ಗೋವಾ ಬದಲಾಗಿ ಈ ಸಲ ವರಕಲ ಹೋಗಿ ಬನ್ನಿ: ಕೇರಳ ಬಚ್ಚಿಟ್ಟುಕೊಂಡಿರುವ ಸುಂದರ ಗುಟ್ಟು ವರಕಲ

ಪ್ರತಿಯೊಬ್ಬರೂ ಸಮುದ್ರ ಎಂದಾಗ ಗೋವಾ ಎನ್ನುತ್ತಾರೆ. ಗೋವಾನೂ ಚೆಂದ ಇದೆ. ಆದರೆ ಅದಕ್ಕಿಂತ ಚೆಂದದ ಕಡಲ ತೀರ ಮತ್ತೊಂದಿದೆ. ಅದರ ಹೆಸರು ವರಕಲ. ಕೇರಳದಲ್ಲಿರುವ ಈ ತಾಣದ ಪೂರ್ತಿ ವಿವರ ಇಲ್ಲಿದೆ.
- ವರ್ಷಾ ಪ್ರಭು, ಉಜಿರೆ
ಕೇರಳ(Kerala) ತನ್ನೊಡಲಲ್ಲಿ ಬಚ್ಚಿಟ್ಟುಕೊಂಡ ಗುಟ್ಟುಗಳಲ್ಲಿ ‘ವರಕಲ’(Varakala) ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಕೊಲ್ಲಮ್(Kollam) ನಗರದಿಂದ 30 ಕಿಮೀ ದೂರದಲ್ಲಿರುವ ಈ ಜಾಗ, ಭೌಗೋಳಿಕವಾಗಿ ತಿರುವನಂತಪುರದಲ್ಲಿದೆ. ಆ ಜಾಗಕ್ಕೆ ಹೋದರೆ ನೀವು ಒಂದೊಂದು ತಾಣ ನೋಡಿ ಮಂತ್ರಮುಗ್ಧರಾಗುತ್ತೀರಿ.
ಸಿವಗಿರಿ ಮಠ
ಸಾಮಾಜಿಕ ಸುಧಾರಕ ಹಾಗೂ ಹಿಂದು ತತ್ವಜ್ಞಾನಿ ಶ್ರೀ ನಾರಾಯಣ ಗುರುಗಳ ಸಮಾಧಿ ಸ್ಥಳವಾದ ಕಾರಣ, ಸಿವಗಿರಿ ಮಠಕ್ಕೆ(Sivagiri mutt) ಪ್ರವಾಸಿಗರು ಹಾಗೂ ಅಧ್ಯಾತ್ಮದಲ್ಲಿ ಆಸಕ್ತಿಯುಳ್ಳವರು ಹೆಚ್ಚಾಗಿ ಭೇಟಿ ನೀಡುತ್ತಾರೆ.

ಜನಾರ್ದನ ಸ್ವಾಮಿ ದೇವಸ್ಥಾನ
ಈ ದೇವಸ್ಥಾನಕ್ಕೆ ಸುಮಾರು ೨೦೦೦ ವರ್ಷಗಳ ಇತಿಹಾಸವಿದೆ. ವಿಷ್ಣುವಿನ ಹಲವು ನಾಮಗಳಲ್ಲಿ ಒಂದಾದ ‘ಜನಾರ್ದನ’(Janardhanan swamy temple) ಎಂಬ ಹೆಸರಿನಿಂದ ಇಲ್ಲಿ ಅವನನ್ನು ಆರಾಧಿಸಲಾಗುತ್ತದೆ. ಈ ದೇವಾಲಯವನ್ನು ತಲುಪಲು ಮೆಟ್ಟಿಲುಗಳನ್ನು ಏರಿ ಹೋಗಬೇಕಾಗಿರುವುದರಿಂದ, ದೈಹಿಕ ಆರೋಗ್ಯದ ಜೊತೆಗೆ, ಮಾನಸಿಕ ನೆಮ್ಮದಿಯೂ ದೊರೆಯುತ್ತದೆ.

