ಕೋವಿಡ್ ಗೆ ಸಡ್ಡು ಹೊಡೆದು ಚಂಡಿಗಢದಿಂದ ಚೆನ್ನೈಗೆ 4500 ಕಿಮೀ ರೋಡ್ ಟ್ರಿಪ್ ಹೋದ ಮೂವರು ಹಿರಿಯ ನಾಗರಿಕರು
ಕೋವಿಡ್ ಕಾರಣಕ್ಕೆ ಎಲ್ಲರೂ ಸುಸ್ತಾಗಿದ್ದಾರೆ. ಎಲ್ಲಿ ಹೋಗುವುದಕ್ಕೂ ಹಿಂಜರಿಯುತ್ತಿದ್ದಾರೆ. ಅಂಥದ್ದರಲ್ಲಿ ಚಂಡಿಗಢದ ಮೂವರು ಗೆಳೆಯರು ಮಾತ್ರ 4500 ಕಿಮೀ ಸಂಚರಿಸಿ ಚಂಡಿಗಢದಿಂದ ಚೆನ್ನೆಗೆ ಪ್ರವಾಸ ಬಂದಿದ್ದಾರೆ. ಈ ಕುತೂಹಲಕಾರಿ ಕಥನ ಇಲ್ಲಿದೆ.
- ನವ್ಯಶ್ರೀ ಶೆಟ್ಟಿ
ಯಾರು ನಿರೀಕ್ಷೆ ಮಾಡದೆ ಜಗತ್ತಿಗೆ ಕಾಲಿಟ್ಟಿದ್ದ ಕೊರೋನಾ ಎಲ್ಲರನ್ನೂ ಭಯ ಬೀಳುವಂತೆ ಮಾಡಿತ್ತು. ಮನೆಯಿಂದ ಹೊರ ಕಾಲಿಡಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣ ಮಾಡಿತ್ತು. ವರ್ಷ ಕಳೆದರೂ ಪರಿಸ್ಥಿತಿ ಭಿನ್ನ ಏನು ಇಲ್ಲ. ಈ ನಡುವೆ ಹಿರಿಯರು ಆತಂಕಕ್ಕೆ ಒಳಗಾಗಿದ್ದರು. ಅದರ ನಡುವೆ ಇಲ್ಲೊಂದು ಸ್ನೇಹಿತರ ಬಳಗ ಕೊರೋನಾ ಸಂದಿಗ್ಧತೆ ನಡುವೆ ಚಂಡೀಗಢದಿಂದ ಚೆನ್ನೈ(Chennai) ತನಕ 4500 ಕಿಮೀ ಸಂಚರಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.
68 ವರ್ಷದ ರಾಬಿನ್ ನಕೈ(nakai)ಅವರ ಪತ್ನಿ 65 ವರ್ಷದ ಅಮೃತಾ ನಕೈ(nakai) ಹಾಗೂ ಸ್ನೇಹಿತೆ 65 ವರ್ಷದ ಉಷಾ ಹೂಡಾ(usha hooda) ಜೊತೆಯಲ್ಲಿ ಪಯಣ ಮಾಡಿದ ಸ್ನೇಹಿತರು. ಮೂವರು ಕಾಲೇಜ್ ದಿನಗಳಿಂದ ಸ್ನೇಹಿತರು ಸದಾ ಹೊಸತನ್ನು ಯೋಚಿಸುವ, ಹುರುಪಿನಿಂದ ಇರುವುದು ಮೂವರಿಗೂ ರೂಢಿ.
ಕೊರೋನಾ ಸಮಯದಲ್ಲಿ ಮನೆಯಲ್ಲಿಯೇ ಇರುವುದು ರಾಬಿನ್ ಅವರಿಗೆ ಪ್ರಿಯವೆನಿಸಲಿಲ್ಲ. ಏನಾದರೂ ಹೊಸತನ್ನು ಮಾಡಬೇಕೆಂದು ಯೋಚಿಸಿ ಪತ್ನಿಯ ಜೊತೆಗೂಡಿ ಪ್ರವಾಸದ ಯೋಜನೆ ಹಾಕಿಕೊಂಡರು. ಪತ್ನಿ, ಸ್ನೇಹಿತೆ ಜೊತೆಗೆ ಪಯಣ ಆರಂಭವಾಯಿತು.
