ಯಾಣದ ಕಡೆಗೆ ಕುಟುಂಬದ ಯಾನ
ಕರ್ನಾಟಕದ ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ ಯಾಣ ಕೂಡಾ ಒಂದು. ಇದು ಕೇವಲ ಒಂದು ಸ್ಥಳವಾಗಿರದೆ, ಅನುಭವಗಳನ್ನು ಪಾಠಗಳನ್ನು, ಪರಿಸರದ ಮಹತ್ವವನ್ನು ತಿಳಿಸಿಕೊಡುವ ಜಾಗವಾಗಿದೆ. ಇಲ್ಲಿಗೆ ಭೇಟಿ ನೋಡಿದ ಒಂದು ಕುಟುಂಬದ ಕಥೆಯಿದು.
- ಮಧುರಾ ಎಲ್ ಭಟ್
ನನಗೆ ಪ್ರವಾಸ ಅಂದ್ರೆ ಚಿಕ್ಕವಯಸ್ಸಿನಿಂದಲೂ ತುಂಬಾ ಇಷ್ಟ. ನನ್ನ ಹವ್ಯಾಸದಲ್ಲಿ ಪ್ರವಾಸ ಅಥವಾ ಪಿಕ್ನಿಕ್ ಹೋಗೋದು ಕೂಡ ಒಂದು. ಪ್ರವಾಸ ಮಾಡುವಾಗ ನಮಗೆ ಆಗುವ ಅನುಭವ ಬೇರೆಯವರಿಗೆ ಒಂದು ಒಳ್ಳೆಯ ಪಾಠ ಹೇಳಿಕೊಡುತ್ತದೆ ಎನ್ನುವ ಮೂಲಕವೇ ತನ್ನ ಪ್ರವಾಸದ ಮಧುರ ಕ್ಷಣಗಳನ್ನು ಬಿಚ್ಚಿಟ್ಟಿದ್ದಾರೆ ಕುಮಟಾ ತಾಲೂಕಿನ ಗುಡೇಅಂಗಡಿ ಮೂಲದ ಕಾಮೇಶ್ವರ ಭಟ್ಟ ಅವರು.
ಇವರು ಚಿಕ್ಕ ವಯಸ್ಸಿನಿಂದಲೇ ಪ್ರವಾಸಕ್ಕೆ ಹೋಗುವುದರಲ್ಲಿ ಅತಿಯಾದ ಆಸಕ್ತಿ ಬೆಳೆಸಿಕೊಂಡ ಪ್ರವಾಸಿಗರಲ್ಲಿ ಒಬ್ಬರೂ. ಇವರಿಗೆ 63 ವರ್ಷ ಆದರೂ ತಮ್ಮ ಪ್ರವಾಸ ಮಾಡುವ ಉತ್ಸಾಹವನ್ನು ಮೊದಲಿನಂತೆಯೇ ಇಟ್ಟುಕೊಂಡಿರುವುದು ಇವರ ವಿಶೇಷತೆ ಎಂದೆ ಹೇಳಬಹುದು. ಇವರ ಪ್ರವಾಸಿ ತಾಣಗಳ ಅನುಭವ ಕೇಳುವಾಗ ಇವರು ಇತ್ತೀಚಿಗೆ ಹೋದ ಯಾಣದ ಬಗ್ಗೆ ತನ್ನ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಈ ಯಾಣಕ್ಕೆ ಮೋಹಿನಿ ಶಿಖರ ಎಂದೂ ಕರೆಯುತ್ತಾರೆ. ಇದಕ್ಕೂ ಒಂದು ಚಿಕ್ಕದಾದ ಹಿನ್ನಲೆ ಇದೆ. ಶಿವನ ಮಗ ಭಸ್ಮಾಸುರ ಶಿವನ ತಲೆಯ ಮೇಲೆ ಕೈ ಇಡಲು ಬಂದಾಗ ಅವನಿಂದ ತಪ್ಪಿಸಿಕೊಳ್ಳಲು ಶಿವನು ಯಾಣದ ಸಮೀಪ ಬರುತ್ತಾನೆ. ಮತ್ತು ವಿಷ್ಣುವಿನ ಹತ್ತಿರ ತನ್ನ ಕಾಪಾಡುವಂತೆ ಬೇಡಿಕೊಳ್ಳುತ್ತಾನೆ. ಆಗ ವಿಷ್ಣು ಪ್ರತ್ಯಕ್ಷನಾಗಿ ಶಿವನ ಹತ್ತಿರ ಮರವಾಗಿ ನಿಲ್ಲುವಂತೆ ಹೇಳುತ್ತಾನೆ. ಹಾಗೆ ತಾನು ಮೋಹಿನಿ ರೂಪ ತಾಳಿ ನಾಟ್ಯಮಾಡುತ್ತ ಭಸ್ಮಾಸುರನನ್ನು ಭಸ್ಮ ಮಾಡುತ್ತಾನೆ.
