Moreಮ್ಯಾಜಿಕ್ ತಾಣಗಳುವಿಂಗಡಿಸದಸಂಸ್ಕೃತಿ, ಪರಂಪರೆ

ಈ ಶಿವರಾತ್ರಿಗೆ ಹುಬ್ಬಳ್ಳಿ ಬಳಿ ಅಭಿವೃದ್ಧಿಗೊಂಡ “ ಶಿವ ಶಕ್ತಿ ಧಾಮ”ಕ್ಕೆ ಭೇಟಿ ನೀಡಿ:

ಹುಬ್ಬಳ್ಳಿಯ (Hubballi) ಸುಮಾರು 25 ಕಿಮೀ ದೂರದಲ್ಲಿರುವ ಪಾಲಿಕೊಪ್ಪ (Palikoppa) ಗ್ರಾಮದ ರಾಷ್ಟ್ರೀಯ ಹೆದ್ದಾರಿ-4 ರ ಪಕ್ಕದಲ್ಲಿ ಆರಾಧನಾ ಟ್ರಸ್ಟ್‌ನಿಂದ ಶಿವನಿಗೆ ಸಮರ್ಪಿತವಾದ ದೇವಾಲಯ ಸಂಕೀರ್ಣವನ್ನು (Temple complex) ನೂತನವಾಗಿ ಅಭಿವೃದ್ಧಿ ಪಡಿಸಲಾಗಿದೆ.

ಇದುವರೆಗೆ ವಿಆರ್‌ಎಲ್ ಲಾಜಿಸ್ಟಿಕ್ಸ್ (VRL Logistics) ಅಧ್ಯಕ್ಷ ಮತ್ತು ಮಾಜಿ ಸಂಸದ ವಿಜಯ ಸಂಕೇಶ್ವರ್ (Vijay Sankeshwar) ಅವರ ಕುಟುಂಬದವರು ನಿರ್ವಹಿಸುತ್ತಿದ್ದರು.

ಇತ್ತೀಚಿಗೆ ಈ ದೇವಾಲಯವನ್ನು ಶಂಕು ಸ್ಥಾಪನೆಯ ಮೂಲಕ ಸಂಕೀರ್ಣದ ಆಡಳಿತವನ್ನು ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂ, ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ, ಶೃಂಗೇರಿಗೆ (Sringeri) ಹಸ್ತಾಂತರಿಸಲಾಗಿದೆ.

ಈ ದೇವಾಲಯ ಸಂಕೀರ್ಣಕ್ಕೆ “ಶ್ರೀ ಶಿವ ಶಕ್ತಿ ಧಾಮ” (Shiva Shakti Dham Temple) ಎಂಬ ಹೆಸರು ನೀಡಲಾಗಿದೆ.

ನೂತನವಾಗಿ ಅಭಿವೃದ್ಧಿ ಹೊಂದಿದ ಈ ದೇವಾಲಯದಲ್ಲಿ ಇತ್ತೀಚಿಗೆ ಶಿವನ ದೇವಾಲಯ (Shiva Temple) ಮತ್ತು ಇತರ ವಿಗ್ರಹಗಳ ಪ್ರತಿಷ್ಠಾಪನೆಯನ್ನು ಶೃಂಗೇರಿ ಮಠದ ಶ್ರೀಗಳಾದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ (Sri Vidhushekhara Bharathi Swamiji) ಅವರು ನೆರವೇರಿಸಿದರು.

ಇಲ್ಲಿ ಶಿವನ ಮುಖ್ಯ ದೇವಾಲಯದ ಜೊತೆಗೆ ಸಂಕೀರ್ಣವು ಗಣೇಶ, ಚಂಡಿಕಾ, ಶನೇಶ್ವರ, ಕಾಲಭೈರವ ಮತ್ತು ನವಗ್ರಹಗಳ ದೇವಾಲಯಗಳಿಗೆ ನೆಲೆಯಾಗಿದೆ.

6.5 ಎಕರೆಯಲ್ಲಿ ಹರಡಿರುವ ಈ ಸಂಕೀರ್ಣವನ್ನು ತಮಿಳುನಾಡಿನ ಶಿಲ್ಪಿ ಕೆ ಸ್ವಾಮಿನಾಥನ್ ಸ್ಥಾಪತಿ ಅವರು ದಕ್ಷಿಣ ಭಾರತದ ದ್ರಾವಿಡ ಶೈಲಿಯಲ್ಲಿ ನಿರ್ಮಿಸಿದ್ದಾರೆ.

ದೇವಾಲಯ ಸಂಕೀರ್ಣದ ಕೆತ್ತನೆಗಳನ್ನು ಮಧುರೈನ 50 ಶಿಲ್ಪಿಗಳು ಕೆತ್ತಿದ್ಡು, ಇದು ನಾಲ್ಕು ವರ್ಷಗಳಲ್ಲಿ ಪೂರ್ಣಗೊಂಡಿತು. ಇದರ ನಿರ್ಮಾಣಕ್ಕೆ ದೊಡ್ಡಬಳ್ಳಾಪುರದ ಕಲ್ಲುಗಳನ್ನು ಬಳಸಲಾಗಿದೆ.

ತಮಿಳುನಾಡಿನ ವಾಲಾಜಾಬಾದ್‌ನಿಂದ ಕೃಷ್ಣ ಶಿಲೆಗಳನ್ನು ತಂದು ಇಲ್ಲಿಯ ವಿಗ್ರಹಗಳನ್ನು ಕೆತ್ತಲಾಗಿದೆ. ಹಾಗೂ ಕುಂಭಕೋಣಂನಿಂದ ಕಲಶ, ಪ್ರಭಾವಳಿ ಮತ್ತಿತರರ ವಸ್ತುಗಳನ್ನು ತರಲಾಗಿದೆ.

