ಕಾಲ್ನಡಿಗೆ ಮೂಲಕ ಸೈಬೀರಿಯಾ ಸಂಚಾರದ ಕನಸು ಕಂಡ ರೋಹನ್ ಅಗರ್ವಾಲ್
ಒಂಟಿ ಪಯಣ ಒಂದು ರೀತಿ ಆನಂದ . ಆದರೆ ಕಾಲ್ನಡಿಗೆಯಲ್ಲಿ ಒಂಟಿ ಪಯಣ ಮಾಡುವವರ ಸಂಖ್ಯೆ ಅತಿ ವಿರಳ. ಬಹುತೇಕರು ದೇಶ ಸುತ್ತುವ ಕನಸು ಕಂಡವರೆ ಆದರೆ ಕೆಲವರು ಹಣಕಾಸಿನ ಅಡಚಣೆಯಿಂದ ಆ ಕನಸನ್ನು ಕೈ ಬಿಟ್ಟವರು. ಆದರೆ ಮಹಾರಾಷ್ಟ್ರದ 19 ವರ್ಷದ ಹುಡುಗನೊಬ್ಬ ಪಾದಯಾತ್ರೆಯ ಮೂಲಕವೇ ಸೈಬೀರಿಯಾ ಮುಟ್ಟುವ ಕನಸು ಕಂಡಿದ್ದಾನೆ. ದೇಶ ಸುತ್ತಬೇಕು ಎನ್ನುವ ಗುರಿಯೊಂದಿಗೆ ಈಗಾಗಲೇ ಹಲವು ರಾಜ್ಯಗಳನ್ನು ಸುತ್ತಿದ್ದಾನೆ ಮಹಾರಾಷ್ಟ್ರದ 19ರ ಹರೆಯದ ಹುಡುಗ ರೋಹನ್ ಅಗರ್ವಾಲ್.
ನವ್ಯಶ್ರೀ ಶೆಟ್ಟಿ
ಇದು ದೇಶ ಸುತ್ತಲು ಹೋರಟ ಯುವಕನ ಕಥೆ. ದೇಶ ಸುತ್ತಬೇಕು ಎನ್ನುವ ಕನಸು ಕಾಣುವ ಹಲವರಿಗೆ ಜವಾಬ್ದಾರಿಗಳು ,ಕರ್ತವ್ಯ ,ಹಣಕಾಸು ಹೀಗೆ ನಾನಾ ರೀತಿಯ ಅಡ್ಡಿಗಳಿಂದ ಅವರ ಕನಸು ಅರ್ಧಕ್ಕೆ ಬಂದು ನಿಂತಿರುತ್ತದೆ. ಆದರೆ ಈ ಹುಡುಗ ಒಂಟಿಯಾಗಿ ಕಾಲ್ನಡಿಗೆಯಲ್ಲಿಯೇ ದೇಶ ಸುತ್ತಲು ಹೊರಟಿದ್ದಾನೆ. ಈ ಹುಡುಗ ಮೂಲತಃ ಮಹಾರಾಷ್ಟ್ರದ ನಾಗಪುರ ಮೂಲದವನು. 19ರ ಹರೆಯದ ರೋಹನ್ ಅಗರ್ವಾಲ್ ಆತ್ಮ ವಿಶ್ವಾಸ , ದೃಢ ನಿರ್ಧಾರ ಎಲ್ಲರಿಗೆ ಸ್ಪೂರ್ತಿ.
ರಸ್ತೆ ವಿಶ್ವವಿದ್ಯಾನಿಲಯ ಇದ್ದಂತೆ.
ರೋಹನ್ ಅಗರ್ವಾಲ್ ಇನ್ನೂ ಪದವಿ ಓದುತ್ತಿದ್ದ ಹುಡುಗ. ತರಗತಿಯ ಶಿಕ್ಷಣ ಪಾಠಕ್ಕಿಂತ ಹೊರಗಿನ ಪಾಠಗಳಿಂದ ಜ್ಞಾನ ಹೆಚ್ಚು ಎನ್ನುವ ಅರಿವು ರೋಹನ್ ಗೆ ಆಗಿತ್ತು. ಗುರುಕುಲ ಪದ್ಧತಿಯ ಮಹತ್ವವನ್ನು ಸಾರುವ ಉದ್ದೇಶಕ್ಕೆ ಈತ ದೇಶ ಪರ್ಯಟನೆ ಹೊರಟಿದ್ದಾನೆ. ರಸ್ತೆಯ ನನ್ನ ವಿಶ್ವ ವಿದ್ಯಾನಿಲಯ ಎನ್ನುವ ಗುರಿಯೊಂದಿಗೆ ದೇಶ ಸುತ್ತುತ್ತಿದ್ದಾರೆ.
ಬೆನ್ನಿನ ಮೇಲೆ ದೊಡ್ಡದಾದ ಬ್ಯಾಗು , ಬ್ಯಾಗ್ ನಲ್ಲಿ ಕೆಲವೇ ಕೆಲವು ಬಟ್ಟೆ , ಮೊಬೈಲ್ , ಚಾರ್ಜರ್ , ಪವರ್ ಬ್ಯಾಂಕ್. ಆ ಬ್ಯಾಗಿನ ಮೇಲೆ ಬೋರ್ಡೋಂದನ್ನು ಹಾಕಿಕೊಂಡು ರಸ್ತೆ ಮೇಲೆ ನಡೆದುಕೊಂಡೇ ಹೋಗುವ ಈತನನ್ನು ಕಂಡು ಮಾತನಾಡಿಸುವ ಜನರು, ಈತನ ಕುರಿತು ತಿಳಿದು ಅಚ್ಚರಿ ಪಡುತ್ತಿದ್ದಾರೆ.
ವಾರಣಾಸಿಯಿಂದ ಪ್ರಯಾಣ ಆರಂಭ
ರೋಹನ್ ಅಗರ್ವಾಲ್ ಪ್ರಯಾಣ ಆರಂಭವಾಗಿದ್ದು ಪವಿತ್ರ ನಗರ ವಾರಣಾಸಿಯಿಂದ. 2020ರ ಆಗಸ್ಟ್ 25 ರಿಂದ ರೋಹನ್ ಅಗರ್ವಾಲ್ ಕಾಲ್ನಡಿಗೆಯ ಮೂಲಕ ದೇಶ ಪರ್ಯಟನೆ ಆರಂಭವಾಗಿದ್ದು. ಚರ್ಚ್ ,ಮಸೀದಿ, ದೇವಸ್ಥಾನ ಎನ್ನುವ ಯಾವುದೇ ಭಿನ್ನತೆ ಇಲ್ಲದೆ ಈ ಹುಡುಗ ಎಲ್ಲ ಧಾರ್ಮಿಕ ಸ್ಥಳಗಳಿಗೂ ಭೇಟಿ ಕೊಟ್ಟಿದ್ದಾನೆ. ಹಾಗೆ ಹಲವು ಪವಿತ್ರ ಸ್ಥಳಗಳು ರೋಹನ್ ಗೆ ಆಶ್ರಯ ಹಾಗೂ ಆಹಾರಗಳನ್ನು ನೀಡಿವೆ. ಆರಂಭದಲ್ಲಿ ರೋಹನ್ ದೇಶ ಸಂಚಾರ ನಿರ್ಧಾರಕ್ಕೆ ಹೆತ್ತವರ ಬೆಂಬಲ ಇರಲಿಲ್ಲ. ಕೊನೆಗೂ ಹೆತ್ತವರನ್ನು ಒಪ್ಪಿಸಿ ದೇಶ ಪರ್ಯಟನೆ ಆರಂಭಿಸಿದ್ದು.
ನೀವು ಇದನ್ನು ಇಷ್ಟ ಪಡಬಹುದು:ಕಾಶ್ಮೀರದಿಂದ ಕನ್ಯಾಕುಮಾರಿಗೆ 180 ದಿನದಲ್ಲಿ 5,000 ಕಿಮೀ ನಡೆದ ಶುಭಮ್
ಹುಟ್ಟೂರಾದ ನಾಗಪುರದಿಂದ ವಾರಣಾಸಿ ತನಕ ಸ್ವಂತ ದುಡಿಮೆಯ 2500ರೂ ಹಣ ವ್ಯಯಿಸಿ ತಲುಪಿದ್ದರು. ಆ ಬಳಿಕ ಅವರ ಅವರ ಪ್ರಯಾಣಕ್ಕೆ ಯಾವುದೇ ರೀತಿಯ ಹಣ ಖರ್ಚು ಮಾಡಿಲ್ಲ.