ಹಿಂದುಯೇತರರಿಗೆ ಒಳಗೆ ಪ್ರವೇಶವಿಲ್ಲ. ಆದರೆ ದೇವಸ್ಥಾನದ ಹೊರಭಾಗದಲ್ಲಿ ಅವರು ಓಡಾಡಬಹುದು. ಮತ್ತು ಇಲ್ಲಿಯೂ ಉಡುಪು ಸಂಹಿತೆಯಿದೆ. ಗಂಡಸರು ಪ್ರಾಂಗಣವನ್ನು ಪ್ರವೇಶಿಸುವ ಮೊದಲು ತಮ್ಮ ಬನಿಯನ್ ಅನ್ನು ಕಳಚಿ ಒಳಬರಬೇಕೆಂಬ ನಿಯಮವಿದೆ.
ಕಪ್ಪಿಲ್ ಬೀಚ್
ವರಕಲ- ಪರವೂರ್ ರಸ್ತೆಯ ಗಡಿ ಭಾಗದಲ್ಲಿರುವ ಕಪ್ಪಿಲ ಬೀಚ್(Kappil beach) ಒಂದು ಭಾಗದಲ್ಲಿ ಬೀಚ್ ಮತ್ತು ಇನ್ನೊಂದು ಭಾಗದಲ್ಲಿ ನದಿಯಾಗಿದೆ. ಮಳೆಗಾಲದಲ್ಲಿ ಇವೆರಡೂ ಒಂದಾಗಿ ಹರಿಯುತ್ತವೆ. ಈ ಸಮಯದಲ್ಲಿ ಈ ಭಾಗದಲ್ಲಿ ಈಜುವುದು ಅಪಾಯಕಾರಿ.
ನೀವು ಇದನ್ನು ಇಷ್ಟಪಡಬಹುದು: ನೀವು ವಿದೇಶಕ್ಕೆ ಹೋದಾಗ ಈ ಊರಿನ ಹೆಸರು ನೋಡಿ ಬೆರಗಾಗಬೇಡಿ: ನಮ್ಮ ದೇಶದ ಊರಿನ ಹೆಸರನ್ನೇ ಹೊಂದಿರುವ ವಿದೇಶದ 13 ಊರುಗಳು

ವರಕಲ ಬೀಚ್
ವರಕಲದ ಬೀಚನ್ನು ನೋಡಿದರೆ ನೀವು ಮತ್ತೆಂದೂ ಗೋವಾದ ಬೀಚುಗಳನ್ನು ಇದಕ್ಕೆ ಹೋಲಿಸಲಾರಿರಿ! ಕೇರಳ ತನ್ನೊಡಲಲ್ಲಿ ಬಚ್ಚಿಟ್ಟುಕೊಂಡ ಗುಟ್ಟುಗಳಲ್ಲಿ ‘ವರಕಲ’(Varakala) ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಕೊಲ್ಲಮ್ ನಗರದಿಂದ ೩೦ ಕಿಮೀ ದೂರದಲ್ಲಿರುವ ಈ ಜಾಗ, ಭೌಗೋಳಿಕವಾಗಿ ತಿರುವನಂತಪುರದಲ್ಲಿದೆ.
ವರಕಲ ನೂರಾರು ದೇವಸ್ಥಾನ, ರಮಣೀಯ ಬೀಚು ಹಾಗೂ ಕೇರಳದಲ್ಲಿಯೇ ಅತೀ ಉದ್ದದ ಲ್ಯಾಟರೈಟ್ ಬಂಡೆಗಳನ್ನು ಹೊಂದಿರುವ ಜಾಗವಾಗಿದೆ. ಈ ೬೦೦ ಮೀಟರಿನ ಬಂಡೆಯುದ್ದಕ್ಕೂ ನಡೆದರೆ ಒಂದು ಬದಿಯಲ್ಲಿ ಸಮುದ್ರ ತೀರ ಹಾಗೂ ಇನ್ನೊಂದು ಬದಿಯಲ್ಲಿ ಲೆಕ್ಕಕ್ಕೇ ಸಿಗದಷ್ಟು ಸ್ಪಾ, ರೆಸ್ಟೋರೆಂಟ್, ಹೊಟೇಲು ಮತ್ತು ಗಿಫ್ಟ್ ಶಾಪುಗಳನ್ನು ಕಾಣಬಹುದು.

