ದೂರ ತೀರ ಯಾನನಡಿಗೆ ನಮ್ಮ ಖುಷಿಗೆವಿಂಗಡಿಸದಸೂಪರ್ ಗ್ಯಾಂಗು

ಕರ್ನಾಟಕದ 3ನೇ ಎತ್ತರದ ಶಿಖರ ಕುದುರೆಮುಖ ಹತ್ತಿದ್ದು ಹೀಗೆ: ಬೆಂಗಳೂರಿನ ಹುಡುಗಿ ರಶ್ಮಿ ಶೆಣೈ ಬರೆದ ಸುಂದರ ಚಾರಣದ ಕತೆ

ಬೆಂಗಳೂರಿನ ಹುಡುಗಿ. ವಾರಾಂತ್ಯಗಳಲ್ಲಿ ಮಾತ್ರ ಬೆಟ್ಟ, ನದಿ, ಸಾಗರದ ಹುಡುಗಿ. ಮೂಲತಃ ಸ್ಕೀಯರ್. ಪ್ರಕೃತಿಯ ನಡುವೆ ಇರಲು ಇಷ್ಟಪಡುವ, ಪ್ರತೀ ಕ್ಷಣವನ್ನೂ ಆಸ್ವಾದಿಸಲು ಬಯಸುವ, ಹೊಸ ಜನರ ಕತೆ ಕೇಳಲು ಹಂಬಲಿಸುವ ಲೈವ್ಲೀ ಹುಡುಗಿ ರಶ್ಮಿ ಶೆಣೈ. ಒಂದು ದಿನ ಇದ್ದಕ್ಕಿದ್ದಂತೆ ಹೊರಟು ಕುದುರೆಮುಖ ಶಿಖರವನ್ನು ಹತ್ತಿದ ಅವರ ಅನುಭವ ಕಥನ ಇಲ್ಲಿದೆ. ಈ ಬರಹ ಓದಿದರೆ ಅವರೊಂದಿಗೆ ಅದೇ ಹಸಿರು, ಮಣ್ಣು, ಜಿಗಣೆ ದಾರಿಯಲ್ಲಿ ನಡೆದಂತೆ ಭಾಸವಾಗುತ್ತದೆ. ಈ ನುಡಿ ಚಾರಣವನ್ನು ಅನುಭವಿಸಿ. ಹ್ಯಾಪಿ ಜರ್ನಿ.

Rashmi Shenoy

ನಾನು “ಪ್ಲಾನ್ ದಿ ಅನ್ ಪ್ಲಾನ್ ಡ್” ಎಂಬ ಪ್ರಯಾಣ ಗುಂಪಿನೊಂದಿಗೆ ಟ್ರೆಕ್ ಲೀಡ್ ಆಗಿ ವಾರಾಂತ್ಯ ದಲ್ಲಿ ಓಡಾಡುತ್ತಿರುತ್ತೇನೆ. ಹಾಗೆಯೇ ಒಂದು ಗುರುವಾರ ಬೆಳಿಗ್ಗೆ ಆಫೀಸ್ ಕೆಲಸ ಮಾಡುತ್ತಾ ನಾನು ನನ್ನ ಮುಂಬರುವ ವಾರಾಂತ್ಯದಲ್ಲಿ ಹೋಗಬೇಕಾಗಿರುವ ಗೋಕರ್ಣ ಬೀಚ್ ಚಾರಣಕ್ಕೆ ಬಟ್ಟೆಗಳನ್ನು ಪ್ಯಾಕ್ ಮಾಡುವಲ್ಲಿ ನಿರತಳಾಗಿದ್ದೆ. ಆಗ ನನಗೆ ಜತಿನ್ ಅರಿಂದ ಅನಿರೀಕ್ಷಿತ ಕರೆ ಬಂದಿತು; ನೀನು ಕುದ್ರೆಮುಖ ಚಾರಣವನ್ನು ಮುನ್ನಡೆಸಲು ಬಯಸುತ್ತೀಯಾ ಎಂದು ಕೇಳಿದಾಗ ನನಗೆ ಖುಷಿ. ಏಕೆಂದರೆ ನಾನು ಸುಮಾರು 2 ವರ್ಷಗಳಿಂದ ಕುದುರೆಮುಖಕ್ಕೆ  ಹೋಗಲು ಬಯಸುತಿದ್ದೆ. ಈಗ ಕಾಲ ಕೂಡಿ ಬಂದಿತ್ತು. ಈ ಅವಕಾಶವನ್ನು ಸ್ವೀಕರಿಸಿದೆ ಬಿಡುವ ಮಾತೇ ಇರಲಿಲ್ಲ.

ಕುದುರೆಮುಖ ಬಗ್ಗೆ ಕೆಲವು ವಾಸ್ತವಗಳು:

  • ಇದು ಕರ್ನಾಟಕದ ಅತ್ಯಂತ ಸುಂದರವಾದ ಚಾರಣ ಪ್ರದೇಶ ಎಂದು ಕರೆಯಲ್ಪಡುತ್ತದೆ.
  • ಈ ಸ್ಥಳವನ್ನು “ದಕ್ಷಿಣದ ಹಿಮಾಲಯ” ಎಂದೂ ಕರೆಯುತ್ತಾರೆ.
  • “ಕುದುರೆಮುಖ” ಎಂದು ಈ ಬೆಟ್ಟವನ್ನು ಏಕೆ ಕರೆಯುತ್ತಾರೆ ಎಂದರೆ ಅದರ ಶಿಖರ ಕುದುರೆ ಮುಖದ ಆಕಾರದಲ್ಲಿ ಗೋಚರಿಸುತ್ತದೆ.
  • ಇದು ಕರ್ನಾಟಕದ 1894 ಮೀಟರ್ ಎತ್ತರದ ಮೂರನೇ ಅತಿ ಎತ್ತರದ ಶಿಖರ.

ಚಾರಣ ಶುರು

ನಾವು 9 ಜನರ ಗುಂಪು ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಹೊರಟು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮುಲ್ಲೋಡಿ ಎಂಬ ಹಳ್ಳಿಯಲ್ಲಿ ಬೆಲ್ಲಾ ಹೋಂಸ್ಟೇ (ಕುದುರೆಮುಖ ಚಾರಣಕ್ಕೆ ಬೇಸ್‌ಕ್ಯಾಂಪ್) ತಲುಪಿದೆವು. ಚಾರಣಕ್ಕೆ ತಯಾರಾಗುವ ಮೊದಲು ಕೆಲವು ಗಂಟೆಗಳ ಕಾಲ ನಿದ್ದೆ ಮಾಡಿದೆವು. ನಮ್ಮ ಉಪಾಹಾರವನ್ನು ಮುಗಿಸಿದೆವು ಮತ್ತು ನಾವೆಲ್ಲರೂ ನಮ್ಮ ಡೇ ಪ್ಯಾಕ್‌ಗಳಲ್ಲಿ ನೀರಿನ ಬಾಟಲ್, ಪೊಂಚೊ (raincoat) ಮತ್ತು ಪ್ಯಾಕ್ ಮಾಡಿದ ಊಟವನ್ನು ತೆಗೆದುಕೊಂಡು ಹೊರಟೆವು.

ಚಾರಣ ಪ್ರಾರಂಭವಾಗುವುದು ಹೋಂಸ್ಟೇನಿಂದ ಫಾರೆಸ್ಟ್ ಚೆಕ್-ಪೋಸ್ಟ್ ವರೆಗೆ 10-15 ನಿಮಿಷಗಳ ಜೀಪ್ ಸವಾರಿಯೊಂದಿಗೆ. ಫಾರೆಸ್ಟ್ ಚೆಕ್‌ಪೋಸ್ಟ್ ಅಲ್ಲಿ ಮೊದಲು ತೆಗೆದುಕೊಳ್ಳಬೇಕಾದ ಪರವಾನಗಿಗಳ ಪರಿಶೀಲನೆ ನಡೆಯುತ್ತದೆ. (ಒಂದು ದಿನದಲ್ಲಿ ಕೇವಲ 50 ಜನರಿಗೆ ಮಾತ್ರ ಅವಕಾಶವಿದೆ) ಮತ್ತು ನಮ್ಮ ಬ್ಯಾಗ್‌ಗಳನ್ನು ಸಹ ಪರಿಶೀಲಿಸಲಾಗುತ್ತದೆ ಏಕೆಂದರೆ ಇಲ್ಲಿ ಕಟ್ಟು ನಿಟ್ಟಾಗಿ ಪ್ಲಾಸ್ಟಿಕ್ ಅನುಮತಿಸಲಾಗುವುದಿಲ್ಲ. ಚಾರಣಕ್ಕೆ ತೆಗೆದುಕೊಂಡು ಹೋಗಲು ಚಾಕೊಲೇಟ್‌ಗಳು ಅಥವಾ ಮಿಠಾಯಿಗಳನ್ನು ಸಹ ಅನುಮತಿಸಲಾಗುವುದಿಲ್ಲ. ಆದ್ದರಿಂದ ಒಣ ಹಣ್ಣುಗಳು (ಮೇಲಾಗಿ ಒಣ ದ್ರಾಕ್ಷಿಗಳು) ಅಥವಾ ಹಣ್ಣುಗಳಂತಹ ಉತ್ತಮ ಪರ್ಯಾಯಗಳನ್ನು ಊಟದ ಪೆಟ್ಟಿಗೆಯಲ್ಲಿ ಸಾಗಿಸುವುದು ಯಾವಾಗಲೂ ಉತ್ತಮ. ಸ್ಥಳೀಯ ಮಾರ್ಗದರ್ಶಿಯನ್ನು ನಮ್ಮೊಂದಿಗೆ ಚಾರಣಕ್ಕೆ ಕಡ್ಡಾಯವಾಗಿ ಕರೆದುಕೊಂಡು ಹೋಗಬೇಕಾಗಿದೆ.

ಮಾರ್ಗದರ್ಶಿ ರತ್ನಾಕರ್ ಅವರು ನಮ್ಮನ್ನೆಲ್ಲಾ ಉತ್ಸಾಹದಿಂದ ನಡೆಸಲು ಪ್ರಾರಂಭಿಸಿದರು. ನಾನು ಕೊನೆಯಿಂದ ಸ್ವೀಪರ್ ಆಗಿದ್ದೆ. ಬೆಳಿಗ್ಗೆ 8.30ಕ್ಕೆ ಚಾರಣ ಪ್ರಾರಂಭವಾಯಿತು. ಸುಮಾರು 20 ನಿಮಿಷಗಳ ನಂತರ ನಾವು ನಮ್ಮ ಮೊದಲ ಮೈಲಿಗಲ್ಲು – ಶಾಂತಿ ಮರವನ್ನು ತಲುಪಿದೆವು. ಸುತ್ತಮುತ್ತಲಿನ ಹಸಿರು ಬೆಟ್ಟಗಳ ತೆರೆದ ನೋಟವನ್ನು ಸವಿಯುತ್ತ ಮುಂದುವರೆದೆವು. ನಮ್ಮ ಮುಂದಿನ ಮೈಲಿಗಲ್ಲು ಇನ್ನೂ 4 ಕಿ.ಮೀ.ಗಳ ನಂತರ, ಅಲ್ಲಿ ನಮಗೆ ಮಾರ್ಗವನ್ನು ತೋರಿಸುವ ಸಂಕೇತ ಫಲಕ ಸಿಗುತ್ತದೆ ಮತ್ತು ಶಿಖರವನ್ನು ತಲುಪಲು 7 ಕಿ.ಮೀ ಉಳಿದಿದೆ ಎಂದು ಹೇಳುತ್ತದೆ. ನಾವು ಮೊದಲು ಶಿಖರದ ಒಂದು ನೋಟವನ್ನು ಕಾಣುವ ಸ್ಥಳವೂ ಇದಾಗಿದೆ. ಶಿಖರದ ಮೊದಲ ನೋಟ ಯಾವಾಗಲೂ ರೋಮಾಂಚನಕಾರಿ. ಎಲ್ಲರೂ ಸ್ವಲ್ಪ ಸಮಯದವರೆಗೆ ವೀಕ್ಷಣೆಯ ವೀಡಿಯೊಗಳು / ಚಿತ್ರಗಳನ್ನು ಕ್ಲಿಕ್ ಮಾಡುತ್ತಿದ್ದರು. ಹಾಗೆಯೇ ಅದು ಮೋಡಗಳೊಂದಿಗೆ ಕಣ್ಣಾ ಮುಚ್ಚಾಲೆ ಆಡುವುದನ್ನು ನೋಡುತ್ತಾ ಮುಂದುವರಿದೆವು.

ನಾವು ಈದಿನ ಅದೃಷ್ಟವಂತರಾಗಿದ್ದೆವು. ಹವಾಮಾನ ತುಂಬಾ ಪರಿಪೂರ್ಣವಾಗಿತ್ತು; ಮೋಡ ಕವಿದ ವಾತಾವರಣ. ಆದರೆ ಮಳೆ ಇರಲಿಲ್ಲ. ಕಡಿಮೆ ಪ್ರಮಾಣದ ಸೂರ್ಯ ಕಿರಣ ಬೀಳುತಿತ್ತು. ಜಾಡಿನಲ್ಲಿ ಜಿಗಣೆಗಳು ಅಲ್ಲೊಂದು ಇಲ್ಲೊಂದು ಇತ್ತೇ ಹೊರತು ಸಂಪೂರ್ಣವಾಗಿ ಇರಲಿಲ್ಲ. ಇದೊಂದು ಆಶ್ಚರ್ಯವೇ ಸರಿ  ಯಾಕೆಂದರೆ ಇದೇ ಸ್ಥಳದಲ್ಲಿ ಅದು ಬಹುತೇಕ ಪ್ರಸಿದ್ಧವಾಗಿರುವುದು! ನಮ್ಮ ನಕ್ಷತ್ರಗಳಿಗೆ ಮನಸ್ಸಲ್ಲಿಯೇ ಧನ್ಯವಾದಗಳನ್ನೂ ಹೇಳುತ್ತಾ, ಆ ದಿನ ಎಲ್ಲವೂ ನಮ್ಮ ಪರವಾಗಿರುವುದರಿಂದ ನಾವು ಶಿಖರವನ್ನು ತಲುಪಲು ಅಚಲ ವಿಶ್ವಾಸದಿಂದ ಮುಂದಾದೆವು.

ನಂತರ ನಾವು ಒಂದು ಹುಲ್ಲುಗಾವಲನ್ನು ತಲುಪಿದೆವು. ತಕ್ಷಣವೇ ಮುಂದಿನ ಒಂದು ಸವಾಲಿನ ಭಾಗ ಬರುತ್ತದೆ, ಅಲ್ಲಿ ಮಣ್ಣು ಹಾದಿ. ಕಡಿದಾದ ದಾರಿ. ಜಾಗೃತಯಿಂದ ಹತ್ತಬೇಕು. ಇದುವರೆಗಿನ ನಡಿಗೆ ಸುಲಭವಾಗಿದ್ದರಿಂದ ಇದನ್ನು ಏರಲು ಸ್ವಲ್ಪ ಪ್ರಯತ್ನ ಬೇಕಾಗುತ್ತದೆ. ಈ ಭಾಗವನ್ನು ಏರಿದ ನಂತರ ನೀವು ಮುಂದಿನ ಮೈಲಿಗಲ್ಲು ತಲುಪುವವರೆಗೆ ಇದು ಕೇವಲ ಸಮತಟ್ಟಾದ ನಡಿಗೆಯಾಗಿರುತ್ತದೆ. ಇದರ ನಂತರ ನೀವು ಮುಂದಿನ ಮೈಲಿಗಲ್ಲು – “ಒಂಟಿಮರ” ವನ್ನು ತಲುಪುವಿರಿ. ಸುತ್ತಮುತ್ತಲಿನ ಬೆಟ್ಟಗಳ ನೋಟಕ್ಕೆ ಹೋಲಿಸಿದರೆ ಇದು ಏಕೈಕ ಮರವಾಗಿದೆ ಎಂಬ ಕಾರಣದಿಂದ ಈ ಹೆಸರು ಬಂದಿದೆ.

ಚಾರಣಿಗರಲ್ಲಿ ಒಬ್ಬರು ಇಲ್ಲಿಯೇ ಉಳಿಯಲು ನಿರ್ಧರಿಸಿದರು. ಆದ್ದರಿಂದ ನಮ್ಮಲ್ಲಿ ಉಳಿದ 8 ಮಂದಿ ಮುಂದುವರೆದೆವು. ಅಲ್ಲಿ ನಾವು ಇನ್ನೂ ಹಲವಾರು ತೊರೆಗಳನ್ನು ಎದುರಿಸಿದೆವು ಮತ್ತು ಮಾರ್ಗದಲ್ಲಿ ನಿರಂತರವಾಗಿ ನಡೆಯುತ್ತಾ ಹೋದೆವು. ಇಲ್ಲಿ ಏನೆಂದರೆ ಎಷ್ಟು ನಡೆದರೂ ನಾವು ಒಂದರ ನಂತರ ಒಂದು ಬೆಟ್ಟವನ್ನು ಏರುತ್ತಿರುವಂತೆ ತೋರುತ್ತದೆ. ಈ ಚರಣದಲ್ಲಿ ನಾವು ಹಲವಾರು ಹೊಳೆಗಳನ್ನು ದಾಟಬೇಕಾಗಿದೆ. ಈ ಹೊಳೆಗಳು ನಮ್ಮ ಏಕೈಕ ನೀರಿನ ಮೂಲವಾಗಿದ್ದೆವು ಮತ್ತು ಪ್ರತಿ ಬಾರಿ ನಾವು ಒಂದನ್ನು ದಾಟಿದಾಗ ಹರಿಯುವ ನೀರಿನಿಂದ ನಾವು ನೇರವಾಗಿ ಕುಡಿಯುತಿದ್ದೆವು, ಇದು ನಗರಗಳಲ್ಲಿ ನಾವು ಪ್ರತಿದಿನ ಕುಡಿಯುವ ನೀರಿಗಿಂತ 100 ಪಟ್ಟು ಉತ್ತಮ ಎಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ.

ನಾವು ಬೆಟ್ಟದ ತುದಿಗೆ ಕೇವಲ 3 ಕಿ.ಮೀ ದೂರ ಉಳಿದಿರುವ ಹೊತ್ತಿಗೆ ದಣಿದ ಕಾರಣ ಇನ್ನೂ 3 ಜನರು ಹಿಂದೆ ಸರಿದರು. ಕುದುರೆಮುಖದಲ್ಲಿ ಕೆಳಗಿಳಿಯುವುದು ಸಹ ಏರುವುದರಷ್ಟೇ ಸಮಯ ತೆಗೆದುಕೊಳ್ಳುತ್ತದೆ ಆದ್ದರಿಂದ ಕೆಳಗಿಳಿಯುವ ವಿಶ್ವಾಸವಿಲ್ಲದಿದ್ದರೆ ಮುಂದೆ ಹೋಗದಂತೆ ಮಾರ್ಗದರ್ಶಿಯು ಚಾರಣಿಗರಿಗೆ ಸೂಚಿಸಿದರು. ಆದ್ದರಿಂದ ಅವರಲ್ಲಿ ಒಬ್ಬರಿಗೆ ಮೊಣಕಾಲು ಸಮಸ್ಯೆ ಇರುವುದರಿಂದ ಅವರು ಹಿಂದೆ ಉಳಿಯುವ ಜವಾಬ್ದಾರಿಯುತ ನಿರ್ಧಾರವನ್ನು ತೆಗೆದುಕೊಂಡರು. ಆದ್ದರಿಂದ ನಮ್ಮ ತಂಡದಲ್ಲಿ 4 ಜನರು ಈಗಾಗಲೇ ಬಹಳ ಮುಂದೆ ಹೋಗಿದ್ದರು ಮತ್ತು ಬಹುಶಃ ಗರಿಷ್ಠ ಮಟ್ಟವನ್ನು ತಲುಪಿದ್ದರು. ನಮ್ಮಲ್ಲಿ 2 ಮಂದಿ ಮಾತ್ರ ಸ್ವಲ್ಪ ಹಿಂದೆ ಹೋಗುತ್ತಿದ್ದೆವು ಮತ್ತು ನಾನು ದಾರಿಯಲ್ಲಿ ಸಿಗುವ ಬೇರೆ ಜನರೊಂದಿಗೆ ಮಾತನಾಡುತ್ತ ಮುಂದುವರೆಯುತ್ತಿದ್ದೆ.

ದಾರಿಯಲ್ಲಿ ನಾನು ಅನೇಕ ಜನರನ್ನು ಭೇಟಿ ಮಾಡಲು ಮತ್ತು ಸಂವಹನ ನಡೆಸಲು ಇಷ್ಟ ಪಡುತ್ತೇನೆ; ಇದರೊಂದಿಗೆ ಒಂದು  ಸ್ನೇಹಿತರ ಗುಂಪು ತಮ್ಮನ್ನು “Cheetah boys” ಎಂದು ಹೆಸರು ಇಟ್ಟುಕೊಂಡಿದ್ದರು, ಅವರು 12 ಜನರ ಗುಂಪಾಗಿದ್ದರು ಮತ್ತು ಅವರೆಲ್ಲರೂ ಸುಮಾರು 20-25 ವರ್ಷಗಳಿಂದ ಸ್ನೇಹಿತರಾಗಿದ್ದರು ಮತ್ತು 1995ರ ವರ್ಷದ ಪದವೀಧರಗಳಾಗಿದ್ದರು! 

ಸ್ವಲ್ಪ ಮುಂದೆ ನಾನು ಒಂದು ಸುಮಾರು 50ರ ಹತ್ತಿರ ವಯಸ್ಸು ಹೊಂದಿರುವಂತಿರುವ ಇನ್ನೊಬ್ಬ ದಂಪತಿಯನ್ನು ಗುರುತಿಸಿದೆ. ಅವರಲ್ಲಿ ಗಂಡ ಎಲ್ಲಾ ಕಡಿದಾದ ಶಾರ್ಟ್‌ಕಟ್‌ಗಳನ್ನು ತೆಗೆದುಕೊಳ್ಳುತ್ತಾ ಹಾಗು ದಾರಿಯಲ್ಲಿ ತನ್ನ ಹೆಂಡತಿಯನ್ನು ಕೀಟಲೆ ಮಾಡುತ್ತ ನಡೆಯುತ್ತಿದರು. ಅವರು 10ನೇ ತರಗತಿ ಮತ್ತು ಪಿಯು ಹುಡುಗರ ಗುಂಪಿನೊಂದಿಗೆ ಬಂದಿದ್ದರು, ಅವರು ಎಂದೆಂದಿಗೂ ಶಕ್ತಿಯುತರಾಗಿದ್ದರು. ಆದರೆ ಈ ವ್ಯಕ್ತಿ ಅವರಿಗೆ ಹೋಲಿಸಿದರೆ ಇವರು ಸಹ  ಸಮಾನವಾಗಿ ಶಕ್ತಿವಂತರಾಗಿ ಇದ್ದರು. ಅಂತಹ ಜನರನ್ನು ನೋಡಿದಾಗ ನನ್ನ ಉತ್ಸಾಹ ಕೂಡ ಬೆಳೆಯಲು ಪ್ರಾರಂಭಿಸಿತು ಮತ್ತು ಭವಿಷ್ಯದಲ್ಲಿ ಅವರಂತೆ ಇರಬೇಕೆಂದು ನನ್ನ ಮನಸ್ಸು ಬಯಸಿತು.

ಕೊನೆಯ 2 ಕಿ.ಮೀ.ಗೆ ಸುಮಾರು ಒಂದು ಕಿ.ಮೀ ಆರೋಹಣವಿರುವಾಗ ಕೊನೆಯ ಚಾರಣವು ರಿಡ್ಜ್ ವಾಕ್ ಇರುತ್ತದೆ. ಈ ಹೊತ್ತಿಗೆ ನಾವು ಸುತ್ತಲೂ ನೋಡಿದಾಗ ನಾವು ಈಗಾಗಲೇ ಮೋಡಗಳೊಂದಿಗೆ ಮುಳುಗಿದಂತೆ ಕಾಣಿಸುತ್ತಿದ್ದೆವು ಮತ್ತು ಇದರ ಕಾರಣ ಅಕ್ಕ ಪಕ್ಕದ ಬೆಟ್ಟಗಳ ದೃಶ್ಯವು  ಕಾಣಿಸುತ್ತಿರಲಿಲ್ಲ. ನಾವು ಮಧ್ಯಾಹ್ನ 12.30ರ ಹೊತ್ತಿಗೆ ತುದಿ ತಲುಪಿದೆವು. ಹಾಗೂ ವಿಹಂಗಮ ನೋಟವಿರುವ ಸ್ಥಳದಲ್ಲಿ ನಾವು ಪ್ಯಾಕ್ ಮಾಡಿ ತಂದಿರುವ ರುಚಿಕರವಾದ ಪುಳಿಯೋಗರೆ ಸವಿದೆವು. ಇದರ ನಂತರ ನಾವೆಲ್ಲರೂ ಒಂದಾಗಿ ಉತ್ತಮ ಚಿತ್ರಗಳನ್ನು ತೆಗೆದುಕೊಂಡೆವು.

ಬೆಟ್ಟದ ಮೇಲೆ ಬೆರಗಿನ ದಂಪತಿ

ನಾನು ದಾರಿಯಲ್ಲಿ ಭೇಟಿಯಾದ ದಂಪತಿ ಬೆಟ್ಟದ ಮೇಲೆ ಸಿಕ್ಕಿದರು. ಹೆಂಡತಿ ಸೀರೆ ಉಡುತ್ತಿದ್ದರು. ಅದಕ್ಕೆ ಹೊಂದಾಣಿಕೆಯ ಬಳೆಗಳನ್ನು ಸಹ ಹಾಕಿಕೊಂಡರು. ಅವರು ಸ್ಯಾಂಡಲ್ವುಡ್ ತಾರೆಯಂತೆ ಕಾಣುತ್ತಿದ್ದರು. ನಂತರ ಗಂಡನೊಂದಿಗೆ ಫೋಟೋಶೂಟ್ ಮಾಡಿದರು! ನನಗೆ ಖುಷಿ ಮತ್ತು ಅಚ್ಚರಿ. ನಾನು ಅವರ ಬಳಿಗೆ ಹೋಗಿ ಅಭಿನಂದನೆ ಸಲ್ಲಿಸಿದೆ ಮತ್ತು ನಂತರ ಈ ಎಲ್ಲದಕ್ಕೂ ಕಾರಣವನ್ನು ಕೇಳಿದೆ. ಆಗ ಅವರು ತಾನು ಪರ್ವತವನ್ನು ಹತ್ತಿ ಸೀರೆಯಲ್ಲಿ ಚಿತ್ರಗಳನ್ನು ತೆಗೆದುಕೊಳ್ಳಬೇಕೆಂದು ಅವರ ಕನಸಾಗಿತ್ತು ಎಂದು ಉತ್ತರಿಸಿದರು! 

ಸೀರೆಯಲ್ಲಿ ಏರುವುದು ಕಷ್ಟವಾದ್ದರಿಂದ ಅವರು ಆರಾಮದಾಯಕ ಉಡುಪು ಧರಿಸಿ ಬೆಟ್ಟ ಹತ್ತಿದ್ದರು. 

ನಾವು ಮಾಡುವ ಅನೇಕ ಕೆಲಸಗಳಲ್ಲಿ ಈಗಾಗಲೇ ಆಸಕ್ತಿ ಕಳೆದುಕೊಂಡು ನಗರಗಳಲ್ಲಿ ಉಳಿದಿರುವ ಜನರನ್ನು ಕಂಡಿದರೆ ಇಂತಹ ಉತ್ಸಾಹ ಇರುವ ಜನರು ನಮ್ಮಲ್ಲಿ ಕೆಲವರು ಇನ್ನು ಇದ್ದಾರೆ ಎನ್ನುವುದನ್ನು ನೋಡಿ ತುಂಬಾ ಖುಷಿ ಆಗುತ್ತದೆ. ಅವರ ವಯಸ್ಸು, ಸಾಮರ್ಥ್ಯಗಳು ಮತ್ತು ಜವಾಬ್ದಾರಿಗಳನ್ನು ಲೆಕ್ಕಿಸದೆ ಕನಸು ಕಾಣುವವರು ಅದನ್ನು ಜಯಿಸುವವರು ಜನರಿದ್ದಾರೆ ಎಂದು ನಾನು ಆಶ್ಚರ್ಯಚಕಿತಳಾದೆ. ಕನಸುಗಳಿಗೆ ನಿಜಕ್ಕೂ ಮಿತಿಯಿಲ್ಲ.

ಶಿಖರದಿಂದ ಕೆಳಗೆ ಇಳಿಯಲು ಪ್ರಾರಂಭಿಸಲು ನಮಗೆ ಮಧ್ಯಾಹ್ನ 1.30 ರವರೆಗೆ ಮಾತ್ರ ಸಮಯವಿತ್ತು, ನಂತರ ನಾವು ಕೆಳಗಿಳಿಯಬೇಕಾಗಿತ್ತು. ಏಕೆಂದರೆ ಇಳಿಯುವಿಕೆಯು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಸಂಜೆ 6 ಗಂಟೆಯೊಳಗೆ ಚೆಕ್-ಪೋಸ್ಟ್‌ನಲ್ಲಿ ಇರಲೇಬೇಕು. ವಿಫಲವಾದರೆ ದಂಡ ಕಟ್ಟಬೇಕು.

ನಾವು ಇಳಿಯಲು ಪ್ರಾರಂಭಿಸಿದೆವು ಹಾಗು ಅದು ಸ್ವಲ್ಪ ಸಮಯ ಹಿಡಿಯಿತು ಏಕೆಂದರೆ ಕೆಲವು ಭಾಗಗಳು ಕಡಿದಾದವು. ದಾರಿಯಲ್ಲಿ ನಮಗಾಗಿ ಕಾಯುತ್ತಿದ್ದ ನಮ್ಮ ಇತರ ಗುಂಪಿನ ಸದಸ್ಯರನ್ನು ಭೇಟಿಯಾದೆವು ಮತ್ತು ಅವರೊಂದಿಗೆ ಮತ್ತೆ ಕೆಳಗೆ ಮುಂದುವರೆದೆವು.

ಮೇಲಕ್ಕೆ ಏರುವಾಗ ನಾವು ಹೆಚ್ಚು ವಿರಾಮಗಳನ್ನು ತೆಗೆದುಕೊಂಡಿಲ್ಲವಾದ್ದರಿಂದ, ನಾವು ನಿಧಾನಗೊಳಿಸಿ ಮತ್ತೆ “ಒಂಟಿಮರ” ಬಳಿ ಸ್ವಲ್ಪ ಸಮಯ ವಿರಾಮ ತೆಗೆದುಕೊಂಡೆವು. ನಮ್ಮ ನಡಿಗೆಯನ್ನು ಮತ್ತೆ ಮುಂದುವರಿಸುವ ಮೊದಲು ನಾವು ಇಲ್ಲಿ ಸ್ವಲ್ಪ ಸಮಯದವರೆಗೆ ವಿರಾಮಿಸಿದೆವು. ಹೀಗೆ ಮುಂದುವರೆದ ನಂತರ ಒಂದು ಹಂತದಲ್ಲಿ ಎಲ್ಲರೂ ದಣಿದಿದ್ದರಿಂದ ನಾವು ನಡೆಯುವ ಹಾದಿ ಇನ್ನೂ ಉದ್ದವಾದಂತೆ ಕಾಣಿಸಲು ಶುರುವಾಗಿತ್ತು. ನಾವೆಲ್ಲರೂ ನಮ್ಮ ನಡುವೆ ಮಾತನಾಡುತ್ತ ಸಂಜೆ 5.30 ರ ಸುಮಾರಿಗೆ ನಾವು ಚೆಕ್‌ಪೋಸ್ಟ್ ತಲುಪಿದೆವು.

ಸ್ಥಳೀಯರಾದ ಸಣ್ಣ ಮಕ್ಕಳು ಅಲ್ಲಿಯೇ ತಾಜಾ ಬೆಳೆದ ಬಾಳೆಹಣ್ಣು ಮತ್ತು ಕಾಡು ನೆಲ್ಲಿಕಾಯಿ ಅನ್ನು ಮಾರಾಟ ಮಾಡುತ್ತಿದ್ದರು. ಎಲ್ಲರೂ ಹಸಿವಿನಿಂದ ಬಳಲುತ್ತಿದ್ದರಿಂದ ಅವುಗಳನ್ನು ಖರೀದಿಸಿ ಸ್ವಲ್ಪ ಸಮಯ ವಿಶ್ರಾಂತಿ ಪಡೆದರು. ಎಲ್ಲರೂ ತಲುಪಿದ ನಂತರ, ನಾವು ನಮ್ಮ ಜೀಪ್ ಅನ್ನು ಹತ್ತಿ ಹೋಂಸ್ಟೇಗೆ ಮರಳಿದೆವು. ಕೆಲವು ಜನರಿಗೆ ದಿನದ ಕೊನೆಯಲ್ಲಿ ಕೀಲು ನೋವು, ಕಾಲು ನೋವು, ದೇಹದ ನೋವು ಶುರುವಾಗಿತ್ತು. ಆದರೆ ಎಲ್ಲರಲ್ಲೂ ಕುದುರೆಮುಖ ಹತ್ತಿದ ತೃಪ್ತಿ ಅಗಾಧವಾಗಿತ್ತು.

Related Articles

Leave a Reply

Your email address will not be published. Required fields are marked *

Back to top button