ಮಳೆಗಾಲದಲ್ಲಿ ಕಾಫಿ ನಾಡಿನಲ್ಲೊಂದು ಪ್ರವಾಸದ ಕಥೆ
ಪ್ರವಾಸ ಹೋಗುವ ಯೋಜನೆ ಒಂದು ತಿಂಗಳ ಹಿಂದಿನದ್ದು . ಆದರೆ, ಲಾಕ್ ಡೌನ್ ಕಾರಣದಿಂದ ಮನೆಯಲ್ಲಿಯೇ ಬಂಧಿ ಆಗಿದ್ದೆವು. ಲಾಕ್ ಡೌನ್ ಕೊಂಚ ಸಡಿಲವಾಗುತ್ತಿದ್ದಂತೆ ಪ್ರವಾಸ ಹೊರಟಿದ್ದೆವು. ಕಾಫಿ ನಾಡಿನಲ್ಲಿ ಸ್ನೇಹಿತರ ಜೊತೆಗಿನ ಪ್ರವಾಸ ಹೊಸದಂದು ಖುಷಿ ಕೊಟ್ಟಿತ್ತು.
• ಮಹಾಲಕ್ಷ್ಮಿ ದೇವಾಡಿಗ
ಪ್ರವಾಸಕ್ಕೆ ಹೋಗುವುದನ್ನು ಇಷ್ಟ ಪಡುವ ನಾವು ಒಂದು ತಿಂಗಳ ಹಿಂದೆಯೇ ಪ್ರವಾಸಕ್ಕೆ ಹೋಗುವ ಪ್ಲಾನ್ ಹಾಕಿಕೊಂಡಿದ್ದೇವೆ. ಆದರೆ ಲಾಕ್ ಡೌನ್ ಕಾರಣದಿಂದ ಹೋಗಲು ಸಾಧ್ಯವಾಗಲಿಲ್ಲ. ಲಾಕ್ ಡೌನ್ ಸಡಿಲವಾದ ಬಳಿಕ ನಮ್ಮ ಪ್ರವಾಸ ಹೋಗುವ ಆಸೆ ಕೂಡ ಬಲವಾಯಿತು.
ಆಗುಂಬೆ , ಕುಂದಾದ್ರಿ , ಕವಲೆದುರ್ಗ , ನಗರ ಕೋಟೆ, ಹೀಗೆ ಕೆಲವು ಕಡೆ ಸುತ್ತಿ ಕೊನೆಗೆ ಉಡುಪಿ ತಲುಪುವುದು ನಮ್ಮ ಪ್ಲಾನ್ ಆಗಿತ್ತು. ಹೆಚ್ಚಾಗಿ ಬಸ್ಸು ಮತ್ತು ಕಾರಿನಲ್ಲಿ ತುಂಬಾ ದೂರದವರೆಗೂ ಪ್ರಯಾಣಿಸಿ ಅಭ್ಯಾಸವಿರದ ನನಗೆ , ಇವೆರಡರಲ್ಲಿ ಪಯಣಿಸಿದರೆ ಆರೋಗ್ಯ ಹದಗೆಡುತ್ತಿತ್ತು. ಹಾಗಾಗಿ ನನ್ನ ಸ್ನೇಹಿತರೆಲ್ಲ ಕಾರ್ ನಲ್ಲಿ ಹಾಗೂ ನಾನು ಮತ್ತೆ ನಮ್ಮ ಸೀನಿಯರ್ ಬೈಕ್ ನಲ್ಲಿ ಪಯಣ ಹೊರಟೆವು.
ಬೆಳ್ಳಂಬೆಳಗ್ಗೆ ಹೊರಟ ಪ್ರಯಾಣ, ಮಧ್ಯದಲ್ಲಿ ಸಿಕ್ಕ ಮಳೆ ಸುತ್ತಮುತ್ತ ಕವಿದಿದ್ದ ಮಂಜು ಮೈ ತಾಕಿದಾಗ ಹೇಳಲಾಗದ ಚಳಿಯ ಜೊತೆ ಆ ದಿನ ಹೇಗಿರಬಹುದು ಎಂಬ ಕುತೂಹಲ, ಒಟ್ಟುಗೂಡಿ ಹೊಸ ಅನುಭವದ ಕಾತುರ ಮೈ-ಮನಸ್ಸನ್ನು ಬೆಚ್ಚಗಿರಿಸಿತ್ತು.
ಆಗುಂಬೆ ಘಾಟಿ ಹತ್ತುವಾಗ ಕಂಡ ಸುತ್ತಲ ಹಚ್ಚಹಸಿರ ರಮಣೀಯ ದೃಶ್ಯ ಮಳೆಗಾಲದಲ್ಲಿ ಅದರ ಸೊಬಗನ್ನು ಇಮ್ಮಡಿಗೊಳಿಸಿದ್ದಲ್ಲದೆ ಕಣ್ಣುಗಳನ್ನು ಕೂಡ ತಣ್ಣಗಾಗಿಸಿತ್ತು. ಇದರ ಜೊತೆ ಸುತ್ತಲ ಕೋತಿಗಳ ಮೋಜು ಮಸ್ತಿ ಮುಖದ ಮೇಲೊಂದು ಮುಗುಳುನಗು ತರಿಸಿದ್ದು ಕೂಡ ಸುಳ್ಳಲ್ಲ.
ಪಯಣದ ಆರಂಭ ಬಲು ಸೊಗಸಾಗಿ ಹಾಗೂ ಸಂತೋಷದಿಂದ ಕೂಡಿತ್ತು ಆದರೆ ದಾರಿಮಧ್ಯೆ ಕುಂದಾದ್ರಿ ತಲುಪುವ ಮೊದಲೇ ಒಂದು ಬೇಸರದ ಸಂಗತಿ ತಿಳಿಯಿತು. ಮಳೆ ಜೋರಾಗಿ ಬಂದ ಕಾರಣ ಹೆಚ್ಚಿನೆಡೆ ಪ್ರವಾಸಿ ತಾಣಗಳಿಗೆ ಪ್ರವೇಶ ಮಾಡುವಂತಿರಲಿಲ್ಲ. ಈ ಸುದ್ದಿ ಕೇಳಿದ ನನಗೆ ತುಂಬಾ ಬೇಸರವಾಯಿತು ಆದರೂ ಕೂಡ ಬಂದ ದಾರಿಗೆ ಸುಂಕವಿಲ್ಲವೆಂದು ಗಾದೆ ಈ ಸಮಯದಲ್ಲಿ ನಿಜವಾಗಲೂ ಬಿಡಬಾರದೆಂದು ಮತ್ತೆ ನಮ್ಮ ಪಯಣ ಮುಂಚೆ ಯೋಚನೆ ಮಾಡಿದ್ದ ಕಡೆಗೆ ಸಾಗಿತ್ತು.
ಶಾರದಾಂಬೆ ಕೃಪೆ ಮತ್ತು ಪ್ರಕೃತಿ ಸೊಬಗು…
ನಾವು ಮೊದಲು ಪಯಣಿಸಬೇಕು ಅಂದು ಕೊಂಡಿದ್ದು ಚಿಕ್ಕಮಂಗಳೂರಿನ ಕಡೆಗೆ . ಶೃಂಗೇರಿ ಅಲ್ಲಿಂದ ಮುಳ್ಳಯ್ಯನಗಿರಿ ಹಾಗೆ ನನ್ನ ಸ್ನೇಹಿತೆಯ ಮನೆ ಹೀಗೆ ಮಾರನೇ ದಿನ ಮರಳುವುದು ಎಂದಿತ್ತು. ಆದರೆ ಕೊನೆ ಕ್ಷಣದಲ್ಲಿ ಬದಲಾಗಿತ್ತು. ಅದರೆ ಮತ್ತೆ ಹಳೆ ಪಯಣದ ದಾರಿಯಲ್ಲಿ ಸಾಗಿದ್ದು.
