ಇವರ ದಾರಿಯೇ ಡಿಫರೆಂಟುಕಾಡಿನ ಕತೆಗಳುವಿಂಗಡಿಸದಸ್ಫೂರ್ತಿ ಗಾಥೆ

ಶೆರ್ನಿ(sherni)ಸಿನಿಮಾದ ವಿದ್ಯಾ ಬಾಲನ್ ಪಾತ್ರಕ್ಕೆ ಸ್ಫೂರ್ತಿ ಇವರೇ IFS ಕೆ ಎಂ ಆಭರಣ

ಭಾರತೀಯ ಚಿತ್ರರಂಗದಲ್ಲಿ ಹಲವರ ಜೀವನಾಧಾರಿತ ಸಿನಿಮಾಗಳು ತೆರೆಗೆ ಬಂದಿದೆ. ಹಲವು ಸಮಯದಲ್ಲಿ ಈ ಸಿನಿಮಾಗಳಿಗೆ ಸಾಮಾನ್ಯರಂತೆ ಬದುಕಿ , ಅಸಾಮಾನ್ಯ ಸಾಧನೆ ಮಾಡಿದವರು ಸ್ಫೂರ್ತಿ. ಅಂತಹ ಜೀವನಾಧಾರಿತ ಸಿನಿಮಾಗಳಲ್ಲಿ ವಿದ್ಯಾಬಾಲನ್ ನಟನೆಯ, ಇತ್ತೀಚಿಗೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಗೊಂಡ ಶೆರ್ನಿ(sherni) ಕೂಡ ಒಂದು.

ಕೆ. ಎಂ ಆಭರಣ ಎನ್ನುವ ಮಹಿಳಾ ಅರಣ್ಯಾಧಿಕಾರಿ ಶೆರ್ನಿ ಸಿನಿಮಾದಲ್ಲಿನ ವಿದ್ಯಾ ಬಾಲನ್ ಪಾತ್ರಕ್ಕೆ ಸ್ಫೂರ್ತಿ . ತನ್ನ ವೃತ್ತಿ ಬದುಕಿನಲ್ಲಿ ಸಾಕಷ್ಟು ಸವಾಲುಗಳು ಅಡೆತಡೆಗಳನ್ನು ಎದುರಿಸಿ ಹಲವರಿಗೆ ಸ್ಫೂರ್ತಿಯಾದ ಕೆ.ಎಂ. ಆಭರಣ ಎನ್ನುವ ಮಹಿಳಾ ಅಧಿಕಾರಿಯ ಕಥೆಯಿದು.

  • ನವ್ಯಶ್ರೀ ಶೆಟ್ಟಿ

ಬಾಲಿವುಡ್ ನಲ್ಲಿ ವಿದ್ಯಾಬಾಲನ್ (vidhya ballan) ಅಭಿನಯದ ಶೆರ್ನಿ
ಸಿನಿಮಾ ಅಮೆಜಾನ್ ಪ್ರೈಮ್(amazon prime) ನಲ್ಲಿ ಬಿಡುಗಡೆಗೊಂಡಿದೆ. ಮಹಿಳಾ ಐ. ಎಫ್.ಎಸ್.(I.F.S) ಅಧಿಕಾರಿಯ ಜೀವನಗಾಥೆಯ ಕಥಾ ಹಂದರವುಳ್ಳ ಸಿನಿಮಾವಿದು. ಈ ಸಿನಿಮಾದಲ್ಲಿ ನಟಿ ವಿದ್ಯಾ ಬಾಲನ್ ಪಾತ್ರಕ್ಕೆ ಸ್ಫೂರ್ತಿ ಕೆ.ಎಂ. ಆಭರಣ(K.M.Abharana) ಎನ್ನುವ ಮಹಿಳಾ ಅರಣ್ಯಾಧಿಕಾರಿ.

K M Abharana IFS Officer Sherni Amazon Prime Video

ಮಧ್ಯಪ್ರದೇಶದ ಕಾಡುಗಳಲ್ಲಿ ನಡೆಯುವ ಈ ಕಥೆ ಮಹಿಳಾ ಅಧಿಕಾರಿಯ ಸುತ್ತವೇ ಸುತ್ತುವ ಕಥೆ. ತನ್ನ ತಂಡದ ಜೊತೆಗೆ ಹಾಗೂ ಸ್ಥಳೀಯರ ನೆರವಿನೊಂದಿಗೆ ಜೀವಂತ ಹುಲಿಯನ್ನು ಸೆರೆಹಿಡಿಯುವ ಮಹಿಳಾ ಅಧಿಕಾರಿ, ಆ ನಿಟ್ಟಿನಲ್ಲಿ ಆಕೆ ಅನುಭವಿಸುವ ಅಡೆತಡೆಗಳನ್ನು ಈ ಸಿನಿಮಾದಲ್ಲಿ ಸುಂದರವಾಗಿ ಚಿತ್ರಿತವಾಗಿದೆ.

ಕೆ. ಎಂ ಆಭರಣ ೨೦೧೩ರ ಸಾಲಿನ ಐ.ಐಫ್.ಎಸ್ ಅಧಿಕಾರಿ

ಭಾರತದ ಅರಣ್ಯ ಇಲಾಖೆಯಲ್ಲಿ ಮಹಿಳಾ ಅರಣ್ಯಾಧಿಕಾರಿಗಳ ಸಂಖ್ಯೆ ಬಹುವಿರಳ. ೧೯೮೦ ರ ತನಕ ಇದ್ದದ್ದು ಕೇವಲ ೩ ಮಹಿಳಾ ಅಧಿಕಾರಿಗಳು ಮಾತ್ರ . ಪ್ರಸ್ತುತ ಭಾರತದಲ್ಲಿ ಅರಣ್ಯ ಇಲಾಖೆಯಲ್ಲಿ ಇರುವ ಪ್ರಮುಖ ೫೦೦೦ ಹುದ್ದೆಗಳಲ್ಲಿ ಮಹಿಳೆಯರಿರುವುದು ೨೮೪ ಜನ ಮಾತ್ರ. ಆದರೆ ಅವರ ದಕ್ಷತೆ ಯಾವ ಪುರುಷರಿಗೂ ಕಮ್ಮಿಯಿಲ್ಲ. ಇದಕ್ಕೆ ಕೆ. ಎಂ.ಆಭರಣ ಎನ್ನುವ ಮಹಿಳಾ ಅಧಿಕಾರಿ ಸಾಕ್ಷಿ. ಕೆ. ಎಂ.ಆಭರಣ ೨೦೧೩ನೇ ಸಾಲಿನ ಮಹಿಳಾ ಐ.ಐಫ್.ಎಸ್ ಅಧಿಕಾರಿ.

ಪಿತೃ ಪ್ರಧಾನ ಸಮಾಜದ ಕಟ್ಟಳೆಗಳ ನಡುವೆ ಬೆಳೆದು ಬಂದ ಈಕೆ , ಹಲವು ಸಾಮಾಜಿಕ ಸಮಸ್ಯೆಗಳನ್ನು ಅನುಭವಿಸಿ ಬೆಳೆದವರು. ಆದರೆ ಅವರ ತುಡಿತವಿದ್ದದ್ದು ಅರಣ್ಯ ಜೀವ ಸಂರಕ್ಷಣೆಯ ಬಗ್ಗೆ. ಆಕೆ ಅರಣ್ಯ ಬಗ್ಗೆಗಿನ ತನ್ನ ಕಾಳಜಿ ,ಕನಸನ್ನು ಸಾಧಿಸಿದ್ದಾರೆ. ಶೆರ್ನಿ ಸಿನಿಮಾದ ನಿಜವಾದ ಕಥಾನಾಯಕಿ ಮೌನವಾಗಿ ಎಲ್ಲವನ್ನೂ ಸಾಧಿಸಿದ್ದಾರೆ.

ಅವನಿ(avni) ಹುಲಿಯ ಶೂಟೌಟ್ ಉಸ್ತುವಾರಿ

ನಿಮಗೆಲ್ಲ ೨೦೧೮ರಲ್ಲಿ ಮಹಾರಾಷ್ಟ್ರದಲ್ಲಿ ನರಭಕ್ಷಕ ಅವನಿ ಹುಲಿಯ ಶೂಟೌಟ್ ಪ್ರಕರಣ ನೆನಪಿರಬಹುದು . ೨ ವರ್ಷಗಳಲ್ಲಿ ಮಹಾರಾಷ್ಟ್ರದ ೧೩ ಮಂದಿಯನ್ನು ಕೊಂದು ಹಾಕಿದ್ದ ಹುಲಿಯಿದು. ಈ ನರಭಕ್ಷ ಕ ಹುಲಿಯ ಶೂಟೌಟ್ ಗೆ ನ್ಯಾಯಾಂಗ ಕೂಡ ಅನುಮತಿ ನೀಡಿತ್ತು. ಆದರೆ ಅವನಿ ಹುಲಿಯ ಸೆರೆ ಹಿಡಿಯುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಕೊನೆಗೂ ಮಹಾರಾಷ್ಟ್ರ ಅರಣ್ಯಾಧಿಕಾರಿಗಳ ಸತತ ಶ್ರಮದಿಂದ ಅವನಿ ಹುಲಿಯ ಭಯದಿಂದ ಅಲ್ಲಿನ ಜನ ಕೊನೆಗೂ ಮುಕ್ತವಾಗಲು ಸಾಧ್ಯವಾಗಿತ್ತು. ಈ ಪ್ರಕರಣದ ಉಸ್ತುವಾರಿಯನ್ನು ವಹಿಸಿದ್ದು ಕೆ.ಎಂ ಆಭರಣ ಅನ್ನುವ ಮಹಿಳಾ ಅಧಿಕಾರಿ.

K M Abharana IFS Officer Avani Tiger shootout Sherni

ನರಭಕ್ಷಕ ಹುಲಿಯನ್ನು ಅರಣ್ಯ ಅಧಿಕಾರಿಗಳಿಗೆ ಸೆರೆ ಹಿಡಿಯಲು ಸಾಧ್ಯವಾಗದ ಸಮಯದಲ್ಲಿ ,ಸ್ಥಳೀಯರು ಅಧಿಕಾರಿಗಳ ಮೇಲಿನ ನಂಬಿಕೆ ಕಳೆದುಕೊಂಡಿದ್ದರು . ಇಂತಹ ಸಮಯದಲ್ಲಿ ಪಂದರ್ಕವಾಡ(pandarkavada) ಪ್ರಾಂತ್ಯದ ಅರಣ್ಯ ಉಪ ಸಂರಕ್ಷಣಾ ಅಧಿಕಾರಿಯಾಗಿ(deputy consevator of the forest) ಅಧಿಕಾರ ವಹಿಸಿಕೊಂಡಿದ್ದರು ಕೆ. ಎಂ. ಆಭರಣ. ತಂಡವೊಂದನ್ನು ರಚಿಸಿ ಅವನಿ ಹುಲಿಯ ಸೆರೆಗೆ ಸಿದ್ಧರಾಗಿದ್ದರು ಕೆ. ಎಂ.ಆಭರಣ.

ನೀವುಇದನ್ನುಇಷ್ಟಪಡಬಹುದು: ಮಾಫಿಯಾ ಎದುರು ಹಾಕಿಕೊಂಡು ಪರಿಸರ ರಕ್ಷಿಸಿ ಅಂತಾರಾಷ್ಟ್ರೀಯ ರೇಂಜರ್ ಪ್ರಶಸ್ತಿ ಪಡೆದ ಸಾಹಸಿ ಸತೀಶ್

ಅವನಿ ಹುಲಿಯ ಕಾರ್ಯಾಚರಣೆಯಲ್ಲಿ ಕೆ. ಎಂ. ಆಭರಣ

ಪಂದರ್ಕವಾಡ ಪ್ರಾಂತ್ಯದಲ್ಲಿ ಉಪ ಸಂರಕ್ಷಣಾ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನರಭಕ್ಷಕ ಹುಲಿಯ ಸೆರೆ ಹಿಡಿಯಲು ಕೆ. ಎಂ .ಆಭರಣ, ತಮ್ಮ ನೇತೃತ್ವದಲ್ಲಿ ಅಧಿಕಾರಿಗಳ ತಂಡವೊಂದನ್ನು ರಚಿಸಿದ್ದರು. ಕೇವಲ ಅಧಿಕಾರಿಗಳಿಂದ ಕಾರ್ಯ ತಮ್ಮ ಸಾಧನೆ ಸಾಧ್ಯವಿಲ್ಲ ಅನುವುದು ಆಭರಣ ಅವರಿಗೆ ಚೆನ್ನಾಗಿ ತಿಳಿದಿತ್ತು. ಈ ಕಾರಣಕ್ಕಾಗಿ ಮಹಿಳಾ ಅಧಿಕಾರಿ ಅಲ್ಲಿನ ಸ್ಥಳೀಯರ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಪರಿಸ್ಥಿತಿಯ ಆಗುಹೋಗುಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸುತ್ತಿದ್ದರು.

K M Abharana IFS Officer Avani Tiger shootout Sherni

ಕೂಂಬಿಂಗ್ ಕಾರ್ಯಾಚರಣೆ ಸೇರಿದಂತೆ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದರು ಆಭರಣ. ಪರಿಸ್ಥಿತಿಯನ್ನು ತಹಬದಿಗೆ ತರುವ ನಿಟ್ಟಿನಲ್ಲಿ ಸರ್ವ ಪ್ರಯತ್ನ ನಡೆದಿತ್ತು. ಅಂತಿಮವಾಗಿ ಯಶಸ್ಸು ಕೂಡಾ ಪಡೆದಿದ್ದರು.

ಜನಪರ ಯೋಜನೆಯಲ್ಲೂ ಮುಂದು ಮಹಿಳಾ ಅಧಿಕಾರಿ

ಅರಣ್ಯ ಸಂರಕ್ಷಣೆಯ ಜೊತೆಗೆ ನರಭಕ್ಷಕ ಪ್ರಾಣಿಗಳಿಂದ ಜನರಿಗೆ ಆಗುವ ತೊಂದರೆಗಳನ್ನು ತಪ್ಪಿಸುವುದು ಆಭರಣ ಅವರ ವೃತ್ತಿ ಜೀವನದಲ್ಲಿ ಸಾಮಾನ್ಯ . ಇದರ ಜೊತೆಗೆ ಸಾಕಷ್ಟು ಜನಪರ ಕಾಳಜಿಯ ಯೋಜನೆಗಳನ್ನು ಜಾರಿಗೆ ತಂದಿದ್ದರು.

K M Abharana IFS Officer Sherni Amazon Prime Video

ಮಹಿಳಾ ಅಧಿಕಾರಿಗಳ ಗುಂಪು ರಚಿಸಿ ಜನರಲ್ಲಿ ಅರಿವು ಮೂಡಿಸುವ ಮಾಡಿದ್ದಾರೆ. ಹುಲಿಗಳ ಸಂಖ್ಯೆ ಜಾಸ್ತಿಯಿರುವ ಮರೆಗೊನ್ (maregon), ಪಂದರ್ಕವಾಡ(pandarkavada) ಪ್ರಾಂತ್ಯಗಳಲ್ಲಿ ಜನರಿಗೆ ಅರಿವು ಮೂಡಿಸಿ ಸಾಮಾಜಿಕ ಕಳಕಳಿ ಮೆರೆದಿದ್ದರು ಮಹಿಳಾ ಅಧಿಕಾರಿ ಕೆ. ಎಂ.ಆಭರಣ.

ವೃತ್ತಿ ಜೀವನದ ಮೈಲಿಗಲ್ಲುಗಳು

ಮಹಾರಾಷ್ಟ್ರದಲ್ಲಿ ಅವನಿ ಹುಲಿಯ ಪ್ರಕರಣದ ಸಮಯದಲ್ಲಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಆಭರಣ , ಕಾಜಿರಂಗ ರಾಷ್ಟೀಯ ಉದ್ಯಾನವನದಲ್ಲಿ ಕೇಂದ್ರೀಯ ಶ್ರೇಣಿಯ ಅಧಿಕಾರಿಯಾಗಿದ್ದರು. ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಒಂಟಿ ಕೊಂಬಿನ ಖಡ್ಗಮೃಗಗಳಿಗೆ ಪ್ರಸಿದ್ಧಿ. ಅಲ್ಲಿ ತಾವು ಸೇವೆಯಲ್ಲಿದ್ದ ಸಮಯದಲ್ಲಿ ಖಡ್ಗಮೃಗಗಳ ಶೂನ್ಯ ಬೇಟೆಯನ್ನು ಸಾಧಿಸಿದ್ದರು.

ಕೇವಲ ಇವಿಷ್ಟು ಮಾತ್ರವಲ್ಲ ,ಆಭರಣ ತಮ್ಮ ವೃತ್ತಿ ಜೀವನದಲ್ಲಿ ಜನಪರ ಕಾಳಜಿಗಳಿಂದ ಹೆಸರಾದವರು. ೨೦೧೬-೧೭ರ ಸಾಲಿನಲ್ಲಿ ಪ್ಲಾಸ್ಟಿಕ್ ನಿಷೇಧಗೊಳಿಸುವ ಕಾರ್ಯದಲ್ಲಿ ಆಸಕ್ತಿ ವಹಿಸಿದ್ದರು. ತಮ್ಮ ವ್ಯಾಪ್ತಿಯಲ್ಲಿ ಬರುವ ಅನೇಕ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದರು ಮಹಿಳಾ ಐ.ಎಫ್.ಎಸ್ ಅಧಿಕಾರಿ.

Sherni VidyaBalan K M Abharana AmazonPrimeVideo

ಸಹಾಯಕ ಸಂರಕ್ಷಣಾ ಅಧಿಕಾರಿಯಾಗಿ ಸಮುದಾಯ ಆಧಾರಿತ ಕಾರ್ಯ ಹಾಗೂ ಮಾನವ ಕೋತಿಯ ನಡುವೆ ಸಂರಕ್ಷಣೆ ಹೆಚ್ಚಿರುವ ಅಸ್ಸಾಮಿನ ದೆರ್ಗಾನ್(dergon)ವಿಭಾಗದ, ಗೊಲಘಾಟ್ (golaghat) ಪ್ರಾಂತ್ಯದ ೪೦ ಹಳ್ಳಿಗಳಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಿದ್ದರು. ನಾನಾ ಜನಪರ ಕಾರ್ಯಆಭರಣ ಯಶಸ್ಸು ಸಾಧಿಸಿದ್ದರು. ಪ್ರಸ್ತುತ ಆಭರಣ, ಮಹಾರಾಷ್ಟ್ರದಲ್ಲಿ ಬಿದಿರಿನ ಸಂಶೋಧನೆ ಮತ್ತು ತರಬೇತಿ ಕೇಂದ್ರದಲ್ಲಿ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ.

ಸರಕಾರಿಯ ಅಧಿಕಾರಿಯ ಕುರಿತು ಸಿನಿಮಾಗಳು ತಯರಾಗುವುದು ಬಹು ಅಪರೂಪ. ಮಹಿಳಾ ಅರಣ್ಯ ಅಧಿಕಾರಿಯೊಬ್ಬರ ಕುರಿತು ಸಿನಿಮಾ ಬಂದಿರುವುದು ಸಾಮಾನ್ಯ ಸಂಗತಿಯಲ್ಲ. ಕೆ. ಎಂ.ಆಭರಣ ಅನ್ನುವ ಐಎಫ್ಎಸ್ ಅಧಿಕಾರಿ
ಯ ಸಾಧನೆಯ ಕುರಿತು ಸಿನಿಮಾ ತಯಾರಾಗುವುದು, ನಿಜಕ್ಕೂ ಪ್ರೇರಣೆ.

ಆಕೆಯ ಬದುಕಿನ ಸಾಹಸ, ಸವಾಲುಗಳ ಕಥೆ ಸಿನಿಮಾದಲ್ಲಿ ಚಿತ್ರಿತವಾಗಿದೆ. ಆಭರಣ ಅನ್ನುವ ಧೈರ್ಯವಂತ ಮಹಿಳಾ ಅಧಿಕಾರಿಯ ಕುರಿತು ತಯಾರಾದ ಶೆರ್ನಿ(sherni) ಸಿನಿಮಾ ಸಾಕಷ್ಟು ಪ್ರಶಂಶೆ ಗಳಿಸಿಕೊಂಡಿದೆ. ನೀವೂ ಒಮ್ಮೆ ಅಮೆಜಾನ್ ಪ್ರೈಮ್ ನಲ್ಲಿ ಸಿನಿಮಾ ವೀಕ್ಷಿಸಿ. ನಿಮಗೂ ಕೆ. ಎಂ.ಆಭರಣ ಸ್ಫೂರ್ತಿ ತುಂಬಬಹುದು.

Sherni Vidya Balan K M Abharana Amazon Prime Video

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button