ಮುಚ್ಚಿದ್ದ ದೇಗುಲ ತೆರೆಯಲಿದೆ, ಇನ್ನೇನು ಶುರುವಾಗಲಿದೆ ಅಮರನಾಥ ಯಾತ್ರೆ: ಇಲ್ಲಿದೆ ಪೂರ್ತಿ ಡೀಟೇಲ್ಸ್
ಅಮರನಾಥ ಯಾತ್ರೆಗೆ ಹೋಗಬೇಕು ಎಂಬ ಆಸೆ ಬಹುತೇಕರಿಗೆ ಇರುತ್ತದೆ. ಆ ಆಸೆಯನ್ನು ನೇರವೇರಿಸಿದವರ ಸಂಖ್ಯೆ ಲಕ್ಷಾಂತರ ಇದ್ದರೆ ಆ ಆಸೆ ನೆರವೇರಿಸಲು ಕಾಯುತ್ತಿರುವವರ ಸಂಖ್ಯೆ ಅಸಂಖ್ಯಾತ. ಅಂಥವರಿಗೆಂದೇ ಈ ಬರಹ. ಇನ್ನೇನು ಅಮರನಾಥ ಯಾತ್ರೆ ಆರಂಭವಾಗುತ್ತಿದೆ. ಕೋವಿಡ್ 19 ಕಾರಣಕ್ಕೆ ಮುಚ್ಚಿದ್ದ ದೇಗುಲ ತೆರೆಯುತ್ತಿದೆ. ಯಾವಾಗ, ಹೇಗೆ, ಏನು, ಎತ್ತ ಎಂಬ ಪೂರ್ತಿ ವಿವರ ಇಲ್ಲಿದೆ.
- ಆದಿತ್ಯ ಯಲಿಗಾರ
ಅಮರನಾಥ ದೇವಸ್ಥಾನವು ದಕ್ಷಿಣ ಏಷ್ಯಾ(South Asia) ಪ್ರದೇಶದ 51 ಶಕ್ತಿ ಪೀಠಗಳಲ್ಲಿ ಬಹುಮುಖ್ಯ ಪೀಠ. ಸುತ್ತಲೂ ಹಿಮವನ್ನು ಹೊದ್ದು ನಿಂತ ಪರ್ವತಪ್ರದೇಶದಲ್ಲಿರುವ ಈ ಪ್ರಸಿದ್ಧ ಅಮರನಾಥ ದೇವಸ್ಥಾನಕ್ಕೆ ಅಸಂಖ್ಯ ಭಕ್ತಾದಿಗಳು ಪರ್ವತಾರೋಹಣದ ಕಷ್ಟ ಸವಾಲುಗಳನೆಲ್ಲಾ ಬದಿಗೊತ್ತಿ ವಾರ್ಷಿಕ ತೀರ್ಥಯಾತ್ರೆ(Amarnath yathra) ಮಾಡಲು ಯೋಜನೆ ಹೂಡುತ್ತಾರೆ.
ಕಳೆದ ವರ್ಷ, ಜಗತ್ತನ್ನೇ ನಲುಗಿಸಿದ ಸಾಂಕ್ರಾಮಿಕ ರೋಗದಿಂದಾಗಿ, ಶ್ರೀ ಅಮರನಾಥ ದೇಗುಲ ಮಂಡಳಿ (Shri Amarnathji Shrine Board) ಅಮರನಾಥ ಯಾತ್ರೆ ರದ್ದುಗೊಳಿಸಿತ್ತು. ಆದರೆ, ಈಗ ಅಂತಿಮವಾಗಿ, ದಕ್ಷಿಣ ಕಾಶ್ಮೀರ ಹಿಮಾಲಯದ ಶಿವನಿಗೆ ಸಮರ್ಪಿತಾದ, ಅಮರನಾಥಜಿಯ ಪವಿತ್ರ ಗುಹಾ ದೇವಾಲಯಕ್ಕೆ ಭೇಟಿ ನೀಡಲು ಕುತೂಹಲದಿಂದ ಕಾಯುತ್ತಿದ್ದ ಭಕ್ತರಿಗೆ ಒಳ್ಳೆಯ ಸುದ್ದಿ ಇದೆ.
ಅಮರನಾಥ ಯಾತ್ರೆ ಪ್ರಾರಂಭ
ವರದಿಗಳ ಪ್ರಕಾರ, ಅಮರನಾಥ ಯಾತ್ರೆ ಈ ವರ್ಷ ಜೂನ್ 28ರಂದು ಪ್ರಾರಂಭವಾಗಲಿದ್ದು, ರಕ್ಷಾಬಂಧನ ಆಚರಿಸಲಾಗುವ ದಿನ ಅಂದರೆ 2021 ಆಗಸ್ಟ್ 22ರಂದು ಮುಕ್ತಾಯಗೊಳ್ಳಲಿದೆ. ಜಮ್ಮು ಮತ್ತು ಕಾಶ್ಮೀರ(Jammu and kashmir) ಆಡಳಿತವು ಅಮರನಾಥ ಯಾತ್ರೆಯಿಂದ ಯಾತ್ರಾರ್ಥಿಗಳ ಮುಂಗಡ ನೋಂದಣಿ ಏಪ್ರಿಲ್ 1ರಿಂದ ಪ್ರಾರಂಭವಾಗಲಿದೆ ಎಂದು ತಿಳಿಸಿದೆ.
ನೀವು ಇದನ್ನು ಇಷ್ಟಪಡಬಹುದು: ಬಸವ ಕಲ್ಯಾಣದ ಶರಣರಿಗೆ ನಮಸ್ಕಾರ; ಬೀದರ್ ಕಡೆ ಹೋದರೆ ಈ 13 ಶರಣ ಸ್ಮಾರಕಗಳನ್ನು ನೋಡಿ ಬನ್ನಿ
ದೇಶದ 37 ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್ನ 446 ಗೊತ್ತುಪಡಿಸಿದ ಶಾಖೆಗಳ ಮೂಲಕ ಯಾತ್ರಿಗಳು ತಮ್ಮ ಯಾತ್ರೆಯನ್ನು ಮುಂಗಡವಾಗಿ ನೊಂದಾಯಿಸಬಹುದು.
ಸಭೆಯ ಸಮಯದಲ್ಲಿ, ಶ್ರೀ ಅಮರನಾಥಜೀ ದೇವಾಲಯ ಮಂಡಳಿಯು, ಪೂಜಾರಿಗಳಿಗೆ ಸಂಭಾವನೆಯನ್ನು ದಿನಕ್ಕೆ ₹ 1000 ರಿಂದ ಮುಂದಿನ ಮೂರು ವರ್ಷಗಳವರೆಗೆ ದಿನಕ್ಕೆ ₹ 1500 ಕ್ಕೆ ಹೆಚ್ಚಿಸಲು ಅನುಮೋದಿಸಿರುವುದರ ಕುರಿತು ಚರ್ಚೆಯಾಯಿತು.
ಈ ವರ್ಷದ ಯಾತ್ರೆಯ ಮುಖ್ಯಾಂಶಗಳು
ಇಂತಹ ಒಳ್ಳೆಯ ಸುದ್ದಿ ಇಲ್ಲಿಗಷ್ಟೆ ಸೀಮಿತವಾಗಿಲ್ಲ, ಬದಲಿಗೆ ಇನ್ನೂ ಮುಂದುವರೆದು ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಈ ವರ್ಷ ಅಲ್ಲಿನ ವಕ್ತಾರರು ತಿಳಿಸುವಂತೆ, ಯಾತ್ರಿಗಳಿಗೆ ಅನುಕೂಲವಾಗಲು ಉಚಿತ ಬ್ಯಾಟರಿ ಚಾಲಿತ ಕಾರ್ ಸೇವೆಯನ್ನು ಒದಗಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ. ಭೇಟಿ ನೀಡುವ ಎಲ್ಲಾ ಭಕ್ತಾದಿಗಳಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೌಲಭ್ಯಗಳನ್ನು ಒದಗಿಸಲಾಗುವುದು.
ಎಸ್ಎಎಸ್ಬಿ (SASB) ಮಂಡಳಿಯು ಮೆಟಲ್ ಮತ್ತು ಮಿನರಲ್ ಟ್ರೇಡಿಂಗ್ ಕಾರ್ಪೊರೇಷನ್ (MMTC) ಮೂಲಕ 5 ಗ್ರಾಂ ಮತ್ತು 10 ಗ್ರಾಂ ಬೆಳ್ಳಿ ನಾಣ್ಯಗಳನ್ನು ವಿತರಿಸಲಿದೆ. ಈ ನಾಣ್ಯಗಳನ್ನು ಯಾತ್ರೆಯ ಸಮಯದಲ್ಲಿ ಗುಹೆ ದೇಗುಲ ಮತ್ತು ಮಂಡಳಿಯ ಕಚೇರಿಗಳಲ್ಲಿರುವ ಯಾತ್ರಾರ್ಥಿಗಳಿಗೆ ಮಾರಾಟ ಮಾಡಲಾಗುತ್ತದೆ
ನೋಂದಣಿಯ ನಿಯಮ ಮತ್ತು ನಿಬಂಧನೆಗಳು
ಯಾತ್ರೆಯ ಭಾಗವಾಗಲು ಇಚ್ಛಿಸುವ ಯಾತ್ರಿಕರಿಗೆ ‘ಯಾತ್ರಾ ಪರವಾನಿಗೆ’ ನೀಡಲಾಗುವುದು ಮತ್ತು ಅದು ನಿಗದಿತ ದಿನಾಂಕ ಮತ್ತು ಮಾರ್ಗಕ್ಕೆ ಮಾನ್ಯವಾಗಿರುತ್ತದೆ.
ಯಾತ್ರಾರ್ಥಿಗಳಿಗೆ ಒಂದು ಸಲಹೆ: ಹತ್ತಿರದ ಗೊತ್ತುಪಡಿಸಿದ ಬ್ಯಾಂಕಿನಿಂದ ನಿಮ್ಮ ಯಾತ್ರೆಯನ್ನ ಮುಂಗಡವಾಗಿ ನೋಂದಾಯಿಸುವಾಗ ಮೊದಲು ನಿಗದಿತ ಆರೋಗ್ಯ ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳಿ.
ನೋಂದಣಿ ಏಪ್ರಿಲ್ 1ರಿಂದ ಪ್ರಾರಂಭವಾಗುತ್ತದೆ. ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ನೀವು ಅವರ ಸೈಟ್ಗೆ (www.shriamarnathjishrine.com) ಭೇಟಿ ನೀಡಬಹುದು.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