ಪಾದಯಾತ್ರಿಗಳಿಗೆ ಮತ್ತೆ ಜೀವತುಂಬಿದ ದೀಪೋತ್ಸವ
![](https://kannada.travel/wp-content/uploads/2021/11/png_20211130_063847_0000-780x470.png)
ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಆರಂಭಗೊಂಡಿದೆ. ವರ್ಣ ರಂಜಿತ ಬೆಳಕುಗಳಿಂದ ಧರ್ಮಸ್ಥಳದ ಬೀದಿಗಳು ಕಂಗೊಳಿಸುತ್ತಿದೆ. ಲಕ್ಷದೀಪೋತ್ಸವ ಸಮಯದಲ್ಲಿ ಇಲ್ಲಿನ ಇನ್ನೊಂದು ಪ್ರಮುಖ ಆಕರ್ಷಣೆ ಪಾದಯಾತ್ರೆ. ಮಹಾದೇವನ ಕಾಣಲು ಕಾರ್ತಿಕ ಮಾಸದ ಸಮಯದಲ್ಲಿ ಜರಗುವ ಈ ಲಕ್ಷದೀಪೋತ್ಸವ ದಿನ ದೂರದ ಊರುಗಳಿಂದ ಬರುತ್ತಾರೆ. ಆ ದಿನ ಪಾದಯಾತ್ರಿಗಳನ್ನು ನೋಡುವುದೇ ಚೆಂದ. ಲಕ್ಷದ್ವೀಪೋತ್ಸವದ ಆಕರ್ಷಣೆ ಪಾದಯಾತ್ರಿಗಳ ಕುರಿತಾದ ಮಧುರಾ ಎಲ್. ಭಟ್ ಬರೆದ ಬರಹ
ಮಧುರಾ ಎಲ್ ಭಟ್
ಎಷ್ಟೋ ಜನರ ಕನಸು ಅದು, ಅದೆಷ್ಟೋ ಜನರ ವೃತ ಅದು, ಎಷ್ಟೋ ಜನರ ನಂಬಿಕೆ ಅದು, ಮತ್ತೆಷ್ಟೋ ಜನರ ಸಾರ್ಥಕ ಭಾವನೆ ಅದು. ಎಷ್ಟೇ ದೂರವಾದರು ಪರವಾಗಿಲ್ಲ ತಾನು ಪಾದಯಾತ್ರೆ ಮಾಡಿ ಒಮ್ಮೆಯಾದರೂ ಮಾಹಾದೇವನ ದರ್ಶನ ಪಡೆಯಬೇಕು ಎಂಬುದು. ಧರ್ಮಸ್ಥಳಕ್ಕೆ ಬರಬೇಕು ಅಲ್ಲಿನ ಮಂಜುನಾಥನ ದರ್ಶನ ಮಾಡಬೇಕು ಎಂಬುದು ಹಲವರ ಕನಸಾಗಿರುತ್ತದೆ. ಈ ಕನಸಿಗೆ ರಕ್ಕೆ – ಪುಕ್ಕ ಹಚ್ಚಿ ದೇವರ ಸೇವೆಗೆ ಅವಕಾಶಮಾಡಿಕೊಡುವುದೇ ಈ ಕಾರ್ತೀಕ ಮಾಸದ ಮಂಗಳ ಪರ್ವದಲ್ಲಿ ಜರುಗುವ ಧರ್ಮಸ್ಥಳದ ಲಕ್ಷದೀಪೋತ್ಸವ.
![Lakshadweepotsava](https://kannada.travel/wp-content/uploads/2021/11/IMG-20211129-WA0048-1024x768.jpg)
ದೀಪೋತ್ಸವಕ್ಕೆ ಬರುವ ಪಾದಯಾತ್ರಿಗಳನ್ನು ನೋಡುವುದೇ ಚೆಂದ
ಈ ದೀಪೋತ್ಸವಕ್ಕೆ ಆಗಮಿಸುವ ಪಾದಯಾತ್ರಿಗಳನ್ನು ನೋಡುವುದೇ ಒಂದು ಚಂದ. ಇಲ್ಲಿ ಬರವ ಪ್ರತಿಯೊಬ್ಬ ಪಾದಯಾತ್ರಿಗಳ ಸೇವೆಯ ಹಿಂದೆ ಆ ಭಗವಂತನ ದರ್ಶನದ ಒಂದು ಆಸೆ, ಸಾರ್ಥಕ ಮನೋಭಾವ ಎದ್ದು ಕಾಣುತ್ತಿರುತ್ತದೆ. ಪಾದಯಾತ್ರಿಗಳು ರಸ್ತೆಯ ಒಂದು ಬದಿಯನ್ನು ಹಿಡಿದು ದೇವರ ನಾಮವನ್ನು ಸ್ಮರಿಸುತ್ತ ಸಾಗುತ್ತಾರೆ. ಇನ್ನೊಂದು ಕಡೆ ಜೀಪಿನ ಮೇಲೆ ಕೃಷಿಕರ ಹಾಗೆ ವೇಷ ತೊಟ್ಟವರು, ಚಂಡೆ ಭಾರಿಸುವವರು, ಬಟ್ಟೆ ಹೊಲಿಯುವವರು, ಶಾಲೆಯ ಒಂದು ಚಿತ್ರಣ, ರಾಜಕಾರಣಿಗಳು, ಭಜನೆ ಹೀಗೆ ಒಂದೊಂದು ತರಹದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಚಿತ್ರಣಗಳು ಒಂದರ ಹಿಂದೆ ಒಂದು ಸಾಗಿ ಬರುತ್ತಿರುತ್ತದೆ.
