ಹಾಸನದಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ: 180 ಕಿಮೀ ನಡೆದು ಬಂದವರು ಹೇಳಿದ ಕತೆ
![Padayatra](https://kannada.travel/wp-content/uploads/2021/03/thumb80-12.jpg)
- ಮಧುರಾ ಎಲ್ ಭಟ್ಟ
ಎಸ್ ಡಿ ಎಮ್ ಕಾಲೇಜ್ ಉಜಿರೆ
ಹಬ್ಬಗಳ ಆಚರಣೆಯಲ್ಲಿಯೇ ಜನಪ್ರಿಯತೆ ಪಡೆದ ರಾಜ್ಯ ನಮ್ಮದು. ನಾವು ನಂಬದೇ ಇರುವ ದೇವರುಗಳೆಲ್ಲ, ಮಾಡದೆ ಇರುವ ಹಬ್ಬಗಳಿಲ್ಲ. ಹಬ್ಬ ಬಂತೆಂದರೆ ಸಾಕು ಎಲ್ಲಿಲ್ಲದ ಸಂತೋಷ, ಉತ್ಸಾಹ. ಅದರಲ್ಲಿಯೂ ಹರಕೆ ಕಟ್ಟಿಕೊಳ್ಳುವ ಹಬ್ಬಗಳು ಎಂದರೇನು ಇನ್ನು ಹೆಚ್ಚಿನ ಸಂತೋಷ.
![](https://kannada.travel/wp-content/uploads/2021/03/IMG_20210310_175652-1-1024x768.jpg)
ಶಿವರಾತ್ರಿ ಹಬ್ಬ ಎಂದರೆ ಸಾಕು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡುವ ಮೂಲಕ ತನ್ನ ಇಷ್ಟಾರ್ಥಗಳನ್ನೆಲ್ಲ ಬೇಗ ಈಡೇರಿಸು ದೇವ ಎಂದು ಪ್ರಾರ್ಥಿಸಿಕೊಂಡು ಇಲ್ಲಿ ಸಾವಿರಾರು ಭಕ್ತಾದಿಗಳು ಬರುತ್ತಾರೆ. ಆದರೆ ಈ ವರ್ಷ ಕೊರೋನಾ ಮಹಾಮಾರಿ ಇರುವ ಕಾರಣ ಅಷ್ಟೊಂದು ಜನ ಭಕ್ತಾದಿಗಳು ಬರಲಿಕ್ಕಿಲ್ಲ ಎನ್ನುವಂತಹ ಭಾವನೆ ನಮ್ಮದಾಗಿತ್ತು. ಆದರೆ ಆ ದೇವರ ಮಹಿಮೆಯ ಮುಂದೆ ಭಕ್ತಾದಿಗಳ ಭಕ್ತಿಯ ಮುಂದೆ ಎಲ್ಲವೂ ಶೂನ್ಯ ಎನ್ನುವುದು ಈಗ ತಿಳಿಯುತ್ತಿದೆ. ಏಕೆಂದರೆ ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯದ ಬೇರೆ ಬೇರೆ ಕಡೆಗಳಿಂದ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದಾರೆ.
![](https://kannada.travel/wp-content/uploads/2021/03/IMG-20210312-WA0019-1-1024x682.jpg)
ತಮ್ಮ ತಮ್ಮ ನೋವು ಖುಷಿ ಭಯ ವಯಸ್ಸು ಇದ್ಯಾವುದನ್ನು ಗಮನಿಸದೆ ಜನಸಾಗರವೇ ಹರಿದು ಬಂದಿದೆ. ಈ ರೀತಿ ಮಹಾದೇವನನ್ನು ಕಾಣಲು ಬಂದ ಪಾದಯಾತ್ರಿಗಳನ್ನು ಮಾತನಾಡಿಸಿದಾಗ ಅವರು ಹೇಳಿಕೊಂಡ ಒಂದೊಂದು ಕತೆಯು ಒಂದೊಂದು ಪುಸ್ತಕವಾಗಬಹುದು. ಅದರಲ್ಲಿಯೂ ಕೆಲವರಿಗೆ 70ವರ್ಷವಾಗಿದೆ. ಇನ್ನು ಕೆಲವರಿಗೆ ಮೈಯಲ್ಲಿ ಹುಷಾರ್ ಇಲ್ಲ. ಚಪ್ಪಲಿ ಇಲ್ಲದೆ ನಡೆದು ನಡೆದು ಕಾಲುಗಳು ಬಾತುಹೋಗಿದೆ. ಹೀಗೆ ಹತ್ತು ಹಲವು ತೊಂದರೆಗಳಿವೆ. ಅದರ ನಡುವೆಯೂ ದೇವರನ್ನು ಕಾಣುವ ಉತ್ಸಾಹ ಅವರಿಗಿದೆ. ಹೀಗೆ ಪಾದಯಾತ್ರೆ ಮಾಡಿ ಬಂದ ಕೆಲವರನ್ನು ಮಾತನಾಡಿಸಿದಾಗ ಅವರು ಹೇಳಿಕೊಂಡ ಅನುಭವ ಮೈ ಜುಮ್ಮೆನ್ನಿಸುತ್ತದೆ.