ವರಕಲ ಸಮುದ್ರ ತೀರ ನಿಮಗೊಂದು ಅದ್ಭುತ ಅನುಭವವನ್ನು ನೀಡುವುದರಲ್ಲಿ ಸಂಶಯವೇ ಇಲ್ಲ. ಸಮುದ್ರದಲೆಗಳ ಸದ್ದಿನೊಂದಿಗೆ ನಿಮ್ಮ ಬೆಳಗ್ಗೆಯನ್ನು ಫ್ರೆಶ್ ಆಗಿ ಆರಂಭಿಸಬಹುದು. ಸಣ್ಣದೊಂದು ಈಜು, ಹೊಟ್ಟೆ ಬಿರಿಯುವಷ್ಟು ತಿಂಡಿ, ಶಾಪಿಂಗ್ ಮತ್ತು ಕಿವಿ ಇಂಪಾಗಿಸುವ ಸಂಗೀತ. ಈ ಬಂಡೆಯ ಉದ್ದಕ್ಕಿರುವ ತೀರ, ಸುತ್ತಲೂ ಹಸಿರು, ಹುಚ್ಚೆದ್ದು ಏಳುತ್ತಿರುವ ಅಲೆಗಳು ನಿಮ್ಮ ರಜಾದಿನಗಳನ್ನು ಇನ್ನಷ್ಟು ಚಂದವಾಗಿಸುತ್ತದೆ.
ಕೇವಲ ಈ ಬೀಚ್ ನೋಡಿ ಮರುಳಾಗಿ ಕೂತುಬಿಟ್ಟೀರಿ. ಏಕೆಂದರೆ ವರಕಲ ಇಕ್ಕೆಲಗಳಲ್ಲೂ ನೀವು ನೋಡಿ ಬೆರಗಾಗುವ ಇನ್ನಷ್ಟು ಸ್ಥಳಗಳಿವೆ. ನೀವೊಂದು ಬೈಕು ಏರಿದರೆ ಸಾಕು.
ಸಿವಗಿರಿ ಮಠ ರಸ್ತೆ
ಸಿವಗಿರಿ ಮಠವಿರುವುದು ವರಕಲ ಸಮುದ್ರ ತೀರದಿಂದ ೨ ಕಿ.ಮೀ ದೂರದಲ್ಲಿ. ಸಾಮಾಜಿಕ ಸುಧಾರಕ ಹಾಗೂ ಹಿಂದು ತತ್ವಜ್ಞಾನಿ ಶ್ರೀ ನಾರಾಯಣ ಗುರುಗಳ ಸಮಾಧಿ ಸ್ಥಳವಾದ ಕಾರಣ, ಸಿವಗಿರಿ ಮಠಕ್ಕೆ ಪ್ರವಾಸಿಗರು ಹಾಗೂ ಅಧ್ಯಾತ್ಮದಲ್ಲಿ ಆಸಕ್ತಿಯುಳ್ಳವರು ಹೆಚ್ಚಾಗಿ ಭೇಟಿ ನೀಡುತ್ತಾರೆ.

ಈ ಪುಣ್ಯ ಕ್ಷೇತ್ರ ಪ್ರತಿ ವರ್ಷ ಡಿಸೆಂಬರ್ ೩೦ರಿಂದ ಜನವರಿ ೦೧ರವರೆಗೆ ತೆರೆದಿರುತ್ತದೆ. ಗಾಢ ಹಳದಿ ಬಣ್ಣದ ಬಟ್ಟೆ ಧರಿಸಿ ಸಾವಿರಾರು ಯಾತ್ರಿಗಳು ಮಠಕ್ಕೆ ಪಾದಯಾತ್ರೆ ಬೆಳೆಸುವುದನ್ನು ಕಾಣಬಹುದು. ನೀವು ಇಂಥದ್ದೇ ಬಟ್ಟೆ ಧರಿಸಿ ಮಠಕ್ಕೆ ಬರಬೇಕೆಂಬ ನಿಯಮ ಇಲ್ಲಿದೆ.
ಪರವೂರ್ ಬೀಚ್
ಕೇರಳಿಗರು ಇದನ್ನು ಹೆಸರಿಸುವುದು ‘ತೀರದೇಶಮ್’(Theeradesham) ಹೆಸರಿನಿಂದ. ವರಕಲ ಸಮುದ್ರ ರೀರದಿಂದ ಅಷ್ಟೇನೂ ದೂರವಿಲ್ಲದಿದ್ದರೂ, ಇದು ಪ್ರವಾಸಿಗರಿಗೆ ಅಷ್ಟೊಂದು ಪರಿಚಿತವಾದ ಸ್ಥಳವಲ್ಲ. ಅಲೆಗಳು ಹುಚ್ಚೆದ್ದು ತೀರಕ್ಕೆ ಬರುವುದನ್ನು ತಡೆಯಲು ಸಲುವಾಗಿ ಬಂಡೆಗಳನ್ನು ಸಾಲಾಗಿ ನಿಲ್ಲಿಸಲಾಗಿದೆ. ಆದರೆ ಈ ಬಂಡೆಗಳಿಗೆ ನೀರು ಬಡೆಯುವುದನ್ನು ನೋಡಿದರೆ ನೀವು ಕಳೆದೇ ಹೋಗುತ್ತೀರಿ!

