ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಮೆರುಗು
![](https://kannada.travel/wp-content/uploads/2021/12/png_20211201_175942_0000-780x470.png)
ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಆರಂಭಗೊಂಡಿದೆ. ಒಂದು ವಾರಗಳ ಕಾಲ ಧರ್ಮಸ್ಥಳದ ಬೀದಿಗಳು ಬೆಳಕುಗಳಿಂದ ಕಂಗೊಳಿಸುತ್ತವೆ . ಧರ್ಮಸ್ಥಳದ ಲಕ್ಷದೀಪೋತ್ಸವ ಹಾಗೂ ನೆನಪುಗಳ ಬಗ್ಗೆ ವರ್ಷಾ ಉಜಿರೆ ಬರೆದ ಬರಹ.
ವರ್ಷಾ ಉಜಿರೆ
ಧರ್ಮಸ್ಥಳ ಕರುನಾಡಿನ ಪುಣ್ಯ ಕ್ಷೇತ್ರ. ಇಲ್ಲಿ ನಡೆಯುವ ಪ್ರತಿ ಪೂಜೆ, ಆಚರಣೆ,ಕಾರ್ಯಕ್ರಮ ಎಲ್ಲವುಗಳನ್ನು ಕಣ್ತುಂಬಿಕೊಳ್ಳಲು ಜನ ಕಾತುರರು. ಇದೀಗ ಕಾರ್ತೀಕ ಮಾಸ ಆರಂಭವಾದ ಬಳಿಕ ಜನ ಧರ್ಮಸ್ಥಳದ ವೈಭವದ ಲಕ್ಷ ದೀಪೋತ್ಸವವನ್ನು ಭಕ್ತಿಯಿಂದ ಕಣ್ತುಂಬಿಕೊಂಡು ಪುನೀತರಾಗುತ್ತಿದ್ದಾರೆ.
ಧರ್ಮಸ್ಥಳದ ವೈಭವದ ಕಾರ್ತೀಕ ಮಾಸದ ಲಕ್ಷ ದೀಪೋತ್ಸವ ಸೋಮವಾರದಿಂದ ಆರಂಭವಾಗಿದೆ. ಒಂದು ವಾರ, ಶ್ರೀ ಕ್ಷೇತ್ರ ಧರ್ಮಸ್ಥಳ, ಮದುವಣಗಿತ್ತಿಯಂತೆ ಕಂಗೊಳಿಸುತ್ತದೆ. ಹೊಸಕಟ್ಟೆ ಉತ್ಸವ, ಕೆರೆಕಟ್ಟೆ ಉತ್ಸವ, ಲಲಿತೋದ್ಯಾನ ಉತ್ಸವ ಮುಂತಾದ ಉತ್ಸವಗಳು, ಸಾಹಿತ್ಯ ಸಮ್ಮೇಳನ, ಧರ್ಮ ಸಮ್ಮೇಳನ, ಲಲಿತಕಲಾ ಗೋಷ್ಠಿ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು…
![Lakshadweepotsava](https://kannada.travel/wp-content/uploads/2021/12/IMG-20211201-WA0034-1024x484.jpg)
ಹೀಗೆ ದೀಪೋತ್ಸವ ಐದಾರು ದಿನಗಳ ಕಾಲ ವೈಭವದಿಂದ ನಡೆಯುತ್ತದೆ. ಹಾಗಾಗಿ ದೀಪೋತ್ಸವ ಎಂದರೆ ನಾಡಿನ ಜನರಿಗೆ ಹಬ್ಬವೇ ಸರಿ!ನಮಗಂತೂ ದೀಪೋತ್ಸವ ಎಂದರೆ ಬಣ್ಣ, ದೀಪಗಳ ಉತ್ಸವ. ನಮ್ಮೊಲುಮೆಯ ದೀಪಗಳ ಹಬ್ಬ, ಪಾದಯಾತ್ರೆಯೊಂದಿಗೆ ಇಂದು ಆರಂಭಗೊಂಡಿದೆ.
