50 ವರ್ಷದಿಂದ ಫೋಟೋಗಳ ಮೂಲಕ ಖುಷಿ ಹಂಚುತ್ತಿರುವ ಅಪರೂಪದ ಛಾಯಾಗ್ರಾಹಕ ಯಜ್ಞ ಆಚಾರ್ಯ
![Yajna Acharya photographer](https://kannada.travel/wp-content/uploads/2021/03/thumb81.jpg)
ಸುಮಾರು ಐವತ್ತು ವರ್ಷಗಳಿಂದ ಕ್ಯಾಮೆರಾವನ್ನು ಸಂಗಾತಿಯಾಗಿಸಿಕೊಂಡು ಅದ್ಭುತ ಫೋಟೋಗಳನ್ನು ತೆಗೆದು ಅಚ್ಚರಿಯುಂಟು ಮಾಡಿದ ಅಪರೂಪದ ಪತ್ರಕರ್ತ ಯಜ್ಞ ಆಚಾರ್ಯ. ಮಂಗಳೂರಿನ ಯಜ್ಞರ ಫೋಟೋಗಳನ್ನು ನೋಡಿ ಮರುಳಾಗದವರಿಲ್ಲ. ಅವರ ಪ್ರತೀ ಫೋಟೋದ ಹಿಂದೆಯೂ ಕತೆಗಳು ಇರುತ್ತವೆ. ಫೋಟೋಗಳಿಂದ ನಮ್ಮನ್ನು ಖುಷಿಪಡಿಸಿದ ಯಜ್ಞ ಆಚಾರ್ಯರಿಗೆ ನಮಸ್ಕಾರ.
- ನವ್ಯಶ್ರೀ ಶೆಟ್ಟಿ
![Yajna Acharya](https://kannada.travel/wp-content/uploads/2021/03/b19d9806-feb4-449b-a1a3-15ec6c69470b.jpg)
ನಮ್ಮನ್ನು ಫೋಟೋಗಳಲ್ಲಿ ಸುಂದರವಾಗಿ ಕಾಣುವಂತೆ ಮಾಡುವುದು ಛಾಯಾಗ್ರಾಹಕನ ಕೈ ಚಳಕ.ಕಪ್ಪು ಬಿಳುಪು ಕಾಲದಿಂದ ಕಲರ್ ಫುಲ್ ಯುಗದವರೆಗೂ ಫೋಟೋಗ್ರಾಫರ್ ಜನರ ಮೊಗದಲ್ಲಿ ನಗು ಮೂಡಿಸುತ್ತಾ ಬಂದಿದ್ದಾರೆ. ಛಾಯಾಗ್ರಾಹಕ ತೆಗೆದ ಛಾಯಾ ಚಿತ್ರಗಳು ನಮ್ಮ ನೆನಪಿನ ಸ್ಮೃತಿ ಪಟಲದಲ್ಲಿ ಅಚ್ಚಳಿಯದ ಹಾಗೆ ಉಳಿದು ಬಿಡುತ್ತದೆ. ಕೆಲವು ಛಾಯಾಗ್ರಾಹಕರು ಜನರ ಮನಸಿನಲ್ಲಿ ಅಚ್ಚಳಿಯದೆ ಉಳಿದು ಬಿಡುತ್ತಾರೆ. ಅಂತಹವರಲ್ಲಿ ಯಜ್ಞ ಆಚಾರ್ಯ ಸದಾ ನೆನಪಿನಲ್ಲಿ ಇಟ್ಟುಕೊಳ್ಳುವ ಒಬ್ಬ ಫೋಟೊಗ್ರಾಫರ್.
![Yajna Acharya](https://kannada.travel/wp-content/uploads/2021/03/3bd11ae4-3921-4036-b1fc-da8cb163668f.jpg)
ನೀವೊಮ್ಮೆ ಯಜ್ಞ ಆಚಾರ್ಯ ಅವರ ಫೇಸ್ ಬುಕ್ ಪ್ರೊಫೈಲ್ ನೋಡಿದರೆ ಅವರಿಗೆ ತಮ್ಮ ವೃತ್ತಿ ಧರ್ಮದ ಬಗ್ಗೆ ಇರುವ ಪ್ರೀತಿ ತಿಳಿಯುತ್ತದೆ. ಇಂದಿರಾ ಅವರಿಂದ ಹಿಡಿದು ಇಂದಿನ ಪ್ರಧಾನಿ ನರೇಂದ್ರ ಮೋದಿ ಅವರ ತನಕ ಹಲವಾರು ಗಣ್ಯರ ಫೋಟೋಗಳನ್ನ ಕ್ಲಿಕ್ಕಿಸಿದ್ದಾರೆ ಯಜ್ಞ ಆಚಾರ್ಯ. ವ್ಯಕ್ತಿ ಚಿತ್ರ, ನಿಸರ್ಗ ಚಿತ್ರ ಸೇರಿದಂತೆ ಛಾಯಾಗ್ರಹಣದಲ್ಲಿ ವಿವಿಧ ಚಿತ್ರಗಳನ್ನು ಕ್ಲಿಕ್ಕಿಸಿ ಸೈ ಎನಿಸಿಕೊಂಡಿದ್ದಾರೆ.
ನೀವು ಇದನ್ನು ಇಷ್ಟಪಡಬಹುದು: 53ನೇ ವಯಸ್ಸಿನಲ್ಲಿ ಮೌಂಟ್ ಎವರೆಸ್ಟ್ ಏರಿದ ಸಂಗೀತಾ ಬಹಲ್: ಸಾಧನೆಗೆ ವಯಸ್ಸಿನ ಹಂಗಿಲ್ಲ
![Yajna Acharya](https://kannada.travel/wp-content/uploads/2021/03/8f96661f-3827-4797-9294-60c51be48df5.jpg)
ಯಜ್ಞ ಆಚಾರ್ಯ ಮೂಲತಃ ಮಂಗಳೂರಿನವರು. ಯಜ್ಞ ಅವರು ಕಪ್ಪು ಬಿಳುಪು ಕಾಲದಿಂದ ಕಲರ್ ಫುಲ್ ಕಾಲದಲ್ಲಿ ಕೂಡ ವಿಭಿನ್ನವಾಗಿ ಫೋಟೋಗ್ರಫಿ ಮಾಡುತ್ತಾ ಜನ ಮಾನಸದಲ್ಲಿ ಅಚ್ಚಳಿಯದ ನೆನಪುಗಳನ್ನು ಉಳಿಸಿ ಬಿಟ್ಟಿದ್ದಾರೆ. ಇವರದ್ದು ಛಾಯಾಗ್ರಹಣದಲ್ಲಿ ಸುಮಾರು 50 ವರ್ಷಗಳ ಸುದೀರ್ಘ ಜರ್ನಿ.
ಗಣ್ಯ ವ್ಯಕ್ತಿಗಳ ಅಪರೂಪದ ಫೋಟೋಗಳು
![Yajna Acharya](https://kannada.travel/wp-content/uploads/2021/03/c01325bb-94ca-4099-8154-ddb8bd08fd83.jpg)
ಉದಯವಾಣಿ ದಿನ ಪತ್ರಿಕೆಯಲ್ಲಿ ಇವರ ವೃತ್ತಿ ಬದುಕಿನ ಪಯಣ. ಈಶ್ವರ ಕೈದೋಟ ಅವರ ಒಡನಾಟ ಗಣ್ಯ ವ್ಯಕ್ತಿಗಳ ಫೋಟೊಗಳನ್ನು ತೆಗೆಯಲು ನಾಂದಿ ಹಾಡಿತು. ಹಲವು ಮ್ಯಾಗಜಿನ್, ದಿನ ಪತ್ರಿಕೆಗಗಳಿಗೆ ಛಾಯಾ ಚಿತ್ರ ಕ್ಲಿಕ್ಕಿಸಿಕೊಟ್ಟಿದ್ದಾರೆ ಯಜ್ಞ ಆಚಾರ್ಯ. ಇಂದಿಗೂ ಸಾಕಷ್ಟು ಜನ ಇವರ ಬಳಿ ಗಣ್ಯ ವ್ಯಕ್ತಿಗಳ ಹಳೆ ಕಾಲದ ಫೋಟೋಗಳು, ಅಪರೂಪದ ಕೆಲವು ಫೋಟೋಗಳನ್ನು ಕೇಳಿ ಪಡೆದುಕೊಳ್ಳುತ್ತಾರೆ.
ಎಸ್ಸೆಸ್ಸೆಲ್ಸಿ ಮುಗಿದ ಬಳಿಕ ಮಂಗಳೂರಿನ ಬಿಜಿಎಂ ಫೈನ್ ಆರ್ಟ್ಸ್ ಸ್ಕೂಲ್ ನಲ್ಲಿ ಕಲಾ ತರಬೇತಿಗೆ ಸೇರಿಕೊಂಡರು. ಅಲ್ಲಿನಿಂದ ಫೋಟೋಗ್ರಫಿ ಮೇಲೆ ಅಭಿರುಚಿ ಮೂಡಿತು. ಆಧ್ಯ ಪ್ರಭು ಎನ್ನುವರ ಬಳಿ ಫೋಟೋಗ್ರಫಿ ಕಲಿತರು. ಛಾಯಾಗ್ರಹಣವನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿ ಮುಂದೆ ಅದರಲ್ಲೇ ಯಶಸ್ಸು ಪಡೆದುಕೊಂಡರು.
ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿದ್ದ ಕಾರಣದಿಂದ ಅವಕಾಶಗಳು ಕೂಡ ಜಾಸ್ತಿಯಿತ್ತು. ಉದಯವಾಣಿಯಲ್ಲಿ ಕೆಲಸದ ಜೊತೆಗೆ ಮದುವೆ ಸಮಾರಂಭಗಳಲ್ಲಿ ಕೂಡ ಫೋಟೋ ತೆಗೆಯುತ್ತಿದ್ದರು. ನಿಸರ್ಗದ ಚಿತ್ರ, ವ್ಯಕ್ತಿ ಚಿತ್ರ ತೆಗೆಯೋದು ಇವರಿಗೆ ಬಹು ಇಷ್ಟ.
![Yajna Acharya](https://kannada.travel/wp-content/uploads/2021/03/01340c21-2e14-49e7-8ada-fdfd3dc7d062.jpg)
ಛಾಯಾಗ್ರಹಣವನ್ನು ವೃತ್ತಿಯನ್ನಾಗಿ ಆಯ್ಕೆಮಾಡಿಕೊಂಡ ನಂತರ ಮನೆಯವರ ಬೆಂಬಲ ಕೂಡ ಇವರಿಗೆ ಸಿಕ್ಕಿತ್ತು. ತಂದೆಯಂತೆ ಇವರ ಮಕ್ಕಳು ಕೂಡ ಫೋಟೋಗ್ರಫಿ ಮೇಲೆ ಒಲವು ಹೊಂದಿದ್ದಾರೆ. ಹವ್ಯಾಸವಾಗಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಈ ಜರ್ನಿಯಲ್ಲಿ ಸಾಕಷ್ಟು ಸನ್ಮಾನ, ಪ್ರಶಸ್ತಿಗಳು ಯಜ್ಞರನ್ನು ಹುಡುಕಿಕೊಂಡು ಬಂದಿದೆ. ಟಿ.ಎಸ್.ಸತ್ಯನ್ ಲೈಫ್ ಟೈಮ್ ಆಚಿವ್ಮೆಂಟ್(life time achievement) ಅವಾರ್ಡ್ ಪಡೆದುಕೊಂಡಿರುವ ಇವರು ರಾಜ್ಯಪಾಲ ಭವನದಿಂದ ಗೌರವಕ್ಕೆ ಪಾತ್ರರಾಗಿದ್ದಾರೆ.
ಆಗೆಲ್ಲಾ ಪುಸ್ತಕದಿಂದ ಜ್ಞಾನ ಪಡೆಯಬೇಕಿತ್ತು
![Yajna Acharya](https://kannada.travel/wp-content/uploads/2021/03/nab.jpg)
ಇವರ ಆರಂಭಿಕ ಜರ್ನಿಗೂ ಇಂದಿನ ಛಾಯಾಗ್ರಹಣಕ್ಕೆ ಸಾಕಷ್ಟು ವ್ಯತ್ಯಾಸವಿದೆ. ಇದು ತಂತ್ರಜ್ಞಾನ ಯುಗ. ಹಿಂದೆ ಫೋಟೋಗಳನ್ನು ಸಂಬಂಧಪಟ್ಟವರಿಗೆ ತಲುಪಿಸುವಾಗ ಕೆಲವೊಮ್ಮೆ ಕಷ್ಟ ಪಡಬೇಕಾಗುತ್ತಿತ್ತು. ಆದರೆ ಈಗ ಬಹು ಸುಲಭ. ಇವರು ಹೆಚ್ಚು ಹೆಚ್ಚು ಪುಸ್ತಕ ಓದಿ ಫೋಟೋಗ್ರಫಿಗೆ ಸಂಬಂಧಿಸಿದ ಜ್ಞಾನ ಪಡೆದುಕೊಳ್ಳುತ್ತಿದ್ದರು. ಇಂದು ಯೂಟ್ಯೂಬ್ ಗಳಲ್ಲಿ ಎಲ್ಲವೂ ಸಿಗುತ್ತೆ. ಕ್ಯಾಮೆರಾಗಳಲ್ಲಿ ಕೂಡ ನವೀನತೆ ಬಂದಿದೆ. ಇಂದಿನ ದಿನಗಳಲ್ಲಿ ನಮ್ಮ ಬಜೆಟ್ ಗೆ ತಕ್ಕಂತೆ ಕ್ಯಾಮೆರಾ ಲಭ್ಯವಿದೆ. ಕೆಲವರು ವೃತ್ತಿಯಾಗಿ ಇನ್ನೂ ಕೆಲವರು ಹವ್ಯಾಸವಾಗಿ ಫೋಟೋಗ್ರಫಿ ಮಾಡುತ್ತಾರೆ. ಕೆಲವರು ಎರಡನ್ನೂ ಸರಿದೂಗಿಸಿಕೊಂಡು ಹೋಗುತ್ತಾರೆ. ಒಂದು ವೇಳೆ ಹವ್ಯಾಸವಾಗಿ ಆಯ್ಕೆ ಮಾಡಿಕೊಂಡರೆ ಆರ್ಥಿಕ ಬಲ ಕೂಡ ಮುಖ್ಯ ಎನ್ನುತ್ತಾರೆ ಯಜ್ಞ ಆಚಾರ್ಯರು.
ಇಂದಿನ ಯುವ ಪೀಳಿಗೆಯಲ್ಲಿ ಕೆಲವರು ನನ್ನ ಹಳೆ ಫೊಟೋ ನೋಡಿಲ್ಲ. ಆ ಕಾರಣದಿಂದ ಅವರು ತಾನು ಕಪ್ಪು ಬಿಳುಪು ಕಾಲದಲ್ಲಿ ತೆಗೆದ ಕೆಲವು ಫೋಟೋ ಅವರು ನೋಡುವಂತಾಗಬೇಕು ಎನ್ನುವ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುತ್ತೇನೆ ಎನ್ನುತ್ತಾರೆ ಯಜ್ಞ ಆಚಾರ್ಯ.
ತನ್ನ ಹತ್ತಿರ ಸಲಹೆ ಕೇಳಲು ಬಂದ ಯುವ ಛಾಯಾ ಗ್ರಾಹಕರಿಗೆ ತನಗೆ ತಿಳಿದಷ್ಟು ಮಾಹಿತಿಗಳನ್ನು ಯಾವುದೇ ಹಮ್ಮು ಬಿಮ್ಮು ಇಲ್ಲದೆ ಹೇಳಿಕೊಡುತ್ತಾರೆ ಅವರು. ಇಂದಿನ ಕೆಲವು ಯುವ ಛಾಯಾಗ್ರಾಹಕರು ಸಾಮಾಜಿಕ ಜಾಲತಾಣಗಳಲ್ಲಿ ಲೈಕ್, ಕಾಮೆಂಟ್ ಪಡೆದುಕೊಳ್ಳಲು ಫೋಟೋ ಅಪ್ ಲೋಡ್ ಮಾಡುತ್ತಾರೆ. ಅದು ಅವರಿಗೆ ಖುಷಿ ನೀಡುತ್ತದೆ. ಛಾಯಾಗ್ರಾಹಕರು ಫೋಟೋ ತೆಗೆಯಲು ತಾಳ್ಮೆ ಮುಖ್ಯ. ಅದರಲ್ಲೂ ವೈಲ್ಡ್ ಲೈಫ್ ಫೋಟೋಗ್ರಾಫರ್ ಗೆ ತಾಳ್ಮೆ ಅತ್ಯಗತ್ಯ.
![Atal Bihari Vajpayee](https://kannada.travel/wp-content/uploads/2021/03/f397e48f-fde2-43b6-94b2-0468dd6085a8-683x1024.jpg)
ಫೋಟೋಗ್ರಫಿಯಲ್ಲಿ ಸಾಕಷ್ಟು ವಿಧಗಳಿವೆ
ನಾವು ಫೋಟೋಗ್ರಫಿಯಲ್ಲಿ ಜನರಿಗೆ ಏನು ಕೊಡಬೇಕು ಅನ್ನುವ ಆಲೋಚನೆ ನಮ್ಮಲ್ಲಿ ಇದ್ದಾಗ ನಾವು ಏನು ಬೇಕಾದರೂ ಸಾಧಿಸಲು ಸಾಧ್ಯ ಅನ್ನುವುದು ಇವರ ಮಾತು.
ವೃತ್ತಿ ಬದುಕಿನ ಪ್ರತಿ ಕ್ಷಣ ಇವರಿಗೆ ಅತ್ಯುತ್ತಮ ಗಳಿಗೆ. ಆಗ ತೆಗೆದ ಪ್ರತಿ ಫೋಟೋ ಕೂಡ ಅದರದೇ ಆದ ಮಹತ್ವ ಹೊಂದಿದೆ. ಯಜ್ಞ ಆಚಾರ್ಯ ಅವರಿಗೆ ಫೊಟೋ ತೆಗೆಯುವುದರಲ್ಲಿ ಸಂತೋಷವಿದೆ. ವೃತ್ತಿಯಲ್ಲಿ ಸಂತೃಪ್ತಿ ಕಂಡಿದ್ದಾರೆ. ಇಂದಿಗೂ ಹವ್ಯಾಸವಾಗಿ ಫೊಟೋಗಳನ್ನು ಕ್ಲಿಕ್ಕಿಸುತ್ತಾರೆ. ಇವರ ಸುದೀರ್ಘ 50ವರ್ಷಗಳ ಜರ್ನಿ ಇಂದಿನ ತಲೆಮಾರಿನ ಛಾಯಾಗ್ರಾಹಕರಿಗೆ ಸ್ಫೂರ್ತಿ.
![](https://kannada.travel/wp-content/uploads/2021/03/140d4e0f-654a-4009-9413-95a175cdc8e8.jpg)
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ.