ದೂರ ತೀರ ಯಾನವಿಂಗಡಿಸದಸ್ಮರಣೀಯ ಜಾಗ

ಬಸ್ಸಿನಿಂದ ಬಿಸಾಕಿದ ವಸ್ತುಗಳನ್ನು ಹೆಕ್ಕಿದ ಆದಿವಾಸಿಯ ಊರಿಗೆ ಶುಭ ವಿದಾಯ: ಅಂಡಮಾನ್ 6

ಅಂಡಮಾನಿಗೆ ಶುಭ ವಿದಾಯ ಹೇಳುವ ದಿನದಂದು ಪ್ರಕೃತಿಯ ಅಚ್ಚರಿಗಳನ್ನು ಕಣ್ತುಂಬಿಕೊಂಡೆವು. ಪ್ರಕೃತಿ ಹಲವು ವೈಚಿತ್ರ್ಯಗಳ ಆಗರ. ‘ನೇಚರ್ ಇಸ್ ದ ಬೆಸ್ಟ್ ಟೀಚರ್’ ಎಂಬ ಎಂದೂ ಮರೆಯದಂತಹ ಪಾಠವನ್ನು ಕಲಿತೆವು!

  • ಶೀಲಾ ಭಂಡಾರ್ಕರ್

ಒಂದೂವರೆ ಕಿ.ಮಿಗಳಷ್ಟು ನಡೆದ ಮೇಲೆ ಲೈಮ್ ಸ್ಟೋನ್ ಕೇವ್ಸ್ ಹತ್ರ ಸಿಗುತ್ತದೆ. ಸಮುದ್ರದ ವಾತಾವರಣದಲ್ಲಿ ಲವಣದೊಳಗಿನ ಜೀವಾಣುಗಳಿಂದ ಸೃಷ್ಟಿಸಲ್ಪಟ್ಟ ನೈಸರ್ಗಿಕ ಲವಣದ ರಚನೆಗಳು.

ಗುಹೆಗಳ ಒಳಗೆ ನಾವು ಆದಷ್ಟು ಜಾಗ್ರತೆ ಯಾವುದನ್ನೂ ಮುಟ್ಟದೆ ನಡೆಯಬೇಕು. ಗೈಡ್ಸ್ ನಮ್ಮ ಜೊತೆ ಇರ್ತಾರೆ. ಪ್ರತಿಯೊಂದನ್ನೂ ವಿವರಿಸುತ್ತಾ, ಯಾವಯಾವುದೋ ಆಕಾರಗಳನ್ನು ನಮಗೆ ತೋರಿಸುತ್ತಾ ಮೊಬೈಲ್ ಬೆಳಕಿನಲ್ಲಿ ನಮ್ಮನ್ನು ಕರೆದುಕೊಂಡು ಹೋಗುತ್ತಾರೆ‌.

ಲಕ್ಷ ಲಕ್ಷ ವರ್ಷಗಳಿಗೂ ಹಳೆಯ ಈ ಗುಹೆಗಳು ಎಷ್ಟೋ ವರ್ಷಗಳವರೆಗೆ ಯಾರಿಗೂ ತಿಳಿಯದೆ ಇತ್ತು. ಈಗ ಕೆಲವು ವರ್ಷಗಳಿಂದ  ಸರಕಾರದಿಂದ ಅನುಮತಿ ದೊರಕಿದ ಮೇಲೆ ಕಟ್ಟೆಚ್ಚರಿಕೆ ವಹಿಸಿಕೊಂಡು ಪ್ರವಾಸಿ ತಾಣವಾಗಿದೆ. 

ಚಿತ್ರಕೃಪೆ: ಶೀಲಾ ಭಂಡಾರ್ಕರ್

ಲವಣದ ರಚನೆಗಳು ನೆಲದಿಂದಲೂ, ಮೇಲ್ಛಾವಣಿಯಿಂದಲೂ ಬೆಳೆಯುತ್ತಿವೆ. ನಮ್ಮ ಸ್ಪರ್ಶದಿಂದ ಆಲ್ಗೆಗಳು ಸತ್ತು ಬೆಳವಣಿಗೆ ನಿಂತುಹೋಗಬಹುದು ಎನ್ನುವ ಕಾರಣಕ್ಕೆ ಒಂದಿಷ್ಟೂ ಮುಟ್ಟುವ ಹಾಗೆಯೇ ಇಲ್ಲ. 

ಒಂದು ಗಂಟೆಗಳ ಕಾಲ ಈ ಗುಹೆಯ ಒಳಗೆ ಸಂಚಾರ ಮಾಡಿ ಹೊರಬರುವಾಗ ಅಲ್ಲಿ ಲಿಂಬೆಹಣ್ಣಿನ ಶರ್ಬತ್ ಅಂಗಡಿಗಳಿದ್ದವು. ಗುಹೆಯ ಆಚೆ ಕಡೆಯ ಭಾಗದಲ್ಲಿ ಹಿಂದಿ ಮಾತನಾಡುವ ಕೆಲವು ಜನರು ನೆಲಸಿದ್ದಾರೆ. ಹಸುಗಳನ್ನು ಸಾಕಿಕೊಂಡು, ಗದ್ದೆಯಂತಹ ಪ್ರದೇಶ, ನೋಡಲು ನಮ್ಮ ಊರುಗಳ ಹಾಗೆಯೇ ಕಾಣುತ್ತಿತ್ತು.

ಉಪ್ಪಿನ ಗುಹೆಗಳಿಂದ ಹೊರಬಂದಾಗ ಗಂಟಲು ಒಣಗಿತ್ತು

ಬಿಸಿಲು ಏರುತಿತ್ತು, ಉಪ್ಪಿನ ಗುಹೆಗಳನ್ನು ಹೊಕ್ಕು ಹೊರಬಂದಾಗ ಗಂಟಲೆಲ್ಲ ಒಣಗಿ ಹೋಗಿತ್ತು. ದೊಡ್ಡ ದೊಡ್ಡ ಲೋಟಗಳಲ್ಲಿ ನಿಂಬೂ ಪಾನೀಯ ಕುಡಿದು ಮುಂದೆ ಸಾಗುವಾಗ ಜೀವ ತಂಪಾಯ್ತು. 

ನೀವುಇದನ್ನುಇಷ್ಟಪಡಬಹುದು: ಸ್ಕೂಬಾ ಡೈವಿಂಗ್ ಹೋದಾಗ ಕಡಲಾಳದಲ್ಲಿ ಉಸಿರು ಗಟ್ಟಿದ ಅನುಭವ: ಅಂಡಮಾನ್ 5

ಮುಂದೆ ಆ ಗದ್ದೆಯ ಬದುವಿನಂತಹ ದಾರಿಯಲ್ಲಿ ಒಂದು ಕಿ.ಮಿನಷ್ಟು ನಡೆದು ನಾವು ತಲುಪಿದ್ದು ಮಡ್ ವೊಲ್ಕೆನೊ.(Mud Volcano) ಆದರೆ ಅದು ಎತ್ತರ ಪ್ರದೇಶದಲ್ಲಿ ಇದ್ದು ಕೆಲವು ಮೆಟ್ಟಿಲುಗಳನ್ನು ಹತ್ತಬೇಕಿತ್ತು. 

ಚಿತ್ರಕೃಪೆ:ಶೀಲಾ ಭಂಡಾರ್ಕರ್

ಮಡ್ ವೊಲ್ಕೆನೊ, ಭೂಮಿಯ ಅಡಿಯಲ್ಲಿ ಕೆಲವು ರಾಸಾಯನಿಕಗಳು ಕೊಳೆತು ಉಂಟಾದ ಗ್ಯಾಸ್ ನಿಂದಾಗಿ ಭೂಮಿಯನ್ನು ಬಿರಿದು ಕೆಸರು ಮೇಲಕ್ಕೆ ಚಿಮ್ಮುತ್ತದೆ. ಭೂಮಿಯ ತಳದಿಂದ ಕಲ್ಲಿನ ಚೂರುಗಳು, ಮರಳುಗಲ್ಲುಗಳು, ಸಮುದ್ರದ ಕೆಸರು, ಕೆಂಪು ಮತ್ತು ಹಸಿರು ಬಣ್ಣದ ಕಲ್ಲುಗಳು ಚಿಮ್ಮಿ ಮೇಲೆ ಬಂದು ಹರಿಯುತ್ತವೆ. 

