ಒಡಿಶಾದ ಹಿರಾಕುಡ್ ಜಲಾಶಯದಲ್ಲಿ ಪ್ರವಾಸಿಗರಿಗಾಗಿ ನೌಕಾವಿಹಾರದ ವ್ಯವಸ್ಥೆ
ಒಡಿಶಾದ ಹಿರಾಕುಡ್ ಜಲಾಶಯದಲ್ಲಿ ಪ್ರವಾಸಿಗರಿಗಾಗಿ ನೌಕಾವಿಹಾರದ ವ್ಯವಸ್ಥೆ ಏರ್ಪಡಿಸಿ, ಒಡಿಶಾ ಪ್ರವಾಸೋದ್ಯಮ ನವೀನ ಪ್ರಯೋಗಕ್ಕೆ ಸಿದ್ಧವಾಗಿದೆ.
- ಉಜ್ವಲಾ ವಿ.ಯು
ಆಗಸ್ಟ್ ನಲ್ಲಿ ಒಡಿಶಾ ರಾಜ್ಯದ ಕಡೆ ಪ್ರಯಾಣ ಬೆಳೆಸುತ್ತಿದ್ದರೆ, ಹೊಸದಾಗಿ ಆರಂಭವಾಗಲಿರುವ ಹಿರಾಕುಡ್ ಜಲಾಶಯ ನೌಕಾವಿಹಾರವನ್ನು ನೀವು ಮಾಡಲೇಬೇಕು. ಡೆಬ್ರಿಗರ್ ವನ್ಯಜೀವಿ ಅಭಯಾರಣ್ಯಕ್ಕೆ ಈ ವಿಹಾರವು ಹತ್ತಿರವಾಗಿರುವುದರಿಂದ ಪ್ರಯಾಣಿಕರಿಗೆ ಇದು ಅತ್ಯಂತ ಸುಂದರ ಮತ್ತು ರೋಮಾಂಚಕ ಅನುಭವವನ್ನು ನೀಡಲಿದೆ.
ಡೆಬ್ರಿಗರ್ ವನ್ಯಜೀವಿ ಅಭಯಾರಣ್ಯ, ಒಡಿಶಾ ರಾಜ್ಯದಲ್ಲಿ ವನ್ಯಜೀವಿಗಳ ಸಂರಕ್ಷಣೆ ಮತ್ತು ಅದರ ಆವಾಸಸ್ಥಾನಗಳ ಒಂದು ಪ್ರಮುಖ ತಾಣ. ಇದು ಅಪಾರವಾದ ಜೀವವೈವಿಧ್ಯದ ನೆಲೆಯಾಗಿದೆ, ಹೆಚ್ಚಿನ ಸಂಖ್ಯೆಯ ಸಸ್ತನಿಗಳು, ಪಕ್ಷಿಗಳು, ಸರೀಸೃಪಗಳು, ಉಭಯಚರಗಳು, ಮೀನುಗಳು, ಓಡೋನೇಟ್ಗಳು, ಚಿಟ್ಟೆಗಳು ಮತ್ತು ಜೇಡಗಳು ಇಲ್ಲಿ ಕಂಡುಬರುತ್ತವೆ.
ಆಕರ್ಷಕ ಸ್ಥಳಾಕೃತಿಯ ವೈಶಿಷ್ಟ್ಯಗಳೊಂದಿಗೆ ಒಣ ಪತನಶೀಲ ಮಿಶ್ರ ಕಾಡುಗಳ ಸಂಯೋಜನೆಯು ಡೆಬ್ರಿಗರ್ ವನ್ಯಜೀವಿ ಅಭಯಾರಣ್ಯದ ಪ್ರಮುಖ ಲಕ್ಷಣಗಳಾಗಿವೆ. ಇದು ರಾಜ್ಯದ ರೋಮಾಂಚಕ ವನ್ಯಜೀವಿ ಅಭಯಾರಣ್ಯಗಳಲ್ಲಿ ಒಂದಾಗಿದೆ. ಪ್ರತಿವರ್ಷ ಒಡಿಶಾ ಮತ್ತು ನೆರೆಯ ರಾಜ್ಯಗಳ ಅನೇಕ ಪ್ರಕೃತಿ-ಪ್ರೇಮಿಗಳನ್ನು ಈ ತಾಣ ಆಕರ್ಷಿಸುತ್ತವೆ.