![](https://kannada.travel/wp-content/uploads/2021/03/IMG-20210312-WA0018-1-1024x682.jpg)
ನೀವು ಇದನ್ನು ಇಷ್ಟಪಡಬಹುದು: ಒಂದು ದಿನದಲ್ಲಿ ಮಹಾಬಲಿಪುರಂನಲ್ಲಿ ಏನೇನು ನೋಡಬಹುದು: ಸುವರ್ಣಲಕ್ಷ್ಮಿ ಹೇಳುತ್ತಾರೆ ಓದಿ
ಹಾಸನ ಜಿಲ್ಲೆಯ ಅಕ್ಕ ಪಕ್ಕದ ಹಳ್ಳಿಯಿಂದ ಸುಮಾರು 700ರಿಂದ 800 ಭಕ್ತರು ಬಂದಿದ್ದಾರೆ. ಅವರನ್ನು ಮಾತನಾಡಿಸಿದಾಗ ಅವರೇ ಹೇಳಿದಂತೆ ಶಿವರಾತ್ರಿಗೆ ಸ್ವಲ್ಪ ದಿನ ಇರುವಾಗ ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರಾ ಸಮಿತಿ ವತಿಯಿಂದ ತಲಾ 500 ರೂಪಾಯಿಗಳಂತೆ ದುಡ್ಡನ್ನು ಒಟ್ಟುಮಾಡುತ್ತಾರೆ. ಮತ್ತು ಯಾರು ಯಾರು ಎಷ್ಟು ಹಳ್ಳಿಗಳಿಂದ ಇವರ ಜೊತೆ ಬರುತ್ತಾರೆ ಎಂಬ ಪಟ್ಟಿಯನ್ನು ಮಾಡಿಕೊಳ್ಳುತ್ತಾರೆ. ನಂತರ ಶ್ರೀ ಕ್ಷೇತ್ರ ತಲುಪುವವರೆಗೆ ಬೇಕಾಗುವ ಸಾಮಗ್ರಿಗಳನ್ನು ಖರೀದಿಸಿ ಅದನ್ನು ಒಂದು ಗಾಡಿಯಲ್ಲಿ ತುಂಬಿಸುತ್ತಾರೆ. ಈ ತಂಡವು ಸುಮಾರಾಗಿ 180 ಕಿಮೀ ಪಾದದಲ್ಲಿಯೇ ನೆಡೆದು ಬಂದಿದ್ದಾರೆ. ಇವರು ತಮ್ಮ ತಮ್ಮ ಹಳ್ಳಿಯಿಂದ ಹೊರಟು ಎಲ್ಲರೂ ಹಾಸನಲ್ಲಿ ಒಂದುಗೂಡಿ ನಂತರ ಒಟ್ಟಿಗೆ ಪಾದಯಾತ್ರೆ ಮಾಡಿದ್ದಾರೆ. ಇವರಲ್ಲಿ 70ವರ್ಷದವರಿಂದ ಹಿಡಿದು ಯುವಕ ಯುವತಿಯವರೆಗಿನ ಭಕ್ತರಿದ್ದಾರೆ. ಇವರೆಲ್ಲರೂ ಅಲ್ಲಿ ಅಲ್ಲಿ ಸ್ವಲ್ಪ ಸ್ವಲ್ಪ ನಿಲ್ಲುತ್ತಾ ವಿಶ್ರಾಮ ಪಡೆಯುತ್ತ ಇರುವ ಸಾಮಗ್ರಿಯಲ್ಲಿ ಊಟ ಮಾಡುತ್ತಾ ಬುಧವಾರ ಧರ್ಮಸ್ಥಳವನ್ನು ಬಂದು ಸೇರಿದ್ದಾರೆ.
