ಬಿಡುಗಡೆ ಬಳಿಕ ಆದದ್ದು ಮಾಯೆ. ಸುತ್ತಾಟದ ಹವ್ಯಾಸ ಇಂದು ಅಮೋಘ ವರ್ಷ ಅವರು ದೊಡ್ಡ ಎತ್ತರಕ್ಕೆ ಬೆಳೆಯಲು ಕಾರಣವಾಗಿದೆ. ತಾನು ಕಾಡಿನಲ್ಲಿ ಪ್ರವಾಸದ ವೇಳೆ ನೋಡಿರುವುದನ್ನು ಜನರಿಗೆ ತೋರಿಸಬೇಕು ಅನ್ನುವ ಹಂಬಲವೇ ಅಮೋಘ ವರ್ಷ ಅವರಿಗೆ ಪ್ರಾಣಿ ಪ್ರಪಂಚದ ಕುರಿತಾದ ಸಿನಿಮಾ ತಯಾರಿಕೆಗೆ ಕಾರಣವಾಗಿದ್ದು. ವೈಲ್ಡ್ ಲೈಫ್ ಕುರಿತಾದ ಸಿನಿಮಾಗಳು, ಮನೆಯಲ್ಲಿ ಬಾಲ್ಯದಿಂದಲೇ ಕಾಡಿನ ಕುರಿತಾದ ಪುಸ್ತಕಗಳನ್ನು ಓದುತ್ತಿದ್ದ ಅಮೋಘವರ್ಷರಿಗೆ ಕಾಡಿನ ಕುರಿತು ಹೆಚ್ಚು ಕುತೂಹಲ ಇತ್ತು. ಬಾಲ್ಯದ ಕುತೂಹಲ, ತಾರುಣ್ಯದಲ್ಲಿ ಉಂಟಾದ ಸಿನಿ ಆಸಕ್ತಿಯೇ ವೈಲ್ಡ್ ಲೈಫ್ ಕ್ಷೇತ್ರದಲ್ಲಿ ಸಾಧನೆ ಮಾಡಲು ಸ್ಫೂರ್ತಿ ನೀಡಿತು.
ಇಂಟರ್ನೆಟ್ ಇಲ್ಲದ ಆರಂಭಿಕ ಕಾಲದಲ್ಲಿ ಕೊಂಚ ಕಷ್ಟವಾಗಿತ್ತು. ತಂತ್ರಜ್ಞಾನಗಳು ಕೂಡ ಅತ್ಯಾಧುನಿಕ ಆಗಿರಲಿಲ್ಲ. ಕ್ಯಾಮೆರಾಗಳ ಕೊರತೆಯಿತ್ತು. ಡ್ರೋಣ್ ಗಳು ಇದ್ದಿರಲಿಲ್ಲ. ಶೂಟಿಂಗ್ ಮಾಡಲು ಕಷ್ಟ ಪಡಬೇಕಾಗಿತ್ತು. ಎಲ್ಲವನ್ನೂ ನಾವೇ ಮಾಡಬೇಕಾಗುತ್ತಿತ್ತು. ವರ್ಷಗಳು ಕಳೆದ ಹಾಗೆ ವಿನೂತನ ಪ್ರಯೋಗಗಳು ಆರಂಭವಾದವು. ಫೋಟೋಗ್ರಫಿ ಮೂಲಕ ಆರಂಭವಾದ ಕನಸು ಜನರನ್ನು ಹೆಚ್ಚು ತಲುಪಬೇಕು ಅನ್ನುವ ಹುಮ್ಮಸ್ಸಿನಲ್ಲಿ ಸಿನಿಮಾ ತಯಾರಿಕೆವರೆಗೆ ಬಂತು.

