ಆಹಾರ ವಿಹಾರನಮ್ ತಿಂಡಿ ರೆಸಿಪಿನಮ್ಮೂರ ತಿಂಡಿವಿಂಗಡಿಸದ

ಜೋಗಿ ನಳಮಹಾರಾಜನ ಅಡುಗೆ ಜಗತ್ತುಆರಂಭವಾಗಿದ್ದು ಹೀಗೆ

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೊಸದಾಗಿ ಸೇರ್ಪಡೆಯಾದ ಕ್ಲಬ್ ಹೌಸ್ನಲ್ಲಿ ಕನ್ನಡ.ಟ್ರಾವೆಲ್ ತಂಡ ಆಯೋಜಿಸಿದ್ದ, ನಮ್ಮ ಕನ್ನಡ ಪುಟದಲ್ಲಿ “ಜೋಗಿ ನಳಮಹಾರಾಜ- ಅಡುಗೆ ಕಲಿಸಿದ ಪಾಠಗಳು” ಕಾರ್ಯಕ್ರಮದಲ್ಲಿ ಅಡುಗೆಯ ಆಸಕ್ತಿ, ಅಡುಗೆಯ ಗುಟ್ಟು, ಕರ್ನಾಟಕದಲ್ಲಿರುವ ಅತ್ಯುತ್ತಮ ಹೋಟೆಲ್, ಅಲ್ಲಿನ ವಿಶೇಷ ಆಹಾರದ ಬಗ್ಗೆ ಜೋಗಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

  • ಚೈತ್ರಾ ರಾವ್ ಉಡುಪಿ

ಜೋಗಿಯವರು ಬರಹಗಾರ ಮಾತ್ರವಲ್ಲದೆ ಅದ್ಭುತವಾಗಿ ಅಡುಗೆಯನ್ನೂ ತಯಾರಿಸುತ್ತಾರೆ. ಇವರಿಗೆ ಆಧುನಿಕ ಅಡುಗೆ ಶೈಲಿಗಿಂತ ಹಳೆಯ ಕಟ್ಟಿಗೆ ಒಲೆ, ಮಡಿಕೆಯಿಂದ ತಯಾರಿಸುವ ಅಡುಗೆಯ ಮೇಲೆ ಹೆಚ್ಚು ಒಲವು.

ಜೋಗಿ ಅವರಿಗೆ ಅಡುಗೆಯ ಆಸಕ್ತಿ ಹುಟ್ಟಿಕೊಂಡದ್ದು ಅವರ ತಾಯಿಯಿಂದ. ಇವರ ಅಮ್ಮನ ಅಡುಗೆ ಬಹಳ ಬಡತನದಿಂದ ಹುಟ್ಟಿತ್ತು. ನಾವು ಅಮ್ಮ ಅಡುಗೆ ಮಾಡಿ ಬಡಿಸಿದರೆ ಅದು ರುಚಿ ಇಲ್ಲವೆಂದು ದೂರುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ನಾವು ಹಾಗೂ ಹೋಟೆಲ್ಗಳಲ್ಲಿ ತಯಾರಿಸುವ ಆಹಾರಗಳು ಎರಡು ಪಟ್ಟು ಹೆಚ್ಚು ಸಾಮಗ್ರಿಗಳನ್ನು ಹಾಕಿ ತಯಾರಾಗುತ್ತದೆ. ಅದುವೇ ರುಚಿಕರವಾದ ಆಹಾರ ಎಂದು ನಮಗೆ ಅನಿಸುತ್ತದೆ. ಆದರೆ ಅದಲ್ಲ ಅಡುಗೆ, ತಾಯಿಯ ಕೈಯಳತೆಯಲ್ಲಿ ತಯಾರಿಸಿದ ಅಡುಗೆ ತುಂಬಾ ವಿಶಿಷ್ಟತೆಯಿಂದ ಕೂಡಿರುತ್ತದೆ. ಹಾಗಾಗಿ ಅಡುಗೆ ವಿಷಯದಲ್ಲಿ ತಾಯಿಯೇ ನನಗೆ ಸ್ಪೂರ್ತಿ ಎಂದರು.

ಇವರ ತಾಯಿ ಅಡುಗೆ ಮಾಡುವಾಗ ಅಡುಗೆಯ ಜೊತೆಗೆ ಮಾತನಾಡುತ್ತಾರೆ. ಅಂದರೆ ಉಪ್ಪು ಖಾರ ಹಾಕುವಾಗ ಅಡುಗೆಗೆ ತೋರಿಸಿ ಇಷ್ಟು ಸಾಕಾ? ಎಂದು ಕೇಳಿ ಹಾಕುವುದು ಇವರ ತಾಯಿಯ ಕ್ರಮವಂತೆ. ಪ್ರೀತಿಯಿಂದ ನಾವು ತಿಂಡಿ ಸಾಂಬಾರಿನ ಜೊತೆ ಮಾತನಾಡುತ್ತಾ ಅಡುಗೆ ಮಾಡಿದರೆ ಆ ದಿನ ಅಡುಗೆ ಬಹಳ ರುಚಿಯಾಗಿರುತ್ತದೆ.

ಇವರ ಅಡುಗೆಗೆ ಇನ್ನೊಬ್ಬ ಸ್ಫೂರ್ತಿ ವ್ಯಕ್ತಿ ಗೆಳೆಯ ಹರೀಶ್. ಮದುವೆ ಸಮಾರಂಭ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಊಟದ ತಯಾರಿಯಲ್ಲಿ ಇವರೇ ಮುಖ್ಯವಾಗಿ ನೇತೃತ್ವವಹಿಸಿರುತ್ತಾರೆ. ಅದ್ಭುತ ಅಡುಗೆ ಭಟ್ಟರಂತೆ. ಇವರೊಂದಿಗೆ ಅಡುಗೆ ಕಾರ್ಯಕ್ರಮಕ್ಕೆ ಜೋಗಿ ಅವರೂ ಹೋಗುತ್ತಿದ್ದರು. ಅಡುಗೆಯನ್ನು ಹೇಗೆ ವಿಶಿಷ್ಟವಾಗಿ ತಯಾರಿಸುತ್ತಾರೆ?, ಅಡುಗೆಯ ತಯಾರಿಯ ಗುಟ್ಟೇನು? ಇವೆಲ್ಲವನ್ನು ದೂರದಿಂದ ವೀಕ್ಷಿಸುತ್ತಿದ್ದರು.

ಜೋಗಿಯವರೇ ಸ್ವತಃ ತಾವೇ ಶುರುಮಾಡಿದ ಹೋಟೆಲ್

ತಮ್ಮ ಪದವಿ ಮುಗಿದ ನಂತರ ಜೋಗಿಯವರೇ 1987ರಲ್ಲಿ ಒಂದು ಪುಟ್ಟ ಹೋಟೆಲನ್ನು ತೆರೆದರು. ಅವರಿಗೆ ತಮ್ಮ ಹೋಟೆಲ್ ಕನಸು ಹೇಗಿತ್ತೆಂದರೆ, ಏಕಾಂಗಿಯಾಗಿ ಅವರೇ ಅಡುಗೆ ತಯಾರಿಸಬೇಕು. ಹೋಟೆಲ್ ನಲ್ಲಿ ಒಂದಷ್ಟು ಪುಸ್ತಕಗಳಿರಬೇಕು, ಹಾಗೆ ಗೆಳೆಯರು ಬಂದು ಹೋಗುತ್ತಿರಬೇಕು, ವಾರದಲ್ಲಿ ಒಂದು ದಿನ ಹೋಟೆಲ್ ರಜೆ. ಅಂದರೆ ಆ ದಿನ ಪೂರ್ತಿ ಎಲ್ಲಾದರೂ ಸುತ್ತಿಕೊಂಡು ಬರಬೇಕೆಂಬ ಕನಸು. ಆ ಕನಸಿನಂತೆಯೇ ಆಯಿತು ಕೂಡ.

ಅವರ ಹೋಟೆಲ್ನಲ್ಲಿ ಮೂರು ಬಗೆಯ ಆಹಾರವನ್ನು ತಯಾರಿಸುತ್ತಿದ್ದರು. ಅನ್ನ ಸಾಂಬಾರ್, ಉಪ್ಪಿಟ್ಟು ಹಾಗೂ ಅವಲಕ್ಕಿ. ಇವರ ಹೋಟೆಲ್ ಗೆ ಬಂದ ಎಲ್ಲರೂ ಬೇರೆ ಬೇರೆ ಪುಸ್ತಕದ ಕುರಿತು, ಇವರ ಬರಹಗಳ ಕುರಿತು, ಪ್ರವಾಸಿತಾಣ ಅಲ್ಲಿನ ವಿಶಿಷ್ಟ ಆಹಾರ ಎಲ್ಲದರ ಬಗ್ಗೆ ಮಾತನಾಡಿ ಹೋಗುತ್ತಿದ್ದರು. ಜೋಗಿಯವರ ಹೋಟೆಲ್ ಗೆ ಬಂದರೆ ಒಂದೊಳ್ಳೆ ಕಟ್ಟೆ ಪಂಚಾಯಿತಿ ಅಂತೂ ಖಂಡಿತ.

ಹಾಗೆ ಇವರ ಹೋಟೆಲ್ ಪಕ್ಕದಲ್ಲಿದ್ದ ಒಂದು ಶಾಲೆಯಲ್ಲಿ ಒಟ್ಟು 500 ವಿದ್ಯಾರ್ಥಿಗಳು. ಆ 500 ವಿದ್ಯಾರ್ಥಿಗಳಲ್ಲಿ 300 ವಿದ್ಯಾರ್ಥಿಗಳು ಇವರ ಹೋಟೆಲ್ ಗೆ ಊಟಕ್ಕಾಗಿ ಬರುತ್ತಿದ್ದರಂತೆ. ಜೋಗಿಯವರ ಅಡುಗೆಯ ರುಚಿಗೆ ಮಕ್ಕಳು, ಅವರ ಗೆಳೆಯರು, ಊರಿನ ಜನರು ಸೇರಿದಂತೆ ಯೋಗರಾಜ್ ಭಟ್, ರಮೇಶ್ ಅರವಿಂದ್ ಹೀಗೆ ಎಲ್ಲರೂ ಇವರ ಅಡುಗೆಯ ರುಚಿಗೆ ಅಪ್ಪಟ ಅಭಿಮಾನಿಗಳಾಗಿದ್ದಾರೆ.

ನೀವುಇದನ್ನುಇಷ್ಟಪಡಬಹುದು: ಸೊಗಸಾದ ಟೀ ಎಂಬ ರೂಪಕ ಅಲಂಕಾರ: ವಿಶ್ವ ಚಹಾ ದಿನ ನಿಮಿತ್ತ ಜೋಗಿಯವರ ವಿಶೇಷ ಬರಹ

ಜೋಗಿಯವರ ಅಡುಗೆ ಗುಟ್ಟು

ಅಡುಗೆ ಎಂಬುದು ಒಂದು ಅದ್ಭುತ ಕಲೆ ಹಾಗಾಗಿ ಇವರ ಅಡುಗೆಯ ಕೆಲವೊಂದು ಗುಟ್ಟನ್ನು ಈ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.

ಜೋಗಿ ಅವರು ಅಡುಗೆ ತಯಾರಿಸುವಾಗ ಮುಖ್ಯವಾಗಿ ಪರಿಮಳ, ಅಡುಗೆಯನ್ನು ಯಾವುದರ ಮೂಲಕ ತಯಾರಿಸಬೇಕು. ಅಂದರೆ ರುಬ್ಬುವ ಕಲ್ಲು, ಕುಟ್ಟಣ, ಬಳಸುವ ಪಾತ್ರೆಗಳ ಕುರಿತು ಜೋಗಿ ಮುಖ್ಯವಾಗಿ ಗಮನಹರಿಸುತ್ತಾರೆ.

ನಾವು ಅಡುಗೆಗೆ ಬಳಸುವ ಮಸಾಲೆ ಹುಡಿಯನ್ನು ಅಂಗಡಿಗಳಿಂದ ತರುತ್ತೇವೆ. ಆದರೆ ಮಸಾಲೆ ಹುಡಿಯನ್ನು ಕುಟ್ಟಣದಿಂದ ಹುಡಿಮಾಡಿ, ತಕ್ಷಣ ಮಾಡಿ ತಕ್ಷಣ ಬಳಸಬೇಕು. ಯಾವತ್ತಿಗೂ ಮಸಾಲೆ ಹುಡಿಯನ್ನು ಶೇಖರಣೆ ಮಾಡಿ ಇಡಬಾರದು. ಅದು ದಿನಕಳೆದಂತೆ ತನ್ನ ರುಚಿ ಸ್ವಾದವನ್ನು  ಕಳೆದುಕೊಳ್ಳುತ್ತದೆ. ಮಿಕ್ಸಿಯಿಂದ ಮಾಡಿದ ಹುಡಿಗೂ, ಕುಟ್ಟಣದಿಂದ ಹುಡಿಮಾಡಿದ ಮಸಾಲೆ ಪುಡಿಗೂ ತುಂಬಾ ವ್ಯತ್ಯಾಸವಿದೆ.

ಹಾಗೆ ಮಡಿಕೆಯಲ್ಲಿ ಮಾಡಿದ ಅಡುಗೆಗೂ ನಾವು ಈಗಿನ ಸ್ಟೀಲ್ ಪಾತ್ರೆಯಲ್ಲಿ ಮಾಡಿದ ಅಡುಗೆಗೂ ಅಜಗಜಾಂತರ ವ್ಯತ್ಯಾಸವಿದೆ. ಮಾಂಸದ ಆಹಾರವನ್ನು ಮಣ್ಣಿನ ಪಾತ್ರೆಯಲ್ಲಿ ಮಾಡಿದರೆ ಅದರ ರುಚಿಯೇ ಬೇರೆ. ಅದರಲ್ಲಿಯೂ ಮುಖ್ಯವಾಗಿ ಫಿಷ್ ಕರಿ, ಹಾಗೂ ಚಿಕನ್ ಕರಿಯನ್ನು ಮಣ್ಣಿನ ಪಾತ್ರದಲ್ಲಿಯೇ ತಯಾರಿಸಬೇಕು. ಎರಡಕ್ಕೂ ಒಂದೇ ಪಾತ್ರೆಯನ್ನು ಬಳಸಬಾರದು.  ಜೀವನದುದ್ದಕ್ಕೂ ಆ ಆಹಾರ ಪದಾರ್ಥ ತಯಾರಿಸುವಾಗ ಬೇರೆ ಬೇರೆ ಪಾತ್ರೆಯನ್ನು ಅದಕ್ಕಾಗಿಯೇ ಮೀಸಲಿಡಬೇಕು.

ಬಿರಿಯಾನಿ ತಯಾರಿಸಲು ಹಳೆಯ ಅಲ್ಯೂಮಿನಿಯಂ ಪಾತ್ರೆ ಬಳಸಿದರೆ ಉತ್ತಮ. ಹಾಗೆ ಸಸ್ಯಹಾರಿ ಆಹಾರಗಳನ್ನು ತಯಾರಿಸುವಾಗ ಆಲೂಗಡ್ಡೆ ಈರುಳ್ಳಿ ಹುಳಿ, ಸಾಂಬಾರ್ ಇವುಗಳಿಗೆ ಮಣ್ಣಿನ ಪಾತ್ರೆ ಉತ್ತಮ ಎಂದರು. ಇದು ಅವರು ಮಾಡುವ ಅಡುಗೆಯ ವಿಧಾನವಾಗಿದೆ.

ಕರ್ನಾಟಕದಲ್ಲಿ ಜೋಗಿಯವರ ಇಷ್ಟದ ಹೋಟೆಲ್

ಸಕಲೇಶಪುರದ ಆನೆಬಾಗಿಲು ಎಂಬಲ್ಲಿ ಪುಟ್ಟ ಹಂಚಿನ ಒಂದು ಸಸ್ಯಹಾರಿ ಹೋಟೆಲ್ ಇದೆ. ಮುಂಜಾನೆ 7ರಿಂದ 10 ಗಂಟೆಯವರೆಗೆ ಇದು ತೆರೆದಿರುತ್ತದೆ. ಅಲ್ಲಿ ಅಕ್ಕಿ ರೊಟ್ಟಿ ಹಾಗೂ ಅದಕ್ಕೆ ಚಟ್ನಿ ಮತ್ತು ಜೊತೆಗೆ ಒಂದು ಚಹಾ ಕೊಡುತ್ತಾರೆ. ಜೋಗಿ ಅವರ ಪ್ರಕಾರ ದೇಶದಲ್ಲಿ ಸಿಗುವ ಅತ್ಯುತ್ತಮ ರುಚಿಕರವಾದ ಅಕ್ಕಿರೊಟ್ಟಿಯಂತೆ.

ಹಾಗೆ ಉಪ್ಪಿನಂಗಡಿಯಲ್ಲಿ ಹಿಂದೆ ಫಾರೆಸ್ಟ್ ಗೇಟ್ ಹತ್ತಿರ ಅಹಮ್ಮದ್ ಎಂಬವರ ಹೋಟೆಲ್ ಇತ್ತು. ಅಲ್ಲಿ 1 ರೂಪಾಯಿಗೆ ಕಲ್ತಪ್ಪ ಸಿಗುತ್ತಿತ್ತು. ಇದು ಜೋಗಿ ಅವರ ಇಷ್ಟದ ತಿಂಡಿ. ಈಗ ದಕ್ಷಿಣ ಕನ್ನಡದ ಚಾರ್ಮಾಡಿ ಘಾಟ್ ಇಳಿದ ತಕ್ಷಣ “ಹಸನಬ್ಬ ಹೋಟೆಲ್” ನಲ್ಲಿ ಅಹಮ್ಮದ್ ಅವರು ತಯಾರಿಸುತ್ತಿದ್ದಂತೆಯೇ ರುಚಿಕರ ಕಲ್ತಪ್ಪ ಇಲ್ಲ ಸಿಗುತ್ತದೆ. ಜೋಗಿಯವರು ಹೋಗಿ ಬರುವಾಗ ಎರಡು ಬಾರಿಯೂ ಹಸನಬ್ಬ ಹೋಟೆಲ್ನಲ್ಲಿ ರುಚಿಕರ ಕಲ್ತಪ್ಪ ತಪ್ಪದೇ ತಿನ್ನುತ್ತಾರೆ. ದಕ್ಷಿಣ ಕನ್ನಡದಲ್ಲಿ ಹಸನಬ್ಬ ಹೋಟೆಲ್ ಜೋಗಿಯವರ ಇಷ್ಟದ ಹೋಟೆಲ್ ಆಗಿದೆ. 

ಹೀಗೆ ಜೋಗಿಯವರು ಅಡುಗೆ, ಬರವಣಿಗೆ, ಪ್ರವಾಸವನ್ನು ತುಂಬಾ ಇಷ್ಟಪಟ್ಟು ಮಾಡುತ್ತಾರೆ. ಇವರ ಕೆಲಸದಲ್ಲಿ ಶ್ರದ್ಧೆ ಹಾಗೂ ಪ್ರೀತಿ ಎರಡೂ ಕೂಡಿರುತ್ತದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button