ಈ ದೇವಾಲಯ ಮೊದಲು VRL ಗ್ರೂಪ್ ನ ಎಂಡಿ ಮತ್ತು ಮಾಜಿ ಸಂಸದರಾದ ವಿಜಯ ಸಂಕೇಶ್ವರ ಅವರ ಕುಟುಂಬದಿಂದ ನಿರ್ವಹಿಸಲ್ಪಡುತ್ತಿತ್ತು.

ಈಗ ದೇವಾಲಯ ಸಂಕೀರ್ಣ ಅಭಿವೃದ್ಧಿಗೊಳಿಸಿದ ಬಳಿಕ ಇದರ ಸಂಪೂರ್ಣ ನಿರ್ವಹಣೆಯನ್ನು ಶೃಂಗೇರಿ ಶಾರದಾ ಪೀಠಕ್ಕೆ ಹಸ್ತಾಂತರಿಸಲಾಗಿದೆ.

ಇದರ ಉದ್ಘಾಟನೆಯ ಸಮಯದಲ್ಲಿ ಶೃಂಗೇರಿ ಶ್ರೀಗಳು ಮಾತನಾಡಿ,

“ಇನ್ನು ಮುಂದೆ ಶೃಂಗೇರಿ ಶಾರದಾ ಪೀಠವು ‘ಶ್ರೀ ಶಿವಶಕ್ತಿ ಧಾಮ’ವನ್ನು ವಹಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟಕ್ಕೆ ಅಭಿವೃದ್ಧಿಗೊಳಿಸಲಿದೆ” ಎಂದರು.

ಮಾಜಿ ಸಂಸದ ಹಾಗೂ ವಿಆರ್‌ಎಲ್‌ ಗ್ರೂಪ್‌ ಸಿಎಂಡಿ ವಿಜಯ ಸಂಕೇಶ್ವರ್‌ ಮಾತನಾಡಿ,

“ಈ ದೇವಾಲಯ ಸಂಕೀರ್ಣವನ್ನು 3 ಸಾವಿರಕ್ಕೂ ಹೆಚ್ಚು ಮಂದಿ ನೀಡಿದ 1 ಕೋಟಿ ರೂಗಿಂತ ಹೆಚ್ಚು ದೇಣಿಗೆಯಲ್ಲಿ ಶಿವ ಶಕ್ತಿ ಧಾಮವನ್ನು ನಿರ್ಮಿಸಲಾಗಿದೆ. ಇದರ ಕನಸು ಕಂಡಿದ್ದೆವು ಅದು ನನಸಾದೆ” ಎಂದು ಸಂತಸ ವ್ಯಕ್ತಪಡಿಸಿದರು.

ಉದ್ಘಾಟನೆಯ ಸಂದರ್ಭದಲ್ಲಿ ವಿಆರ್ ಎಲ್ ಎಂಡಿ ಆನಂದ ಸಂಕೇಶ್ವರ್, ವಿಎಸ್ ವಿ ಪ್ರಸಾದ್, ಎಂಎಲ್ ಸಿ ಬಿ.ಜಿ.ಪಾಟೀಲ್, ಶಿವ ಸಂಕೇಶ್ವರ್, ಪಿ.ಎ.ಮುರುಳಿ, ಶೃಂಗೇರಿ ಪೀಠದ ಗೌರಿಶಂಕರ್ ಇತರರು ಸಹ ಭಾಗಿಯಾಗಿದ್ದರು.

ಹುಬ್ಬಳ್ಳಿಯ ಬಳಿ ಇರುವ ನೂತನವಾಗಿ ಉದ್ಘಾಟನೆಗೊಂಡ ಈ ದೇವಾಲಯ ಸಂಕೀರ್ಣಕ್ಕೆ ಈ ವರ್ಷ ಶಿವರಾತ್ರಿಯಲ್ಲಿ ಭೇಟಿ ನೀಡಬಹುದು. ಹುಬ್ಬಳ್ಳಿಯ ಬಳಿ ಇದಲ್ಲದೇ ಇನ್ನೂ ಕೆಲವು ಶಿವ ದೇವಾಲಯವಿದೆ.

ಹುಬ್ಬಳ್ಳಿಯ ಉಣಕಲ್ ನಲ್ಲಿ (Unkal) 11ನೇ ಶತಮಾನದಲ್ಲಿ ಚಾಲುಕ್ಯರ ವಾಸ್ತುಶೈಲಿಯಲ್ಲಿ ನಿರ್ಮಿಸಲಾದ ಚಂದ್ರಮೌಳೇಶ್ವರ ದೇವಾಲಯವಿದೆ (Chandramouleshwara Temple).

ಹುಬ್ಬಳ್ಳಿಯಲ್ಲಿರುವ ಸಿದ್ಧಾರೂಢ ಮಠ (Siddharudha Mutt) ಧಾರವಾಡದ ಸೋಮೇಶ್ವರ ದೇವಾಲಯಕ್ಕೂ (Someshwara Temple) ಸಹ ಲಕ್ಷಾಂತರ ಮಂದಿ ಶಿವರಾತ್ರಿಯ ಸಮಯದಲ್ಲಿ ಭೇಟಿ ನೀಡುತ್ತಾರೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button