ಇನ್ಮುಂದೆ ಶೃಂಗೇರಿಗೆ ಹೋದವರು ಶಂಕರಾಚಾರ್ಯರ ಪ್ರತಿಮೆಯನ್ನೂ ನೋಡಬಹುದು
ಶೃಂಗೇರಿ ಎಂದಾಗ ಎಲ್ಲರಿಗೂ ಶಾರದಾಂಬೆ ನೆನಪಾಗುತ್ತಾಳೆ. ಪ್ರಕೃತಿಯ ಮಡಿಲಿನಲ್ಲಿ ಮನಸೂರೆಗೊಂಡಿರುವ ಈ ತಾಯಿಯ ಕಂಡು ಪುನೀತರಾಗುವ ಭಕ್ತರು ಅದೆಷ್ಟೋ ಮಂದಿ. ಇದೀಗ ಅಂತಹ ಭಕ್ತರಿಗೆ ,ಪ್ರವಾಸಿಗರಿಗೆ ಸಿಹಿ ಸುದ್ದಿ ಇಲ್ಲಿದೆ.
ಕಾಫಿನಾಡ ಶೃಂಗೇರಿ ಶಾರದಾಂಭೆ ಕ್ಷೇತ್ರ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಇಷ್ಟು ದಿನ ಶೃಂಗೇರಿಯಲ್ಲಿ ಶಾರದಾಂಭೆ ದರ್ಶನ ಪಡೆಯುತ್ತಿದ್ದು ಭಕ್ತರು ಇನ್ಮುಂದೆ ಅದ್ವೈತ ಸಿದ್ಧಾಂತ ಪ್ರತಿಪಾದಕ ಶಂಕರಾಚಾರ್ಯರ ದರ್ಶನವನ್ನೂ ಪಡೆಯಬಹುದು.
ಹೌದು ಶೃಂಗೇರಿಯಲ್ಲಿ 32 ಅಡಿಯ ಶಂಕರಾಚಾರ್ಯರ ಮೂರ್ತಿ ಇಂದು ಲೋಕಾರ್ಪಣೆ ಆಗಿದೆ. 45 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಈ ಪ್ರತಿಮೆಯು ಶೃಂಗೇರಿಯಿಂದ ಎರಡು ಕಿಲೋ ಮೀಟರ್ ದೂರದ ವಿದ್ಯಾರಣ್ಯಪುರದ ಹನುಮಗಿರಿಯಲ್ಲಿ ಸ್ಥಾಪನೆಯಾಗಿದೆ.
ಶಂಕರಾಚಾರ್ಯರ ಮೂರ್ತಿ ಸ್ಥಾಪನೆಗೆ ಬೆಂಗಳೂರಿನ ಹೊಸಕೋಟೆಯಿಂದ 750 ಟನ್ ತೂಕದ ಶಿಲೆಯನ್ನು ಬಳಸಲಾಗಿದೆ. ಶಂಕರರು ಜೀವಿಸಿದ್ದ ಕಾಲಾವಧಿಗೆ ಹೊಂದುವಂತೆ ತಮಿಳುನಾಡಿನ ಪ್ರಸಿದ್ಧ ಶಿಲ್ಪಿ ಶಂಕರ ಸ್ಥಪತಿ 32 ಅಡಿ ಎತ್ತರದ ಮೂರ್ತಿ ನಿರ್ಮಿಸಿದ್ದಾರೆ.
ನೀವು ಇದನ್ನು ಇಷ್ಟ ಪಡಬಹುದು:ಮುರುಡೇಶ್ವರದಲ್ಲಿದೆ ಜಗತ್ತಿನ ಎರಡನೇ ಅತೀ ಎತ್ತರದ ಶಿವನ ಮೂರ್ತಿ
ಇನ್ನು ಇಲ್ಲಿ ಶಂಕರಾಚಾರ್ಯರ ಪ್ರತಿಮೆ ಜೊತೆ ಅವರ ನಾಲ್ವರು ಶಿಷ್ಯರಾದ ಸುರೇಶ್ವರಾಚಾರ್ಯರು, ತೋಟಕಾಚಾರ್ಯರು, ಪದ್ಮಪಾದಚಾರ್ಯರು, ಹಸ್ತಮಲಕಾಚಾರ್ಯರು ಮೂರ್ತಿಯೂ ಅನಾವರಣಗೊಂಡಿದೆ.
ಶೃಂಗೇರಿಯ ಈ ಹನುಮಗಿರಿ ಬೆಟ್ಟದಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತ ವೀಕ್ಷಣೆಗೂ ವ್ಯವಸ್ಥೆ ಮಾಡಲಾಗಿದೆ. ಬೆಟ್ಟ ಹತ್ತಲು-ಇಳಿಯಲು ಎಸ್ಕಲೇಟರ್ ವ್ಯವಸ್ಥೆ ಅಳವಡಿಸಲಾಗಿದೆ.
ಶಂಕರಾಚಾರ್ಯರ ಇಂಥ ಪ್ರತಿಮೆ ನಿರ್ಮಾಣ ಮಾಡಬೇಕೆಂಬುದು ಶೃಂಗೇರಿ ಮಠದ ಹಿರಿಯ ಗುರುಗಳಾದ ಶ್ರೀ ಭಾರತೀತೀರ್ಥ ಶ್ರೀಗಳ ಸಂಕಲ್ಪವಾಗಿದ್ದು. ಇದೀಗ ಅಂದುಕೊಂಡಂತೆ ಪ್ರತಿಮೆ ಅನಾವರಣಗೊಂಡಿದೆ. ಶ್ರೀ ಭಾರತೀತೀರ್ಥ ಶ್ರೀಗಳು ಸನ್ಯಾಸತ್ವ ಸ್ವೀಕರಿಸಿದ ಸುವರ್ಣ ಮಹೋತ್ಸವದ ಹೊತ್ತಲ್ಲೆ ಶಂಕರಾಚಾರ್ಯರ ಸುಂದರ ಪ್ರತಿಮೆ ಅನಾವರಣಗೊಂಡಿದೆ.
ನೀವು ಕೂಡ ಶೃಂಗೇರಿ ಕಡೆಗೆ ಹೋದಾಗ ಅಲ್ಲಿ ಸನಿಹದಲ್ಲಿರುವ ಶಂಕರಾಚಾರ್ಯರ ಪ್ರತಿಮೆಯನ್ನು ಕಣ್ತುಂಬಿಕೊಳ್ಳಿ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.