ಅಕ್ಷರ ಸಂತ ಹರೇಕಳ ಹಾಜಬ್ಬರ ಕನಸು ‘ ನ್ಯೂಪಡು ‘ ಶಾಲೆ.

ಹರೇಕಳ ಹಾಜಬ್ಬ ಕರಾವಳಿ ಕರ್ನಾಟಕದ ಕೆಲವೇ ಮಂದಿಗೆ ತಿಳಿದಿದ್ದ ಹೆಸರಿದು. ಆದರೆ ಇಂದು ಹರೇಕಳ ಹಾಜಬ್ಬ ಪದ್ಮಶ್ರೀ ಪಡೆಯುವುದರ ಮೂಲಕ ಇಡೀ ದೇಶ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಹಾಜಬ್ಬನನ್ನು ದೇಶ ಗುರುತಿಸುವುದು ಜೊತೆಗೆ ಅವರ ಊರು ದಕ್ಷಿಣ ಕನ್ನಡ ಜಿಲ್ಲೆಯ ಹರೇಕಳ ಕೂಡ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಅಕ್ಷರ ಸಂತ ಹಾಜಬ್ಬ ಅವರ ಊರು ಹರೇಕಳದ ಕನಸಿನ ಶಾಲೆಯ ಕುರಿತಾದ ಬರಹವಿದು.
ನವ್ಯಶ್ರೀ ಶೆಟ್ಟಿ
ತನ್ನ ಹೆಸರಿನ ಜೊತೆಗೆ ತನ್ನ ಹುಟ್ಟೂರಿನ ಹೆಸರನ್ನು ಜೊತೆಯಾಗಿರಿಸಿಕೊಂಡಿರುವವರು ಹರೇಕಳ ಹಾಜಬ್ಬ. ಅವರ ಊರು ಇಂದು ಬಹುತೇಕರಿಗೆ ಪರಿಚಿತ ಊರು. ಹರೇಕಳ ದಕ್ಷಿಣ ಕನ್ನಡ ಜಿಲ್ಲೆಯ ಕೊಣಾಜೆ ಸಮೀಪದಲ್ಲಿದೆ. ಈ ಪುಟ್ಟ ಊರಿಗೆ ಕೆಲವು ವರ್ಷಗಳ ಹಿಂದೆ ಸರಿಯಾದ ಶಾಲೆ ಇರಲಿಲ್ಲ.
ಕಿತ್ತಳೆ ಮಾರುತ್ತಿದ್ದ ಅದೊಬ್ಬ ಹಣ್ಣಿನ ವ್ಯಾಪಾರಿ ಬಳಿ, ಇಂಗ್ಲಿಷ್ ಮಾತನಾಡುವ ಗ್ರಾಹಕ ಇಂಗ್ಲಿಷ್ ಅಲ್ಲಿಯೇ ವ್ಯವಹರಿಸಿದ್ದರಂತೆ . ಆದರೆ ಅನಕ್ಷರಸ್ಥರಾಗಿದ್ದ ಆ ವ್ಯಾಪಾರಿಗೆ ಇಂಗ್ಲಿಷ್ ಉತ್ತರಿಸಲು ಬರಲಿಲ್ಲ. ಇಂಗ್ಲಿಷ್ ಬಾರದೆ ತಾನು ಅನುಭವಿಸಿದ ಕಷ್ಟ ನನ್ನ ಊರಿನ ಮಕ್ಕಳು ಪಡಬಾರದು ಎಂದು ಶಾಲೆ ಕಟ್ಟಲು ಪಣ ತೊಟ್ಟರು. ಇವರ ಆಲೋಚನೆಗಳನ್ನು ನೋಡಿ ನಕ್ಕವರೇ ಜಾಸ್ತಿ. ತನ್ನ ಕನಸಿನ ಯೋಜನೆಗೆ ಅದೆಷ್ಟೋ ಹಾದಿ ಸವೆಸಿದರು. ಕೊನೆಗೂ ಬರಿಗಾಲ ಸಂತ ಹರೇಕಳ ಹಾಜಬ್ಬ ಶಾಲೆ ತೆರೆದೆ ಬಿಟ್ಟರು. ಹರೇಕಳ ಹಾಜಬ್ಬ ಅಂದು ಸಾಮಾಜಿಕ ಕಳಕಳಿಯಿಂದ ಆರಂಭಿಸಿದ ಶಾಲೆ ಇಂದು ಪದ್ಮಶ್ರೀ ಪಡೆಯಲು ಕಾರಣ.

