ಎಂಜಿಎಂ ಕಾಲೇಜಿನ ಹುಡುಗಿ ಬರೆದ ಮಂಗಳೂರಿನ ಅನಿರೀಕ್ಷಿತ ಪಯಣದ ಕಥೆ
ಪ್ರವಾಸ ಪ್ರತಿ ಬಾರಿ ನಾವು ಅಂದುಕೊಂಡಂತೆ ಇರುವುದಿಲ್ಲ. ನಿರಾಸೆ, ನಿರೀಕ್ಷೆ,ಖುಷಿ, ಸಮಾಧಾನ ನಿರಾಳತೆ ಎಲ್ಲವೂ ತುಂಬಿರುತ್ತದೆ. ಅದೇ ರೀತಿಯ ಒಂದು ಸುತ್ತಾಟದ ಕಥೆಯಿದು. ಮಂಗಳೂರಿನ ತಣ್ಣೀರು ಬಾವಿ ಬೀಚ್ ನೋಡುವ ಆಸೆ ನಿರಾಸೆಯಾಗಿ, ತಣ್ಣೀರು ಬಾವಿ ಪಾರ್ಕ್ ನೋಡಿ ಬಂದ ಸ್ನೇಹಿತರ ಸ್ಟೋರಿ . ಎಂಜಿಎಂ ಕಾಲೇಜಿನ ಹುಡುಗಿ ಮಹಾಲಕ್ಷ್ಮಿ ದೇವಾಡಿಗ ಬರೆದ ಮಂಗಳೂರು ಪ್ರಯಾಣದ ಕಥೆ.
- ಮಹಾಲಕ್ಷ್ಮಿ ದೇವಾಡಿಗ
ನಾವೊಂದು ಯೋಚಿಸಿದರೆ ಕಾಲ ಇನ್ನೊಂದು ಯೋಚಿಸುತ್ತದೆ ಎನ್ನುವುದು ಕೆಲವರು ಬಾರಿ ನಮಗೆ ಸುತ್ತಾಟದ ವೇಳೆ ಅರಿವಿಗೆ ಬಂದಿತ್ತು. ನಾವು ಪ್ಲಾನ್ ಮಾಡಿದ ಪ್ರವಾಸದ ಯೋಜನೆಗಳು ಕೆಲವೊಮ್ಮೆ ಯಶಸ್ವಿ ಆಗಿಲ್ಲ. ಆದರೆ ಕೆಲವೊಂದು ಅನಿರೀಕ್ಷಿತ ಪಯಣ ಖುಷಿ ಕೊಟ್ಟಿತ್ತು. ನಿರೀಕ್ಷೆ, ನಿರಾಳತೆ, ನಿರಾಸೆ, ಖುಷಿ, ಅನುಭಗಳ ಜೊತೆಗೆ ಸದಾ ನಮ್ಮ ಪ್ರವಾಸ ಸಾಗುವುದು.
ಒಂದು ಅನಿರೀಕ್ಷಿತ ಪ್ರಯಾಣ
ಡಿಗ್ರಿ ಹೋದ ಬಳಿಕ ನಮ್ಮ ಪ್ರವಾಸಕ್ಕೆ ಜೊತೆಯಾಗಿದ್ದ ಸ್ನೇಹಿತೆ ತನ್ನ ಊರಿಗೆ ಹೊರಟಿದ್ದಳು. ಆಕೆ ತನ್ನ ಹುಟ್ಟೂರಾದ ಚಿಕ್ಕಮಗಳೂರು ಹೊರಟರೆ ಬರುವುದು ಅದೆಷ್ಟೋ ದಿನಗಳು ಕಳೆದ ಬಳಿಕವೇ ಎನ್ನುವುದು ನಮಗೆ ಗೊತ್ತಿತ್ತು. ಅವಳು ಹೊರಡುವ ಹಿಂದಿನ ದಿನ ಕರೆ ಮಾಡಿ ಎಲ್ಲಿಗಾದರೂ ಹೋಗುವ ಎಂದು ಕೇಳಿದ್ದಳು.
ಮಂಗಳೂರಿಗೆ ಹೋಗುವುದರ ತೀರ್ಮಾನ ಆಗಿತ್ತು . ಆದರೆ ಹೋಗುವುದಕ್ಕೆ ಗಾಡಿ ಇರಲಿಲ್ಲ . ಆದರೆ ಕೊನೆಗೆ ಕಾಲೇಜಿನ ಹತ್ತಿರದ ಸಮ್ಮಾನ ಹೋಟೆಲಿನ ರಾಜೇಶ್ ಅಣ್ಣನ ಗಾಡಿ ತೆಗೆದುಕೊಂಡು ನಮ್ಮ ಪಯಣ ಹೊರಟಿತು.