ಮೊದಲನೆಯದಾಗಿ ನಾವು ಹೊರಟಿದ್ದು ಶೃಂಗೇರಿಯತ್ತ. ಮಳೆರಾಯ ಬಿಟ್ಟು ಬಿಡದಂತೆ ಸುರಿದಿದ್ದ. ಬೈಕಿನಲ್ಲಿ ಪಯಣಿಸಿದ್ದ ನನಗೆ ಮಳೆಯ ರಭಸ ತಡೆದುಕೊಳ್ಳುವುದು ಕಷ್ಟವಾಗಿದ್ದರೂ ಕೂಡ ಪಯಣದ ದಾರಿಯುದ್ದಕ್ಕೂ ಕಂಡ ಪ್ರಕೃತಿ , ತನಗಿಂತ ಸುಂದರವಾಗಿ ಈ ಭೂಮಿ ಮೇಲೆ ಮತ್ತಾರೂ ಇಲ್ಲ ಎಂದು ಕೊಚ್ಚಿಕೊಂಡು ಹಾಗಿತ್ತು..
ಶೃಂಗೇರಿಯ ಶಾರದಾಂಬೆ ದರ್ಶನವಾದ ನಂತರ ಅಲ್ಲಿ ಕೆಲಕಾಲ ಇದು ನಂತರ ನಮ್ಮ ಪ್ರಯಾಣ ಹೊರನಾಡಿನ ಕಡೆಗೆ ಮುಖಮಾಡಿತ್ತು.
ತೀರ್ಥಕೆರೆ ಜಲಪಾತ ಮತ್ತು ಹೊರನಾಡಿನ ಚಳಿ..
ಶೃಂಗೇರಿಯಿಂದ ಹೊರಟ ನಾವು ಮಧ್ಯದಲ್ಲಿ ದಾರಿ ತಪ್ಪಿದ ಒಂದೆರಡು ಸುತ್ತು ಬಂದಿದ್ದರೂ ಕೂಡ ಮತ್ತೆ ಸರಿ ದಾರಿಯ ಹಿಡಿದು ನಾವು ಹೋದದ್ದು ಅಡ್ಡದಾರಿಯಿಂದ (ಶಾರ್ಟ್ ಕಟ್).
ಜಯಪುರ ಮಾರ್ಗವಾಗಿ ಹೊರನಾಡು 40 ಕಿಲೋಮೀಟರ್ ಅಷ್ಟೆ. ಆದ್ದರಿಂದ ಅಡ್ಡದಾರಿ ಹಿಡಿದು ನಮ್ಮ ಪಯಣ ಮುಂದುವರೆದಾಗ ನಮಗೆ ಕಂಡಿದ್ದು ತೀರ್ಥಕೆರೆ ಜಲಪಾತ..
ನೀವು ಇದನ್ನು ಇಷ್ಟ ಪಡಬಹುದು:ಪಯಣವು ಒಂದು ಕಥೆಯಾದಾಗ
ರಸ್ತೆಯ ಬದಿಯಲ್ಲಿ ಮೇಲಿನಿಂದ ಝರಿ ನೀರು ಭೂತಾಯಿ ಮಡಿಲಿಗೆ. ಮಳೆಯ ಮಧ್ಯೆ ರಭಸದಿಂದ ಹರಿಯುತ್ತಿತ್ತು ಎಂದರೆ ಹರಿಯೋ ನೀರಿನ ಮಧ್ಯೆ ಸಂಗೀತ ಕೇಳಿ ಬರುವಂತಿತ್ತು. ಆ ಮನೋಹರ ದೃಶ್ಯವನ್ನು ಕಣ್ತುಂಬಿಕೊಂಡು, ಪಯಣ ಮುಂದುವರಿಸಿದೆವು.
ಸುತ್ತಲ ಪ್ರದೇಶ, ನಿಸರ್ಗದ ಸೊಬಗು ನೋಡಲು ಕಣ್ಣೆರಡು ಸಾಲದು ಕೂಡ ನಮಗೆ ಬೇಸರ ತಂದಿದೆ ಅಲ್ಲಿನ ರಸ್ತೆಗಳು. ಕೆಲ ರಸ್ತೆಗಳು ಅಡ್ಡಾದಿಡ್ಡಿಯಾಗಿದ್ದಾರೆ, ಕೆಲವೊಂದು ರಸ್ತೆಗಳು ಹಾವು ಹರಿದಾಡಿದಂತೆ ಇತ್ತು. ಕೊನೆಗೂ ಹರಸಾಹಸಪಟ್ಟು ಹೊರನಾಡು ತಲುಪಿದೆವು.
ಹೊರನಾಡಿನಲ್ಲಿ ಚಳಿ ಅತಿಯಾಗಿತ್ತು. ದೇವರ ದರ್ಶನ ಪಡೆದು ಅಲ್ಲಿಂದ ಕಳಸಕ್ಕೆ ಬಂದು ಕಳಸೇಶ್ವರನ ದರ್ಶನ ಹಾಗೆ ಅಲ್ಲೇ ಕಾಫಿ ತಿಂಡಿ ಮಾಡಿ ಮುಗಿಸಿದೆವು. ಕಳಸಕ್ಕೆ ಹೋಗಿ ಕಾಫಿ ಕುಡಿಯಲಿಲ್ಲ ಎಂದರೆ ಆಗುವುದೇ,, ಇನ್ನೂ ಕೆಲ ಕಡೆ ಸುತ್ತೋದು ಬಾಕಿ ಇತ್ತು, ಆದರೆ ಸಮಯ ನಮಗೆ ಸಾಕಾಗಿರಲಿಲ್ಲ,,
ಆತುರಾತುರದಲ್ಲಿ ಅಲ್ಲಿಂದ ಹೊರಟೆವು ದಾರಿಮಧ್ಯೆ ಸಂಸೆಯ ಟೀ ಎಸ್ಟೇಟ್ ನಿಂದ ಅದು ಕುದುರೆಮುಖದಿಂದ ಇಳಿದು ಕಾರ್ಕಳದ ಕಡೆ ಪ್ರಯಾಣ. ಚೆಕ್ ಪೋಸ್ಟ್ ದಾಟಿ ಬರುವಾಗ ಬೈಕ್ ಅಲ್ಲಿದ್ದ ನನಗೆ ಪಾಸ್ ತೆಗೆದುಕೊಳ್ಳುವುದು ಮರೆತುಹೋಗಿತ್ತು,, ಇದಕ್ಕೆ ಸರಿಯಾಗಿ ಪಾಸ್ ಕೊಡುವವರು ಕೂಡ ಅಲ್ಲಿರಲಿಲ್ಲ. ಪಾಸ್ ಕೇಳುವಾಗ ನಮ್ಮ ಬಳಿ ಪಾಸ್ ಇಲ್ಲ. ಪೊಲೀಸರ ಮನವೊಲಿಸುವಲ್ಲಿ ಸುಸ್ತಾಗಿ ಹೋಗಿತ್ತು. ಅಲ್ಲಿಂದ ಕಡೆಗೂ ಹೇಗೋ ಕಾರ್ಕಳದ ಮಾರ್ಗವಾಗಿ ಉಡುಪಿ ತಲುಪಿದೆವು…
ಹೊಸದೊಂದು ಪಾಠ ಕಲಿತ ಅನುಭವ
ಮಳೆಗಾಲದ ಸುತ್ತಲ ಪ್ರದೇಶ, ಹಚ್ಚಹಸಿರ ವಾತಾವರಣ, ಆ ಚಳಿ, ನಮಗಾದ ಅನುಭವ ಎಲ್ಲವೂ ಸುಂದರವಾಗಿಯೇ ಇತ್ತು. ಪಯಣದ ಶುರು ಚೆನ್ನಾಗಿದ್ದರೂ ಕೂಡ ಅಂತ್ಯ ನನಗೆ ಬೇಕಾದ ಹಾಗಿರಲಿಲ್ಲ. ಒಂದು ಪಾಠ ದೊರೆತಂತಾಯಿತು.
ಪಯಣಿಸುವುದು ಎಂದರೆ ಕೇವಲ ಮೋಜು-ಮಸ್ತಿಗೆ ಸುತ್ತಾಡುವುದು ಮಾತ್ರವಲ್ಲದೆ ಅದರಿಂದ ಬಹಳಷ್ಟು ವಿಷಯಗಳನ್ನು ಜೀವನ ಮೌಲ್ಯಗಳನ್ನು ಕೂಡ ಕಲಿಯಬಹುದು, ನಮ್ಮ ಬದುಕಿನಲ್ಲಿ ಬೇಕಾದವುಗಳನ್ನು ಅಳವಡಿಸಿಕೊಳ್ಳಬಹುದು.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.