ಜನವರಿಯಲ್ಲಿ ಪಯಣ ಶುರು
ಜನವರಿಯಲ್ಲಿ ಚಂಡೀಗಢದಲ್ಲಿ ಆರಂಭವಾದ ಪಯಣ ಉದಯಪುರ(udaypur), ಮುಂಬೈ(mumbai), ಪಣಜಿ(Panaji), ಹಂಪಿ(Hampi), ಬೆಂಗಳೂರು(Bangalore), ಅಂಡಮಾನ್(Andaman) ಗಳಲ್ಲಿ ಪ್ರಯಾಣಿಸಿದ್ದಾರೆ. ಕೆಲವೊಮ್ಮೆ ಜೀವನದ ಸಣ್ಣ ಪುಟ್ಟ ಘಟನೆಗಳು ಅತಿಯಾಗಿ ಖುಷಿ ನೀಡುತ್ತದೆ. ಕಾಲೇಜಿನಲ್ಲಿ ಆರಂಭವಾದ ಇವರ ಸ್ನೇಹ ಇಳಿ ವಯಸ್ಸಿನಲ್ಲಿ ಕೂಡ ಪಯಣಕ್ಕೆ ಜೊತೆಯಾಗಿದ್ದಾರೆ.
ನಾವು ಮಾಡುವ ಪ್ರವಾಸ ಉತ್ತಮವಾಗಿರಬೇಕು ಎಂದಾದರೆ ನಮ್ಮ ಜೊತೆಗೆ ನಮ್ಮನ್ನು ಅರ್ಥ ಮಾಡಿಕೊಳ್ಳುವ ತಂಡ ಬಹು ಮುಖ್ಯ ಎನ್ನುತ್ತಾರೆ ರಾಬಿನ್.
ರಾಬಿನ್, ಅಮೃತಾ, ಉಷಾ ಮೂವರು ಪಯಣ ಆರಂಭಿಸಿದ್ದು ಮಹೀಂದ್ರ ಸ್ಕಾರ್ಪಿಯೊದಲ್ಲಿ. ರಸ್ತೆಯಲ್ಲಿ ವಾಹನ ಚಲಾಯಿಸುತ್ತಾ ಸಾಗುವುದೇ ಒಂದು ಹಿತ. ಪಯಣದ ಉದ್ದಕ್ಕೂ ಈ ತಂಡ ಹಿತಕರವಾದ ಅನುಭವವನ್ನು ಪಡೆದುಕೊಂಡಿತ್ತು. ಸಾಮಾನ್ಯವಾಗಿ ಮುಂಬೈ, ಗೋವಾ ಪಯಣಿಸಲು 12 ಗಂಟೆ ಅವಧಿ. ಆದರೆ ಇವರು ತಗೊಂಡಿದ್ದು ಬರೋಬ್ಬರಿ 4 ದಿನ. ಸ್ನೇಹಿತರ ಮನೆ, ಮಹಾರಾಷ್ಟ್ರದ ಕೋಟೆಗಳು, ಅಂಬೊಲ್ಗಡ್(Ambolgadh), ಗುಹಾಗರ್(Guhagar) ಹೀಗೆ ಅನೇಕ ಬೀಚ್ ಗಳ ಹಿತ ಅನುಭವ ಸ್ವಾಧಿಸುತ್ತಾ 4 ದಿನ ಕ್ರಮಿಸಿದ್ದರು.