ಎಲಿಫ್ಯಾಂಟ್ ಶೆಡ್ ಅಥವಾ ಆನ ಕೊಟ್ಟಿಲ್
ಪರೂರಿನ ಪೂತಕುಲಮ್ ಎಂಬಲ್ಲಿ ಆನ ಕೊಟ್ಟಿಲ್(Aana kottil) ಇದೆ. ಮೊದಲ ಬಾರಿಗೆ ಸಾಕು ಆನೆಗಳಿಗೆ ಜನಿಸಿದ ‘ಶಿವನ್ ಕುಟ್ಟಿ’ ಹುಟ್ಟಿದ ಮೇಲೆ ಈ ಸ್ಥಳ ಗುರುತಿಸಲ್ಪಟ್ಟಿತು. ನೀವು ಇಲ್ಲಿ ಆನೆಗಳೊಂದಿಗೆ ಫೋಟೋ, ಸೆಲ್ಫಿ ತೆಗೆದುಕೊಳ್ಳಬಹುದು. ಆದರೆ ಅದರ ಮೊದಲು ಮಾವುತನಿಗೆ ೧೦೦ ರೂಪಾಯಿ ಕೊಡುವುದನ್ನು ಮರೆಯಬೇಡಿ. ಆನೆಗಳಿಗೆ ಬಾಳೆಹಣ್ಣು ತಿನ್ನಿಸಬೇಕು ಎಂದು ಆಸೆಯಾದರೆ, ನಿರಾಸೆಯಾಗಬೇಡಿ. ೧೦೦ ಮೀ ಅಂತರದಲ್ಲಿ ಬೇಕಾದಷ್ಟು ಅಂಗಡಿಗಳಿವೆ.

ಎಲ್ಲಾ ಸಮುದ್ರ ತೀರಗಳ ಬಹುದೊಡ್ಡ ಆಕರ್ಷಣೆ ಮೀನು. ಬೋಟುಗಳಲ್ಲಿ ರಾಶಿ ರಾಶಿಯಾಗಿ ತಂದು ಸುರಿಯುತ್ತಿರುವ ಮೀನು, ಅದನ್ನು ಪಟಪಟನೆ ವಿಲೇವಾರಿ ಮಾಡುತ್ತಿರುವ ಮೀನುಗಾರರು, ಮೀನು, ಏಡಿ, ಸಿಗಡಿ ಮುಂತಾದ ತರಹೇವಾರಿ ಸಮುದ್ರ ಜೀವಿಗಳನ್ನು ನೋಡುವುದನ್ನು ನೀವು ಮಿಸ್ ಮಾಡಲೇಕೊಳ್ಳಬಾರದು. ನಿಮ್ಮ ಅದೃಷ್ಟಕ್ಕೆ ಬೃಹತ್ ಮೀನುಗಳು ಬಲೆಯಲ್ಲಿ ಬಿದ್ದರೆ ಅದರ ಹರಾಜು ಪ್ರಕ್ರಿಯೆಯನ್ನೂ ನೋಡಬಹುದು! ಇದೆಲ್ಲಾ ಒಟ್ಟಾಗಿ ನೋಡಬೇಕೆಂದರೆ ಬೆಳಗ್ಗೆ ಆರು ಗಂಟೆಯ ಮೊದಲು ಪರವೂರು ಬೀಚನ್ನು ನೀವು ತಲುಪಿರಬೇಕಷ್ಟೇ!
ಭೇಟಿಗೆ ಉತ್ತಮ ಸಮಯ
ಅಕ್ಟೋಬರ್ನಿಂದ ಮಾರ್ಚ್ವರೆಗಿನ ಅವಧಿಯಲ್ಲಿ ಭೇಟಿ ನೀಡುವುದು ಉತ್ತಮ. ಇನ್ನೂ ಚೀಪ್ ಡೀಲ್ ಬೇಕೆಂದರೆ, ಈ ಅವಧಿಗಿಂತ ಮುನ್ನವೇ ವರಕಲ ಬೀಚ್ ಕಡೆಗೆ ನೀವು ಹೋಗಬೇಕು. ರಷ್ಯಾದ ಬಿಜಿ ರತೀಶ್, ವರ್ಷದಲ್ಲಿ ೬ ತಿಂಗಳು ವರಕಲ ಬೀಚಿನಲ್ಲಿ ಕುಟುಂಬದೊಂದಿಗೆ ಸಮಯ ಕಳೆಯುತ್ತಾರೆ. ಅವರು ಹೇಳುವ ಪ್ರಕಾರ, ವರಕಲ(Varakala) ಮುಂದಿನ ದಿನಗಳಲ್ಲಿ ಕೇರಳದ ‘ಬೆಸ್ಟ್ ಕೆಪ್ಟ್ ಸೀಕ್ರೆಟ್’ ಆಗಿ ಉಳಿಯುವುದು ಸಾಧ್ಯವಿಲ್ಲ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