ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯಕ್ಕೆ ಕೃಷ್ಣನ ನಗರಿ ಸಜ್ಜು

ಜಿಲ್ಲೆಯ ಅತಿ ದೊಡ್ಡ ಹಬ್ಬ ಪರ್ಯಾಯಕ್ಕೆ ಉಡುಪಿ ಸಜ್ಜಾಗಿದೆ. ಮದುವಣಗಿತ್ತಿಯಂತೆ ಕೃಷ್ಣನ ನಗರಿ ಅಲಂಕಾರಗೊಂಡಿದೆ. ಈ ತಿಂಗಳ 17,18ರಂದು ನಡೆಯಲಿರುವ ಪರ್ಯಾಯ ಉಡುಪಿಯ ಅತಿ ದೊಡ್ಡ ಹಬ್ಬ. ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯಕ್ಕೆ ಉಡುಪಿಯ ಜನ ಕಾತುರರಾಗಿದ್ದಾರೆ . ಆದರೆ ಪರ್ಯಾಯಕ್ಕೆ ಈ ಬಾರಿ ಕೊರೊನಾ ಕರಿಛಾಯೆ ಆವರಿಸಿದೆ. ಧಾರ್ಮಿಕವಾಗಿ, ಸರಳವಾಗಿ ಈ ಬಾರಿ ಪರ್ಯಾಯ ನಡೆಯಲಿದೆ.
ನವ್ಯಶ್ರೀ ಶೆಟ್ಟಿ
ಪರ್ಯಾಯ ಕರಾವಳಿ ಜಿಲ್ಲೆಯ ಉಡುಪಿಯ ಅತಿ ದೊಡ್ಡ ಹಬ್ಬಗಳಲ್ಲಿ ಒಂದು. ಕೃಷ್ಣನ ನಗರಿ ಎರಡು ವರ್ಷಗಳಿಗೊಮ್ಮೆ ನಡೆಯಲಿರುವ ಪರ್ಯಾಯ ಮಹೋತ್ಸವಕ್ಕೆ ಸಜ್ಜಾಗಿದೆ. ಉಡುಪಿಯ ಬೀದಿಗಳು ದೀಪ ಅಲಂಕಾರದಿಂದ ಕಂಗೊಳಿಸುತ್ತಿದೆ. ರಾಜ್ಯದ ಜನರು ಉಡುಪಿಯತ್ತ ಒಮ್ಮೆ ತಿರುಗಿ ನೋಡುವ ರೀತಿಯಲ್ಲಿ ಪರ್ಯಾಯದ ಆಚರಣೆ ನಡೆಯುತ್ತಿದೆ. ಆದರೆ ಪರ್ಯಾಯಕ್ಕೆ ಕರೋನಾ ಕರಿಛಾಯೆ ಆವರಿಸಿದೆ. ಆದರೂ ಧಾರ್ಮಿಕವಾಗಿ , ಸರಕಾರದ ನಿಯಮಗಳನ್ನು ಪಾಲಿಸಿಯೇ ಪರ್ಯಾಯ ಆಚರಿಸಲು ಉಡುಪಿ ಸಜ್ಜಾಗಿದೆ.ಪ್ರತಿ ಎರಡು ವರ್ಷಗಳಿಗೊಮ್ಮೇ ಜನವರಿ 17,18ರಂದು ಈ ಪರ್ಯಾಯ ಮಹೋತ್ಸವ ನಡೆಯುತ್ತದೆ .ಉಡುಪಿಯ ಬೀದಿಗಳು ದೀಪದ ಅಲಂಕಾರದಿಂದ ಕಂಗೊಳಿಸಿರುತ್ತದೆ. ಕೃಷ್ಣ ಮಠದ ಆವರಣ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತದೆ . ಉಡುಪಿಯ ಮಂದಿ ಪರ್ಯಾಯ ಮಹೋತ್ಸವ ನೋಡಲು ಕಾತುರರಾಗಿರುತ್ತಾರೆ.