ಆ ರೀತಿ ಭಸ್ಮಾಸುರನನ್ನು ಭಸ್ಮ ಮಾಡಿದ ಜಾಗವೇ ಮೋಹಿನಿ ಶಿಖರ / ಇಂದಿನ ಯಾಣ. ಹಾಗಾಗಿ ಇಂದಿಗೂ ಕೂಡಾ ಅಲ್ಲಿನ ಮಣ್ಣು ಕಪ್ಪಾಗಿದೆ. ಹಾಗೆ ವಿಜ್ಞಾನಿಗಳು ಈ ಶಿಖರವನ್ನು ಜ್ವಾಲಾಮುಖಿ ಶಿಖರ ಎಂತಲೂ ಕರೆಯುತ್ತಾರೆ.
ಇನ್ನೂ ನನ್ನ ಪ್ರವಾಸದ ಹಂತ ಹಂತ ನಡಿಗೆಯನ್ನು ಹೇಳುವುದಾದರೆ ನಾನು ಮತ್ತು ನನ್ನ ಸಂಬಂಧಿಕರೆಲ್ಲ ಸೇರಿ ಯಾಣಕ್ಕೆ ಹೋಗುವ ಹಿಂದಿನ ದಿನ ಕೂತು ಎಷ್ಟು ಗಂಟೆಗೆ ಮನೆಯಿಂದ ಹೊರಡುವುದು, ಯಾವ ರೀತಿಯ ಅಂಗಿಯನ್ನು ಧರಿಸುವುದು, ಎಲ್ಲಿ ತಿಂಡಿಯನ್ನು, ಊಟವನ್ನು ಮಾಡುವುದು ಎಂದೆಲ್ಲ ಚರ್ಚಿಸಿದೇವು. ನಂತರ ಮಾರನೇ ದಿನ ಬೆಳಗ್ಗೆ 5.30 ಕ್ಕೆ ಎದ್ದು ಸ್ನಾನ, ಲಘು ಉಪಹಾರವನ್ನು ಸೇವಿಸಿ, ಸುಮಾರು 6.15 ಕ್ಕೆ ನಮ್ಮ ಮನೆಯಲ್ಲೇ ಇರುವ ನನ್ನ ವೇಗಿನರ್ ಕಾರಿನಲ್ಲಿ ಯಾಣ ನೋಡಲು ಯಾನ ಪ್ರಾರಂಭಿಸಿದೆವು.
ಮೊದಲು ನಮ್ಮ ಮನೆ ಅಂದರೆ ಗುಡೇಅಂಗಡಿಯಿಂದ ಕುಮಟಾಕ್ಕೆ ಹೋದೆವು. ಅದು 9 ಕಿ. ಮೀಟರ್ ನ ದಾರಿ. ನಂತರ ಕುಮಟಾದಿಂದ ಸಂಡಳ್ಳಿ ಎಂಬ ಊರಿಗೆ ಹೋದೆವು. ಅದು ಸುಮಾರು 18 ಕಿ. ಮೀಟರ್ ನ ದಾರಿ. ಅಲ್ಲಿ ನನ್ನ ಸಂಬಂಧಿಕರ ಮನೆ ಇದ್ದರಿಂದ ಮತ್ತೊಮ್ಮೆ ಅಲ್ಲಿ ಉಪಹಾರ ಮಾಡಿ ಕೊನೆಗೆ ಯಾಣಕ್ಕೆ ಹೊರಟೆವು.
ಸಂಡಳ್ಳಿಯಿಂದ ಯಾಣ ಸುಮಾರು 9 ಕೀ. ಮೀಟರ್ ನ ದಾರಿ. ಯಾಣ ಶಿಖರವನ್ನು ಸುಮಾರು 10. 20ರ ಹೊತ್ತಿಗೆ ತಲುಪಿದ್ದೆವು. ಯಾಣದ ಬುಡದಲ್ಲೇ ಕಾರನ್ನು ನಿಲ್ಲಿಸಿ ಅಲ್ಲೆ ಇರುವ ಅಂಗಡಿಯಲ್ಲಿ ನೀರು ಮತ್ತು ಸ್ವಲ್ಪ ತಿನ್ನಲು ತಿಂಡಿ ಖರೀದಿಸಿ, ಶಿಖರವನ್ನು ಏರಲು ಪ್ರಾರಂಭಿಸಿದೆವು.
ನೀವುಇದನ್ನುಇಷ್ಟಪಡಬಹುದು: ಕುಟುಂಬದವರೊಂದಿಗೆ ವಿರಾಮ ಸಮಯದಲ್ಲಿ ನೀವು ನೋಡಬಹುದಾದ ಜಾಗಗಳು
ಅದೊಂದು ಕಾಡಿನ ದಾರಿ. ಜೇನು ( ಹೆಜ್ಜೇನು )ಗಳು ಅಲ್ಲಿ ಹೆಚ್ಚಾಗಿ ಗೂಡುಕಟ್ಟಿಕೊಂಡು ವಾಸಮಾಡುತ್ತಾ ಇರುತ್ತವೆ ಎಂದೂ ಕೇಳಿದ್ದೆ. ಅಲ್ಲದೇ ಕೂ ಹೊಡೆದರೆ, ಕಲ್ಲು ಹೊಡೆದು ಜೇನಿನ ಹತ್ತಿರ ಕಚ್ಚಿಸಿಕೊಂಡವರು ಇದ್ದಾರೆ. ಆದರೆ ನಾವು ಹೋದಾಗ ಅಷ್ಟೊಂದು ಜೇನಿನ ಗೂಡುಗಳೇನು ನಮ್ಮ ಕಣ್ಣಿಗೆ ಕಂಡು ಬಂದಿಲ್ಲ. ನಾವು ಹಾಗೆ ಮಾತನಾಡುತ್ತ ಹರಟೆ ಹೊಡೆಯುತ್ತಾ ಸಾಗಿದೆವು. ಈ ಶಿಖರವನ್ನು ಹತ್ತಲು ಮೊದಲು ಕಾಲು ದಾರಿಗಳು ಇದ್ದವಂತೆ. ಆದರೆ ಈಗ ಶಿಖರ ಹತ್ತಲು ಮೆಟ್ಟಿಲುಗಳನ್ನು ಮಾಡಲಾಗಿದೆ. ಈ ಶಿಖರವನ್ನು ತಲುಪಬೇಕಾದರೆ ಸುಮಾರು 3 ಕೀ. ಮೀಟರ್ ಹತ್ತಬೇಕು.
ಅಂತೂ ಇಂತೂ ನಾವು ಶಿಖರವನ್ನು ಹತ್ತಿದೆವು. ಅಲ್ಲಿ ಒಂದು ಗುಹೆಯಿದೆ. ಆ ಗುಹೆಯಲ್ಲಿ ಭೈರವೇಶ್ವರನ ಮೂರ್ತಿಯಿದೆ. ಮತ್ತು ಅಲ್ಲಿ ಶಿಖರದ ಮೇಲಿಂದ ಯಾವಾಗಲು ನೀರು ಬೀಳುವ ಒಂದು ಅಚ್ಚರಿ ಸಂಗತಿಯು ಇದೆ. ಅಲ್ಲಿ ಸುತ್ತಮುತ್ತಲು ಶಿಖರವೇ ಇದ್ದು ಮನಸ್ಸಿಗೆ ಶಾಂತಿಯನ್ನು ನೀಡಲು ಅದೊಂದು ಒಳ್ಳೆಯ ಜಾಗ ಅಂತಲೆ ಹೇಳಬಹುದು.
ನಾವು ಸ್ವಲ್ಪ ಸಮಯ ಅಲ್ಲಿದ್ದು ಮನಸ್ಸಿಗೆ ನಾಟುವಂತೆ, ಕಣ್ಣಿಗೆ ಅಚ್ಚು ಒತ್ತುವಂತೆ ಆ ಶಿಖರವನ್ನು ನೋಡಿ, ಅಲ್ಲಿಂದ ಸುಮಾರು 1 ಗಂಟೆಗೆ ವಾಪಸ್ ಹೊರಟೆವು. ಹೀಗೆ ನಮ್ಮ ಯಾಣ ಪ್ರವಾಸ ತುಂಬಾ ಸುಂದರವಾಗಿತ್ತು. ಮತ್ತು ನನ್ನ ಈ ವಯಸ್ಸಿಗೆ ನೆನಪಿರುವ ಒಂದು ಒಳ್ಳೆಯ ಅನುಭವವನ್ನು ಅದು ಕೊಟ್ಟಿದೆ ಎನ್ನುತ್ತಾ ತನ್ನ ಪ್ರವಾಸದ ಅನುಭವವನ್ನು ಹಂಚಿಕೊಂಡರು.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