ಕೊಪ್ಪಳಕ್ಕೆ ಹೋದಾಗ ಕಿನ್ನಾಳ ಗೊಂಬೆ ತಗೊಳ್ಳಿ
![](https://kannada.travel/wp-content/uploads/2021/01/thumb69.jpg)
ಯಾವ ಊರಿಗೆ ಹೋದಾಗ ಏನು ತೆಗೆದುಕೊಂಡುಬರಬೇಕು ಅನ್ನುವುದು ಬಹುತೇಕರಿಗೆ ತಿಳಿದಿರುವುದಿಲ್ಲ. ಬೆಳಗಾವಿಗೆ ಹೋದರೆ ಕರದಂಟು, ಧಾರವಾಡಕ್ಕೆ ಹೋದರೆ ಪೇಡಾ ಹೇಗೆ ತೆಗೆದುಕೊಂಡು ಬರುತ್ತೇವೋ ಅದೇ ಥರ ಚನ್ನಪಟ್ಟಣಕ್ಕೆ ಹೋದರೆ ಬೊಂಬೆ ತೆಗೆದುಕೊಂಡು ಬರುತ್ತೇವೆ. ಅದೇ ಥರ ಬೊಂಬೆ ತಯಾರಿಸುವ ಮತ್ತೊಂದು ಊರು ಕಿನ್ನಾಳ. ಕೊಪ್ಪಳಕ್ಕೆ ಹೋದರೆ ಈ ಕಿನ್ನಾಳ ಬೊಂಬೆ ತರಲು ಮರೆಯಬೇಡಿ.
![](https://cdn.s3waas.gov.in/s36cd67d9b6f0150c77bda2eda01ae484c/uploads/2018/07/2018072670.jpg)
ಭಾರತದ ಪ್ರತಿಯೊಂದು ಪ್ರದೇಶದಲ್ಲಿ ಒಂದೊಂದು ಸುಂದರ ಅದ್ಭುತವಾದ ಕಲಾ ಪರಂಪರೆ ಕಂಡು ಬರುತ್ತದೆ. ಹಾಗೆಯೇ ಕೊಪ್ಪಳ ಜಿಲ್ಲೆಯ ಕಿನ್ನಾಳ ಎಂಬ ಹಳ್ಳಿ ಮರದಿಂದ ತಯಾರಿಸುವ ಚಂದದ ಗೊಂಬೆಗಳಿಗೆ ಹೆಸರಾಗಿದೆ.
![](https://cdn.s3waas.gov.in/s36cd67d9b6f0150c77bda2eda01ae484c/uploads/2018/07/2018072627.jpg)
ಈ ಗೊಂಬೆ ಕಲಾಕೃತಿಗಳು ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಜನಪ್ರಿಯತೆ ಹೊಂದಿವೆ. ವಿಜಯನಗರ ಸಾಮ್ರಾಜ್ಯ ಅವನತಿ ಹೊಂದಿದ ನಂತರ ಈ ಗೊಂಬೆ ಕಲಾಕಾರರು ಕಿನ್ನಾಳ ಮತ್ತು ಬೇರೆ ಬೇರೆ ಕಡೆ ಹಂಚಿ ಹೋದರು. ಕೊಪ್ಪಳದಿಂದ 15 ಕಿಮೀ ದೂರದಲ್ಲಿ ಇರುವ ಕಿನ್ನಾಳದಲ್ಲಿ ಇಂದು 30 ರಿಂದ 40 ಕುಟುಂಬಗಳು ಈ ಕಲಾಕೃತಿಗಳನ್ನು ತಯಾರಿಸುವ ಕೆಲಸ ಮಾಡುತ್ತಿದ್ದಾರೆ.
![](https://cdn.s3waas.gov.in/s36cd67d9b6f0150c77bda2eda01ae484c/uploads/2018/07/2018072617.jpg)
ವಿಜಯನಗರ ಸಾಮ್ರಾಜ್ಯ ಅವನತಿ ಹೊಂದಿದ ನಂತರ ಇಲ್ಲಿ ವಲಸೆ ಬಂದ ಕಲಾಕಾರರು ಕಾಲ ಕಾಲಕ್ಕೆ ಗೊಂಬೆಗಳನ್ನು ಮಾಡುತ್ತಾ ಬಂದಿದ್ದಾರೆ. ಪ್ರಾಣಿ, ಮನುಷ್ಯ, ದೇವರ ವಿಗ್ರಹ ಅಲ್ಲದೆ ಇನ್ನೂ ಬೇರೆ ಬೇರೆ ರೀತಿಯ ಗೊಂಬೆಗಳು, ಹಣ್ಣು ತರಕಾರಿ ಮತ್ತು ಧಾರ್ಮಿಕ ಕಲಾಕೃತಿಗಳನ್ನು ತಯಾರಿಸುವರು. ದೀಪಾವಳಿ, ದಸರಾ ಹಬ್ಬದ ಸಮಯದಲ್ಲಿ ರಾಜ್ಯ, ದೇಶದ ಬೇರೆ ಬೇರೆ ಕಡೆಯಿಂದ ಬೇಡಿಕೆ ಇದೆ. ಅಲ್ಲದೆ ಬೇರೆ ಬೇರೆ ಹಬ್ಬದ ಸಂದರ್ಭದಲ್ಲಿ ಸಹ ಬೇಡಿಕೆ ಇದೆ.
![](https://cdn.s3waas.gov.in/s36cd67d9b6f0150c77bda2eda01ae484c/uploads/2018/07/2018072622.jpg)
ಗೊಂಬೆ ಕಲಾಕೃತಿಗಳನ್ನು ಕೆಲವು ಜನ ಹೇಳಿ ಮಾಡಿಸಿಕೊಂಡು ಹೋಗುತ್ತಾರೆ. ಇನ್ನು ಬೇಡಿಕೆ ಬರದಿದ್ದರೂ ಕೆಲವು ಗೊಂಬೆಗಳನ್ನು ಸಿದ್ಧ ಮಾಡಿ ಇಟ್ಟಿರುತ್ತಾರೆ. ಈ ಗೊಂಬೆಗಳು ಕೊಪ್ಪಳ ಸುತ್ತ ಮುತ್ತ ಸಿಗುವ ಹತ್ತಿ, ಅರಿಬೇವು, ನುಗ್ಗೆ, ಪಳಕು ಮತ್ತು ಸಾಗುವಾನಿ ಮರ ಬಳಸಿಕೊಂಡು ಮಾಡುತ್ತಾರೆ. ಈ ಬೊಂಬೆಗಳನ್ನು ತಯಾರು ಮಾಡುವ ರೀತಿಯೇ ಚೆಂದ. ಮೊದಲಿಗೆ ಮರದಿಂದ ತಮಗೆ ಬೇಕಾದ ಹಾಗೆ ಮರದ ಆಕಾರ ತಯಾರಿಸಿ ನಂತರ ಹುಣಚೆ ಬೀಜಗಳ ಮತ್ತು ಬೆನಚು ಕಲ್ಲುಗಳ ಪುಡಿ ಮಾಡಿದ ಅಂಟಿನಿಂದ ಗೊಂಬೆಗೆ ಮರು ರೂಪ ನೀಡಿ ಬಿಸಿಲಿನಲ್ಲಿ ಒಳಗಿಸುವರು. ನಂತರ ಗೊಂಬೆಗೆ ಬಿಳಿ ಬಣ್ಣದ ಬಳಿದ ಮೇಲೆ ಬೇರೆ ಬೇರೆ ಬಣ್ಣ ಬಳಿಯುತ್ತಾರೆ.
![2018072643.jpg (922×576)](https://cdn.s3waas.gov.in/s36cd67d9b6f0150c77bda2eda01ae484c/uploads/2018/07/2018072643.jpg)
ಇಂದಿನ ಪೀಳಿಗೆಗೆ ತಮ್ಮ ಈ ಪಾರಂಪರಿಕ ಕಲೆಯನ್ನು ಉಳಿಸಿ ಬೆಳೆಸಲು ಆಸಕ್ತಿ ತೋರುತ್ತಿಲ್ಲ. ಆದರೂ ಅಲ್ಲಲ್ಲಿ ಕೆಲವು ಕಲಾಕಾರರು ಇನ್ನೂ ಗೊಂಬೆಗಳನ್ನು ತಯಾರಿಸಿ ಜೀವನ ನಡೆಸುತ್ತಿದ್ದಾರೆ. ಈ ಕಲಾ ಪರಂಪರೆ ಉಳಿಸಲು ಸರಕಾರ ಕೆಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಭಾರತದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಿನ್ನಾಳ ಗೊಂಬೆಗಳ ಕಲಾಕೃತಿ ಮಾದರಿ ಪ್ರದರ್ಶನಗೊಂಡು ಜನಮನ್ನಣೆ ಪಡೆದಿದೆ. ಆಗ ಅನೇಕರ ದೃಷ್ಟಿ ಈ ಗೊಂಬೆಗಳತ್ತ ಬಿದ್ದಿತ್ತು. ಕರ್ನಾಟಕ ಸರಕಾರವೇ ಅನೇಕ ಗೊಂಬೆ ತಯಾರಕರಿಗೆ ಧನ ಸಹಾಯ ಮಾಡಿದೆ.
![](https://dreameroftheocean.files.wordpress.com/2016/09/lalala.jpg?w=768)
ಪ್ರಸ್ತುತ ಕರ್ನಾಟಕದ ಚನ್ನಪಟ್ಟಣ, ಆಂಧ್ರದ ಕೊಂಡಪಲ್ಲಿ, ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸಹ ಮರದಿಂದ ಗೊಂಬೆ ತಯಾರಿಸುವ ಕಲಾ ಪರಂಪರೆ ಇದೆ. ಅಲ್ಲಿನ ಗೊಂಬೆಗಳಿಗೆ ವಿಶ್ವಾದ್ಯಂತ ಬೇಡಿಕೆ ಇದೆ. ನಮ್ಮ ಚನ್ನಪಟ್ಟಣದ ಬೊಂಬೆಗಳ ಬಗ್ಗೆಯಂತೂ ಎಲ್ಲರಿಗೂ ತಿಳಿದಿರುತ್ತದೆ. ಹಲವಾರು ಭಾಗಗಳಲ್ಲಿ ಇಂದಿಗೂ ಜೀವಂತವಾಗಿರುವ ಈ ಭಾರತೀಯ ಕಲಾ ಪರಂಪರೆ ಎಂದಿಗೂ ನಾಶ ಆಗದಂತೆ ನೋಡಿಕೊಳ್ಳಬೇಕಾದುದು ನಮ್ಮ ಜವಾಬ್ದಾರಿ. ಯಾವತ್ತಾದರೂ ಆ ಕಡೆಗೆ ಹೋದಾಗ ಕಿನ್ನಾಳ ಗೊಂಬೆ ಖರೀದಿಸಲು ಮರೆಯಬೇಡಿ.
![The Making Of Kinnala Art - YouTube](https://i.ytimg.com/vi/2c1kaA8p6LE/maxresdefault.jpg)
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ.
ಬನ್ನಿ ಜೊತೆಯಾಗಿ