ರೂ.4800ರಲ್ಲಿ ಕಾಶಿ, ಉತ್ತರ ಪ್ರದೇಶ ಸುತ್ತಿ ಬಂದ ಉಡುಪಿ ಎಂಜಿಎಂ ಕಾಲೇಜು ಜರ್ನಲಿಸಂ ಮೇಷ್ಟ್ರು ಮಂಜುನಾಥ್ ಕಾಮತ್
ಮಂಜುನಾಥ್ ಕಾಮತ್ ಉತ್ಸಾಹಿ ಯುವ ಬರಹಗಾರ. ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ(Journalism) ವಿಭಾಗದ ಮುಖ್ಯಸ್ಥರು. ಪ್ರವಾಸ ಪ್ರೇಮಿ. ಒಂದು ದಿನ ಪ್ರವಾಸ ಹೊರಡಬೇಕು ಎಂದು ಮನಸ್ಸಾದಾಗ ಉಡುಪಿಯ ಇಂದ್ರಾಳಿಯಲ್ಲಿ(Indrali) ರೈಲು ಹತ್ತಿದ್ದರು. ಕಾಶಿಗೆ ಹೊರಟು, 4800 ರೂಪಾಯಿಯಲ್ಲಿ ಕಾಶಿ ಜೊತೆಗೆ ಅಯೋಧ್ಯೆ, ಆಗ್ರಾ, ಮಥುರಾ ಸುತ್ತಿ ಬಂದ ಕಾಮತರ ಪಯಣದ ಕಥೆ.
- ನವ್ಯಶ್ರೀ ಶೆಟ್ಟಿ
ಕೆಲವು ಉತ್ಸಾಹಿ ಪಯಣಿಗರೇ ಹಾಗೆ, ಪ್ರವಾಸ ಹೊರಡಬೇಕು ಎಂದಾಗ ಬೈಕ್, ಬಸ್, ರೈಲು ಹತ್ತಿ ಹೊರಟೇ ಬಿಡುತ್ತಾರೆ. ಹೋಗುವ ಪಯಣಕ್ಕೆ ಗೊತ್ತು ಗುರಿ ಇರುವುದಿಲ್ಲ. ಹೋಗಬೇಕು ಎನ್ನುವ ಜಾಗ ಒಂದು, ತಲುಪುವ ತಾಣ ಇನ್ನೊಂದಾಗಿರುತ್ತದೆ. ಕೆಲವೊಮ್ಮೆ ಒಂದು ಸ್ಥಳಕ್ಕೆ ಹೊರಟ ಜೊತೆಗೆ ಹತ್ತಾರು ಸ್ಥಳ ನೋಡಿಕೊಂಡು ಬರುತ್ತಾರೆ. ಅಂತಹ ಪಯಣಿಗರು ಯಾವಾಗಲೂ ಭಿನ್ನ.
ಅಂತಹ ಭಿನ್ನ ಪಯಣಿಗರಲ್ಲಿ ಮಂಜುನಾಥ್ ಕಾಮತ್ ಕೂಡ ಒಬ್ಬರು. ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳ ಪ್ರೀತಿಯ ಮೇಷ್ಟ್ರು. ಮನಸಿಗೆ ಪ್ರವಾಸ ಮಾಡಬೇಕು ಅನ್ನುವ ಆಲೋಚನೆ ಬಂದಾಗ ಹೊರಟೇ ಬಿಡುತ್ತಾರೆ. ಮಂಜುನಾಥ್ ಕಾಮತ್ ಕಾಲೇಜಿಗೆ ಎರಡು ದಿನ ರಜೆ ಹಾಕಿದ್ದಾರೆ ಎಂದರೆ ಅವರು ಎಲ್ಲಿಗಾದರೂ ಪ್ರವಾಸಕ್ಕೆ ಹೋಗಿದ್ದಾರೆ ಎಂದರ್ಥ.
ಕಾಶಿಗೆ ಹೊರಟ ಮೇಷ್ಟ್ರು
ಅದೊಂದು ದಿನ ಕಾಮತ್ ರಿಗೆ ಕೊನೆ ದಿನದ ಪರೀಕ್ಷೆ(Exam) ಡ್ಯೂಟಿ ಮುಗಿಸಿ ಎಲ್ಲಿಗಾದರೂ ಹೊರಡಬೇಕು ಎನ್ನುವ ಆಸೆ ಮೂಡಿತ್ತು. ಹೇಗೂ ಒಂದು ತಿಂಗಳ ರಜೆ. ಯೋಚಿಸಿ ಕಾಶಿಗೆ(kashi) ಹೋಗುವ ಮನಸ್ಸಾಗಿತ್ತು. ಮನೆಯಲ್ಲಿ ಹೇಳಿದರೆ ಬೈಗುಳ ಗ್ಯಾರಂಟಿ. ಆದರೂ ಒಪ್ಪಿಸಿ ಹೊರಟೇ ಬಿಟ್ಟರು. ಉಡುಪಿಯಿಂದ(udupi) 2000 ಕಿಮೀ ದೂರವಿರುವ ಕಾಶಿಗೆ ಒಂಟಿಯಾಗಿ ಕಾಮತ್ ಪಯಣ ಬೆಳೆಸಿದರು.
ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣ(railway station) ದಲ್ಲಿ 280ರೂ ಟಿಕೆಟ್ ಪಡೆದು ರೈಲು ಹತ್ತಿದ್ದರು. ಮರುದಿನ ರಾತ್ರಿ 7 ಗಂಟೆಗೆ ವಾರಣಾಸಿ(varanasi) ತಲುಪಬೇಕಿದ್ದ ರೈಲು ವಾರಣಾಸಿ ತಲುಪಿದ್ದು ಸರಿ ಸುಮಾರು ನಡುರಾತ್ರಿ 12. 30ಗೆ. ಬಳಿಕ ಶುರುವಾಗಿದ್ದು ಮಂಜುನಾಥ್ ಕಾಮತ್ ರ ಸುತ್ತಾಟ.
ರೈಲ್ವೆ ನಿಲ್ದಾಣದಿಂದ ಕಾಶಿಯ ಬ್ರಹ್ಮ ಘಾಟ್(brahama ghat) ಗೆ 6 ಕಿಮಿ. ಆ ನಡು ರಾತ್ರಿಯಲ್ಲಿ ಗೂಗಲ್ ಮ್ಯಾಪ್ ಬಳಸಿ ನಡೆದುಕೊಂಡೇ ಕೆಲವು ಕಿಮೀ ಸಾಗಿದರು. ಬಳಿಕ ಹೇಗೋ ಬ್ರಹ್ಮ ಘಾಟ್ ತಲುಪಿದರು. ಕಾಶಿ ಕಟ್ಟಡವು ಸಿಕ್ಕಿತು. ಆದರೆ ನಡು ರಾತ್ರಿಯಾದದ್ದರಿಂದ ಯಾರು ಬಾಗಿಲು ತೆಗೆಯಲಿಲ್ಲ. ಅಲ್ಲೇ ಮರದಡಿಯಲ್ಲಿದ್ದ ಮಂಚದ ಮೇಲೆ ಮಲಗಿಕೊಂಡರು. ಆದರೆ, ಬಳಿಕ ಅಲ್ಲಿದ್ದ ಒಂದಿಬ್ಬರು ಮಂಜುನಾಥ್ ಕಾಮತ್ ಅವರಿಗೆ ಬೆಳಗ್ಗೆ ತನಕ ಉಳಿದುಕೊಳ್ಳಲು ಜಾಗ ನೀಡಿದ್ದರು.
ನೀವುಇದನ್ನುಇಷ್ಟಪಡಬಹುದು: ಶಿಕ್ಷಕ ವೃತ್ತಿ ತೊರೆದು ಒಂಟಿಯಾಗಿ ಜಗತ್ತು ಸುತ್ತುವ ಪೂರ್ವಿ: ಕನ್ನಡ ಮಾತನಾಡುವ ಗುಜರಾತಿ ಹುಡುಗಿಯ ಸ್ಫೂರ್ತಿ ಕತೆ
ಕಾಶಿಯ ಮೊದಲ ದಿನದ ಸೂರ್ಯೋದಯ ಸ್ಮಶಾನದಲ್ಲಿ ಕಾಣಬೇಕು ಅನ್ನುವ ಆಸೆ ಮಂಜುನಾಥ್ ಕಾಮತ್ ಅವರದ್ದು. ಆ ಕಾರಣಕ್ಕಾಗಿ ಬೆಳಿಗ್ಗೆ ಮಣಿಕರ್ಣಿಕಾ ಘಾಟ್(manikarnika ghat) ಗೆ, ರಾತ್ರಿ ಸಿಕ್ಕ ಪ್ರೇಮ್ ಜೊತೆ ಪಯಣ. ಬಳಿಕ ಹೊರಟಿದ್ದು ಆಸ್ಸಿ ಘಾಟ್ ಗೆ. ಬ್ರಹ್ಮ ಘಾಟ್ ನಿಂದ 4 ಕಿಮೀ ದೂರವಿರುವ ಆಸ್ಸಿ ಘಾಟ್(Assi ghat)ಗೆ ನದಿ ತೀರದಲ್ಲಿಯೇ ಕಾಲ್ನಡಿಗೆ.
ಸುಂದರ ತಾಣ ಕಾಶಿ
ವಿವಿಧ ವೇಷ ಭೂಷಣ ಧರಿಸಿರುವ ಸಾಧುಗಳು, ಪ್ರವಾಸಿಗರನ್ನು ಕೊಂಡೊಯ್ಯವ ದೋಣಿಗಳು. ದೊಡ್ಡ ಕೊಡೆಯ ಅಡಿಯಲ್ಲಿ ಕೂತ ಬ್ರಾಹ್ಮಣರು. ಶ್ರದ್ಧೆ ಪೂಜೆ ಮಾಡುತ್ತಿರುವ ಭಕ್ತರು. ಬಹಳ ವಿವಿಧತೆ ಇರುವ ಜಾಗ. ಹಳೇ ಕಟ್ಟಡಗಳ ನಡುವಿನ ಕಿರಿದಾದ ದಾರಿ ಬಹಳ ಆಕರ್ಷಕವಾಗಿ ಕಾಣುತ್ತಿತ್ತು.
ಮಂಜುನಾಥ್ ಕಾಮತ್ ಅಲ್ಲಿನ ಪೇಟೆಗಳನ್ನು ಸುತ್ತಾಡಿ, ಕಾಶಿ ವಿಶ್ವನಾಥ ಮಂದಿರ(kashi vishwanath temple)ಕ್ಕೆ ಭೇಟಿ ನೀಡಿದರು. ಪವಿತ್ರ ಗಂಗೆಯ(river ganaga) ಆರತಿಯಲ್ಲಿ ನೆರೆದಿದ್ದ ಸಾವಿರಾರು ಜನರಲ್ಲಿ ಕಾಮತ್ ಕೂಡ ಒಬ್ಬರಾಗಿದ್ದರು. ದೋಣಿಯಲ್ಲಿ ಕುಳಿತು ಗಂಗಾರತಿ ವೀಕ್ಷಣೆ. ಆ ದಿನ ಕಾಶಿಯ ಸುತ್ತ ನದಿ ದಡದಲ್ಲಿ ಸುತ್ತಾಟ. ಕಾಶಿಗೆ ವಿದಾಯ.
ಅಯೋಧ್ಯೆಯಲ್ಲಿ ಸಿಕ್ಕ ಅಪರಿಚಿತ
ಮುಂದಿನ ಪಯಣ ಹೊರಟಿದ್ದು ಅಲ್ಲಿಂದ 200ಕಿಮೀ ದೂರದ ಅಯೋಧ್ಯೆಗೆ(Ayodhye). ಸುಮಾರು 4 ಗಂಟೆಯ ಪಯಣ. ರೈಲಿನಲ್ಲಿ ಟಿಕೆಟ್ ದರ 70ರೂ. ಗೊತ್ತೇ ಇರದ ಊರಿನಲ್ಲಿ ಮಂಜುನಾಥ್ ಕಾಮತ್ ರಿಗೆ ಅದೊಬ್ಬ ವ್ಯಕ್ತಿ ಪರಿಚಯವಾಗಿದ್ದ. ಅಯೋಧ್ಯೆಯಲ್ಲಿ ರೂಮು ಕೊಡಿಸಿ, ಒಂದಿಷ್ಟು ಸ್ಥಳಗಳ ಬಗ್ಗೆ ಹೇಳಿ ನೆರವಾಗಿದ್ದರು. ಪರಿಚಿತನಾಗಿದ್ದ ಆ ಅಪರಿಚಿತ ಹುಡುಗ ಉಮೇಶ್ ಚಂದ್ರಪಾಲ್(Umesh chandrapal).
ಆ ವ್ಯಕ್ತಿ ಮಂಜುನಾಥ್ ಕಾಮತ್ ರನ್ನು ಸರಯೂ ನದಿ(sarayu river) ತೀರಕ್ಕೆ ನಡೆದೇ ಕರೆದೊಯ್ದರು. ಅಲ್ಲೊಂದು ಬೀದಿಯಲ್ಲಿ ರಾಮಯಣ ಸಿನಿಮಾ ಪ್ರದರ್ಶನ ಕಂಡು ಖುಷಿ ಪಟ್ಟಿದ್ದರು ಮಂಜುನಾಥ್ ಕಾಮತ್.
ಮರುದಿನ ರಾಮ ಜನ್ಮ ಭೂಮಿ, ರಾಮಮೂರ್ತಿ, ಎಲ್ಲವನ್ನೂ ನೋಡಿ ಕಣ್ತುಂಬಿಕೊಂಡಿದ್ದರು. ಪಯಣದಲ್ಲಿ ಜೊತೆಯಾಗಿದ್ದ ಸ್ನೇಹಿತ ತನ್ನ ಮನೆಗೆ ತೆರಳಿದ್ದರು. ಮಂಜುನಾಥ್ ಕಾಮತ್ ಪಯಣ ಮುಂದುವರೆದಿತ್ತು.
ಆಗ್ರಾ(Agraa) ಹೊರಟಿತು ಕಾಮತ್ ಪಯಣ
ಮುಂದೆ ಕಾಮತ್ ಪಯಣ ಹೊರಟಿದ್ದು ಆಗ್ರಾ. ಪ್ರೇಮ ಸೌಧ ನೋಡಲು. ಆಗ್ರಾ ನೋಡಬೇಕೆನ್ನುವ ಆಸೆ ಬಾಲ್ಯದಲ್ಲಿಯೇ ಮೂಡಿತ್ತು. ಆಗ್ರಾ ಹೋಗಲು ರೈಲಿಗೆ ಬಹಳ ಹೊತ್ತು ಕಾಯಬೇಕಿತ್ತು. ಆದರೆ ಹೇಗೋ ರೈಲು ಹತ್ತಿದ್ದರು. ಆದರೆ ಸರಿಯಾದ ಸಮಯಕ್ಕೆ ತಲುಪಬೇಕಿದ್ದ ರೈಲು ತಲುಪಿದ್ದು ವಿಳಂಬವಾಗಿ. ಶುಕ್ರವಾರ ಆಗಿರುವುದರಿಂದ ಆಗ್ರಾಗೆ ರಜೆಯಿತ್ತು. ಪ್ರವಾಸಿಗರಿಗೆ ಪ್ರವೇಶ ಇರಲಿಲ್ಲ. ಬೇಸರ ಪಡಲಿಲ್ಲ. ಆದರೆ ಹೇಗೋ ಸಾಹಸ ರೀತಿಯಲ್ಲಿ ತಾಜಾ ಮಹಲ್(Taj Mahal) ನೋಡಿ ಖುಷಿ ಪಟ್ಟರು. ಕೆಲ ಹೊತ್ತು ಅಲ್ಲೇ ಸುತ್ತಾಡಿದರು. ನಂತರ ಆಗ್ರಾ ದಿಂದ ಮಥುರಾ ಪಯಣ.
ಮಥುರಾ ಪಯಣ
ಆಗ್ರಾದಿಂದ ಮಥುರಾ(mathura) ಹೋಗಲು ಟೆಂಪೋ ಹತ್ತಿದ್ದರು. 50ಕಿಮೀ ದೂರ. ಅಲ್ಲಿಂದ ಬೃಂದಾವನ(vrandavana) 12ಕಿಮೀ ಅಂತರ. ಕೃಷ್ಣ ಜನ್ಮಭೂಮಿ ಕೂಡ ತೆರೆದಿರಲಿಲ್ಲ. ಆದರೆ ಅಲ್ಲೇ ದೂರದಲ್ಲಿದ್ದ ಕೆರೆ ನೋಡಿ ಖುಷಿ ಪಟ್ಟರು. ಮಹಾಭಾರತದ ಒಂದಷ್ಟು ಸನ್ನಿವೇಶಗಳನ್ನು ಕಲ್ಪಿಸಿಕೊಂಡು, ಆ ಜಾಗದಲ್ಲಿ ಮಹಾ ಭಾರತದ ಕೆಲವು ಘಟನೆಗಳು ಘಟಿಸಿರಬಹುದು ಎಂದು ಕಲ್ಪಿಸಿಕೊಂಡರು. ಒಂದು ತಾಣದ ಜೊತೆಗೆ ಮೂರ್ನಾಲ್ಕು ತಾಣ ಸುತಾಡಿದ್ದರು. ಹತ್ತಾರು ಭಿನ್ನ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ಈ ಪಯಣ. ಮರಳಿ ಊರಿನತ್ತ ಹೆಜ್ಜೆ.
ಕಾಶಿಗೆಂದು ಹೊರಟ ಎಂಜಿಎಂ ಮೇಷ್ಟ್ರು, ಅಯೋಧ್ಯಾ , ಆಗ್ರ, ಮಥುರಾ ಸುತ್ತಾಡಿದ ಕಥೆಯಿದು. 4800 ರೂಪಾಯಿಯಲ್ಲಿ ಉತ್ತರ ಭಾರತದ(North India) ಪ್ರಮುಖ ಸ್ಥಳಗಳನ್ನು ಸುತ್ತಿ ಬಂದಿದ್ದರು. ವಿಮಾನದ ಗಂಟೆಗಳ ಪಯಣಗಿಂತ , ರೈಲಿನಲ್ಲಿ ಸಂಚಾರ ಮಾಡುವ ದಿನಗಳ ಪಯಣ ಅದೇನೋ ಹೊಸ ಖುಷಿ ಕೊಡುತ್ತದೆ. ತನ್ನ ವೃತ್ತಿ ಬದುಕಿನ ಜವಾಬ್ದಾರಿಗಳ ನಡುವೆ ದೇಶ ಸುತ್ತುವ ಇಂತಹ ಒಂಟಿ ಪಯಣಿಗರು ಇತರರಿಗೆ ಸ್ಫೂರ್ತಿ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