ಉಡುಪಿಯಲ್ಲಿ ಸಿಕ್ಕ ಕುಗೋ: ಸುವರ್ಣಲಕ್ಷ್ಮೀ ಬರೆದ ಕರಾವಳಿ ಕಥನ
ಪ್ರವಾಸ ಯಾವಾಗ ನೆನಪಲ್ಲಿ ಉಳಿಯುತ್ತದೆ ಎಂದರೆ ಆ ಪ್ರವಾಸದಲ್ಲಿ ಸ್ಮರಣೀಯವಾದದ್ದೇನಾದರೂ ನಡೆದಾಗ. ವಿಸ್ಮಯದ ಸಂಗತಿಗಳು ಜರುಗಿದಾಗ. ಅಂಥದ್ದೇ ಒಂದು ಅಪರೂಪದ ಗಳಿಗೆಯನ್ನು ದಾಖಲಿಸಿದ್ದಾರೆ ಶಿಕ್ಷಕಿ ಸುವರ್ಣಲಕ್ಷ್ಮೀ.
ಪತ್ರಕರ್ತ ಜೋಗಿಯವರ ಪ್ರಕಾರ ಬೆಂಗಳೂರಿನಲ್ಲಿ ಆಫೀಸ್ ನಿಂದ ಮನೆಗೆ ಹೋಗುವುದೂ ಒಂದು ಕಿರುಪ್ರವಾಸ ಇದ್ದಂತೆ.
ಹಾಗಾದರೆ ನಾನು ಉಡುಪಿಗೆ ಕು ಗೋ ಅವರನ್ನು ಹುಡುಕಿಕೊಂಡು ಹೋಗಿದ್ದೂ ಪ್ರವಾಸ ಅಂತ ತಿಳಿದು. ಆ ಅನುಭವ ಇಲ್ಲಿ ಬರೆಯುತ್ತಿದ್ದೇನೆ.
ಒಂದು ಕಾಲದಲ್ಲಿ ನಾನು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಖ್ಯಾತ ಹನಿಗವಿ ಡುಂಡಿರಾಜರ ಅಂಕಣ ತಪ್ಪದೇ ಓದುತ್ತಿದ್ದೆ. ಅದರಲ್ಲಿ ಬಹಳ ಸಲ ಕುಗೋ ಅವರ ಪ್ರಸ್ತಾಪ ಇರುತ್ತಿತ್ತು. ಯಾರೀ ಕುಗೋ. ಹೆಸರು ಹೊಸದಾಗಿದೆಯಲ್ಲ ಅಂತ ಕುತೂಹಲ ಇತ್ತು. ಮುಂದೆ ಸ್ವತಃ ಡುಂಡಿರಾಜ ಅವರೇ ಮೂಡಬಿದರೆಯ ಆಳ್ವಾಸ್ ನುಡಿಸಿರಿಯಲ್ಲಿ ಕುಗೋ ಅವರನ್ನು ನನಗೆ ಪರಿಚಯಿಸಿದರು.
ಅವರ ಪೂರ್ತಿ ಹೆಸರು ಕು.ಗೋಪಾಲಕೃಷ್ಣ ಅಂತ. ಅರವತ್ತರ ಬರೆಯದ ಕುಗೋ ಅವರು ಬಹಳ ಚಟುವಟಿಕೆಯ ವ್ಯಕ್ತಿಯಂತೆ
ಕಂಡರು. ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆಗಳಲ್ಲಿ ಚುರುಕಾಗಿ ಓಡಾಡುತ್ತಿದ್ದರು. ಅವರು ನನ್ನನ್ನು ನಿಮಗೆ ಪುಸ್ತಕ ಓದುವ ಆಸಕ್ತಿ ಇದೆಯೇ ಎಂದು ಕೇಳಿದರು. ಹೌದು ಅಂತ ಹೇಳಿದೆ, ನನ್ನ ವಿಳಾಸ ಕೇಳಿದರು ಬರೆದು ಕೊಟ್ಟೆ. ನಂತರ ನನ್ನ ಪಾಡಿಗೆ ನಾನು ಊರಿಗೆ ಹಿಂತಿರುಗಿದೆ. ವಾರದ ನಂತರ ಅಂಚೆಯಲ್ಲಿ ನನಗೆ ಒಂದು ಪುಸ್ತಕಗಳ ಕಟ್ಟು ತಲುಪಿತು. ಯಾರು ಕಳುಹಿಸಿದ್ದು ಅಂತ ನೋಡಿದರೆ ಕುಗೋ ಅವರು.
ತಕ್ಷಣ ನಾನು ಡುಂಡಿರಾಜರಿಗೆ ಕರೆ ಮಾಡಿ(ಆಗೆಲ್ಲಾ ಮೊಬೈಲ್ ಇರಲಿಲ್ಲ) ಕುಗೋ ಅವರು ನನಗೆ ಪುಸ್ತಕಗಳನ್ನು ಕಳುಹಿಸಿದ್ದಾರೆ ಅಂತ ಹೇಳಿದೆ. ಅವರು ಓ ಹಾಗಾ, ಕುಗೋ ಅವರು ಓದುವ ಆಸಕ್ತಿ ಇರುವವರಿಗೆ ಉಚಿತವಾಗಿ ಅಂಚೆಯ ಮುಖಾಂತರ
ಪುಸ್ತಕ ಕಳುಹಿಸುತ್ತಾರೆ. ಅವರಿಗೆ ನಾವು ಹಣ ಕಳುಹಿಸದೆ ಇದ್ದರೂ ಪರವಾಗಿಲ್ಲ ಪುಸ್ತಕ ಓದಿ ಲೇಖಕರಿಗೆ ನಾಲ್ಕು ಮೆಚ್ಚುಗೆ ಮಾತಾಡಬೇಕೆಂದು ಬಯಸುತ್ತಾರೆ. ಎಲ್ಐಸಿಯ ವಿಶ್ರಾಂತ ಉದ್ಯೋಗಿಯಾದ ಅವರು ಅವರ ನಿವೃತ್ತ ವೇತನವನ್ನು ವಿವಿಧ ಲೇಖಕರ ಪುಸ್ತಕಗಳನ್ನು ಕೊಂಡು ಓದುವ ಆಸಕ್ತಿ ಇರುವವರಿಗೆ ಉಚಿತವಾಗಿ ಅಂಚೆಯ ಮುಖಾಂತರ ಕಳುಹಿಸುತ್ತಾರೆ. ಜನರಲ್ಲಿ ಓದುವ ಹವ್ಯಾಸ ಬೆಳೆಸುವುದು ಅವರ ಧ್ಯೇಯ ಎಂದು ಹೇಳಿದರು. ನಂತರ ಬಹಳ ಸಲ ಕುಗೋರವರು ನನಗೆ ವಿವಿಧ ಲೇಖಕರ ಪುಸ್ತಕ ಗಳನ್ನು ಕಳುಹಿಸಿದರು.
ನನಗೆ ಹಾಗೆ ಉಚಿತವಾಗಿ ಪುಸ್ತಕ ತೆಗೆದುಕೊಳ್ಳಲು ಸಂಕೋಚವಾಯಿತು. ಮುಂದೊಮ್ಮೆ ಮೂಡಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಓದುತ್ತಿದ್ದ ನನ್ನ ಮಕ್ಕಳನ್ನು ನೋಡಲು ಹೋದಾಗ ಮೂಡಬಿದಿರೆಯಿಂದ ಉಡುಪಿಗೆ ಅವರನ್ನು ಹುಡುಕಿ ಹೊರಟೆ. ಇಂದ್ರಾಳಿಯ ಹಯಗ್ರೀವ ನಗರದ ಅವರ ಮನೆಗೆ ಹೋದಾಗ ಅವರು ಪುಸ್ತಕ ರಾಶಿಯ ನಡುವೆ ಹುದುಗಿ ಹೋಗಿದ್ದರು. ಅವರು ನನಗೆ ಕಳುಹಿಸಿದ ಪುಸ್ತಕದ ಸ್ವಲ್ಪ ಹಣ ಕೊಟ್ಟೆ. ಅವರಿಗೆ ಹೀಗೆ ಹುಡುಕಿ ಬಂದು ಹಣ ಕೊಟ್ಟಿದ್ದಕ್ಕೆ ಸಂತೋಷವಾಯಿತು. ಅವರು ನನಗೆ ಪುಸ್ತಕ ರಾಶಿಯನ್ನು ತೋರಿಸಿ ಇದರಲ್ಲಿ ನಿನಗೆ ಯಾವ ಪುಸ್ತಕ ಬೇಕು ಎಷ್ಟು ಪುಸ್ತಕ ಬೇಕು ತಗೋ ಅಂದರು.
ಚಿಕ್ಕ ಚಿಕ್ಕಮಕ್ಕಳಿಗೆ ಒಂದು ಇಡೀ ಬೊಂಬೆ ಅಂಗಡಿ ತೋರಿಸಿ ಯಾವುದು ಬೇಕೋ ಅದು ತಗೋ ಅಂದರೆ ಎಷ್ಟು ಖುಷಿ ಆಗುತ್ತೋ ಅಷ್ಟು ಖುಷಿ ಆಯ್ತು. ನಂತರ ಅವರು ಅವರ ಮನೆಯ ಬಳಿ ಇದ್ಡ ಶಾಂತಾರಾಮ ಸೋಮಯಾಜಿ ಎಂಬ ವಿಶ್ರಾಂತ ಐಐಟಿ ಪ್ರೊಫೆಸರ್ ಹಾಗೂ ಸಾಹಿತಿ ಯವರನ್ನು ಭೇಟಿ ಮಾಡಿಸಿದ್ದರು. ಅವರಿಂದಲೂ ಕೆಲ ಪುಸ್ತಕ ಕೊಡಿಸಿದರು. ಅವರ ಮನೆ ಬಳಿಯೇ ಇದ್ದ ನೇಪಾಳ ಪಶುಪತಿ ದೇವಸ್ಥಾನವನ್ನು ಹೋಲುವ ಪಶುಪತಿ ದೇವಸ್ಥಾನದ ದರ್ಶನ ಮಾಡಿಸಿದರು. ಅಲ್ಲಿನ ಅರ್ಚಕರು ನೇಪಾಳ ಪಶುಪತಿ ದೇವಸ್ಥಾನದಲ್ಲಿ ಇದ್ದು ಬಂದವರೆಂದು ಪರಿಚಯಿಸಿದರು. ನಂತರ ಕೃಷ್ಣ ಮಠಕ್ಕೆ ಹೋಗುವಾ ಅಂದರು. ಆಟೋಗಾಗಿ ಕಾಯುತ್ತಿರುವಾಗ ಆ ದಾರಿಯಾಗಿ ಬರುತ್ತಿದ್ದ ಕಯ್ಯಾರೆ ಕಿಂಞಣ್ಣ ರೈ ಅವರ ಮಗ ಕುಗೋರವರನ್ನು ಕಂಡು ಅವರ ಕಾರಿನಲ್ಲಿ ಕೃಷ್ಣ ಮಠದವರೆಗೆ ಬೀಳ್ಕೊಟ್ಟರು.
ಕೃಷ್ಣ ಮಠದ ಬಳಿ ಫೇಡೆ ಬಹಳ ಚೆನ್ನಾಗಿರುತ್ತದೆ ಅಂತ ಫೇಡೆ ತೆಗೆದುಕೊಟ್ಟರು. ನನ್ನ ಮಕ್ಕಳು ಆಳ್ವಾಸ್ ನಲ್ಲಿ ಓದುವಾಗ ಹೀಗೆ ಹಲವಾರು ಸಲ ಕುಗೋ ಅವರನ್ನು ಭೇಟಿಯಾಗಿದ್ದೆ. ಈಗಲೂ ಅವರು ನನಗೆ ಪುಸ್ತಕ ಕಳುಹಿಸುತ್ತಲೇ ಇದ್ದಾರೆ.
KuGo ravarannu parichaya madiddakke
Dhanyavadagalu madam
ಧನ್ಯವಾದಗಳು