ಅನಕ್ಷರಸ್ಥ ಅಕ್ಷರ ಸಂತನಾದ ಕಥೆ
ಹಾಜಬ್ಬ ನಿರ್ಮಿಸಿದ ಹರೇಕಳದ ನ್ಯೂಪಡ್ಡು ಸರಕಾರಿ ಶಾಲೆ ಇಂದು ಅದೆಷ್ಟೋ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಲು ಕಾರಣ. ಹಾಜಬ್ಬ ಪ್ರಶಸ್ತಿ ಸ್ವೀಕಾರ ಮಾಡುತ್ತಿದ್ದ ಸಮಯವನ್ನು ಈ ಶಾಲೆಯ ವಿದ್ಯಾರ್ಥಿಗಳು ಡಿಜಿಟಲ್ ಪರದೆಯ ಮೂಲಕ ವೀಕ್ಷಿಸಿದ್ದರು. ಆದರೆ ಈ ಹಾದಿ ಅಷ್ಟೊಂದು ಸುಲಭವಾಗಿರಲಿಲ್ಲ.

ಶಾಲೆ ಸ್ಥಾಪನೆಯ ಕನಸು ಕಂಡಾಗ ಹಾಜಬ್ಬ ಎದುರಿಸಿದ ಅವಮಾನಗಳು ಒಂದೆರಡಲ್ಲ. ಹಣ್ಣಿನ ವ್ಯಾಪಾರದಲ್ಲೆ ಹಣ ಉಳಿಸಲು ಆರಂಭಿಸಿದರು. 2000ನೇ ಇಸವಿಯಲ್ಲಿ ನ್ಯೂಪಡುವಿನ ಮಸೀದಿಯ ಮದರಸದಲ್ಲಿ ಹಾಜಬ್ಬರ ಶಾಲೆಯ ಕನಸು ನನಸಾಗಿತ್ತು. ತಾವು ಕಿತ್ತಳೆ ವ್ಯಾಪಾರದಿಂದ ಕೂಡಿಟ್ಟ ಹಣದಿಂದ ತರಗತಿಗಳು ನಡೆಯುತ್ತಿದ್ದ ಮಸೀದಿಯ ಪಕ್ಕದಲ್ಲಿ ಹಾಜಬ್ಬ ಜಾಗಕೊಂಡರು. ಆ ಶಾಲೆಗಾಗಿ ಕಟ್ಟಡ ನಿರ್ಮಿಸಲು ಮುಂದಾದರು. ಹಣ ಸಾಕಾಗದಿದ್ದಾಗ ದಾನಿಗಳ ಸಹಾಯ ಕೇಳಿದರು. ಬ್ಯಾಂಕ್, ಕಾರ್ಪೊರೇಟ್ ಕಂಪನಿಗಳ ಬಾಗಿಲು ತಟ್ಟಿದರು. ಶಾಲೆಗಾಗಿ ಅನುಮತಿ ಪಡೆಯಲು ಪ್ರತಿದಿನ ಸರ್ಕಾರಿ ಕಚೇರಿಯನ್ನು ಅಲೆದರು. ಕೊನೆಗೆ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದರು.