![Ujire](https://kannada.travel/wp-content/uploads/2021/11/IMG-20211129-WA0041-1024x768.jpg)
ನೀವು ಇದನ್ನು ಇಷ್ಟ ಪಡಬಹುದು;ಹಾಸನದಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ: 180 ಕಿಮೀ ನಡೆದು ಬಂದವರು ಹೇಳಿದ ಕತೆ
ಈ ವರ್ಷದ ದೀಪೋತ್ಸವವನ್ನು ನಾನೂ ಕಂಡ ಬಗೆಯೇ ಬೇರೆ. ಕರೋನಾದ ಕರಿನೆರಳು ಜಾರಿ ಹಬ್ಬದ ವಾತಾವರಣದಲ್ಲಿ ಈ ದೀಪೋತ್ಸವ ಪಾದಯಾತ್ರೆಯ ಮೂಲಕ ಆರಂಭಗೊಂಡಿತ್ತು. ಎರಡು ವರ್ಷಗಳಿಂದ ತಮ್ಮ ಆಸೆ, ಕನಸು, ಸೇವೆಯನ್ನು ತನ್ನ ಸೆರಗಿನಲ್ಲಿಯೇ ಬಚ್ಚಿಟ್ಟುಕೊಂಡ ಭಕ್ತಾದಿಗಳು ಖುಷಿ ಖುಷಿಯಾಗಿ ಮಹಾದೇವನ ದರ್ಶನಕ್ಕೆ ಹೊರಟಿದ್ದರು. ಎಲ್ಲಿ ನೋಡಿದರಲ್ಲಿ ಪಾದಯಾತ್ರಿಗಳದ್ದೇ ಗುಂಪು ಎದ್ದುಕಾಣುತ್ತಿತ್ತು. ಉಜಿರೆಯ ಮತ್ತು ಧರ್ಮಸ್ಥಳದ ರಸ್ತೆಯಲೆಲ್ಲ ಪಾದಯಾತ್ರಿಗಳು ತುಂಬಿ ತುಳುಕಾಡುತ್ತಿದ್ದರು. ನೀ ಮುಂದೆ ತಾ ಮುಂದೆ ಎನ್ನುತ್ತಾ ಪಾದಯಾತ್ರಿಗಳು ಸರಬರನೇ ಸಾಗುತ್ತಿದ್ದರು.
![Dharmastala](https://kannada.travel/wp-content/uploads/2021/11/IMG-20211129-WA0054-1024x768.jpg)
ಈ ಪಾದಯಾತ್ರೆ ಶ್ರೀ ಜನಾರ್ಧನ ದೇವಸ್ಥಾನದಿಂದ ಆರಂಭಗೊಂಡ ಧರ್ಮಸ್ಥಳದ ಮಂಜುನಾಥನವರೆಗೆ ಸಾಗಿತ್ತು. ಈ ಯಾತ್ರೆಯ ಮಧ್ಯ ಅಲ್ಲಲ್ಲಿ ಪಾದಚಾರಿಗಳಿಗೆ ಬಾಯಾರಿಕೆಯನ್ನು ನೀಗಿಸಲು ಮತ್ತು ಯಾತ್ರೆ ಮುಂದುವರೆಸಲು ಶಕ್ತಿ ನೀಡುವಂತೆ ಪಾನಕ, ನೀರು, ಮಜ್ಜಿಗೆಯ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 5000ಕ್ಕೂ ಹೆಚ್ಚು ಪಾದಚಾರಿಗಳು ಪಾದಯಾತ್ರೆ ಮಾಡಲು ಆಗಮಿಸಿದ್ದರು. ಒಬ್ಬೊಬ್ಬರು ಒಂದೊಂದು ಊರಿನಿಂದ ಆಗಮಿಸಿದ್ದು ಇಲ್ಲಿ ತುಂಬಾ ವಿಶೇಷವಾಗಿ ಕಾಣುತಿತ್ತು.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada. Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ,