ಇತಿಹಾಸ ಪ್ರಸಿದ್ಧ ಗುಡೇಅಂಗಡಿ ಗ್ರಾಮದ ಕಾಂಚಿಕಾ ಪರಮೇಶ್ವರಿ ದೇವಸ್ಥಾನ
ಕುಮಟಾ ತಾಲೂಕಿನಲ್ಲಿರುವ ‘ಕಾಂಚಿಕಾ ಪರಮೇಶ್ವರಿ ದೇವಸ್ಥಾನ’ ಕೇವಲ ಪೌರಾಣಿಕ ಹಿನ್ನಲೆಯನ್ನು ಹೊಂದಿರುವುದು ಮಾತ್ರವಲ್ಲದೆ, ರಮಣೀಯ ನಿಸರ್ಗದ ಹಿನ್ನಲೆಯನ್ನೂ ಹೊಂದಿದೆ. ಹಾಗಾಗಿ ದೇವಿಯ ದರ್ಶನಾಭಿಲಾಷಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ.
- ಮಧುರಾ ಎಲ್ ಭಟ್
ಮನಸ್ಸಿಗೆ ತುಂಬಾ ಬೇಸರವಾದಾಗ ನಾವು ಮೊದಲು ಮೊರೆಹೋಗುವುದೇ ದೇವರಲ್ಲಿ. ದೇವರೇ ಆದಷ್ಟು ಬೇಗ ನಮ್ಮ ಸಮಸ್ಯೆಯನ್ನು ಬಗೆಹರಿಸು ಅಥವಾ ನೆಮ್ಮದಿಯನ್ನು ಪಡೆಯಲು ಏನಾದರೂ ದಾರಿಯನ್ನು ತೋರಿಸು ಎಂದು. ಇನ್ನು ಕೆಲವರು ಮನಸ್ಸಿಗೆ ತುಂಬಾ ಬೇಸರವಾದಾಗ ದೇವಾಲಯಗಳಿಗೆ ತೆರಳಿ ಅಲ್ಲಿ ಸ್ವಲ್ಪ ಹೊತ್ತು ಕುಳಿತು ಅಲ್ಲಿನ ಸೌಂದರ್ಯವನ್ನು ಸವಿಯುತ್ತ ಬೇಸರವನ್ನು ಹೋಗಲಾಡಿಸಿಕೊಳ್ಳುತ್ತಾರೆ. ಮನಸ್ಸಿನ ನೆಮ್ಮದಿಗಾಗಿ ದೇವಾಲಯಗಳಿಗೆ ತೆರಳುವವರಲ್ಲಿ ನಾನು ಒಬ್ಬಳು.
ನಾನು ಇಂದು ನಿಮಗೆ ನಮ್ಮ ಮನೆಯ ಸಮೀಪದಲ್ಲಿರುವ ಗುಡ್ಡೆಯ ಮೇಲಿರುವ ಕಾಂಚಿಕಾ ಪರಮೇಶ್ವರಿ ದೇವಾಲಯದ ಬಗ್ಗೆ ಹಾಗೂ ಅಲ್ಲಿನ ವೈಶಿಷ್ಟ್ಯದ ಬಗ್ಗೆ ಹೇಳಲು ಬಯಸುತ್ತೇನೆ. ಈ ಕಾಂಚಿಕಾ ಪರಮೇಶ್ವರಿ ದೇವಾಲಯ ಪ್ರಸಿದ್ಧ ಕ್ಷೇತ್ರ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇದಕ್ಕೆ ಕಾಂಚಿಕಾ ಪರಮೇಶ್ವರಿ ಕ್ಷೇತ್ರ ಎಂದು ಹೆಸರು ಬರಲು ಕೆಲವು ಇತಿಹಾಸವಿದೆ.
ಕಲಭ ಎಂಬ ರಾಜ ಸಾವಿರಾರು ವರ್ಷಗಳ ಹಿಂದೆ ಗೋಕರ್ಣ ಮಂಡಳದ ಅರಸನಾಗಿ ಆಳ್ವಿಕೆ ನಡೆಸುತ್ತಿರುವಾಗ ಒಂದು ದಿನ ಅವನ ಕನಸಿನಲ್ಲಿ ದೇವಿಯ ದರ್ಶನವಾಯಿತಂತೆ. ಅದರಲ್ಲಿ ಅವಳೂ ಕಾಗಾಲ್-ಅಘನಾಶಿನಿ-ಗುಡ್ಡದಲ್ಲಿರುವ ಅಗಸ್ತ್ಯಾಶ್ರಮದ ದಕ್ಷಿಣಕ್ಕೆ ಸಮುದ್ರ ತೀರವಿದೆ ಅದರ ಸಮೀಪ ಒಂದು ಚಿಕ್ಕದಾದ ಗುಡ್ಡ ಅಂಚಿನಲ್ಲಿ ಚಾಕ್ರಾಯಣಿ ಕ್ಷೇತ್ರವಿದೆ ಅಲ್ಲಿ ಗುಡಿಯೊಂದನ್ನು ಕಟ್ಟಿಸಿ ನನ್ನ ಮೂರ್ತಿ ಪ್ರತಿಷ್ಠಾಪಿಸು ಎಂದಳಂತೆ.
