ಪ್ರಶಾಂತ, ರಮಣೀಯ ಸ್ಥಳ ‘ಬಿಸಿಲೆಘಾಟ್ ‘
ಮಳೆಗಾಲದಲ್ಲಿ ನೋಡಲೇಬೇಕಾದ ಸ್ಥಳಗಳಲ್ಲಿ ‘ಬಿಸಿಲೆ ಘಾಟ್’ ಕೂಡ ಒಂದು. ಸುತ್ತಲೂ ಹಸಿರನ್ನು ಹೊದ್ದುಕೊಂಡಿರುವ ಈ ಸ್ಥಳಕ್ಕೆ, ಈ ಮಳೆಗಾಲದ ದಿನಗಳಲ್ಲಿ ನೀವು ಭೇಟಿ ನೀಡುವುದು ಸೂಕ್ತ.
- ಆಕರ್ಷ ಆರಿಗ
ಕರ್ನಾಟಕ ರಾಜ್ಯದ ಮಲೆನಾಡು ಪ್ರದೇಶವು ಅತ್ಯಂತ ಸುಂದರವಾದ ತಾಣ. ಮುಗಿಲನ್ನು ಚುಂಬಿಸಲೋ ಎದ್ದುನಿಂತಿರುವ ಬೆಟ್ಟಗುಡ್ಡಗಳು, ಅವುಗಳ ಕೆಳಗೆ ಹಾಲಿನ ನೊರೆಯಂತೆ ಇರುವ ನದಿಗಳು, ಎಲ್ಲೆಲ್ಲಿ ಇರುವ ಬೆಟ್ಟಗುಡ್ಡಗಳ ಮೇಲೆ ಬೆಳ್ಳಿ ಸುರಿದಿರುವ ಮೋಡಗಳು, ಹಕ್ಕಿಗಳ ಚಿಲಿಪಿಲಿ ಕಲವರವಗಳ ಸಂಗೀತ. ಇಂತಹ ಸೌಂದರ್ಯವನ್ನು ವರ್ಣಿಸಲು ಪಗಳು ಸಾಕಾಗಲ್ಲ. ನಿಸರ್ಗದ ಚೆಲುವನ್ನೆಲ್ಲಾ ಮೈಮೇಲೆ ಇಟ್ಟುಕೊಂಡಿರುವ “ಬಿಸಿಲೆ ಘಾಟ್”ಎಂಬ ಸುಂದರ ತಾಣಕ್ಕೆ ಸುಳ್ಯ ತಾಲೂಕಿನ ಖ್ಯಾತ ಫೋಟೋಗ್ರಾಫರ್ ಸುಮಂತ್ ನಿಡ್ಡಾಜೆ ಟ್ರಿಪ್ ಹೋದ ಅನುಭವವನ್ನು ಹಂಚಿಕೊಂಡಿದ್ದಾರೆ.
ಮಳೆಗಾಲದಲ್ಲಿ ಟ್ರಿಪ್ ಹೋಗುವುದು ಒಂದು ವಿಶೇಷ ಅನುಭವ. ದೈತ್ಯ ಅರಣ್ಯವನ್ನು ಹೊಂದಿದ ಬಿಸಿಲೆ ಘಾಟ್, ಏಷ್ಯಾ ಖಂಡದ ಪ್ರಮುಖ ಅರಣ್ಯಗಳಲ್ಲಿ ಒಂದಾಗಿದೆ. ಮಳೆಗಾಲಬಂದರೆ ಸಾಕು ಇನ್ನಷ್ಟು ಸುಂದರವಾಗಿ ಕಾಣುತ್ತದೆ. ಇಲ್ಲಿನ ಸ್ವಚ್ಛಂದತೆಯ ಹಸಿರಿನ ಪರಿಸರದ ನಡುವೆ ಮಂಜು ಮತ್ತು ಇಬ್ಬನಿ ಮಿಶ್ರಿತ ಪರಿಸರ ನೋಡುವುದೇ ಚಂದ.
ವೀಕ್ಷಣಾ ಗೋಪುರದಿಂದ ಈ ಸೌಂದರ್ಯವನ್ನು ನೋಡುವುದೇ ಚಂದ. ಜಿಟಿ ಜಿಟಿ ಮಳೆ ಹನಿಯೊಂದಿಗೆ, ಹಚ್ಚ ಹಸಿರಿನ ನಡುವಿನ ಹಿಮ ಸಿಂಚನದಲ್ಲಿ, ಭುವಿ ಮತ್ತು ಆಗಸವನ್ನು ಒಂದಾಗಿಸುವ ಬಿಳಿ ಮೋಡಗಳೊಂದಿಗೆ, ಕಾಫಿಯ ಘಮವನ್ನು ಆಸ್ವಾದಿಸುತ್ತಾ ಮಲೆನಾಡಿನ ನಿಸರ್ಗ ಸೌಂದರ್ಯವನ್ನು ಎರಡು ಕಣ್ಣಲ್ಲಿ ಸವಿಯುವ ಮಜವೇ ವಿಭಿನ್ನವಾಗಿರುತ್ತದೆ. ಒಂದು ಸಲ ಹೋದರೆ, ಮತ್ತೆ ಮತ್ತೆ ಹೋಗಬೇಕೆನ್ನಿಸುವ ಆಕರ್ಷಣೆಯ ತಾಣ.
ನೀವುಇದನ್ನುಇಷ್ಟಪಡಬಹುದು: ಕಾಫಿ ನಾಡಿನಲ್ಲಿ ಸ್ನೇಹಿತರ ಜೊತೆಗಿನ ಪಯಣದ ಕಥೆ
ಸುತ್ತಲೂ ಹಸಿರು ಹಕ್ಕಿಗಳ ಚಿಲಿಪಿಲಿ ಹಾಗೂ ಮಂಜು ಮತ್ತು ಮಳೆಯ ಸೆಣಸಾಟ ಈ ಅನುಭವಗಳನ್ನು ಅನುಭವಿಸಿದವರಿಗೆ ಮಾತ್ರ ವರ್ಣಿಸಲು ಸಾಧ್ಯ.ಈ ತಾಣವು ಮೂರು ಜಿಲ್ಲೆಗಳಿಗೆ ಹೊಂದಿಕೊಂಡಿರುವುದರಿಂದ ಪ್ರವಾಸಿಗರಿಗೆ ಅನುಕೂಲವಾಗಿರುವ ತಾಣ . ಬಿಸಿಲೆ ಘಾಟ್ ಅತ್ಯಂತ ರಮಣೀಯ ಸ್ಥಳ. ಆದ್ದರಿಂದ ಯುವಕರಿಂದ ಹಿಡಿದು ವೃದ್ಧರವರೆಗೂ ಎಲ್ಲಾ ವಯಸ್ಕರು ಈ ತಾಣಕ್ಕೆ ಭೇಟಿ ನೀಡುತ್ತಾರೆ. ಈ ತಾಣಕ್ಕೆ ಪ್ರವಾಸಿಗರ ದಂಡೇ ಬರುತ್ತದೆ ಇನ್ನುಮುಂದೆ ಆದರೂ ಇಲ್ಲಿಗೆ ಬರುವ ಜನರು ಪ್ಲಾಸ್ಟಿಕ್ ಹಾಗೂ ಇನ್ನಿತರ ವಸ್ತುಗಳನ್ನು ಎಸೆದು ಹೋಗಬಾರದು.
ಯಾವ ಸಂದರ್ಭದಲ್ಲಿ ಹೋದರೆ ಉತ್ತಮ?
ಮಳೆಗಾಲದಲ್ಲಿ ಬಿಸಿಲೆ ಘಾಟ್ ಗೆ ಹೋದರೆ ಒಂದು ಹೊಸ ಅನುಭವವನ್ನು ಪಡೆಯಬಹುದು. ಬೇಸಿಗೆ ಕಾಲದಲ್ಲಿ ಹೋಗಬಹುದು. ಆದರೆ ಅಷ್ಟು ಪ್ರಮಾಣದ ನೀರು ಇರಲ್ಲ .ಬೆಳಗ್ಗೆ ಅಥವಾ ಸಂಜೆ ಹೊತ್ತಲ್ಲಿ ಈ ರಮಣೀಯ ಸ್ಥಳಕ್ಕೆ ಭೇಟಿ ಆದರೆ ಉತ್ತಮ. ಬೆಳಗಿನ ಹೊತ್ತಿನಲ್ಲಿ ಮಂಜು ಕವಿದಿರುವ ವಾತಾವರಣ ಹಾಗೂ ಸೂರ್ಯನ ಕಿರಣ ಇರುವುದರಿಂದ ಬಿಸಿಲೆ ಘಾಟಿಗೆ ಇನ್ನಷ್ಟು ರಮಣೀಯತೆ ಬರುತ್ತದೆ. ಸಂಜೆ ಹೊತ್ತಿನಲ್ಲಿ ಸೂರ್ಯಾಸ್ತ ಜೊತೆಗೆ ತಂಪನೆಯ ಗಾಳಿ ಆ ತಾಣವನ್ನು ಇನ್ನಷ್ಟು ಕಂಗೊಳಿಸುತ್ತದೆ.
ಪ್ರವಾಸಿಗರ ಗಮನಕ್ಕೆ
ಸುಮಂತ್ ನಿಡ್ಡಾಜೆ ಪ್ರಕಾರ ನಾವು ಬೇರೆಯವರನ್ನು ದೂರುವ ಮೊದಲು, ನಮ್ಮ ಕರ್ತವ್ಯ ನಾವು ಪಾಲಿಸಬೇಕು. ಪ್ರವಾಸಕ್ಕೆ ಹೋದಾಗ ಎರಡು ಅಂಶವನ್ನು ಎಲ್ಲರೂ ಗಮನಿಸಲೇಬೇಕು. ಮೊದಲನೇದಾಗಿ ಆ ಜಾಗಕ್ಕೆ ಹೋದಾಗ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಹಾಗೂ ಅಲ್ಲಿರುವ ಪ್ರಾಣಿಗಳಿಗೆ ಯಾವುದೇ ಆಹಾರವನ್ನು ನೀಡದಿರುವುದು.
ಹೇಗೆ ಹೋಗುವುದು?
ಕರ್ನಾಟಕದ ಹಾಸನ ಜಿಲ್ಲೆಗೆ ಸೇರಿದ್ದು, ಸಕಲೇಶಪುರಕ್ಕೆ ತೆರಳಿದರೆ ಅಲ್ಲಿಂದ 50 ಕಿ. ಮೀ ದೂರ ಕ್ರಮಿಸಿದರೆ ಬಿಸಿಲೆಘಾಟ್ ತಲುಪಬಹುದು. ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋದವರು ಅಲ್ಲಿಂದ ಸುಮಾರು 20 ಕಿ.ಮೀ ಸಾಗಿದರೆ ಸಾಕು. ಕೊಡಗಿಗೆ ಭೇಟಿ ನೀಡುವ ಪ್ರವಾಸಿಗರು ತಾಲೂಕು ಕೇಂದ್ರದಲ್ಲೊಂದಾದ ಸೋಮವಾರಪೇಟೆಗೆ ತೆರಳಿ ಅಲ್ಲಿಂದ 40 ಕಿ.ಮೀ ದೂರವನ್ನು ಶಾಂತಳ್ಳಿ, ಕುಂದಳ್ಳಿ ರಸ್ತೆಯಲ್ಲಿ ವಣಗೂರು ಮೂಲಕ ಸಾಗಿದರೆ ಕೂಡುರಸ್ತೆ ಎಂಬ ಸ್ಥಳ ಸಿಗುತ್ತದೆ. ಅಲ್ಲಿಂದ ಎಡಕ್ಕೆ ತಿರುಗಿ ಮುಂದೆ ಸಾಗಿದರೆ ಬಿಸಿಲೆಘಾಟ್ ನ್ನು ತಲುಪಬಹುದು.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