ನೀವು ಇದನ್ನು ಇಷ್ಟಪಡಬಹುದು: ಎಲೆಕ್ಟ್ರಿಕ್ ಕಾರಲ್ಲಿ ಕೇವಲ 700 ರೂಪಾಯಿ ಖರ್ಚಲ್ಲಿ 1500 ಕಿಮೀ ಕ್ರಮಿಸಿದ ಜೈಪುರದ ಇಂಜಿನಿಯರ್ ಆಕಾಶ್
ನಾವು ಎಂದಾದರೂ ಪ್ರವಾಸಕ್ಕೆ ಹೋಗುವಾಗ ಸಮಾನ ಮನಸ್ಕರ ತಂಡ ಮುಖ್ಯ. ನಮ್ಮ ಸಂಗಡಿಗರು ದುರ್ಗಮ ಹಾದಿಯ ಕಠಿಣತೆಯನ್ನು ಮರೆಸುವಂತೆ ಇರಬೇಕು. ಇಂಟರ್ನೆಟ್ ಇಲ್ಲದ ಜಾಗದಲ್ಲಿ ಪಯಣಿಸಲೂ ಸಿದ್ಧರಿರಬೇಕು. ನಾವು 3 ಜನ ಪಯಣದಲ್ಲಿ ಐಷಾರಾಮಿ ಸೌಲಭ್ಯ ಇಷ್ಟ ಪಟ್ಟವರಲ್ಲ. ಹಾಗಾಗಿ ಪಯಣ ಸುಲಭವಾಯಿತು ಎನ್ನುತ್ತಾರೆ ಅಮೃತಾ.
ಬದಲಾಗುವ ಸಮುದ್ರ ತೀರಗಳು
ಪ್ರತಿ 30 ನಿಮಿಷಕ್ಕೊಮ್ಮೆ ಕೊಂಕಣ ತೀರದ ವಾತಾವರಣ ಬದಲಾಗುತ್ತಾ ಹೋಗುತ್ತದೆ. ಮಹಾರಾಷ್ಟ್ರದ ಆ ಕಡಲ ತೀರಗಳು ಇಂದಿಗೂ ಅದೇ ಸಹಜತೆಯನ್ನು ಉಳಿಸಿಕೊಂಡು ಬಂದಿದೆ. ಅಲ್ಲಿ ಪ್ಲಾಸ್ಟಿಕ್, ಕಸ ಕಾಣಸಿಗುವುದಿಲ್ಲ. ಕಡಲ ತೀರ, ಸಮುದ್ರದ ಅಲೆಗಳು, ಮರುಭೂಮಿ ಸೊಗಸಾದ ಅನುಭವ ಎನ್ನುತ್ತಾರೆ ರಾಬಿನ್.
ಅಮೃತ ಹಾಗೂ ರಾಬಿನ್ ಕಳೆದ 20ವರ್ಷಗಳಿಂದ ಪ್ರತಿ ವರ್ಷ ಗೋವಾಕ್ಕೆ ಹೋಗುತ್ತಿದ್ದರು. ಆದರೆ ಕಳೆದ ಬಾರಿ ಆಗಿರಲಿಲ್ಲ. ಈ ಬಾರಿ ಗೋವಾದ ಪಯಣದಲ್ಲಿ 3 ದಿನ ಕಡಲ ತೀರಾ, ಅಲ್ಲಿನ ಸಮುದ್ರ ಆಹಾರ(sea food), ಚರ್ಚ್ ಎಲ್ಲವುದರ ಸೌಂದರ್ಯ ಸವಿದಿದ್ದರು ಮೂವರು ಸ್ನೇಹಿತರು.
ಪಯಣದಲ್ಲಿ ರಾಬಿನ್ ಅವರಿಗೆ ಬಹು ಇಷ್ಟವಾಗಿದ್ದು ಹಂಪಿ. ಅತ್ಯಂತ ಮನೋಹರ ತಾಣ. ಅಲ್ಲಿನ ಹಜಾರ ರಾಮ ದೇವಸ್ಥಾನ ರಾಮಾಯಣದ ಕಥೆಗಳನ್ನು ಸಾರುತ್ತದೆ.