ನೀವು ಇದನ್ನು ಇಷ್ಟ ಪಡಬಹುದು:ರಂಗಭೂಮಿಯಿಂದಾಗಿ ಉಚಿತವಾಗಿ ದೆಹಲಿ ಸುತ್ತಿದ ಕಥೆ

ಹಾಜಬ್ಬರ ಪ್ರಯತ್ನದ ಫಲವಾಗಿ ಆ ಜಾಗದಲ್ಲಿ ಪ್ರಾಥಮಿಕ ಶಾಲೆ, ಬಳಿಕ ಪ್ರೌಢಶಾಲೆಗಳು ಅರಂಭವಾಗಿದೆ. ಹಾಜಬ್ಬ ಅವರ ನಿಸ್ವಾರ್ಥ ಸೇವೆಗೆ ಹಲವು ಪ್ರಶಸ್ತಿ ,ಪುರಸ್ಕಾರಗಳು ಅರಸಿ ಬಂದಿವೆ . ಆದರೆ ಪ್ರಶಸ್ತಿ ರೂಪದಲ್ಲಿ ಬಂದ ಹಣವನ್ನೆಲ್ಲ ಹಾಜಬ್ಬ ಶಾಲೆಗೆ ಅರ್ಪಿಸಿ ಮತ್ತದೇ ಬಡ ಜೀವನವನ್ನು ನಡೆಸುತ್ತಿದ್ದಾರೆ. ‘ಪದ್ಮಶ್ರೀ’ ಬಂದ ಬಳಿಕವೂ ಹಾಜಬ್ಬರ ನಡೆ ನುಡಿಯಲ್ಲಿ ಕೊಂಚವೂ ಬದಲಾಗಿಲ್ಲ. ಇದರಲ್ಲಿ ನನ್ನದೇನಿಲ್ಲ. ನಾನೊಬ್ಬ ಬಡವ, ನನ್ನನ್ನು ಗುರುತಿಸಿದ ಶ್ರೇಷ್ಠರು ನೀವು’ ಎಂದು ವಿನೀತರಾಗುತ್ತಾರೆ ಈ ‘ಅಕ್ಷರ ಸಂತ’,
ಕಿತ್ತಳೆ ಮಾರುತ್ತಾ ವಿದ್ಯಾ ದೇಗುಲ ನಿರ್ಮಾಣದ ಕನಸು ಕಂಡವರು
ಕಿತ್ತಳೆ ಬುಟ್ಟಿಯಲ್ಲಿ ಅಕ್ಷರದ ಕನಸೂ ಅರಳಿಸಬಹುದು ಎಂಬುದನ್ನು ಸಾಧಿಸಿದ್ದಾರೆ. ಮುಂದೆ ತನ್ನೂರಿನಲ್ಲಿ ಕಾಲೇಜು ಆರಂಭಿಸಬೇಕು ಎನ್ನುವುದು ಅಕ್ಷರ ಸಂತನ ಬಹು ದೊಡ್ಡ ಕನಸು. ಶಾಲೆಯಿರದ ನ್ಯೂಪಡುವಿನಲ್ಲಿ ಸರಕಾರಿ ಶಾಲೆಯೊಂದು ತಲೆ ಎತ್ತಿದೆ. ಅಕ್ಷರದ ಕನಸು ಕಂಡ ಅದೆಷ್ಟೋ ವಿದ್ಯಾರ್ಥಿಗಳ ಪಾಲಿಗೆ ನೆರವಾಗಿದೆ ಈ ವಿದ್ಯಾ ದೇಗುಲ. ದಕ್ಷಿಣ ಕನ್ನಡ ಹರೇಕಳ ಎನ್ನುವ ಪುಟ್ಟ ಊರಿನಲ್ಲಿ ಶಾಲೆ ನಿರ್ಮಾಣದ ಹಿಂದಿನ ರೂವಾರಿಗೆ ದೇಶದ ನಾಲ್ಕನೆಯ ಅತ್ಯುನ್ನತ ನಾಗರಿಕ ಪ್ರಶಸ್ತಿ ದೊರೆತಿದೆ. ಇಡೀ ದೇಶವೇ ಬರಿಗಾಲ ಸಂತ,ಅಕ್ಷರ ಸಂತನಿಗೆ ಸಲಾಂ ಎನ್ನುತ್ತಿದೆ.