ಹಲವು ದಿನಗಳ ಕಾಲ ನಡೆಯುವ ಪರ್ಯಾಯ ಧಾರ್ಮಿಕ ಕಾರ್ಯಗಳು ಕೂಡ ಎಲ್ಲರ ಗಮನ ಸೆಳೆಯುತ್ತಿರುತ್ತದೆ.ಪರ್ಯಾಯ ಕೃಷ್ಣಮಠದ ಅಷ್ಟಮಠಗಳ ನಿರ್ವಹಣೆಯಲ್ಲಿ ಒಂದರಿಂದ ಇನ್ನೊಂದಕ್ಕೆ ಹಸ್ತಾಂತರ ಆಗುವುದರ ಮೂಲಕ ನಡೆಯುತ್ತದೆ. ಪ್ರತಿ ಮಠಗಳು ಎರಡು ವರ್ಷಗಳಿಗೊಮ್ಮೆ ಶ್ರೀ ಕೃಷ್ಣ ದೇವಸ್ಥಾನದ ಉಸ್ತುವಾರಿ ನಿಭಾಯಿಸಿ ಪರ್ಯಾಯ ಮಹೋತ್ಸವದ ವೇಳೆ ಇನ್ನೊಂದು ಮಠಕ್ಕೆ ಹಸ್ತಾಂತರ ಮಾಡುತ್ತಾರೆ.
ಪುರ ಪ್ರವೇಶ
ಪರ್ಯಾಯ ಮಹೋತ್ಸವದ ಅಂಗವಾಗಿ ನಡೆಯುವ ಪುರ ಪ್ರವೇಶ ಕೂಡ ಪರ್ಯಾಯದ ಧಾರ್ಮಿಕ ಕಾರ್ಯಗಳಲ್ಲಿ ಒಂದು. ಪರ್ಯಾಯವನ್ನು ನಡೆಸುವ ಮಠದ ಶ್ರೀಗಳುಶ್ರೀಮಧ್ವಾಚಾರ್ಯರೇ ನಿರ್ಮಿಸಿದ ಕಾವು ಗ್ರಾಮದ ಸಮೀಪದ ದಂಡತೀರ್ಥದಲ್ಲಿ ಸ್ನಾನವನ್ನು ಮಾಡಿ ಶ್ರೀಕೃಷ್ಣನ ಪೂಜೆಗಾಗಿ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಸಹಸ್ರಾರು ಭಕ್ತರು ಜೋಡುಕಟ್ಟೆಯಿಂದ ಭವ್ಯವಾಗಿ ಸ್ವಾಗತವನ್ನು ಸಮರ್ಪಿಸುತ್ತಾರೆ.

ಮೆರವಣಿಗೆಯಲ್ಲಿ ಚಿನ್ನದ ಪಲ್ಲಕ್ಕಿಯಲ್ಲಿ ಭಾವಿ ಪರ್ಯಾಯ ಶ್ರೀಗಳು ಪಟ್ಟದ ದೇವರನ್ನು ತರುತ್ತಾರೆ. ರಥಬೀದಿಗೆ ಆಗಮಿಸಿದ ಕೂಡಲೇ ಪಲ್ಲಕ್ಕಿಯಿಂದ ಕೆಳಗಿಳಿದು ನಡೆದುಕೊಂಡು ಬರುತ್ತಾರೆ.ಶ್ರೀಚಂದ್ರಮೌಳೀಶ್ವರ ಶ್ರೀಅನಂತೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ ಶ್ರೀಕೃಷ್ಣಮಠವನ್ನು ಪ್ರವೇಶಿಸುತ್ತಾರೆ. ಪರ್ಯಾಯ ಶ್ರೀಪಾದರು ಪರ್ಯಾಯ ಸ್ವೀಕರಿಸುವ ಯತಿಗಳನ್ನು ಆದರದಿಂದ ಸ್ವಾಗತಿಸುತ್ತಾರೆ.
ಶ್ರೀಕೃಷ್ಣ-ಮುಖ್ಯಪ್ರಾಣ – ಶ್ರೀಮಧ್ವಾಚಾರ್ಯರ- ಗರುಡದೇವರ ದರ್ಶನವನ್ನು ಮಾಡುತ್ತಾರೆ. ಶ್ರೀಮಧ್ವಾಚಾರ್ಯರ ಸನ್ನಿಧಿಯಲ್ಲಿ ಪ್ರಧಾನ ಮುಹೂರ್ತವಾದ ಅಕ್ಷಯಪಾತ್ರೆ ಹಸ್ತಾಂತರ ಕಾರ್ಯಕ್ರಮವು ನಡೆಯುತ್ತದೆ. ಅಲ್ಲಿಂದ ಸಿಂಹಾಸನಕ್ಕೆ ಕರೆದುಕೊಂಡು ಬರುತ್ತಾರೆ. ಮೊದಲು ತಮ್ಮ ಪಟ್ಟದ ದೇವರನ್ನು ಪೀಠದಲ್ಲಿಟ್ಟು ನಮಸ್ಕರಿಸುತ್ತಾರೆ. ಶುಭ ಮುಹೂರ್ತದಲ್ಲಿ ಇಲ್ಲಿಯವರೆಗೆ ಪರ್ಯಾಯವನ್ನು ನಡೆಸಿದ ಶ್ರೀಗಳು ಮೊದಲು ತಮ್ಮ ಪಟ್ಟದ ದೇವರನ್ನು ಪೀಠದಲ್ಲಿಟ್ಟು ನಮಸ್ಕರಿಸುತ್ತಾರೆ. ಶುಭ ಮುಹೂರ್ತದಲ್ಲಿ ಇಲ್ಲಿಯವರೆಗೆ ಪರ್ಯಾಯವನ್ನು ನಡೆಸಿದ ಶ್ರೀಗಳು ಆಗಮಿಸಿದ ಪರ್ಯಾಯ ಶ್ರೀಗಳನ್ನು ಕೈಹಿಡಿದು ಈ ಸರ್ವಜ್ಞ ಪೀಠದಲ್ಲಿ ಕೂಡಿಸುತ್ತಾರೆ. ಇಲ್ಲಿಂದ ಇನ್ನು ಎರಡು ವರ್ಷಗಳ ಕಾಲ ಪರ್ಯಾಯ ಶ್ರೀಗಳು ಎಂದೆನಿಸಿಕೊಳ್ಳುತ್ತಾರೆ.
ನೀವುಇದನ್ನುಇಷ್ಟಪಡಬಹುದು: ದೆಹಲಿಯಲ್ಲಿದೆ ಉಡುಪಿಯ ಉರುಗಳು.
ಪರ್ಯಾಯ ಅಂಗವಾಗಿ ಹೊರೆ ಕಾಣಿಕೆ ಸ್ವೀಕೃತಿ ಕಾರ್ಯಕ್ರಮ ಕೂಡ ನಡೆಯುತ್ತದೆ. ಜಿಲ್ಲೆಯ ಮೂಲೆ ಮೂಲೆಗಳಿಂದ ಪರ್ಯಾಯಕ್ಕೆ ಹಸಿರು ಹೊರೆ ಕಾಣಿಕೆ ಸಮರ್ಪಿಸಲು ಬರುತ್ತಾರೆ.