ದಿನದಲ್ಲಿ 5 ರಿಂದ 6 ಗಂಟೆಗಳ ಕಾಲ ವಾಹನ ಓಡಿಸುತ್ತಿದ್ದರು. ಪಯಣದಲ್ಲಿ ಕೆಲವು ಹಾದಿಗಳು ದುರ್ಗಮವಾಗಿತ್ತು. ಕೆಲವೊಮ್ಮೆ ಕಲ್ಲು, ಮಣ್ಣಿನ ಹಾದಿಯಲ್ಲಿಯೇ ಸಂಚರಿಸಬೇಕು. ದಕ್ಷಿಣದ ಬ್ಲೇರ್ ನಿಂದ ಉತ್ತರದ ದಿಗಿಲಿಪುರ್ ನ 300 ಕಿಮೀ ಸಮೀಪಿಸಲು 16 ಗಂಟೆ ತೆಗೆದುಕೊಂಡಿದ್ದು ದುರ್ಗಮ ಹಾದಿಯ ಒಂದು ನಿದರ್ಶನ.
ದಾರಿಯಲ್ಲಿ ನಮಗೆ ಬೇಕಾದ ಹಾಗೆ ಪಯಣಿಸಲು ಅಸಾಧ್ಯ. ಸರಿಯಾದ ಮಾರ್ಗದ ಅಗತ್ಯ. ನಿಧಾನಗತಿಯ ಪಯಣದಲ್ಲಿ ಖುಷಿ ಪಡುತ್ತಾ ಗಂಟೆಗೆ 20 ಕಿಮೀ ವೇಗದಲ್ಲಿ ಮಹೀಂದ್ರ ಸ್ಕಾರ್ಪಿಯೊ ಅಲ್ಲಿ ಪಯಣಿಸುತ್ತಿದ್ದರು.
ಅಂಡಮಾನ್ ಎಂಬ ಸ್ವರ್ಗ
ಅಂಡಮಾನ್ ಪಯಣ ಇವರಿಗೆ ಸ್ವರ್ಗದ ಅನುಭವ. ಹಿಂದೆ ಅಂಡಮಾನ್ ಪಾರ್ಟಿ ಮಾಡುವ ತಾಣವಾಗಿತ್ತು. ಆದರೆ ಈಗ ಅಲ್ಲಿ 30 ಜನ ಮಾತ್ರ ವಾಸಿಸುತ್ತಿದ್ದಾರೆ. ಅಂಡಮಾನ್ ತೀರವೇ ಸೊಗಸು.
ಪಾಂಡಿಚೇರಿ(Pondicherry) ಇವರ ಪಯಣದ ಹಾದಿಯಲ್ಲಿ ಇರಲಿಲ್ಲ. ಆದರೆ ಅಂಡಮಾನ್ ನಿಂದ ಮರಳಿ ಬರುವಾಗ ಪಯಣದ ಪಟ್ಟಿಯಲ್ಲಿ ಸೇರಿಕೊಂಡಿತ್ತು. ಅಲ್ಲಿ ಕೆಲವು ಸಮಯಗಳ ಕಾಲ ನಡೆಯಬೇಕಿತ್ತು. ಆದರೆ ಆ ಸಮಯದಲ್ಲಿ ಇವರಿಗೆ ಅಚ್ಚರಿ ಕಾದಿತ್ತು. ಅಲ್ಲಿನ ಸ್ಥಳೀಯರು ಹೊರಗಿನವರ ಬಳಿ ಕೂಡ ತಮಿಳು(Tamil) ಮತ್ತು ಫ್ರೆಂಚ್(French) ಭಾಷೆಯಲ್ಲಿ ಮಾತನಾಡುತ್ತಿದ್ದರು. ಹಾದಿ ತಪ್ಪಿ ಹೋದ ಸಮಯದಲ್ಲಿ ದಾರಿ ಕೇಳಿದಾಗ ಸ್ಥಳೀಯರು ಫ್ರೆಂಚ್ ಭಾಷೆಯಲ್ಲಿ ಉತ್ತರಿಸುತ್ತಿದ್ದರು ಎನ್ನುತ್ತಾರೆ ರಾಬಿನ್
ಪಯಣದ ದಾರಿಯಲ್ಲಿ ಅವರಿಗೆ ಬೇರೆ ಬೇರೆ ಹಳೆಯ ಸ್ನೇಹಿತರು ಸಿಕ್ಕಿದ್ದರು. ಚೆನೈ, ಅಂಬೊಲ್ಗಡ ,ಪಾಂಡಿಚೇರಿಯಲ್ಲಿ ಸ್ನೇಹಿತರ ಜೊತೆ ಉಳಿದುಕೊಂಡಿದ್ದರು. ಕಾಡು, ಬೀಚ್ ನಲ್ಲಿ ಸಂಚರಿಸಿ ಅಲ್ಲಿ ಸಿಗುವ ವಿಶೇಷ ವಸ್ತುಗಳನ್ನು ಸಂಗ್ರಹಿಸುವುದು ಮೂವರಿಗೂ ಖುಷಿ.
ಪಯಣದ ಸಮಯದಲ್ಲಿ ಸಿಗುವ ಊಟವನ್ನೇ ಹೊಂದಾಣಿಕೆ ಮಾಡಿಕೊಂಡು ಊಟ ಮಾಡುವುದು ಉತ್ತಮ. ಪ್ರವಾಸ ಹೊರಡುವ ಮುನ್ನ ನಮಗೆ ಹಸಿವು ನೀಗಿಸಲು ನಮ್ಮಿಂದ ಸಾಧ್ಯವಾದ ಆಹಾರವನ್ನು ತೆಗೆದುಕೊಂಡು ಹೋಗುವುದು ಉತ್ತಮ ಎನ್ನುವ ಸಲಹೆ ನೀಡುತ್ತಾರೆ ರಾಬಿನ್.
ಪ್ರವಾಸದ ವೇಳೆ ಅಲ್ಲಿನ ಊಟ ಆ ಕ್ಷಣದ ನಿರ್ಧಾರ. ಕೊಂಕಣ ತೀರ, ಗೋವಾ, ಅಂಡಮಾನ್ ಗಳಲ್ಲಿ ಅಲ್ಲಿನ ವಿಶೇಷ ಖಾದ್ಯ ಸೇವಿಸುತ್ತಿದ್ದರು.
ಮೂವರು ಚೆನೈ ವಿಮಾನ ನಿಲ್ದಾಣದಲ್ಲಿ ಕೊರೋನ ಪರೀಕ್ಷೆ ಮಾಡಿಸಿದ್ದರು. ನೆಗಟಿವ್ ಬಂದ ಬಳಿಕವೇ ಮುಂದಿನ ಪಯಣ ಹೊರಟಿದ್ದು. ಹಿರಿಯರಾದ ಕಾರಣ ಆರೋಗ್ಯ ಕಾಪಾಡಿಕೊಳ್ಳಬೇಕಿತ್ತು. ಡಾಬ, ಹೋಟೆಲ್ ಗಳಲ್ಲಿ ಕೊರೋನಾ ನಿಯಮ ಪಾಲಿಸುತ್ತಿದ್ದರು. ಸ್ವಚ್ಛವಾಗಿರುವ ಶೌಚಾಲಯ ಉಪಯೋಗಿಸುತ್ತಿದ್ದರು.
ಹಿರಿಯ ನಾಗರಿಕರಾದರು ಇವರು ದೇಶದ ಹಲವು ಕಡೆ ಸಂಚರಿಸಿದ್ದಾರೆ. ಎಂದಿಗೂ ಕಹಿ ಅನುಭವ ಆಗಿರಲಿಲ್ಲ. ಪ್ರವಾಸ ಹೊರಡಬೇಕು ಎಂದು ಬಯಸುವವರಿಗೆ ಹೊರಡುವ ಮುನ್ನ ಕೆಲವು ಸಲಹೆ ನೀಡುತ್ತಾರೆ ರಾಬಿನ್.
ನಿಮ್ಮ ಗಮನದಲ್ಲಿರಲಿ
1. ರಸ್ತೆಯ ಬಗ್ಗೆ ಗಮನ ಹರಿಸಬೇಕು ಜೊತೆಗೆ ಅಲ್ಲಿನ ಜನರ ಜೊತೆ ನಾವು ಹೋಗಬೇಕಿರುವ ದಾರಿಯ ಬಗ್ಗೆ ವಿಚಾರಿಸಬೇಕು.
2. ಗೂಗಲ್ ಮ್ಯಾಪ್ ಗಳನ್ನು ಕಣ್ಮುಚ್ಚಿ ನಂಬಬಾರದು. ಕೆಲವೊಮ್ಮೆ ಅದು ಹಾದಿ ತಪ್ಪಿಸಬಹುದು. ಅಡ್ಡ ದಾರಿಗಳನ್ನು ಅನುಸರಿಸುವ ಮನಸ್ಥಿತಿ ಕಮ್ಮಿಯಿರಬೇಕು.
3. ಪ್ರವಾಸ ಹೊರಡುವ ಮುನ್ನ ವಾಹನ ಸುಸ್ಥಿತಿಯಲ್ಲಿ ಇದೆಯೋ ಇಲ್ಲವೋ ಎನ್ನುವುದನ್ನು ಖಚಿತ ಪಡಿಸಿಕೊಳ್ಳಬೇಕು
4. ಸ್ನ್ಯಾಕ್ಸ್ ಕೊಂಡೊಯ್ಯಬಹುದು. ಆದರೆ ಅತಿಯಾಗಬಾರದು.
5. ಟ್ರಾವೆಲ್ ಹೋಗುವಾಗ ತೆಗೆದುಕೊಂಡು ಹೋಗುವ ವಸ್ತುಗಳ ಕಡಿಮೆ ಇದ್ದರೆ ಒಳ್ಳೆಯದು.
6. ಪ್ರವಾಸಕ್ಕೆ ಹೋಗುವ ರಾಜ್ಯದ ನಿಯಮ ಪಾಲಿಸಬೇಕು. ಅನಾವಶ್ಯಕ ವಸ್ತು ತೆಗೆದುಕೊಂಡು ಹೋಗಬಾರದು.
7. ಹೋಗುವ ಸ್ಥಳವನ್ನು ಕತ್ತಲಾಗುವ ಮುನ್ನ ತಲುಪಿ, ಅಲ್ಲಿಯೇ ಉಳಿದು ಅಲ್ಲಿನ ಪ್ರಾದೇಶಿಕತೆಯ ಹಿತ ಅನುಭವಿಸಿ, ನೆನಪು ಸೃಷ್ಟಿ ಮಾಡಿಕೊಳ್ಳಬಹುದು.
ನಾವು ಖುಷಿಯಾಗಿರಲು ಪ್ರವಾಸ ಕೈಗೊಳ್ಳಬೇಕು. ಇರುವ ಒಂದು ಜೀವನವನ್ನು ಆನಂದಿಸಬೇಕು. ಮನೆಯಲ್ಲಿ ಸುಮ್ಮನೆ ಸಮಯ ವ್ಯರ್ಥ ಮಾಡುವ ಬದಲು, ಪಯಣವನ್ನು ಆನಂದಿಸಬೇಕು ಎನ್ನುತ್ತಾ ತಮ್ಮ ಇಳಿ ವಯಸ್ಸಿನಲ್ಲಿ 4500 ಕಿಮೀ ಪಯಣ ಮಾಡಿ ಇತರರಿಗೆ ಮಾದರಿ ಆಗಿದ್ದಾರೆ ಈ ಮೂವರು ಹಿರಿಯ ಸ್ನೇಹಿತರು.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