ಈಗಾಗಲೇ 15 ರಾಜ್ಯ ಸುತ್ತಿರುವ ರೋಹನ್
ಕಳೆದ ವರ್ಷ ಆಗಸ್ಟ್ ತಿಂಗಳಿಂದ ಆರಂಭವಾದ ಇವರ ದೇಶ ಸುತ್ತುವ ಕನಸಿನ ಯಾತ್ರೆ ಈಗಾಗಲೇ 420 ಕ್ಕೂ ಹೆಚ್ಚು ದಿನಗಳನ್ನು ಕಳೆದಿದೆ. 12 ರಾಜ್ಯ ಹಾಗೂ 3 ಕೇಂದ್ರಾಡಳಿತ ಪ್ರದೇಶಗಳು ಸುತ್ತಿ ತಮ್ಮ ಒಂಟಿ ಪಯಣವನ್ನು ಮುಂದುವರೆಸಿದ್ದಾರೆ ರೋಹನ್. ಭಾರತದ ಸಂಸ್ಕೃತಿಯನ್ನು ತಿಳಿದುಕೊಳ್ಳುವುದು ಹಾಗೆ ಇತರರಿಗೆ ತಿಳಿಸುವುದು ಕೂಡ ಈ ಪ್ರವಾಸದ ಒಂದು ಉದ್ದೇಶ ಕೂಡ ಹೌದು. ಪ್ರವಾಸದ ಮಧ್ಯ ಜನರಿಗೆ ಪ್ಲಾಸ್ಟಿಕ್ ತೊಂದರೆಗಳ ಬಗ್ಗೆ ಕೂಡ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಪ್ರವಾಸದ ಮಧ್ಯೆ ರೋಹನ್ ಸ್ವಯಂ ಪ್ರೇರಿತರಾಗಿ ಹಲವು ಎನ್.ಜಿ. ಒ ,ಹೋಟೆಲ್, ಡಾಬಾ ,ಹಾಸ್ಟೆಲ್ ,ರೆಸಾರ್ಟ್ ಇನ್ನಿತರ ಕಡೆ ಸಣ್ಣ ಪುಟ್ಟ ಕೆಲಸ ಮಾಡಿದ್ದಾರೆ. ಕರ್ನಾಟಕಕ್ಕೆ ಕೂಡ ಭೇಟಿ ಕೊಟ್ಟಿರುವ ರೋಹನ್ , ಕರ್ನಾಟಕದ ಕರಾವಳಿ ಮಾರ್ಗವಾಗಿ ಗೋವಾ ರಾಜ್ಯಕ್ಕೆ ಪ್ರಯಾಣ ಬೆಳೆಸಿದ್ದಾರೆ. 14 ತಿಂಗಳಲ್ಲಿ ರಾಜಸ್ತಾನ, ಹರಿಯಾಣ, ದೆಹಲಿ, ಉತ್ತರಾಖಂಡ, ಹಿಮಾಚಲ ಪ್ರದೇಶ, ಚಂಡೀಗಡ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಪಾಂಡಿ ಚರಿ, ಕೇರಳ, ಕರ್ನಾಟಕವನ್ನು ಕಾಲ್ನಡಿಗೆಯಲ್ಲೇ ಸಂಚರಿಸಿದ್ದಾರೆ. ರೋಹನ್ ಪ್ರತಿ ದಿನ 20-30ಕಿಮೀ ನಡೆಯುತ್ತಾರೆ.
ಕಾಸರಗೋಡು ಮಾರ್ಗವಾಗಿ ಕರ್ನಾಟಕ ಪ್ರವೇಶಿಸಿದ್ದ ರೋಹನ್ ಕುದ್ರೋಳಿ ಗೋಕರ್ಣನಾಥೇಶ್ವರ, ಮಂಗಳದೇವಿ ದೇವಸ್ಥಾನ ,ಬಳಿಕ ಉಡುಪಿ ಉತ್ತರ ಕನ್ನಡ ಮಾರ್ಗವಾಗಿ ಗೋವಾ ತಲುಪಿದ್ದಾರೆ. ಮಾರ್ಗಮಧ್ಯೆ ಜನರು ನೀಡುವ ಆಹಾರ ಸೇವಿಸುತ್ತಾ, ಸಿಕ್ಕಲ್ಲಿ ಆಶ್ರಯವನ್ನು ಪಡೆದು ಯಾತ್ರೆ ಮುಂದುವರೆಸುತ್ತಾರೆ. ರಸ್ತೆಯಲ್ಲಿ ವಾಹನ ಸವಾರರಿಂದ ,ಎತ್ತಿನ ಗಾಡಿಗಳಿಂದ ಲಿಫ್ಟ್ ಪಡೆದುಕೊಂಡು 50-100ಕಿಮೀ ಸಂಚರಿಸುತ್ತಾರೆ.
ರೋಹನ್ ಗೆ ದೇಶ ಸುತ್ತುವ ಕಾರ್ಯ ಆರಂಭಿಸುವ ಮೊದಲು ಇಂಗ್ಲಿಷ್, ಹಿಂದಿ, ಮರಾಠಿ ಭಾಷೆ ಮಾತ್ರ ಗೊತ್ತಿತ್ತು. ಆದರೆ ಈಗ ರಾಜಸ್ತಾನಿ, ಪಂಜಾಬಿ, ಮಲೆಯಾಳಿ, ಉತ್ತರಾಖಂಡಿಯನ್ನೂ, ಸ್ವಲ್ಪ ಸ್ವಲ್ಪ ಕಲಿತಿದ್ದಾರೆ.
ಸೈಬೀರಿಯಾಕ್ಕೆ ಹೋಗುವ ಕನಸು.
ಕಳೆದ ವರ್ಷ ಪ್ರವಾಸ ಆರಂಭಿಸುವ ಹೊತ್ತಿನಲ್ಲಿಯೇ ರೋಹನ್ ದೇಶ ಸುತ್ತಿ ಅಂತಿಮವಾಗಿ ಸೈಬಿರಿಯಾ ಹೋಗಬೇಕು ಎನ್ನುವ ಕನಸು ಕಂಡಿದ್ದರು . ಸೈಬಿರಿಯಾ ವಿಶ್ವದ ಅತ್ಯಂತ ಶೀತಲ ಪ್ರದೇಶ. ಇಲ್ಲಿ ತನಕ ಯಾವುದೇ ಭಾರತೀಯರು ಇಲ್ಲಿಗೆ ಭೇಟಿ ನೀಡಿಲ್ಲ. ಹಾಗಾಗಿ ತಾನು ಸೈಬೀರಿಯಾ ಹೋಗಬೇಕು ಎನ್ನುವುದು ರೋಹನ್ ಅಗರ್ವಾಲ್ ಆಸೆ.
ಮುಂದಿನ ಎರಡು ವರ್ಷಗಳ ಕಾಲ ಭಾರತವನ್ನು ಸಂಚರಿಸಿ ನಂತರ ಬಾಂಗ್ಲಾ ಭೂತಾನ್, ನೇಪಾಳ, ಮ್ಯಾನ್ಮಾರ್, ಥಾಯ್ಲೆಂಡ್, ಕಾಂಬೋಡಿಯಾ, ಲಾವೋಸ್, ವಿಯೆಟ್ನಾಮ್, ಚೀನಾ, ಮುಂಗೋಲಿಯಾ, ರಷ್ಯಾ, ನೈಜೀರಿಯಾಕ್ಕೆ ತೆರಳಿ, ಅಲ್ಲಿಂದ ಒಮ್ಯಾಕೋನ್ ಎಂಬ ಜಗತ್ತಿನ ಅತ್ಯಂತ ಚಳಿ ಪ್ರದೇಶ ತಲುಪುವ ಆಸೆ ಇವರದ್ದು .
ಭಾರತವನ್ನು ಸುತ್ತಾಡಿ ಚೀನಾ ಮಾರ್ಗವಾಗಿ. ವಿಶ್ವದ ಅತ್ಯಂತ ಶೀತಲ ಪ್ರದೇಶ ರಷ್ಯಾದ ಸೈಬೀರಿಯಾದ ಒಮ್ಯಾಕೋನ್ ಕಾಲ್ನಡಿಗೆ ಮೂಲಕ ರೋಹನ್ ತಲುಪಲು ಇನ್ನೂ 8-9 ವರ್ಷಗಳು ಬೇಕಾಗಬಹುದು. ಹಲವು ಮಹತ್ವದ ಉದ್ದೇಶಗಳ ಜೊತೆಗೆ ,ಜನರಲ್ಲಿ ಅರಿವು ಮೂಡಿಸುತ್ತಾ ಸೈಬೀರಿಯಾ ನೋಡಲು ಹೊರಟಿರುವ ರೋಹನ್ ಆಸೆ ಈಡೇರಲಿ ಎನ್ನುವುದು ಎಲ್ಲರ ಆಶಯ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.