ನೀವು ಇದನ್ನು ಇಷ್ಟ ಪಡಬಹುದು:ಪಾದಯಾತ್ರಿಗಳಿಗೆ ಮತ್ತೆ ಜೀವತುಂಬಿದ ದೀಪೋತ್ಸವ
ಪಾದಯಾತ್ರೆ ಒಂದು ವೈಭವ
ದೀಪೋತ್ಸವ ಒಂದು ಹಬ್ಬವಾದರೆ, ಪಾದಯಾತ್ರೆ ಒಂದು ವೈಭವ! ಬಗೆಬಗೆಯ ಭಕ್ತರು ಜೊತೆಯಾಗಿ ಹೆಜ್ಜೆ ಹಾಕಿ, ಶ್ರೀ ಕ್ಷೇತ್ರವನ್ನು ತಲುಪುವ ಭಕ್ತಿಪೂರ್ವಕ ನಡಿಗೆಯನ್ನು ನೀವು ನೋಡಿಯೇ ಆನಂದಿಸಬೇಕು! ಉಜಿರೆಯಿಂದ ಸರಿಸುಮಾರು ಹತ್ತು ಕಿಲೋಮೀಟರ್ ದೂರವಿರುವ ಧರ್ಮಸ್ಥಳದ ಸಾನಿಧ್ಯವನ್ನು ಪಾದಯಾತ್ರೆಯ ಮೂಲಕ ತಲುಪಿದಾಗ ಆಗುವ ಅವ್ಯಕ್ತ ಆನಂದ ವರ್ಣಿಸಲಸದಳ…
![Hicker](https://kannada.travel/wp-content/uploads/2021/12/IMG-20211201-WA0041-1024x683.jpg)
ದಾರಿಯುದ್ದಕ್ಕೂ ಅರವಟ್ಟಿಗೆಗಳು, ಪಾನಕ, ನೀರು, ಮಜ್ಜಿಗೆ ಕೊಡುವ ಸ್ವಯಂ ಸೇವಕರು, ಭಜನೆಗಳನ್ನು ಹಾಡುತ್ತಾ ಸಾಗುವ ಭಕ್ತರ ದಂಡು, ವಯಸ್ಸಿನ ಭೇದವಿಲ್ಲದೆ ಜೊತೆಯಾಗಿ ಹೆಜ್ಜೆ ಹಾಕುವ ಭಕ್ತಗಣ ಸೌಹಾರ್ದತೆಯ ಪಾಠವನ್ನು ಸಾರಿ ಸಾರಿ ಹೇಳುತ್ತದೆ. ಆರು ದಿನದ ವೈಭೋಗಕ್ಕೆ ಕುಡುಮ ಕ್ಷೇತ್ರ ಮತ್ತೆ ಸಿದ್ಧವಾಗಿದೆ. ಭಕ್ತರು ಕೂಡ ಭಕ್ತಿಯಿಂದ ಕಣ್ತುಂಬಿಕೊಂಡು ಖುಷಿ ಪಡುತ್ತಿದ್ದಾರೆ.
![Dharmstahala](https://kannada.travel/wp-content/uploads/2021/12/IMG-20211201-WA0033-1024x484.jpg)
ಕೋರೋನಾ ಕಾರಣದಿಂದ ಎರಡು ವರ್ಷಗಳ ಕಾಲ ಕಳೆಗುಂದಿದ್ದ ಉತ್ಸವ, ಮೈಕೊಡವಿಕೊಂಡು ಭಕ್ತಜನರನ್ನು ವಿಶಾಲ ಬಾಹುಗಳಿಂದ ತಬ್ಬಿಕೊಳ್ಳಲು ಕಾದು ನಿಂತಿದೆ. ಹಬ್ಬ, ಉತ್ಸವ, ಜಾತ್ರೆಗಳ ಮೂಲ ಉದ್ದೇಶವೇ ಸೌಹಾರ್ದತೆ. ಜಾತಿ, ಧರ್ಮ ಅದ್ಯಾವುದೇ ಆಗಿರಲಿ, ಇಂತಹ ಉತ್ಸವಗಳು ಮಾನವನ ಮನಸು, ಬುದ್ಧಿಯ ವಿಕಾಸಕ್ಕೆ ಬೇಕೇ ಬೇಕು!
ನಾವು ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada. Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