ಡೆಬ್ರಿಗರ್ ಅಭಯಾರಣ್ಯವು ಹೇಗೂ ಉತ್ತಮ ಅನುಭವ ಮತ್ತು ದೃಶ್ಯವೀಕ್ಷಣೆಗೆ ವ್ಯಾಪಕವಾಗಿ ಹೆಸರುವಾಸಿಯಾಗಿದೆ. ಅಂತೆಯೇ ಅರಣ್ಯದ ಪ್ರಾಣಿಗಳು ನೀರು ಕುಡಿಯಲು ಈ ಪ್ರದೇಶಕ್ಕೆ ಬರುವುದರಿಂದ ಪ್ರವಾಸಿಗರು ವನ್ಯಜೀವಿಗಳನ್ನು ನೈಸರ್ಗಿಕವಾಗಿ ವೀಕ್ಷಿಸಬಹುದಾಗಿದೆ.
ವಿಭಾಗೀಯ ಅರಣ್ಯಾಧಿಕಾರಿ ಪ್ರಜ್ಞಾನ್ ದಾಸ್ ನೀಡಿರುವ ವರದಿಯ ಪ್ರಕಾರ, ಹಿರಾಕುಡ್ ನೌಕಾವಿಹಾರವು ಪಕ್ಷಿವೀಕ್ಷಣೆ ಮತ್ತು ವನ್ಯಜೀವಿ ವೀಕ್ಷಣೆಯನ್ನೊಳಗೊಂಡ ಒಂದು ಪ್ಯಾಕೇಜ್. ಈ ಪ್ಯಾಕೇಜ್ ನಲ್ಲಿ ನೌಕಾವಿಹಾರ ಮಾಡುವವರ ಎಂಟು ಜನರ ಬ್ಯಾಚ್ ಮಾಡಲಾಗುವುದು. ಅವರಿಗೆ ವಿಹರಿಸಲು ಒಂದು ಗಂಟೆಯ ಅವಕಾಶ ಇರುತ್ತದೆ.
ಇದಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯಗಳನ್ನು ಸ್ಥಳೀಯ ಸಮುದಾಯಗಳೇ ಮಾಡುತ್ತಿವೆ. ಅವರಿಗೆ ಈ ನಿಟ್ಟಿನಲ್ಲಿ ತರಬೇತಿಗಳನ್ನು ಸಹ ನೀಡಲಾಗುತ್ತದೆ. ಸ್ಥಳೀಯರೇ ಮುಂದೆ ನಿಂತು ಅರಣ್ಯ ಸಂರಕ್ಷಣೆಯ ಕಾರ್ಯದಲ್ಲಿ ತೊಡಗಿದ್ದಾರೆ ಮತ್ತು ಇದರಿಂದ ಲಾಭವನ್ನೂ ಗಳಿಸಲಿದ್ದಾರೆ. ಸ್ಥಳೀಯರ ಸಹಾಯದಿಂದ ಅರಣ್ಯದ ಸಂರಕ್ಷಣೆಯೂ ಆದಂತಾಗುತ್ತದೆ ಹಾಗೇ ಸ್ಥಳೀಯರಿಗೂ ಪರ್ಯಾಯ ಜೀವನೋಪಾಯ ದೊರತಂತಾಗುತ್ತದೆ.
ನೀವುಇದನ್ನುಇಷ್ಟಪಡಬಹುದು: ಮತ್ತೆ ಮತ್ತೆ ಕರೆಯುವ ಫೇವರಿಟ್ ತಾಣ ಭದ್ರಾ ಜಲಾಶಯ
ಡೆಬ್ರಿಗರ್ ಅಭಯಾರಣ್ಯದ ಸೂರ್ಯಾಸ್ತ ದ್ವೀಪ, ಬಾವಲಿ ದ್ವೀಪ ಮತ್ತು ಜಾನುವಾರು ದ್ವೀಪ ಎಂಬ ಮೂರು ದ್ವೀಪಗಳನ್ನು ವೀಕ್ಷಿಸುವವರಿಗೆ ವಿಶೇಷವಾದ ನೌಕಾವಿಹಾರದ ವ್ಯವಸ್ಥೆ ಇರುತ್ತದೆ. ಈ ನೌಕೆಗಳು ನಾಲ್ಕು ಗಂಟೆಗಳ ಕಾಲ ಒಂದು ಬ್ಯಾಚ್ ಗೆ ಸೇವೆಯನ್ನು ಒದಗಿಸುತ್ತದೆ.