ಬಿಸಿಯಾದ ಕೆಸರು ಹರಿದು ಬಂದು ನೋಡಲು ಸಿಮೆಂಟಿನಂತ ರಾಡಿಯಾಗಿ ನಿಂತಿತ್ತು. ಕೆಸರಿನ ಬುದ್ಬುದಗಳು, ನೀರ್ಗುಳ್ಳೆಗಳು ಆ ಜಾಗದಿಂದ ಹೊರಗೆ ಚಿಮ್ಮುತ್ತವೆ. 

ಅಂಡಮಾನ್ ದ್ವೀಪದಲ್ಲಿ ಒಟ್ಟು ಹನ್ನೊಂದು ಇಂತಹ ಮಣ್ಣಿನ ಜ್ವಾಲಾಮುಖಿಗಳಿವೆಯಂತೆ. ಅವುಗಳಲ್ಲಿ ಎಂಟು ಭಾರಟಾಂಗ್ ದ್ವೀಪದಲ್ಲೇ ಇವೆ. ಉಳಿದವು ಉತ್ತರ ಅಂಡಮಾನ್ ಪ್ರದೇಶದಲ್ಲಿವೆ.

ಮೇಲೆ ಹತ್ತಿ ಹೋಗಲು ಮೆಟ್ಟಿಲುಗಳಿವೆ. ಮಧ್ಯ ಮಧ್ಯ ನಡೆದು ಹೋಗುವ ದಾರಿ, ನಡುನಡುವೆ ಮೆಟ್ಟಿಲುಗಳು. ಹೋಗುವ ಮತ್ತು ಬರುವ ದಾರಿ ಸ್ವಲ್ಪ ಪ್ರಯಾಸದಾಯಕವಾಗಿದ್ದರೂ ಅಪರೂಪದ, ಇಂಥದ್ದೊಂದು ಸೃಷ್ಟಿಯ ವೈಚಿತ್ರ್ಯವು ನೋಡಲು ಸಿಕ್ಕಿತು. 

ಬಣ್ಣ ಹಸಿಯಾಗಿದೆ ಎಂದು ಬೋರ್ಡ್ ಹಾಕಿದ್ದರೂ ಒಮ್ಮೆ ಮುಟ್ಟಿ ನೋಡಿ ಪರೀಕ್ಷಿಸಬೇಕೆಂದು ಅನಿಸುವುದು ಸಹಜ. ಹಾಗೆಯೇ ಇಲ್ಲಿ ಬಿಸಿಯಾಗಿದೆ ಎಂದು ಹೇಳಿದ್ದರೂ, ಸಣ್ಣಗೆ ಹೊಗೆ ಬರುತ್ತಾ ಇದ್ದರೂ, ಮೆಲ್ಲ ಹರಿದು ಬರುತ್ತಿದ್ದ ಆ ರಾಡಿಯನ್ನು ಒಮ್ಮೆ ಬೆರಳಿನಿಂದ ಮುಟ್ಟಿದೆ. ಸುಡುವಂತಲ್ಲದಿದ್ದರೂ ಬಿಸಿ ಇತ್ತು. 

ಆದಿವಾಸಿ ನೋಡುವ ಕುತೂಹಲ

ಸ್ವಲ್ಪ ಹೊತ್ತು ಅಲ್ಲಿದ್ದು ವಾಪಸ್ ಕೆಳಗೆ ಬಂದೆವು. ಮತ್ತೆ ದೋಣಿ ಹತ್ತಿ ಭರಟಾಂಗ್ ಜೆಟ್ಟಿಗೆ ಬಂದು ಅಲ್ಲಿಂದ ಫೆರ್ರಿ ಕ್ರಾಸ್ ಮಾಡಿ ಇನ್ನೊಂದು ಭಾಗಕ್ಕೆ ಬಂದು ಅಲ್ಲಿ ಚಿಕ್ಕ ಮನೆಯಂತ ಹೋಟೆಲ್ ಒಂದರಲ್ಲಿ, ಬಹುಷಃ ಅದು ಒಂದೇ ಹೋಟೆಲ್ ಇರಬೇಕು ಅಲ್ಲಿ. ಊಟಕ್ಕೆಂದು ಕರೆತಂದರು. 