ಅಮೋಘ ವರ್ಷ ಅವರ ಪ್ರತಿ ಕೆಲಸಕ್ಕೂ ಹೆತ್ತವರ ಬೆಂಬಲವಿತ್ತು. ಮಗನ ವೈಲ್ಡ್ ಲೈಫ್ ಕುರಿತಾದ ಆಸಕ್ತಿಗೆ ಷರತ್ತು ವಿಧಿಸಿರಲಿಲ್ಲ. ಉನ್ನತ ವಿದ್ಯಾಭ್ಯಾಸ, ಉತ್ತಮ ಹುದ್ದೆಯಲ್ಲಿದ್ದ ಮಗ ಏಕಾಏಕಿ ಕೆಲಸ ಬಿಟ್ಟ ನಿರ್ಧಾರಕ್ಕೆ ಹೆತ್ತವರಿಗೆ ಆರಂಭದಲ್ಲಿ ಕೊಂಚ ಅಳುಕಿತ್ತು. ಆದರೆ ಮಗನ ಬೆಳವಣಿಗೆ ನೋಡಿ ಇಂದು ಹೆತ್ತವರು ಖುಷಿ ಆಗಿದ್ದಾರೆ.
25 ಜನರ ತಂಡ
ವೈಲ್ಡ್ ಕರ್ನಾಟಕ(wild karnataka) ಮಾಡಬೇಕು ಎಂದುಕೊಂಡಾಗ ಒಂದು ತಂಡ ರಚನೆಯಾಯಿತು. ಉತ್ಸಾಹಿ ಯುವಕರೇ ತುಂಬಿಕೊಂಡಿದ್ದ ಈ ತಂಡದಲ್ಲಿ ಎಲ್ಲರಿಗೂ ಪ್ರಾಣಿ ಪ್ರಪಂಚದ ಅರಿವಿತ್ತು. ವನ್ಯಜೀವಿಗಳ ವರ್ತನೆ ಬಗ್ಗೆ ಜ್ಞಾನವಿದ್ದ ಕಾರಣದಿಂದಾಗಿ ಶೂಟಿಂಗ್ ಸಮಯದಲ್ಲಿ ಅಷ್ಟೇನೂ ಕಷ್ಟವಾಗಿರಲಿಲ್ಲ. ಮಳೆಗಾಲದ ಸಮಯ ಕಾಡಿನಲ್ಲಿ ಶೂಟಿಂಗ್ ಕೊಂಚ ಪ್ರಯಾಸವಾಗಿತ್ತು. ಆದರೂ ಪ್ರತಿ ಅನುಭವ ಹಿತವಾಗಿತ್ತು. ಪ್ರಶಸ್ತಿ ಸಿಕ್ಕ ಡಾಕ್ಯುಮೆಂಟರಿ ತಂಡದಲ್ಲಿ ಸುಮಾರು 25 ಜನ ಕೆಲಸ ಮಾಡಿದ್ದರು.ತನ್ನ ತಂಡಕ್ಕೆ ಹಾಗೂ ಈ ಸಿನಿಮಾದ ಪ್ರಾಯೋಜಕರಾದ ಸಂಡೂರು ಮೈನ್ಸ್, ಅರಣ್ಯ ಇಲಾಖೆ,(Karnataka forest department) ಕರ್ನಾಟಕದ ಜನತೆಗೆ ಧನ್ಯವಾದ ಎನ್ನುತ್ತಾರೆ ಅಮೋಘ ವರ್ಷ.

ನೀವು ಇದನ್ನು ಇಷ್ಟಪಡಬಹುದು: ಟೆಕ್ಕಿಯಾಗಿದ್ದ ಹುಡುಗ ಈಗ ವೈಲ್ಡ್ ಲೈಫ್ ಫೋಟೋಗ್ರಾಫರ್: ಮೂಡಿಗೆರೆಯ ಸುನೀಲ್ ಸಚಿಯವರ ಕುತೂಹಲಕರ ಕತೆ
ಸಿನಿಮಾ ಬಿಡುಗಡೆ ಬಳಿಕ ಉತ್ತಮ ಪ್ರತಿಕ್ರಿಯೆ ಜೊತೆಗೆ ವಿಮರ್ಶೆಗಳು ಕೂಡ ಬಂದಿದ್ದು, ವಿಮರ್ಶೆ ಎಂದಿಗೂ ಸರಿ ಹಾದಿಯಲ್ಲಿ ಸಾಗಲು ಮುಖ್ಯ. ಎಲ್ಲವನ್ನೂ ಒಂದೇ ಸಿನಿಮಾದಲ್ಲಿ ತೋರಿಸಲು ಅಸಾಧ್ಯ. ಹಂತ ಹಂತವಾಗಿ ತೋರಿಸಲು ಸಾಧ್ಯ ಎನ್ನುವುದು ಅಮೋಘ ವರ್ಷರ ಮಾತು.
ಪುಸ್ತಕ ಓದುತ್ತಾ ಕುತೂಹಲ ರೂಪದಲ್ಲಿ ಹುಟ್ಟಿಕೊಂಡ ಕಾಡಿನ ಮೇಲೆ ಪ್ರೀತಿ ಎರಡು ರಾಷ್ಟ್ರ ಪ್ರಶಸ್ತಿ ಪಡೆಯುವ ತನಕ ಬಂದು ನಿಂತಿದೆ. ಇನ್ನೂ ಹೊಸ ಹೊಸ ಸಿನಿಮಾದ ಕನಸನ್ನು ಕಾಣುತ್ತಿರುವ ಬೆಂಗಳೂರಿನ ಹುಡುಗನ ಬತ್ತಳಿಕೆಯಿಂದ ಇನ್ನಷ್ಟು ವಿನೂತನ ಚಿತ್ರಗಳು ಹೊರ ಹೊಮ್ಮುವಂತೆ ಆಗಲಿ.

ಅಮೋಘವರ್ಷ ಹೇಳಿದ್ದು
- ವೈಲ್ಡ್ ಲೈಫ್ ಫೋಟೋಗ್ರಫಿ ಮಾಡುವವರಿಗೆ ತಾಳ್ಮೆ ಬಹು ಮುಖ್ಯ, ಅದಕ್ಕೆ ಯಾವುದೇ ಅಡ್ಡ ದಾರಿಗಳು ಇಲ್ಲ. ಪ್ರಯತ್ನ ಪಟ್ಟರೆ ಎಲ್ಲರೂ ಈ ರೀತಿ ಸಿನಿಮಾ, ಇದಕ್ಕೂ ಉತ್ತಮ ಸಿನಿಮಾ ಮಾಡಬಹುದು. ಆದರೆ ಪ್ರಯತ್ನ ಮುಖ್ಯ. ಸಿನಿಮಾಗಳು ಉತ್ತಮವಾಗಿದ್ದರೆ ಪ್ರಶಸ್ತಿಗಳು ಅರಸಿಕೊಂಡು ಬರುತ್ತದೆ.
- ಕಾಡಿನಲ್ಲಿ ನಾವು ಅಂದುಕೊಂಡ ಹಾಗೆ ಎಲ್ಲವೂ ನಡೆಯಲ್ಲ. ಕೆಲವೊಮ್ಮೆ ವ್ಯತಿರಿಕ್ತ ನಡೆಯುತ್ತದೆ. ಒಮ್ಮೆ ಶೂಟಿಂಗ್ ವೇಳೆ ಕಾಡಿನ ಮಧ್ಯ ನೀರು ನಾಯಿ ಹಾಗೂ ಹುಲಿ ಮುಖಾಮುಖಿಯಾಗಿತ್ತು. ನಾವು ನೀರು ನಾಯಿ ಓಡಿ ಹೋಗಬಹುದು ಎಂದು ಭಾವಿಸಿದ್ದೆವು. ಆದರೆ ಆಗಿದ್ದೇ ಬೇರೆ. ಆ ಹುಲಿ ಅಲ್ಲಿದ್ದ ನೀರು ನಾಯಿಯನ್ನು ನೋಡಿ ಓಡಿ ಹೋಯಿತು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