ಪರ್ಯಾಯ ಅಂಗವಾಗಿ ನಡೆಯುವ ವಿಶೇಷ ಕಾರ್ಯಕ್ರಮಗಳು
ಪರ್ಯಾಯ ದರ್ಬಾರ್
ಪರ್ಯಾಯ ಮೆರವಣಿಗೆ ಬಂದು ಪರ್ಯಾಯ ಯತಿಗಳು ಸರ್ವಜ್ಞಪೀಠಾರೋಹಣ ಮಾಡಿದ ದರ್ಬಾರ್. ಇಲ್ಲಿ ಅಷ್ಟಮಠಾಧೀಶರು ಪಾಲ್ಗೊಂಡು ಆಶೀರ್ವಚನ ನೀಡಿ ಪರ್ಯಾಯ ಮಠಾಧೀಶರಿಗೆ ಸಹಕಾರ ನೀಡುವ ಬಗ್ಗೆ ಹೇಳುತ್ತಾರೆ. ಇದರೊಂದಿಗೆ ನಾಡಿನ ಜನಪ್ರತಿನಿಧಿಗಳು, ಗಣ್ಯರು, ಧರ್ಮಾಧಿಕಾರಿಗಳು, ವಿದ್ವಾಂಸರು, ನ್ಯಾಯವೇತ್ತರೂ ಪಾಲ್ಗೊಳ್ಳುವುದು ವಿಶೇಷ. ಸಾಧಕರಿಗೆ ಸಮ್ಮಾನವೂ ಇದೇ ವೇಳೆ ಮಠದವತಿಯಿಂದ ನಡೆಸಲಾಗುತ್ತದೆ.
ಬಾಳೆ ಮುಹೂರ್ತ
ಪರ್ಯಾಯ ಕಾಲದಲ್ಲಿ ತುಳಸಿ, ಬಾಳೆಯ ಎಲೆ, ಬಾಳೆಹಣ್ಣು ಅಗತ್ಯವಿರುವುದರಿಂದ ಇದಕ್ಕೆ ಪೂರ್ವಭಾವಿ ತಯಾರಿ ಬಾಳೆ ಮುಹೂರ್ತ, ಆಯಾ ಮಠದ ಜಾಗದಲ್ಲಿ ಇವುಗಳನ್ನು ನೆಟ್ಟು ಸಿದ್ಧ ಮಾಡಿಟ್ಟುಕೊಳ್ಳುವುದು ಉದ್ದೇಶ.

ಅಕ್ಕಿ ಮುಹೂರ್ತ :
ಅನ್ನಸಂತರ್ಪಣೆಗೆ ಅಗಾಧ ಪ್ರಮಾಣದ ಅಕ್ಕಿ ಬೇಕಾಗಿರುವುದರಿಂದ ಅಕ್ಕಿ ಸಂಗ್ರಹಣೆಯ ಮುಹೂರ್ತವಿದು. ಸಾಂಕೇತಿಕವಾಗಿ ಅಕ್ಕಿ ಮುಡಿ ಮೆರವಣಿಗೆ ನಡೆದು ಪ್ರಾರ್ಥನೆ ಮಾಡುತ್ತಾರೆ. ಪರ್ಯಾಯ ಪೀಠವೇರುವ ಯತಿಗಳ ಉಪಸ್ಥಿತಿಯಲ್ಲೇ ಈ ಕಾರ್ಯಕ್ರಮ ನೆರವೇರುತ್ತದೆ.

ಕಟ್ಟಿಗೆ ಮುಹೂರ್ತ :
ಪರ್ಯಾಯಕ್ಕೆ ಆರೇಳು ತಿಂಗಳುಗಳಿವೆ ಎನ್ನುವಾಗ ಕಟ್ಟಿಗೆ ಮುಹೂರ್ತ ನಡೆಯುತ್ತದೆ. ಅಡುಗೆ ಮಾಡಲು ಬೇಕಾದ ಕಟ್ಟಿಗೆ ಸಂಗ್ರಹಣೆ ಸಿದ್ಧತೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಆಯಾ ಮಠಗಳಿಗೆ ಸೇರಿದ ಕಾಡಿನಿಂದ ಇವುಗಳನ್ನು ಸಂಗ್ರಹಿಸಲಾಗುತ್ತದೆ. ಕೃಷ್ಣ ಮಠದ ಪಕ್ಕದ ಮಧ್ವ ಸರೋವರದ ಒಂದು ಬದಿಯಲ್ಲಿ ಇದೆ ಮುಹೂರ್ತ ನೆರವೇರುತ್ತದೆ. ಸುಮಾರು ಒಂದೂವರೆ ತಿಂಗಳಲ್ಲಿ ಸುಂದರವಾದ ಕಟ್ಟಿಗೆಯ ರಥ ನಿರ್ಮಾಣಗೊಳ್ಳುತ್ತದೆ.