ತಣ್ಣೀರು ಬಾವಿ ಬೀಚ್ ನ ಬದಲಾಗಿ ಹೋದ ಪಾರ್ಕ್…
ಹೋಗುವ ಮಾರ್ಗದಲ್ಲಿ ನಮಗೊಂದು ಅನುಮಾನ ಶುರುವಾಗಿತ್ತು. ಹೇಗೋ ಮಂಗಳೂರಿಗೆ ಜರ್ನಿ ಆರಂಭಿಸಿದ್ದೇವೆ . ತಣ್ಣೀರು ಬಾವಿ ಬೀಚ್ ನೋಡಲು ಹೋಗುವುದು ಕೂಡ ನಿರ್ಧಾರ ಆಗಿತ್ತು. ಆದರೆ ಕೊರೋನಾದಿಂದ ಹೆಚ್ಚಿನೆಡೆ ಪ್ರವಾಸಿ ತಾಣಗಳಿಗೆ ಹೋಗುವುದನ್ನು ನಿಷೇಧಿಸಲಾಗಿತ್ತು. ತಣ್ಣೀರು ಬಾವಿ ಬೀಚ್ ಕೂಡ ಓಪನ್ ಇದೆಯೋ ಇಲ್ಲವೇ ಅನ್ನುವ ಅನುಮಾನ. ನಮ್ಮ ಅನುಮಾನ ನಿಜವಾಗಿತ್ತು. ತಣ್ಣೀರುಬಾವಿ ಬೀಚ್ ಮುಚ್ಚಲಾಗಿತ್ತು .ಪ್ರವಾಸಿಗರಿಗೆ ಪ್ರವೇಶವಿರಲಿಲ್ಲ. ಖುಷಿಯಿಂದ ತಣ್ಣೀರುಬಾವಿ ಬೀಚ್ ನೋಡಲು ಬಂದ ನಮಗೆ ನಿರಾಸೆ ಎದುರಾಗಿತ್ತು.
ನೀವು ಇದನ್ನು ಇಷ್ಟಪಡಬಹುದು: ಕರಾವಳಿಯಲ್ಲಿದೆ ಹಚ್ಚ ಹಸಿರಾದ ಶ್ರೀಮಂತಿಕೆ – ಅಡ್ಯಾರ್ ಜಲಪಾತ
ಆದರೆ ಅಲ್ಲಿದ್ದ ರಿಕ್ಷಾ ಡ್ರೈವರ್ ಒಬ್ಬರ ಸಲಹೆಯಂತೆ ತಣ್ಣೀರುಬಾವಿ ಗಿಂತ ಸ್ವಲ್ಪ ದೂರವಿರುವ ತಣ್ಣೀರುಬಾವಿ ಪಾರ್ಕ್ ಹೊರಟೆವು. ತಣ್ಣೀರುಬಾವಿ ಪಾರ್ಕ್ ಮುಚ್ಚಿರಲಿಲ್ಲ. ನಿರಾಸೆಯಲ್ಲಿದ್ದ ನಮಗೆ ಕೊಂಚ ಸಮಾಧಾನ.
ತುಂಬಾ ಜನರು ಕೂಡ ಅಲ್ಲೇ ಓಡಾಡುತ್ತಿದ್ದರು. ಅ ಸುತ್ತಮುತ್ತ ವಾತಾವರಣದ ಸೌಂದರ್ಯ ಸವಿಯುತ್ತಾ, ಕೆಲಕಾಲ ಅಲ್ಲಿ ಸಮಯ ಕಳೆದು ನಮ್ಮ ಪಯಣ ಮೂಲ್ಕಿಯ ಕಡೆ ಸಾಗಿತ್ತು.
ಮೂಲ್ಕಿಯ ಕೊಳಚಿಕಂಬಳಕ್ಕೆ ಹಲವು ಬಾರಿ ಹೋಗಿದ್ದೆವು.ಅಲ್ಲಿ ಶಾಂಭವಿ ನದಿ ನೋಡುವುದೇ ಚೆಂದ. ಶಾಂಭವಿ ತೀರದಲ್ಲಿದ್ದ ನಮ್ಮ ಸ್ನೇಹಿತನ ಮನೆಗೆ ಭೇಟಿ ನೀಡಿ, ಒಂದಷ್ಟು ಸಮಯ ಮಾತಾಡಿ ಹರಟೆ ಹೊಡೆದೆವು. ಮತ್ತೆ ಅಲ್ಲಿಂದ ಉಡುಪಿಗೆ ಮರಳಿ ಪಯಣ. ಆದರೆ ದಾರಿ ಮಧ್ಯ ಒಂದು ಗಾಡಿ ಕೈಕೊಟ್ಟಿತ್ತು. ಹೇಗೋ ಒಂದು ಸಾಹಸ ಮಾಡಿ ಉಡುಪಿ ಸೇರಿಕೊಂಡ ದಿನವದು.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