ಇಂದು ಸುಮಾರು 30ಸೆಣ್ಸ್ ವಿಸ್ತೀರ್ಣದಲ್ಲಿ ಹಾಜಬ್ಬ ನಿರ್ಮಿಸಿದ ಶಾಲೆಯಿದೆ. ಸಣ್ಣ ಪುಟ್ಟ ದಾನಕ್ಕೂ ತಮ್ಮ ನಾಮ ಫಲಕ ಹಾಕಿಕೊಳ್ಳುವ ಮಂದಿಯ ಮಧ್ಯೆ ಹಾಜಬ್ಬ ತಮ್ಮ ಶಾಲೆಯಲ್ಲಿ ಎಲ್ಲಿಯೂ ತಮ್ಮ ಹೆಸರಿನ ನಾಮಫಲಕ ಹಾಕಿಕೊಂಡಿಲ್ಲ. ಆದರೆ ತಮಗೆ ಸಹಾಯ ಮಾಡಿದವರ ಹೆಸರನ್ನು ಉಲ್ಲೇಖಿಸುವುದನ್ನು ಮರೆತಿಲ್ಲ ಅಕ್ಷರ ಸಂತ.
ಇಂಗ್ಲಿಷ್ ಬಾರದೆ ಶಾಲೆ ಆರಂಭಿಸಲು ಕನಸು ಕಂಡು ಸಾಧಿಸಿದ ಹಾಜಬ್ಬ ಅವರ ಬಗ್ಗೆ ಇಂಗ್ಲಿಷ್ ಪತ್ರಿಕೆಗಳಿಗೂ ಸುದ್ದಿಯಾಗಿದ್ದಾರೆ . ಆದರೆ ಈ ಮಧ್ಯ ವಿಮಾನ ನಿಲ್ದಾಣದಲ್ಲಿ ಇಂಗ್ಲಿಷ್ ಬಾರದೇ ಅನುಭವಿಸಿದ ಅವಮಾನ, ಬಳಿಕ ವಿಮಾನ ನಿಲ್ದಾಣ ಸಿಬ್ಬಂದಿಯ ಕ್ಷಮೆಯಾಚನೆ ಘಟನೆಯನ್ನು ವಿನಮ್ರವಾಗಿ ನೆನಪಿಸಿಕೊಳ್ಳುತ್ತಾರೆ ಹಾಜಬ್ಬ.

ಇಡೀ ದಕ್ಷಿಣ ಕನ್ನಡ ಜಿಲ್ಲೆ , ನ್ಯೂಪಡುವಿನ ಶಾಲೆಯ ಮಕ್ಕಳು ಹರೇಕಳ ಹಾಜಬ್ಬರಿಗೆ ಸಂದ ಗೌರವಕ್ಕೆ ,ತಮಗೆ ಸಂದ ಪ್ರಶಸ್ತಿ ಅನ್ನೋ ರೀತಿ ಗೌರವ ಕಾಣುತ್ತಿದ್ದೆ. ಪುಟ್ಟ ಹಳ್ಳಿಯಲ್ಲಿ ಶಾಲೆ ನಿರ್ಮಿಸಿ ,ಇದೀಗ ಕಾಲೇಜು ನಿರ್ಮಾಣದ ಕನಸು ಕಂಡ ಹಾಜಬ್ಬರ ಕನಸು ಈಡೇರಲಿ. ನ್ಯೂಪಡು ಊರಿನ ಹೆಸರು ಇನ್ನೂ ಪ್ರಸಿದ್ದಿಯಾಗಲಿ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada. Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ,