ನೀವು ಭೇಟಿ ನೀಡಬಹುದಾದ ಎರಡು ವಿಶಿಷ್ಟ ಶಿವ ಸನ್ನಿಧಾನಗಳು
![Kailasagiri Hill ಕೈಲಾಸಗಿರಿ ಬೆಟ್ಟ](https://kannada.travel/wp-content/uploads/2021/03/thumb80-9.jpg)
# ಶಿವರಾತ್ರಿ ವಿಶೇಷ
![](https://kannada.travel/wp-content/uploads/2021/03/Someswaragudi-Dharwad-03-1024x768.jpg)
ಇಂದು ಶಿವರಾತ್ರಿ. ಶಿವನನ್ನು ಆರಾಧಿಸುವ ದಿನ. ಒಮ್ಮೆ ಶಿವ ಸನ್ನಿಧಿಗೆ ಭೇಟಿ ಕೊಟ್ಟರೆ ಸಿಗುವ ಅಪಾರ ಸಮಾಧಾನವನ್ನು ಈ ದಿನ ನೀಡುತ್ತದೆ. ಶಿವ ಭಕ್ತರು ಈ ದಿನ ಒಂದು ಗಳಿಗೆ ಶಿವ ದೇಗುಲಕ್ಕೆ ಭೇಟಿ ನೀಡಿ ತಮ್ಮ ಮನಸಿನ ದುಗುಡಗಳನ್ನು ಶಿವನ ಜೊತೆ ಹಂಚಿಕೊಳ್ಳುತ್ತಾರೆ. ಶಿವ ಮೌನವಾಗಿ ದುಗುಡ ಕಳೆಯುತ್ತಾನೆ. ನೆಮ್ಮದಿ ನೀಡುತ್ತಾನೆ. ಹೀಗೆ ನೆಮ್ಮದಿ ನೀಡುವ ಎರಡು ವಿಶಿಷ್ಟ ಶಿವ ಸನ್ನಿಧಿಗಳ ಪರಿಚಯ ಇಲ್ಲಿದೆ. ನಮ್ಮ ತಂಡದ ಸುವರ್ಣಲಕ್ಷ್ಮಿ ಮತ್ತು ಆದಿತ್ಯ ಯಲಿಗಾರ ಈ ಶಿವ ಸನ್ನಿಧಿಗಳ ಪರಿಚಯ ಮಾಡಿದ್ದಾರೆ.
![](https://kannada.travel/wp-content/uploads/2021/03/Someswaragudi-Lake-Dharwad-01-1024x768.jpg)
- ಧಾರವಾಡದ ಸೋಮೇಶ್ವರ ದೇವಾಲಯ
ಬಂತಣ್ಣ ಸಣ್ಣ ಸೋಮಾರ
ಕಾಣಬೇಕಣ್ಣ ಸೋಮೇಶ್ವರ
– ದ. ರಾ. ಬೇಂದ್ರೆ
![](https://kannada.travel/wp-content/uploads/2021/03/Someswaragudi-Dharwad-05-1024x768.jpg)
ಧಾರವಾಡ ಶಹರದ ಶಿವನಿಗೆ ಅರ್ಪಿತವಾದ ಪ್ರಮುಖ ದೇವಾಲಯಗಳಲ್ಲಿ ಕೇಂದ್ರ ಸ್ಥಾನ, ಧಾರವಾಡದ ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದ ಸೋಮೇಶ್ವರ ದೇವಸ್ಥಾನಕ್ಕೆ ಸಲ್ಲುತ್ತದೆ. ಶಾಲ್ಮಲೆಯ ನದಿಯ ತಟದಲ್ಲಿ ಅತೀವ ತನ್ಮತೆಯಿಂದ ನೆಲೆ ನಿಂತ ಈ ದೇವಾಲಯಕ್ಕೆ ತನ್ನದೇ ಆದ ವಿಶಿಷ್ಟ ಐತಿಹ್ಯವಿದೆ. ಮಹಾಭಾರತದ ಕಾಲದಲ್ಲಿ ಅಗಸ್ತ್ಯ ಮುನಿಗಳು ದಕ್ಷಿಣ ಭಾರತದ ಪ್ರವಾಸದಲ್ಲಿದ್ದಾಗ ಈ ಜಾಗದಲ್ಲಿ ವಿಶ್ರಮಿಸಿದ್ದರೆಂದು ಹಾಗೂ ಈ ಸಮಸ್ತ ಪ್ರದೇಶ ಕಗ್ಗಾಡಿನಲ್ಲಿದ್ದು, ಅಗಸ್ತ್ಯ ಮುನಿಗಳು ತಮ್ಮ ಅತೀಂದ್ರಿಯ ಶಕ್ತಿಗಳಿಂದ ಶಿವಲಿಂಗವನ್ನು ಸೃಷ್ಟಿಸಿ ಶಾಲ್ಮಲೆ ನದಿಯ ಉಗಮಸ್ಥಾನಕ್ಕೆ ನಾಂದಿ ಹಾಡಿ ಅದು ಗುಪ್ತಗಾಮಿನಿಯಾಗಿ ಹರಿಯಲು ಕಾರಣರಾದರು ಎಂಬ ಪ್ರತೀತಿ ಇದೆ. ಈ ದೇವಾಲಯವು ಹನ್ನೆರೆಡನೆಯ ಶತಮಾನದಲ್ಲಿ ಜಕಣಾಚಾರ್ಯರಿಂದ ನಿರ್ಮಿತವಾಗಿದ್ದು ಎಂದೆನ್ನಾಲಾಗುತ್ತದೆ.
![](https://kannada.travel/wp-content/uploads/2021/03/Someswaragudi-Dharwad-09-1024x768.jpg)
ಈ ದೇವಾಲಯದ ಹತ್ತಿರ ಪುಷ್ಕರಣಿ ಇದ್ದು ಸುತ್ತಮುತ್ತಲೂ, ನವಗ್ರಹ, ಶನೇಶ್ವರ ದೇವಸ್ಥಾನ, ದತ್ತಾತ್ರೇಯನ ಪಾದುಕೆ, ವೀರಭದ್ರೇಶ್ವರ ದೇವಸ್ಥಾನ, ಆಂಜನೇಯ ಗುಡಿ ಹೀಗೆ ಚಿಕ್ಕ ಚಿಕ್ಕ ದೇವಸ್ಥಾನಗಳಿವೆ.
ಈ ದೇವಸ್ಥಾನದಿಂದ ಅರ್ಧ ಕಿ.ಮೀ ದೂರದಲ್ಲಿ ಶಾಲ್ಮಲಾ ನದಿಯ ಉಗಮವಿದೆ. ಶಾಲ್ಮಲಾ ನದಿ ಇಲ್ಲಿಂದ ಉಗಮಗೊಂಡು ಕಾರವಾರದಲ್ಲಿ ಅಘನಾಶನಿಯಾಗಿ ರೂಪಗೊಂಡು ಸಾಗರ ಸೇರುತ್ತದೆ. ಸುತ್ತಮುತ್ತಲೂ ಹಸಿರಿನಿಂದ ಕಂಗೊಳಿಸುವ ಈ ದೇವಸ್ಥಾನಕ್ಕೆ ಮಹಾ ಶಿವರಾತ್ರಿದಿನದಂದು ಅಪಾರ ಭಕ್ತ ವೃಂದವೇ ಹರಿದು ಬರುತ್ತದೆ. ಧಾರವಾಡದಿಂದ ನಾಲ್ಕೂವರೆ ಕಿ.ಮೀ ದೂರದಲ್ಲಿ ಕಲಘಟಗಿ ಹೋಗುವ ಮಾರ್ಗದಲ್ಲಿ ಎಸ್.ಡಿ.ಎಮ್ ಇಂಜಿನಿಯರಿಂಗ್ ಕಾಲೇಜಿನ ಹತ್ತಿರ ಈ ದೇವಸ್ಥಾನವಿದೆ.
![](https://kannada.travel/wp-content/uploads/2021/03/EWiWaN-VcAASHii-1024x768.jpg)
ನೀವು ಇದನ್ನು ಇಷ್ಟಪಡಬಹುದು: ಬಸವ ಕಲ್ಯಾಣದ ಶರಣರಿಗೆ ನಮಸ್ಕಾರ; ಬೀದರ್ ಕಡೆ ಹೋದರೆ ಈ 13 ಶರಣ ಸ್ಮಾರಕಗಳನ್ನು ನೋಡಿ ಬನ್ನಿ
2. ಕೈಲಾಸವನ್ನು ನೆನಪಿಸುವ ಕೈಲಾಸಗಿರಿ
ಚಿಂತಾಮಣಿಯಿಂದ ಕೂಗಳತೆಯಲ್ಲಿರುವ ಕೈಲಾಸಗಿರಿ ದೇವಾಲಯ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಮಾಜಿ ಶಾಸಕರು ಮಂತ್ರಿಗಳ ಆದ ಚೌಡರೆಡ್ಡಿಯವರ ಕನಸಿನ ಕೂಸು, ಚಿಂತಾಮಣಿಯಿಂದ ಬೆಂಗಳೂರಿಗೆ ಹೋಗುವ ದಾರಿಯಲ್ಲಿ ಮೂರು ಕಿಮೀ ಪ್ರಯಾಣಿಸಿ ಬಲಕ್ಕೆ ತಿರುವು ಪಡೆದು ಚಿಂತಾಮಣಿ ಕೆರೆ ಪಕ್ಕದಲ್ಲಿ ಹಾದು ಸ್ವಲ್ಪ ಮುಂದೆ ಸಾಗಿ ಬೆಟ್ಟ ಹತ್ತಿದರೆ ಸಿಗುವುದೇ ಕೈಲಾಸಗಿರಿ.
![](https://atmanirvana.com/wp-content/uploads/2020/08/maxresdefault-1.jpg)
ಇಲ್ಲಿ ಬೆಟ್ಟವನ್ನೇ ಕೊರೆದು ದೇವಸ್ಥಾನ ನಿರ್ಮಿಸಲಾಗಿದೆ ದೇವಸ್ಥಾನವನ್ನು ಮೂರು ಗವಿಗಳನ್ನು ಕೊರೆದು ನಿರ್ಮಿಸಿದ್ದಾರೆ. ಮಧ್ಯದ ಗವಿಯಲ್ಲಿ ಸುಂದರವಾದ ಚತುರ್ಮುಖಗಳನ್ನು ಹೊಂದಿರುವ ಈಶ್ವರ ಲಿಂಗ ಪ್ರತಿಷ್ಟಿಸಲಾಗಿದೆ. ಬಲಗಡೆ ಗವಿಯಲ್ಲಿ ಪ್ರಥಮ ಪೂಜಿತ ಗಣಪನನ್ನೂ ಎಡಗಡೆ ಪಾರ್ವತಿದೇವಿಯನ್ನೂ ಪ್ರತಿಷ್ಟಾಪಿಸಲಾಗಿದೆ. ಹಾಗೆಯೇ ವಿಶಾಲವಾದ ಕಲ್ಯಾಣ ಮಂಟಪವನ್ನೂ ಬಂಡೆಯಲ್ಲೇ ಕೊರೆಯಲಾಗಿದೆ. ಈ ತಾಣ ಟ್ರೆಕ್ಕಿಂಗ್ ಗೂ ,ಫೋಟೋಗ್ರಫಿಗೂ, ಭಕ್ತಿಗೂ ಸೂಕ್ತವಾದ ಸ್ಥಳ.
![](https://1.bp.blogspot.com/_RXqRBRtXuTo/SkDs7KV66oI/AAAAAAAAAY8/iMntgemSilg/s1600/IMG_1062.jpg)
ಬೆಟ್ಟದ ಮೇಲಿನಿಂದ ಚಿಂತಾಮಣಿ ಕೆರೆಯ ವಿಹಂಗಮ ನೋಟ ಸವಿಯ ಬಹುದು. ಈ ದೇವಸ್ಥಾನಕ್ಕೆ ಹೋಗಲು ಪ್ರತಿದಿನ ಮಧ್ಯಾಹ್ನ 12ಗಂಟೆ ಗೆ ಉಚಿತ ಬಸ್ ಸೌಕರ್ಯ ಸಹ ಒದಗಿಸಲಾಗಿದೆ. ಬಸ್ ಚಿಂತಾಮಣಿ ಪ್ರತಿಷ್ಟಿತ ಕಿಶೋರ್ ವಿದ್ಯಾಭವನದಿಂದ ಹೊರಡುತ್ತವೆ. ಬೆಂಗಳೂರಿಗರ ವೀಕೆಂಡ್ ಗೆ ಉತ್ತಮ ಸ್ಥಳ
![](https://4.bp.blogspot.com/_RXqRBRtXuTo/SkDsGy5iwLI/AAAAAAAAAY0/XjSYpBIawIs/s1600/IMG_1065.jpg)
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