ಪ್ರವಾಸಿಗರಿಗಾಗಿ ಪ್ಯಾಕೇಜ್ ಘೋಷಿಸಿದ ಕೆಎಸ್ಆರ್ಟಿಸಿ
ಪ್ರವಾಸಿಗರಿಗಂತೂ ಈಗ ಸುವರ್ಣ ಕಾಲ. ದೇಶ ಮಾತ್ರವಲ್ಲದೆ ವಿದೇಶದಲ್ಲಿಯೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಇದೇ ಹಿನ್ನಲೆಯಲ್ಲಿ ಪ್ರವಾಸಿಗರಿಗಾಗಿ ಕೆಎಸ್ಆರ್ಟಿಸಿ ವಿಶೇಷ ಪ್ಯಾಕೇಜ್ ಘೋಷಿಸಿದೆ.
- ಮಧುರಾ ಎಲ್ ಭಟ್
ಲಾಕ್ ಡೌನ್ ದಿನಗಳಲ್ಲಿ ಮನೆಯಲ್ಲಿಯೇ ಕುಳಿತು ಬೇಸರವಾದ ಕಾರಣ ಸರ್ಕಾರ ಅನ್ಲಾಕ್ ಘೋಷಣೆಮಾಡುತ್ತಿದ್ದಂತೆ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿತ್ತು, ಅದರಲ್ಲಿಯೂ ಇದು ಮಳೆಗಾಲವಾಗಿದ್ದರಿಂದ ಪ್ರವಾಸಿಗರು ಹೆಚ್ಚಾಗಿ ಪ್ರಕೃತಿ ಸೌಂದರ್ಯ ಸವಿಯಲು ಪ್ರವಾಸ ಹೋಗುತ್ತಾರೆ. ಹಾಗಾಗಿ ಇದನೆಲ್ಲ ಹಿನ್ನೆಲೆಯಾಗಿಟ್ಟುಕೊಂಡು ಕೆಎಸ್ಆರ್ಟಿಸಿ ಹಲವಾರು ಪ್ಯಾಕೇಜ್ಗಳನ್ನು ಘೋಷಣೆ ಮಾಡುತ್ತಿದೆ.
ಕೆಲವು ದಿನಗಳ ಹಿಂದೆ ಕೆಎಸ್ಆರ್ಟಿಸಿ ತಿರುಪತಿಗೆ ಹೋಗುವ ಭಕ್ತರಿಗಾಗಿ ಬೆಂಗಳೂರು-ತಿರುಪತಿ ಪ್ಯಾಕೇಜ್ ಘೋಷಣೆ ಮಾಡಿತ್ತು.ಆದರೆ ಇದೀಗ ಬೆಂಗಳೂರು-ಜೋಗ, ಬೆಂಗಳೂರು-ಸಿಗಂದೂರು-ಜೋಗ, ಬೆಂಗಳೂರು-ಚಿತ್ರದುರ್ಗ-ವಾಣಿ ವಿಲಾಸ ಸಾಗರದ ಪ್ರವಾಸಿ ಸ್ಥಳಗಳಿಗೆ ಜುಲೈ 30ರಿಂದ ಪ್ಯಾಕೇಜ್ ಬಸ್ಗಳು ಸಂಚಾರ ನಡೆಸಲಿವೆ ಎಂದು ಘೋಷಣೆ ಮಾಡಿದೆ.
ಅದಲ್ಲದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ದಾವಣಗೆರೆ, ಚಿತ್ರದುರ್ಗ, ಹುಬ್ಬಳ್ಳಿ ಸೇರಿದಂತೆ ವಿವಿಧ ವಿಭಾಗದ ವತಿಯಿಂದಲೂ ಪ್ರತಿನಿತ್ಯದ ಹಾಗೂ ವಾರಂತ್ಯದ ಪ್ರವಾಸಿ ಪ್ಯಾಕೇಜ್ಗಳನ್ನು ಘೋಷಣೆ ಮಾಡಲಾಗಿದೆ.
ಬೆಂಗಳೂರು-ಜೋಗ ಪ್ಯಾಕೇಜ್
ಬೆಂಗಳೂರು-ಜೋಗ ಪ್ರವಾಸಿ ಪ್ಯಾಕೇಜ್ಗಾಗಿ ಎಸಿ ರಹಿತ ಸ್ಲೀಪರ್ ಬಸ್ ನಲ್ಲಿ ಮತ್ತು ರಾಜಹಂಸ ಬಸ್ಗಳಲ್ಲಿ ಸಂಚಾರ ನಡೆಸಬಹುದಾಗಿದೆ. ಬಸ್ ರಾತ್ರಿ ಬೆಂಗಳೂರಿನಿಂದ ಹೊರಟು ಸಾಗರದಲ್ಲಿ ವಿಶ್ರಾಂತಿ, ಉಪಹಾರಕ್ಕೆ ನಿಲ್ಲುತ್ತದೆ. ನಂತರ ಬೆಳಗ್ಗೆ ಯಿಂದ ಸಂಜೆಯವರೆಗೆ ವರದಹಳ್ಳಿ, ಇಕ್ಕೇರಿ, ಕೆಳದಿ, ಜೋಗ ವೀಕ್ಷಣೆ ಮಾಡಬಹುದಾಗಿದೆ. ನಂತರ ಪುನಃ ರಾತ್ರಿ ಸಾಗರದಿಂದ ಹೊರಟು ಬೆಳಗ್ಗೆ ಬೆಂಗಳೂರಿಗೆ ಮರಳಿ ಬರಬಹುದಾಗಿದೆ.
ಸ್ಲೀಪರ್ನಲ್ಲಿ ವಯಸ್ಕರಿಗೆ 2,200 ರೂ. ಮತ್ತು ಮಕ್ಕಳಿಗೆ 2 ಸಾವಿರ ದರವಿದೆ. ರಾಜಹಂಸ ಬಸ್ನಲ್ಲಿ ವಯಸ್ಕರಿಗೆ 2 ಸಾವಿರ ಮತ್ತು ಮಕ್ಕಳಿಗೆ 1,700 ರೂ. ದರ ನಿಗದಿ ಮಾಡಲಾಗಿದೆ.
ಬೆಂಗಳೂರು-ಸಿಗಂದೂರು-ಜೋಗ
ಬೆಂಗಳೂರು-ಸಿಗಂದೂರು-ಜೋಗ ಪ್ಯಾಕೇಜ್ಗಾಗಿ ಐರಾವತ ಕ್ಲಬ್ ಕ್ಲಾಸ್ ಬಸ್ನಲ್ಲಿ ಸಂಚಾರ ಮಾಡಬಹುದಾಗಿದೆ. ಬಸ್ ರಾತ್ರಿ ಬೆಂಗಳೂರಿನಿಂದ ಹೊರಟು ಸಾಗರದಲ್ಲಿ ಉಪಹಾರ ಸೇವನೆಗೆ ನಿಲ್ಲುತ್ತದೆ. ನಂತರ ಬೆಳಗ್ಗೆಯಿಂದ ಸಂಜೆಯ ಒಳಗೆ ಸಿಗಂದೂರು, ಜೋಗ ವೀಕ್ಷಣೆ ಮಾಡಿ ರಾತ್ರಿ ಸಾಗರದಿಂದ ಹೊರಟರೆ ,ಬೆಳಗ್ಗೆ ಬೆಂಗಳೂರಿಗೆ ಮರಳಿ ಬರಬಹುದಾಗಿದೆ. ವಯಸ್ಕರಿಗೆ 2,500 ರೂ. ಮತ್ತು ಮಕ್ಕಳಿಗೆ 2,300 ರೂ. ದರವನ್ನು ನಿಗದಿ ಮಾಡಲಾಗಿದೆ.
ನೀವು ಇದನ್ನು ಇಷ್ಟಪಡಬಹುದು: ದೆಹಲಿಯಿಂದ ಲಂಡನ್ ಗೆ ಬಸ್ಸು ಟೂರು: 70 ದಿನಗಳಲ್ಲಿ 18 ದೇಶ ನೋಡುವ ಅವಕಾಶ ಯಾರಿಗುಂಟು ಯಾರಿಗಿಲ್ಲ
ಬೆಂಗಳೂರು-ಚಿತ್ರದುರ್ಗ-ವಾಣಿ ವಿಲಾಸ ಸಾಗರ ಪ್ಯಾಕೇಜ್
ಈ ಪ್ಯಾಕೇಜ್ಗಾಗಿ ಕರ್ನಾಟಕ ಸಾರಿಗೆ, ರಾಜಹಂಸ ಮತ್ತು ಐರಾವತ ಬಸ್ ನಲ್ಲಿ ಸಂಚಾರ ನಡೆಸಬಹುದಾಗಿದೆ. ಬೆಳಗ್ಗೆ 6 ಗಂಟೆಗೆ ಬೆಂಗಳೂರಿನಿಂದ ಹೊರಟ ಬಸ್ ಚಿತ್ರದುರ್ಗದಲ್ಲಿ ಉಪಹಾರಕ್ಕಾಗಿ ನಿಲ್ಲುತ್ತದೆ. ಬಳಿಕ ಚಂದವಳ್ಳಿಯ ತೋಟ, ಚಿತ್ರದುರ್ಗ ಕೋಟೆ, ವಾಣಿ ವಿಲಾಸ ಸಾಗರ ಡ್ಯಾಂ ಭೇಟಿ ನೀಡಬಹುದಾಗಿದೆ. ನಂತರ ರಾತ್ರಿ 9ಕ್ಕೆ ಹೊರಟು ಬೆಂಗಳೂರಿಗೆ ಮರಳಿ ಬರಬಹುದಾಗಿದೆ .ಬೇರೆ ಬೇರೆ ಬಸ್ಗಳಲ್ಲಿ ಬೇರೆ ಬೇರೆ ದರವಿದೆ.
ದಾವಣಗೆರೆ-ಹಂಪಿ ಪ್ಯಾಕೇಜ್
ಕೆಎಸ್ಆರ್ಟಿಸಿ ದಾವಣಗೆರೆ ವಿಭಾಗದಿಂದ ದಾವಣಗೆರೆ-ಹಂಪಿ ಪ್ಯಾಕೇಜ್ ಆರಂಭಿಸಿದೆ. ಪ್ರತಿ ಭಾನುವಾರ ಬೆಳಗ್ಗೆ 7 ಗಂಟೆಗೆ ದಾವಣಗೆರೆಯಿಂದ ಹೊರಡುವ ಬಸ್ ಹೊಸಪೇಟೆ, ಹಂಪಿ, ಕಮಲಾಪುರ, ಹುಲಿಗಿ ದೇವಸ್ಥಾನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ರಾತ್ರಿ 9 ಗಂಟೆಗೆ ದಾವಣಗೆರೆಗೆ ಮರಳಿ ಬರುತ್ತದೆ.ಪ್ರಯಾಣ ದರ ರೂ. 500 ಆಗಿದೆ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