ಭತ್ತ ಮುಹೂರ್ತ :
ನಾಲ್ಕನೆಯ ಮುಹೂರ್ತ ಭತ್ತ ಮುಹೂರ್ತ. ಪರ್ಯಾಯಕ್ಕೆ ಮೊದಲು ಕೊಯ್ದು ಆಗಿ ಬಂದ ಹೊಸ ಭತ್ತದ ಸಂಗ್ರಹವನ್ನು ಮಾಡಲಾಗುತ್ತದೆ. ಅಕ್ಕಿ ಸಂಗ್ರಹಕ್ಕೆ ಇದು ಪೂರ್ವಭಾವಿ ತಯಾರಿ.ಪ್ರತಿ ಬಾರಿ ಪರ್ಯಾಯ ದಿನದಂದು ನಡೆಯುವ ಟ್ಯಾಬ್ಲೋ ಪ್ರದರ್ಶನ ,ದರ್ಬಾರ್ , ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆ.
ಈ ಬಾರಿ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವ ನಡೆಯಲಿದೆ. ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿಯವರು ಈ ಬಾರಿ ಪರ್ಯಾಯ ಪೀಠವನ್ನು ಅಲಂಕರಿಸಲಿದ್ದಾರೆ. ವಾರಗಳ ಮುಂಚೆ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳುತ್ತದೆ.
ಈ ಬಾರಿ ಅತ್ಯಂತ ಸರಳವಾಗಿ ಸ್ವಾಮೀಜಿಗಳ ಪುರ ಪ್ರವೇಶ ಕಾರ್ಯ ನಡೆದಿದೆ. ಈ ಹಿಂದೆಲ್ಲಾ ಪುರಪ್ರವೇಶ ಅಂದರೆ ಅಲ್ಲಿ ಹಬ್ಬದ ವಾತಾವರಣ ಇರುತ್ತಿತ್ತು. ಸಾವಿರಾರು ಜನ ಸೇರುವ ಈ ಮಹೋತ್ಸವದ ವೇಳೆ, ನೂರಾರು ಕಲಾತಂಡಗಳು ಟ್ಯಾಬ್ಲೆಗಳು, ಬಾವಿ ಪರ್ಯಾಯ ಮಠಾಧೀಶರನ್ನು ಸ್ವಾಗತಿಸಲು ವ್ಯವಸ್ಥೆ ಮಾಡಲಾಗುತ್ತಿತ್ತು.

ಜನವರಿ 17- 19ರಂದು ನಡೆಯಲಿರುವ ಶ್ರೀ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವ ನಡೆಯಲಿದ್ದು, ರಾತ್ರಿ 9 ಗಂಟೆವರೆಗೆ ಸಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ಇರಲಿದೆ. ಅಷ್ಟ ಮಠದ ಸ್ವಾಮೀಜಿಗಳು, ಸೀಮಿತ ಕಲಾತಂಡಗಳ ಮೆರವಣಿಗೆ, ಪರ್ಯಾಯ ಮಹೋತ್ಸವದಲ್ಲಿ ಧಾರ್ಮಿಕತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇದೇ ವೇಳೇ ಸೀಮಿತ ಸಂಖ್ಯೆಯಲ್ಲಿ ಪರ್ಯಾಯ ದರ್ಬಾರ್ ಸಭೆ ನಡೆಸಲು ತೀರ್ಮಾನಿಸಲಾಗಿದೆ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada. Travel) ಜಾಲತ ಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