ಆಗ ಆ ರಾಜ ಮಹಿಷಾಸುರ ಮರ್ಧಿನಿ ರೂಪವಿರುವ 54 ಅಂಗುಲ ಎತ್ತರದ ಮೂರ್ತಿಯನ್ನು ಕಂಚಿ ದೇಶದಿಂದ ತರಸಿ ಚಾಕ್ರಾಯಣಿ ಋಷಿಗಳ ಅಮೃತ ಹಸ್ತದಿಂದ ಶ್ರೀ ದೇವಿಯನ್ನು ಪ್ರತಿಷ್ಠಾಪಿಸಿದನಂತೆ. ಈ ದೇವರ ಪ್ರತಿಷ್ಠಾಪನೆಗೆ `ಕಂಚಿ’ ದೇಶದಿಂದ ಮೂರ್ತಿಯನ್ನು ತರಿಸಿದ್ದರಿಂದ ಅದಕ್ಕೆ `ಕಾಂಚಿಕಾಂಬಾ’ ಎಂಬ ಹೆಸರನ್ನು ಇಡಲಾಗಿದೆ ಎಂಬ ನಂಬಿಕೆಯಿದೆ.
ನೀವುಇದನ್ನುಇಷ್ಟಪಡಬಹುದು: ಉಡುಪಿಯ ಗುಡ್ಡಟ್ಟುವಿನಲ್ಲಿದೆ ಕಲ್ಲು ಬಂಡೆಗಳ ನಡುವೆ ಮೂಡಿಬಂದ ಗಣಪ.
ಈ ಈ ಕ್ಷೇತ್ರವು ತಳಮಟ್ಟದಿಂದ ಸುಮಾರು 300 ಅಡಿಗಳಷ್ಟು ಎತ್ತರವಾಗಿದೆ. ಈ ದೇವಾಲಯದಲ್ಲಿ ನಿಂತು ನಾವು ಪ್ರಕೃತಿ ಸೌಂದರ್ಯವನ್ನ ಸವಿಯುವುದರ ಜೊತೆಗೆ ಸಮುದ್ರದ ಬೋರ್ಗೆರೆತವನ್ನು ಕಣ್ತುಂಬಿಸಿಕೊಳ್ಳಬಹುದು ಆಗಿದೆ. ಈ ಸೌಂದರ್ಯವನ್ನು ನೋಡಿದಷ್ಟು ಇನ್ನು ನೋಡಬೇಕು ಎನ್ನುವ ಆಕರ್ಷಣೆ ಇದಕ್ಕಿದೆ. ಈ ಗುಡ್ಡದ ಮೇಲೆ ದೇವಾಲಯ ಇರುವುದರಿಂದ ಅದನ್ನು ಹತ್ತಲು ಮೆಟ್ಟಿಲುಗಳನ್ನು ಮಾಡಲಾಗಿದೆ. ನಾವು ದೇವಾಯಲದ ಒಳಗೆ ಹೋಗುವ ಮೊದಲು ನಮ್ಮನ್ನು ಎರಡು ಆನೆಯ ಮೂರ್ತಿಗಳು ಸ್ವಾಗತಿಸುತ್ತವೆ.
ಹೀಗೆ ನಮ್ಮ ಕಾಂಚಿಕಾ ಪರಮೇಶ್ವರಿ ದೇವಸ್ಥಾನ ಪ್ರವಾಸವನ್ನು ಮಾಡಲಷ್ಟೇ ಅಲ್ಲದೆ ಮನಸ್ಸಿಗೆ ನೆಮ್ಮದಿಯನ್ನು ಪಡೆಯುವಲ್ಲಿ ಒಂದು ಸುಂದರವಾದ ಹವಾಮಾನವನ್ನು ಸವಿಯುವಲ್ಲಿ ಪ್ರಮುಖವಾದ ಪಾತ್ರವಹಿಸುತ್ತದೆ. ಕುಮಟಾ ತಾಲೂಕಿನಿಂದ ಈ ದೇವಸ್ಥಾನಕ್ಕೆ ಕೇವಲ 9 ಕಿಲೋಮೀಟರ್ ಇರುವುದರಿಂದ ತುಂಬಾ ಜನರು ಈ ದೇವಾಲಯದ ದರ್ಶನಕ್ಕೆ ಬರುತ್ತಾರೆ. ಕುಮಟಾದಿಂದ ಮಾತ್ರವಲ್ಲದೆ ಬೇರೆ ಬೇರೆ ರಾಜ್ಯಗಳಿಂದಲೂ ಕೂಡ ಈ ದೇವಾಲಯದ ದರ್ಶನಕ್ಕಾಗಿ ಬರುತ್ತಾರೆ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