ಅಲ್ಲಿಂದ ಹೊರಡುವಾಗ ಎಲ್ಲರೂ ಅಂದರೆ ನಮ್ಮ ಯುವಪೀಳಿಗೆ,  ರಾಕೇಶ್ ಅವರನ್ನು ನೀವು ಆದಿವಾಸಿಗಳನ್ನು ತೋರಿಸಲೇ ಇಲ್ಲ ಎಂದು ಪೀಡಿಸುತಿದ್ದರು. 

ಈಗ ಸಿಗಬಹುದು ನೋಡೋಣ, ನಿಮ್ಮ ಅದೃಷ್ಟ ಚೆನ್ನಾಗಿದ್ದರೆ ಹೊರಗೆ ಬರುತ್ತಾರೆ  ಎಂದರು. ನಾವು ಬಂದ ಬಸ್ಸು ನಮಗಾಗಿ ಕಾದಿತ್ತು ಅಲ್ಲಿ. 

ಫೋಟೊ ತೆಗೆಯಬಾರದೆಂದು ಎಚ್ಚರಿಸಿದ್ದರೂ ಯಾರೋ ಮಹಿಳೆಯೊಬ್ಬರು ಆದಿವಾಸಿ ಮಹಿಳೆಯನ್ನು ಕಂಡಕೂಡಲೇ ತಮ್ಮ ಫೋನ್ ಕೈಗೆ ತಗೊಂಡು ಕ್ಲಿಕ್ ಮಾಡುವಾಗ ಫ್ಲಾಶ್ ಬೆಳಕು ಅದು ಹೇಗೆ ಆ ಆದಿವಾಸಿ ಮಹಿಳೆಗೆ ತಿಳಿಯಿತೋ, ಬಸ್ಸು ನಿಲ್ಲಿಸಿ ಹತ್ತಿ ಬಂದು ಆ ಫೋಟೊ ತೆಗೆದ ಮಹಿಳೆಯನ್ನೇ ಹಿಗ್ಗಾ ಮುಗ್ಗಾ ಥಳಿಸಿ ಹಾಕಿದ್ದು ಉದಾಹರಣೆಯಾಗಿ ಹೇಳಿ ನಮ್ಮನ್ನೆಲ್ಲಾ ಹೆದರಿಸಿ ಇಟ್ಟರು ರಾಕೇಶ್ ಸರ್.

ತುಂಬಾ ನಿಧಾನವಾಗಿ ಚಲಿಸುತ್ತವೆ ಅಲ್ಲಿ ವಾಹನಗಳು, ಪ್ರಕೃತಿ ಸೌಂದರ್ಯದ ಜೊತೆಗೆ ಆದಿವಾಸಿಗಳ ದರ್ಶನ ಭಾಗ್ಯ ಸಿಗಬಹುದೆನ್ನುವ ಸಣ್ಣ ಆಸೆಯಿಂದ ಕೂಡ. 

ಕಣ್ಣಿಗೆ ಬಿದ್ದ ಅಚ್ಚರಿ

ಒಬ್ಬರನ್ನಾದರೂ ತೋರಿಸಿಯೇ ತೋರಿಸುತ್ತೇವೆ ಎಂಬ ಆಶ್ವಾಸನೆ ನೀಡಿದ್ದರು ನಮ್ಮ ಬಸ್ ಡ್ರೈವರ್. ಮುಂದೆ ಮುಂದೆ ಸಾಗುತ್ತಿರುವಾಗ ಅಲ್ಲಿ ನೋಡಿ ಅಂದಿದ್ದು ಕೇಳಿಸಿತು.

ಅಲ್ಲಿ ಎಂದರೆ ಎಲ್ಲಿ ಎಂದು ನೋಡುವುದರೊಳಗೆ ಒಬ್ಬ ಆರು ಅಡಿಗಳಿಗಿಂತಲೂ ಎತ್ತರದ ಹದವಾದ ತೂಕದ ಕಟ್ಟು ಮಸ್ತಾದ ಕಪ್ಪು ಎಂದರೆ ಮಿರಿ ಮಿರಿ ಮಿಂಚುವ ಕಪ್ಪು ಬಣ್ಣದ ಆಕರ್ಷಕ ನಿಲುವಿನ ಆದಿವಾಸಿ ಯುವಕ ನಿಂತಿದ್ದ. ಮೈಮೇಲೆ ಬರ್ಮುಡಾ ಮಾತ್ರ ಧರಿಸಿದ್ದ. ಪಕ್ಕದಲ್ಲಿ ಅದೇ ನಿಲುವಿನ ಚಿಕ್ಕ ಗಾತ್ರ ಎನ್ನುವಂತಿದ್ದ ಒಂದು ಮಗುವಿತ್ತು. 

ಆ ದೃಶ್ಯ ಈಗಲೂ ಕಣ್ಣ ಮುಂದಿದೆ. ಅವನು ಯಾವ ವಾಹನವನ್ನೂ ನೋಡುತ್ತಿರಲಿಲ್ಲ. ನಮ್ಮಂತೆಯೇ ನಮ್ಮ ಹಿಂದೆ ಮುಂದೆ ವಾಹನಗಳು ಆಮೆ ವೇಗದಲ್ಲಿ ಚಲಿಸುತ್ತಾ ಇದ್ದವು. 

ಮತ್ತೆ ಮುಂದೆ ಹೋಗುತಿದ್ದಂತೆ ಒಬ್ಬಳು ಮಹಿಳೆ. ಅವಳು ಮಾತ್ರ ನೈಟಿ ಹಾಕಿಕೊಂಡಿದ್ದಳು. ಅಲ್ಲೊಂದು ಬಸ್ಸಿನವರು ಅವರ ಬಳಿ ಇದ್ದ ತಿನ್ನುವ ವಸ್ತುಗಳು, ಬಟ್ಟೆ, ಇನ್ನೂ ಏನೇನೋ ಹೊರಗೆ ಎಸೆಯುತಿದ್ದರು. ಆ ಹೆಂಗಸು ಬಗ್ಗಿ ಒಂದೊಂದನ್ನೂ ಹೆಕ್ಕುವುದರಲ್ಲೇ ಮಗ್ನಳಾಗಿದ್ದಳು. ಹಾಗೆಲ್ಲಾ ಏನೂ ಎಸೆಯಬೇಡಿ ಎಂದು ಮತ್ತೊಮ್ಮೆ ನಮ್ಮ ಮ್ಯಾನೇಜರ್ ನಮಗೆ ಹೇಳಿದರು. ಎಲ್ಲರೂ ಹೀಗೆ ಹೆಕ್ಕಿಕೊಳ್ಳುವುದಿಲ್ಲ, ಕೆಲವರು ಸಿಟ್ಟಾಗುತ್ತಾರೆ ಎಂದರು. 

ಮುಂದೆ ನಾವು ಕಾದು ನಿಂತಿದ್ದ ಗೇಟ್ ದಾಟಿ ಬಂದು ಬಸ್ ನಿಲ್ಲಿಸಿ, ಚಾ, ಕಾಫಿ ಕುಡಿಯುವವರಿಗೆ, ಶೌಚಾಲಯಕ್ಕೆ ಹೋಗುವವರಿಗೆಂದು ಸ್ವಲ್ಪ ಬಿಡುವು ಕೊಟ್ಟರು‌. 

ಇವತ್ತು ನಮಗೆ ಶಾಪಿಂಗ್ ಗೆ ಕರೆದುಕೊಂಡು ಹೋಗುತ್ತೇವೆಂದು ಹೇಳಿದ್ದರಲ್ಲಾ! ನಾವೂ ಬೇಗ ಹೋಗೋಣ ಎಂದು ಅವಸರ ಮಾಡುತಿದ್ದೆವು‌. 

ಈಗ ಬರುವಾಗ ಪೋರ್ಟ್ ಬ್ಲೇರ್ ನ ಬೇರೊಂದು ದಿಕ್ಕಿನಿಂದ ಬಸ್ಸು ಬಂದಿದ್ದರಿಂದ ಆ ಊರಿನ ಸಿಟಿಯಂತಹ ಭಾಗ ನೋಡಲು ಸಿಕ್ಕಿತು. ಸಿಗ್ನಲ್, ವಾಹನಗಳ, ಜನರ ಸಂದಣಿಯಿತ್ತು ಅಲ್ಲಿ. ಸಿಂಡಿಕೇಟ್ ಬ್ಯಾಂಕ್ ನ ಶಾಖೆ ನೋಡಿದೆವು. ಜೀವ ವಿಮಾ ಕಚೇರಿಯೂ ಇತ್ತು. ನೋಡಲು ಗೋವಾದಂತದ್ದೇ ಊರು. 

ಪೋರ್ಟ್ ಬ್ಲೇರಲ್ಲಿ ನಿರಾಸೆ

ಈಗ ನಮಗೆ ಬೇರೊಂದು ಭವ್ಯವಾದ ಹೋಟೆಲ್ ಲ್ಲಿ ತಂಗಲು ವ್ಯವಸ್ಥೆ ಮಾಡಿದ್ದರು. ಬೇಗ ಬೇಗ ನಮ್ಮ ರೂಮುಗಳನ್ನು ನೋಡಿ ಖರೀದಿಗೆಂದು ಹೊರಟು ಬಂದರೆ.. ಆರು ಗಂಟೆಗೆ ಅಂಗಡಿಗಳು ಬಂದ್. 

ಅಲ್ಲಿ ಸಂಜೆ ಐದೂವರೆ – ಆರು ಗಂಟೆಗೆಲ್ಲಾ ಸೂರ್ಯಾಸ್ತವಾಗುವುದರಿಂದ ಅಷ್ಟೇ ಬೇಗ ಅಂಗಡಿ ಮುಂಗಟ್ಟುಗಳೆಲ್ಲಾ ಮುಚ್ಚಲ್ಪಡುತ್ತವೆ. ನಾವು ಹೋಗುವುದರೊಳಗೆ ಸರ್ಕಾರಿ ಅಂಗಡಿಗಳೆಲ್ಲ ಮುಚ್ಚಿದ್ದವು. ಕೆಲವು ಖಾಸಗಿ ಅಂಗಡಿಗಳಲ್ಲಿ ಅವರು ಹೇಳಿದ್ದೇ ಬೆಲೆ. 

ಅಲ್ಲಿಗೆ ಅಂಡಮಾನ್ ಪ್ರವಾಸದ ಕೊನೆಯ ಹಂತಕ್ಕೆ ಬಂದು ತಲುಪಿದೆವು. ಮಾರನೆಯ ಬೆಳಿಗ್ಗೆ ಆರುಗಂಟೆಯ ವಿಮಾನದಲ್ಲಿ ನಾವು ವಾಪಸ್ ನಮ್ಮ ಮುಖ್ಯ ಭೂಮಿಗೆ ಮರಳುವುದು. ಎಲ್ಲರೂ ಐದು ಗಂಟೆಗೆ ತಯಾರಾಗಿ ಲಗ್ಗೇಜ್ ನೊಂದಿಗೆ ಹೊಟೇಲ್ ನ ಲಾಂಜ್ ನಲ್ಲಿ ಸೇರಬೇಕು. ಎಂದು ನಮಗೆ ಆದೇಶವಾಗಿತ್ತು. 

ಅಷ್ಟು ಬೆಳಿಗ್ಗೆ ನಮ್ಮ ಇಷ್ಟು ದಿನದ ಪ್ರವಾಸದಲ್ಲಿ ಜೊತೆಯಾಗಿದ್ದ ಹುಡುಗ ವಿಜಯ್ ನಮ್ಮನ್ನು ಮತ್ತೆ ವೀರ ಸಾವರ್ಕರ್ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲು ಬಂದಿದ್ದ. ಅತೀ ಉತ್ಸಾಹದ ಮನುಷ್ಯ. ಲವಲವಿಕೆಯ, ನಗುನಗುತ್ತಲೇ ಎಲ್ಲರನ್ನೂ ನಗಿಸುತ್ತಾ, ಚುರುಕಾಗಿ ಓಡಾಡುವ ಆ ಹುಡುಗನನ್ನು ಮರೆಯುವುದು ಸಾಧ್ಯವಿಲ್ಲವೇನೋ. 

ನಮ್ಮ ಲಗ್ಗೇಜ್‌ಗಳನ್ನು ಇಳಿಸಿ ಟ್ರಾಲಿಗಳಲ್ಲಿ ಇರಿಸಿಕೊಟ್ಟು ಅಷ್ಟೇ ಲಗುಬಗೆಯಿಂದ ನಮಗೆಲ್ಲಾ ವಿದಾಯ ಹೇಳಿ ಹೊರಡಲು ತಯಾರಾದವನನ್ನು ನಾವೇ ನಿಲ್ಲಿಸಿ ಸ್ವಲ್ಪ ದುಡ್ಡು ಕೈಗೆ ಕೊಟ್ಟೆವು. ಆಗ ನಮ್ಮ ಜೊತೆಯಿದ್ದವರೂ ಒಬ್ಬೊಬ್ಬರಾಗಿ ಕೊಡಲು ಶುರುಮಾಡಿದಾಗ ಭಾವುಕನಾಗಿ ಬಿಟ್ಟ ವಿಜಯ್. 

ನಮ್ಮಂತಹ ಎಷ್ಟೋ ಪ್ರವಾಸಿಗರನ್ನು ದಿನಾ ದಿನಾ ನೋಡುವ ಅವನಿಗೆ ನಾವು ಎಲ್ಲರಂತೆ ನಾಲ್ಕೈದು ದಿನಗಳ ಅತಿಥಿಗಳು ಮಾತ್ರ. ನಮ್ಮನ್ನು ಬಿಟ್ಟು ಹೊರಡುವಾಗ ಅವನಿಗೆ ಇನ್ನೊಂದು ತಂಡ ತಯಾರಾಗಿರಬಹುದು. ನಮ್ಮನ್ನು ಅವನು ಸುಲಭವಾಗಿ ಮರೆತು ಬಿಡಬಹುದು. ಆದರೆ ನಮ್ಮ ನೆನಪಿನಿಂದ ಅವನು ಅಷ್ಟು ಬೇಗ ಮಾಸಿ ಹೋಗುವವನಲ್ಲ. 

ಇಲ್ಲಿಯ ಯಾವುದೋ ಊರಿನಿಂದ ಎಷ್ಟೋ ವರ್ಷಗಳ ಹಿಂದೆ ಹೋಗಿ ಅಲ್ಲಿ ನೆಲೆಸಿದ್ದು ಅವರೆಲ್ಲಾ ಈಗ ಅಲ್ಲಿಯವರೇ ಆಗಿದ್ದಾರೆ. ಇಲ್ಲಿ ಹೆಚ್ಚಾಗಿ ಹಿಂದಿಯಲ್ಲೇ ಎಲ್ಲಾ ವ್ಯವಹಾರಗಳು ನಡೆಯುತ್ತವೆ. 

ನಮ್ಮ ವಿಮಾನ ನೇರ ಬೆಂಗಳೂರಿಗಿರಲಿಲ್ಲ. ಚೆನೈಯಲ್ಲಿ ಇಳಿದು ಮತ್ತೆ ಬೆಂಗಳೂರಿನ ವಿಮಾನ ಹತ್ತಬೇಕಿತ್ತು. ಬೆಂಗಳೂರು ತಲುಪುವುದರೊಳಗೆ ಮೈಸೂರಿನ ಇನ್ನೊವಾ ಕಾಯುತ್ತಾ ಇತ್ತು. 

(ಮುಗಿಯಿತು)

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button