ಕೋಟೆನಾಡು ಚಿತ್ರದುರ್ಗ (Chitradurga) ನಗರ ಬಳಿಯ ಜೋಗಿಮಟ್ಟಿ (Jogimatti forest reserve) ವನ್ಯಧಾಮಕ್ಕೆ ಪ್ರವಾಸಿಗರು ಭೇಟಿ ನೀಡುವುದನ್ನು ಅರಣ್ಯಾಧಿಕಾರಿಗಳು ತಾತ್ಕಾಲಿಕವಾಗಿ ನಿರ್ಬಂಧಿಸಿದ್ದಾರೆ.
ಜೋಗಿಮಟ್ಟಿಯು ಬಯಲುಸೀಮೆಯ ತಾಣವಾದರೂ, ಎಂದಿಗೂ ಹಚ್ಚ ಹಸಿರಿನಿಂದ ಕಂಗೊಳಿಸುವ ತಾಣ. ಇದು ಏಷ್ಯಾದಲ್ಲೇ ಅತಿ ಹೆಚ್ಚು ಗಾಳಿ ಬೀಸುವ ಎರಡನೇ ಪ್ರದೇಶವಾಗಿದೆ.
ಹೀಗಾಗಿ ತಂಪಾದ ವಾತಾವರಣದಿಂದ ಕೂಡಿದ್ದು,ಹಚ್ಚ ಹಸಿರಿನ ಸೊಬಗಿನ ಗಿಡಮರಗಳಿಂದಾಗಿ ಪ್ರವಾಸಿಗರ ಆಕರ್ಷಣೀಯ ತಾಣವಾದ ಇದು “ಮಿನಿ ಊಟಿ” (Mini ooty) ಎಂದು ಪ್ರಸಿದ್ಧವಾಗಿದೆ.
ಆದರೆ ಬೇಸಿಗೆ ಆರಂಭವಾಗುತ್ತಿದ್ದು, ಜೋಗಿಮಟ್ಟಿಯ ಮರಗಳೆಲ್ಲೆಲ್ಲಾ ಎಲೆ ಉದುರಿ ಬೋಳಾಗಿವೆ. ಮಳೆ, ನೀರು ಇಲ್ಲದೇ ಮರಗಳು ಒಣಗಿ ನೆಲಕ್ಕುರುಳಿವೆ.
ಹೀಗಾಗಿ ಅಪಾರವಾದ ಔಷಧೀಯ ಸಸ್ಯಗಳಿರುವ ಜೋಗಿಮಟ್ಟಿಯು ಒಣ ಮರುಭೂಮಿಯಂತಾಗಿದೆ. ಹೀಗಾಗಿ ಈ ಸಂದರ್ಭದಲ್ಲಿ ಪ್ರವಾಸಿಗರಿಂದ ಯಾವುದೇ ಬಗೆಯ ಅಗ್ನಿ ಅವಘಡ ಸಂಭವಿಸಬಾರದೆಂಬ ಮುಂಜಾಗ್ರತೆಯಿಂದ ಪ್ರವಾಸಿಗರ ಎಂಟ್ರಿಗೆ (Entry Banned) ಅರಣ್ಯಾಧಿಕಾರಿಗಳು ನಿರ್ಬಂಧ ಹೇರಿದ್ದಾರೆ.
ಈ ಹಿಂದೆ ಕೆಲವು ಕಿಡಿಗೇಡಿಗಳು ಕಳ್ಳ ದಾರಿಯಲ್ಲಿ ನುಗ್ಗಿ ಜೋಗಿಮಟ್ಟಿಯ ಒಣ ಹುಲ್ಲುಗಳಿಗೆ ಬೆಂಕಿ ಬಿದ್ದಿತ್ತು. ಈ ಘಟನೆ ಮತ್ತೆ ಮರುಕಳಿಸಬಾರದೆಂಬ ನಿರೀಕ್ಷೆಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಅರಣ್ಯಾಧಿಕಾರಿಗಳ (Forest Officers) ಈ ನಿರ್ಣಯನ್ನು ಸ್ವಾಗತಿಸಿರುವ ಪ್ರವಾಸಿಗರು ಮತ್ತು ಪರಿಸರವಾದಿಗಳು, ಇಲ್ಲಿನ ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ತೆಗೆದುಕೊಂಡ ಒಳ್ಳೆಯ ನಿರ್ಧಾರವೆಂದು ಶ್ಲಾಘಿಸಿದ್ದಾರೆ.
ಜೋಗಿಮಟ್ಟಿ ಪ್ರದೇಶದ ಸ್ಥಳೀಯರು ಸಹ ಜನರಿಗೆ ಈ ಸಮಯದಲ್ಲಿ ಇಲ್ಲಿಗೆ ಬರದಂತೆ, ಈ ವಿಶಿಷ್ಟ ತಾಣವನ್ನು ಸಂರಕ್ಷಿಸಲು ತೆಗೆದುಕೊಂಡ ಈ ನಿರ್ಧಾರಕ್ಕೆ ಸಹಕರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಒಟ್ಟಿನಲ್ಲಿ, ಈ ಬಾರಿ ಮಳೆಯಿಲ್ಲದೇ, ಬೇಸಿಗೆಯ ಶುರುವಲ್ಲೇ ಬರಡಾಗಿರುವ ಜೋಗಿಮಟ್ಟಿಯು ಹಸಿರಾದ ಮರಗಳಿಲ್ಲದೇ ಬಿಕೋ ಎನ್ನುತ್ತಿದೆ.
ಪ್ರವಾಸಿಗರು ಈ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸುವುದು ಬೇಡ. ಏಕೆಂದರೆ, ಬೇಸಿಗೆಯಲ್ಲಿ ಮಾತ್ರ ಇದು ನಿಷೇಧಿಸಲಾಗಿದ್ದು,ಮತ್ತೆ ಬೇಸಿಗೆ ಕಳೆದ ಬಳಿಕ ನೈಸರ್ಗಿಕ ಸೌಂದರ್ಯವನ್ನು ಸವಿಯಲು ಮುಕ್ತವಾಗಲಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.