![](https://kannada.travel/wp-content/uploads/2021/03/IMG-20210312-WA0017-1-682x1024.jpg)
ಅವರಲ್ಲಿ ಗಂಗಮ್ಮ, ಲಕ್ಷ್ಮಮ್ಮ, ಹೆರಮ್ಮ ಹರೀಶ್,ಸುರೇಶ್, ರಮೇಶ್, ನಜೆ ಗೌಡ್ರು ಇವರೆಲ್ಲರೂ ಕೂಡ ಪಾದಯಾತ್ರಿಗಳು. ಇವರಲ್ಲಿ ಲಕ್ಷ್ಮಮ್ಮ ಅವರಿಗೆ 55 ವರ್ಷವಾಗಿದೆ. ಹೆರಮ್ಮ ಅವರಿಗೆ 60 ವರ್ಷ. ಇವರು 8 ವರ್ಷಗಳಿಂದ ಸತತವಾಗಿ ಇಲ್ಲಿ ಆ ಮಹಾದೇವನ ದರ್ಶನ ಪಡೆಯಲು ಪಾದಯಾತ್ರೆ ಮಾಡಿಕೊಂಡೆ ಬರುತಿದ್ದಾರೆ. ಇವರಲ್ಲಿ ಹರೀಶ್ ಅವರು ಎಲ್ಲರಿಗೂ ತಮ್ಮ ಗಾಡಿಯನ್ನು ಸಾಮಾನು ತಿಂಡಿ ತಿನಿಸು ಲಗೇಜ್ ತುಂಬಲು ನೀಡುತ್ತಿದ್ದು ಅವರು 13 ವರ್ಷದಿಂದ ಸತತವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬರುತಿದ್ದಾರೆ.
ಹರೀಶ್ ಅವರನ್ನು ಮಾತನಾಡಿಸಿದಾಗ ಅವರು ತಮ್ಮ ಕೆಲವು ಅನುಭವನ್ನು ಹಂಚಿಕೊಂಡರು, ಇಂದಿನ ಯುವಜನತೆ ಯಾಕಿಷ್ಟು ಸೋಮಾರಿಯಾಗಿದ್ದಾರೆ ಅಂದರೆ ಅವರು ಚಿಕ್ಕವರಿದ್ದಾಗಿಂದಲೂ ತಂದೆ ತಾಯಿಯರನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಇರುವುದಕ್ಕೆ. ಇಂದು ತಂದೆ ಒಂದು ಮಾತು ಹೇಳಿದರೆ ಮಕ್ಕಳಿಗೆ ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ. ಇಂದಿನ ಮಕ್ಕಳಿಗೆ ಕೋಪ ಬರುವುದು ಬೇಗ. ಅದೇ ಕೋಪದಲ್ಲಿ ಕೆಲವೊಮ್ಮೆ ದುಡುಕಿ ತಪ್ಪುನಿರ್ಧಾರ ಮಾಡುತ್ತಾರೆ. ಶಿಕ್ಷಣ ಕಲಿಯುತ್ತಾ ಮನುಷ್ಯತ್ವ ಮರೆಯುತಿದ್ದಾರೆ. ಶಿಕ್ಷಣ ಕಲಿಯುತ್ತಾ ಕಲಿಯುತ್ತಾ ತಂದೆ ತಾಯಿಯರಿಗೆ ಗೌರವ ನೀಡುವುದನ್ನು ಮರೆತಿದ್ದಾರೆ. ನಾವು ಪಡುವ ಕಷ್ಟ ನಮಗಾಗಿ ಅಲ್ಲ ನಮ್ಮ ನಮ್ಮ ಮಕ್ಕಳಿಗಾಗಿ. ಆದರೆ ಇಂದು ಮಕ್ಕಳಿಗೆ ಮಾತ್ರ ಅದು ಅರ್ಥವಾಗುತ್ತಿಲ್ಲ ಎಂದು ಹೇಳಿದರು.
![](https://kannada.travel/wp-content/uploads/2021/03/IMG-20210312-WA0015-1-1024x682.jpg)
ನಾವು ಈ ಪಾದಯಾತ್ರೆ ಮಾಡುತ್ತಿರುವುದೇ ನಮ್ಮ ಮಕ್ಕಳಿಗಾಗಿ ಮನೆಯವರಿಗಾಗಿ, ನಾವು ನಮ್ಮ ಕೈಯಲ್ಲಿ ಆಗುವವರೆಗೂ ಈ ಪಾದಯಾತ್ರೆ ಮಾಡುತ್ತೇವೆ. ನಾವು ಇಲ್ಲಿ ಮೂರು ದಿನಗಳ ಕಾಲ ಉಳಿದು ದೇವರ ದರ್ಶನ ಮಾಡಿ ಪುನಃ ಹಾಸನದ ನಮ್ಮ ನಮ್ಮ ಹಳ್ಳಿಗೆ ತೆರಳುತ್ತೇವೆ ಎಂದು ಹರೀಶ್ ನಮ್ಮ ಅನುಭವವನ್ನು ಹಚ್ಚಿಕೊಂಡರು.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