ಅ.17. 2023; ನವರಾತ್ರಿಯ ಮೂರನೇ ದಿನ “ಚಂದ್ರಘಂಟಾ” ದೇವಿಯ ಆರಾಧನೆ.
![](https://kannada.travel/wp-content/uploads/2023/10/Untitled-design_20231017_162408_0000-780x470.png)
ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ದೇವಿಯವೈಶಿಷ್ಟ್ಯತೆ ಮತ್ತು ಇಂದು ನಾಡಹಬ್ಬ ಮೈಸೂರು ದಸರಾ 2023 ಆಯೋಜಿತವಾದ ಕಾರ್ಯಕ್ರಮಗಳ ವಿವರ ಇಲ್ಲಿದೆ.
● ಉಜ್ವಲಾ ವಿ ಯು
ನವರಾತ್ರಿ ಹಬ್ಬದ ಮೂರನೇ ದಿನದಂದು ದುರ್ಗಾ ದೇವಿಯ ಮೂರನೇ ರೂಪವಾದ ತಾಯಿ ಚಂದ್ರಘಂಟಾಳನ್ನು ಆರಾಧಿಸಲಾಗುತ್ತದೆ. ದುರ್ಗಾ ದೇವಿಯ ಈ ಅವತಾರವನ್ನು ಪೂಜಿಸುವುದರಿಂದ ವ್ಯಕ್ತಿಯ ಪಾಪಗಳು ನಶಿಸಿ, ಧೈರ್ಯ ಮತ್ತು ಸ್ಥೈರ್ಯವನ್ನು ಪಡೆದುಕೊಳ್ಳುತ್ತಾನೆ.
![](https://kannada.travel/wp-content/uploads/2023/10/Chandraghanta.png)
ಸಿಂಹದ ಮೇಲೆ ಕುಳಿತಿರುವ ಭಂಗಿಯಲ್ಲಿರುಲ ಚಂದ್ರಘಂಟಾ ದೇವಿಯು ಕೈಯಲ್ಲಿ ಖಡ್ಗ, ತ್ರಿಶೂಲ, ಬಿಲ್ಲು ಮತ್ತು ಗದೆ ಹಿಡಿದಿದ್ದಾಳೆ. ಅವಳ ಹಣೆಯ ಮೇಲೆ ಘಂಟಾಕಾರದ ಅರ್ಧ ಚಂದ್ರ ಇರುವುದರಿಂದ ಅವಳನ್ನು “ಚಂದ್ರಘಂಟಾ” ಎಂದು ಕರೆಯಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ತಾಯಿ ಚಂದ್ರಘಂಟಾ ರಾಕ್ಷಸರನ್ನು ನಾಶಮಾಡಲು ಅವತರಿಸಿದಳು. ಈಕೆಯು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಎಂಬ ಮೂರು ದೇವರುಗಳ ಶಕ್ತಿಯನ್ನು ಹೊಂದಿದ್ದಾಳೆ.
ಕೆಂಪು ಬಣ್ಣದಲ್ಲಿ ಕಂಗೊಳಿಸುವ ದೇವಿಯು ಮಣಿಪುರ ಚಕ್ರದ ಅಧಿದೇವತೆಯಾಗಿದ್ದಾಳೆ. ಈ ದಿನ ದೇವಿಗೆ ಕೆಂಪು ಬಣ್ಣದ ವಸ್ತ್ರಾಲಂಕಾರ ಮಾಡುವುದರ ಮೂಲಕ ಪೂಜೆಯನ್ನು ಮಾಡಲಾಗುತ್ತದೆ.
ಪಾರ್ವತಿ ದೇವಿಯು ಕಠಿಣವಾದ ತಪಸ್ಸನ್ನಾಚರಿಸಿ, ಶಿವನನ್ನು ಮದುವೆಯಾಗುವ ವರವನ್ನು ಪಡೆಯುತ್ತಾಳೆ. ವಿವಾಹದ ಸಂದರ್ಭದಲ್ಲಿ ಸಕಲ ಶಕ್ತಿಯ ಅಧಿದೇವತೆಯಾದ ಪಾರ್ವತಿಯು ಚಂದ್ರಘಂಟಾ ರೂಪವನ್ನು ತಾಳಿ ಶಿವನನ್ನು ವರಿಸುತ್ತಾಳೆ.
ಮೈಸೂರು ದಸರಾ 3ನೇ ದಿನದಂದು ನಡೆದ ಮತ್ತು ಆಯೋಜಿತ ಕಾರ್ಯಕ್ರಮಗಳ ವಿವರ:
![](https://kannada.travel/wp-content/uploads/2023/10/images-2023-10-17T161042.129.jpeg)
ಮೈಸೂರು ದಸರಾದ ಮೂರನೇ ದಿನವೂ ಸಹ 11 ಪ್ರಮುಖ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆ ಆಗಿವೆ. ಇಂದು ಬೆಳಗ್ಗೆ 11 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ ಲಲಿತಕಲೆ ಹಾಗೂ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್ಸಿ.ಮಹದೇವಪ್ಪ ಚಾಲನೆ ನೀಡಿದರು. ಬೆಳಗ್ಗೆ 11.30ಕ್ಕೆ ಕಾವ್ಯ ಸಂಭ್ರಮ, ಹಾಸ್ಯ ಚುಟುಕು ಕಾರ್ಯಕ್ರಮ ನಡೆಯಿತು, ಈ ಕಾರ್ಯಕ್ರಮವನ್ನುಸಾಹಿತಿ ಜಯಂತ್ ಕಾಯ್ಕಿಣಿ ಅವರು ಉದ್ಘಾಟಿಸಿದರು.
ಅರಮನೆ ವೇದಿಕೆಯಲ್ಲಿ ಅಕ್ಟೋಬರ್ 17ರಂದು ಸಂಜೆ 5 ರಿಂದ 5.30 ರವರೆಗೆ ಕೊಡಗಿನ ಗಿರಿಜನ ಸಮಗ್ರ ಅಭಿವೃದ್ಧಿ ಕಲಾ ಸಂಸ್ಥೆಯ ಸುನಿತ ಮತ್ತು ತಂಡದಿಂದ ಗಿರಿಜನ ಬುಡಕಟ್ಟು ನೃತ್ಯ ಇದೆ. ನಂತರ ಉಸ್ತಾದ್ ರಫೀಕ್ ಖಾನ್ ಮತ್ತು ವಿದ್ಯಾನ್ ಅಂಕುಶ್ ಎನ್ ನಾಯಕ್ ಅವರಿಂದ ವಾದ್ಯ ಸಂಗೀತ, ಚಿಮತನ್ ವಿಕಾಸ್ ಫೀಟ್ ಪ್ರಾಜೆಕ್ಟ್ ಎಕ್ಸಡಸ್ ತಂಡದಿಂದ ನಾಟಕ,ಬದ್ರಿ ದಿವ್ಯ ಭೂಷಣ್ ಅವರ ಭೂಷಣ್ಸ್ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ನಿಂದ ಭರತನಾಟ್ಯ, ವಿದ್ವಾನ್ ಶಶಾಂಕ್ ಸುಬ್ರಹ್ಮಣ್ಯಂ ಮತ್ತು ವಿದ್ವಾನ್ ರಾಕೇಶ್ ಚೌರಾಸಿಯಾ ಅವರಿಂದ ಕನ್ನಡ – ಹಿಂದೂಸ್ತಾನಿ ಜುಗಲ್ ಬಂದಿ ವಾದ್ಯಸಂಗೀತ ಕಾರ್ಯಕ್ರಮಗಳು ನಡೆಯಲಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.