ಹಾಗೇ ಅಲ್ಲಿಯ ವಿಶೇಷತೆಗಳನ್ನು ಹೇಳಲು ಒಬ್ಬ ಗೈಡ್ ಅನ್ನು ಒದಗಿಸಲಾಗುತ್ತದೆ. ಸೂರ್ಯಾಸ್ತ ದ್ವೀಪದಲ್ಲಿ ಪ್ರವಾಸಿಗರು ಪಶ್ಚಿಮದಲ್ಲಿ ಸೂರ್ಯಾಸ್ತ ಮತ್ತು ಪೂರ್ವದಲ್ಲಿ ಚಂದ್ರೊದಯದ ಅದ್ಭುತ ನೋಟವನ್ನು ಈ ದ್ವೀಪದಲ್ಲಿ ಕಾಣಬಹುದಾಗಿದೆ.
ಡೆಬ್ರಿಗರ್ ಅಭಯಾರಣ್ಯದಿಂದ ಒಂದು ಕೀ.ಮಿ ದೂರವಿರುವ ಬಾವಲಿ ದ್ವೀಪದಲ್ಲಿ ಪಯಣಿಗರು 1000 ಕ್ಕೂ ಅಧಿಕ ಬಾಟಲಿಗಳನ್ನು ನೋಡಬಹುದಾಗಿದೆ. ಈ ದ್ವೀಪದ ಸಂರಕ್ಷಣೆಗಾಗಿ ಒಟ್ಟು 12 ಸ್ಥಳೀಯ ಮೀನುಗಾರರ ಕುಟುಂಬವನ್ನು ನಿಯೋಜಿಸಲಾಗಿದೆ.
ಜಾನುವಾರು ದ್ವೀಪವು ಅನೇಕ ತಳಿಯ ಜಾನುವಾರುಗಳ ವಾಸಸ್ಥಾನವಾಗಿದೆ. ಹಿರಾಕುಡ್ ಜಲಾಶಯದಲ್ಲಿ ಅಣೆಕಟ್ಟು ಕಟ್ಟುವ ಸಂದರ್ಭದಲ್ಲಿ ಅನೇಕ ಜನರು ಸ್ಥಳಾಂತರ ಮಾಡುವಾಗ ಅವರ ಜಾನುವಾರುಗಳನ್ನು ಬಿಟ್ಟು ಹೋದ ಕಾರಣ ಇದು ಜಾನುವಾರು ದ್ವೀಪವಾಗಿ ರೂಪುಗೊಂಡಿದೆ.
ಪ್ರಾಜೆಕ್ಟ್ ನ ಎಲ್ಲಾ ಕಾರ್ಯಗಳನ್ನೂ ಸ್ಥಳೀಯ ಮೀನುಗಾರರು ಮತ್ತು ಪರಿಸರ ಅಭಿವೃದ್ಧಿ ಸಂಸ್ಥೆಗಳು ನೋಡಿಕೊಳ್ಳುತ್ತಿವೆ.ಹಾಗೇ ಸ್ಥಳೀಯ ಅರಣ್ಯ ಇಲಾಖೆಯಿಂದ ತರಬೇತಿ ಪಡೆದ ಹೊಸ ಗೈಡ್ ಗಳನ್ನು ನಿಯೋಜಿಸಲಾಗಿದೆ. ಒಟ್ಟಿನಲ್ಲಿ ಒಡಿಶಾದ ಹಿರಾಕುಡ್ ಜಲಾಶಯದಲ್ಲಿ ಆಗಸ್ಟ್ ನಲ್ಲಿ ಪ್ರವಾಸಿಗರಿಗಾಗಿ ಹೊಸ ಲೋಕವೇ ಸೃಷ್ಟಿಯಾಗುತ್ತಿದೆ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.