‘ಮೊನ್ ಪಾ ‘ ಎಂಬ ವಿಶಿಷ್ಟ ಜನಾಂಗದ ಕಥೆ
ಸೂರ್ಯೋದಯದ ನಾಡು ಎಂದು ಕರೆಯಲ್ಪಡುವ ಅರುಣಾಚಪ್ರದೇಶ ದಲ್ಲಿ ಮೋನ್ ಎನ್ನುವ ಪ್ರದೇಶವಿದೆ. . ಇಲ್ಲಿ ಸೂರ್ಯೋದಯ ಬೆಳಿಗ್ಗೆ ನಾಲ್ಕೂವರೆ ಗಂಟೆಗೆ . ಇಲ್ಲಿನ ನಿವಾಸಿಗಳ ಹಿಂದೊಂದು ಕಥೆಯಿದು. ಮೊನ್ ಪಾ ವಾಸಿಗಳಿರುವ ಮೋನ್ ಪ್ರದೇಶದ ಕುರಿತಾದ ಕಥೆ ನಿಮ್ಮ ಓದಿಗೆ.
ರಿಯಾನ
ಅರುಣಾಚಲ ಪ್ರದೇಶ” ಸೂರ್ಯೋದಯದ ನಾಡೆಂದೇ ಪ್ರಸಿದ್ಧಿ ಪಡೆದಿದೆ. ಇದು ಭಾರತದ ಈಶಾನ್ಯ ಭಾಗದಲ್ಲಿದ್ದು ಇಲ್ಲಿ ಸೂರ್ಯೋದಯ ಬೆಳಿಗ್ಗೆ ನಾಲ್ಕೂವರೆ ಗಂಟೆಗೆ! ಇದರ ಪಶ್ಚಿಮ ಭಾಗದಲ್ಲಿರುವ ಒಂದು ಜಿಲ್ಲೆಯಾಗಿದೆ ತವಾಂಗ್. ಟಿಬೆಟ್ ನ ಹಿಮಾಲಯದ ಪರ್ವತ ಶ್ರೇಣಿ ಹಾಗೂ ಭೂತಾನ್ ಗಳಿಗೆ ಅಂಟಿಕೊಂಡಿರುವ ತವಾಂಗ್ ಪ್ರದೇಶಕ್ಕೆ ‘ಮೊನ್ಯೂಲ್’ ಅಥವಾ ‘ಮೋನ್’ ಎಂಬ ಹೆಸರುಗಳೂ ಇವೆ. ಮೋನ್ ಎಂದರೆ ಇಳಿಜಾರಿನ ಪ್ರದೇಶವೆಂದರ್ಥ. ಇದರ ಹಿಂದೆ ಕಥೆಯೊಂದಿದೆ.
ತವಾಂಗ್ ನ ಮಠವಾದ ‘ಗೊಂಪಾ’ ವನ್ನು ಕಟ್ಟಿಸಿದವನು ಮೇರಾ ಲಾಮಾ. ಈತನ ಗ್ರಾಮ ಕಿಟ್ಪಿ .ಟಿಬೇಟಿಗೆ ಹೋಗಿ ಬೌದ್ಧಧರ್ಮ ಓದಿಕೊಂಡವನು. ಹಾಗೊಮ್ಮೆ ತವಾಂಗ್ ಪಟ್ಟಣದ ಬಳಿ ರಾತ್ರಿ ತಂಗಿದ್ದಾಗ ಕನಸಿನಲ್ಲಿ ಬಿಳಿಯ ಕುದುರೆಯೊಂದು ಕಾಣಿಸಿತು. ಮರುದಿನ ಈಶಾನ್ಯ ದಿಕ್ಕಿನಲ್ಲಿ ಕುದುರೆಯ ಹೆಜ್ಜೆಗುರುತು ಕಾಣಿಸಿತು. ಅದನ್ನು ಹಿಂಬಾಲಿಸಿಕೊಂಡು ಹೋದ ಆತ ದೂರದ ಬೆಟ್ಟದ ಮೇಲೆ ಕುದುರೆ ಮಲಗಿರುವುದನ್ನು ಕಂಡನು .ಅದೇ ಅತ್ಯುತ್ತಮ ಸ್ಥಳವೆಂದು ನಿರ್ಧರಿಸಿದ ಆತ ಅಲ್ಲಿ ಗೊಂಪಾ ಕಟ್ಟಿಸಿದ. ‘ತ’ ಎಂದರೆ ಕುದುರೆ ,’ವಾಂಗ್’ ಅಂದರೆ ಆಶೀರ್ವಾದ. ಹೀಗಾಗಿ ಕುದುರೆ ಆಶೀರ್ವದಿಸಿದ ಆ ಜಾಗಕ್ಕೆ ತವಾಂಗ್ ಎಂಬ ಹೆಸರು ಬಂತು.
ಮೊನ್ ಪಾಂಗ್ ಎಂಬ ಜನಾಂಗದ ಕಥೆ
ಇಲ್ಲಿ ವಾಸಿಸುವವರು ‘ಮೊನ್ ಪಾ’ ಗಳು. ಅರುಣಾಚಲದ ಅಸಂಖ್ಯ ಬುಡಕಟ್ಟುಗಳಲ್ಲಿ ಈ ಮೊನ್ ಪಾ ಬುಡಕಟ್ಟು ಒಂದು. ಇವರು ಲುಮ್ಲಾ ಪ್ರದೇಶದಲ್ಲಿ ನೆಲೆಸಿದ್ದಾರೆ. ಇಲ್ಲಿನ ಜನರ ಬದುಕು ವೈಶಿಷ್ಟ್ಯವಾಗಿದ್ದು ಕೆಲವೊಮ್ಮೆ ವಿಚಿತ್ರ ಎನಿಸುವಂತಹದು.
ಪ್ರತ್ಯೇಕವಾಗಿ ಹೇಳಬಯಸುವುದು ಅವರ ವಿವಾಹ ವಿಚಾರ ಹಾಗೂ ಶವ ಸಂಸ್ಕಾರದ ಬಗ್ಗೆ. ಮೊನ್ ಪಾಗಳ ನಡುವೆ ಪ್ರೀತಿ ಮಿಂಚಿನಂತೆ ಮೂಡಿ ಬಿಡುತ್ತದೆ. ಯಾವುದೇ ಪೀಠಿಕೆ, ಪ್ರಸ್ತಾವನೆ, ನಾಜೂಕು ಗಳಿಲ್ಲದೆ ಹಿಮದಲ್ಲಿ ಹರಿಯುವ ಸಣ್ಣ ಝರಿಯಂತೆ…. ಮೊನ್ ಪಾಗಳಲ್ಲಿ ಮಕ್ಕಳು ಹೆತ್ತ ನಂತರವೇ ಅವರ ಮದುವೆ!. ಆ ಮಗುವಿನ ಜನನಕ್ಕೆ ಕಾರಣವಾದವನೇ ಅವಳನ್ನು ಮದುವೆಯಾಗಬೇಕೆಂದಿಲ್ಲ. ಯಾರಾದರೂ ಆಗಬಹುದು. ಯಾರೂ ಆಗದಿದ್ದರೂ ಅದೊಂದು ಅವರಿಗೆ ವಿಶೇಷವಲ್ಲ .ಅಪ್ಪನ ಹೆಸರು ಗೊತ್ತಿಲ್ಲದೇ ಹುಟ್ಟುವ ಮಗು ಎಂದಿಗೂ ಅವಮಾನ ಅನುಭವಿಸುವುದಿಲ್ಲ.
ನೀವು ಇದನ್ನು ಇಷ್ಟ ಪಡಬಹುದು:ನವರಾತ್ರಿಯ ದಿನ ಕರಾವಳಿಯಲ್ಲಿ ಹೊಸ್ತಿನ ಸಂಭ್ರಮ.
ಇತರ ಮಕ್ಕಳಂತೆ ಬೆಳೆಯುವ ಈ ಮಗುವಿಗೆ ಎಲ್ಲರಿಂದಲೂ ಪ್ರೀತಿ ದೊರೆಯುತ್ತದೆ .ಹೀಗೆ ಹುಟ್ಟಿದ ಮಗುವನ್ನು ತೋರಿಸಿ ಇದರ ತಂದೆ ಯಾರೆಂದು ಕೇಳಿದರೆ ‘ಇದು ಗಾಳಿಯ ಮಗು’ಎಂದು ಉತ್ತರಿಸುತ್ತಾಳೆ ತಾಯಿ. ವಿವಾಹ ಕಾರ್ಯಕ್ರಮ ಸಾಮಾನ್ಯವಾಗಿ ಮೂರು ಹಂತದಲ್ಲಿ ನಡೆಯುತ್ತದೆ. ಮೊದಲು ಮದುವೆಯಾಗಬೇಕೆಂದು ನಿರ್ಧರಿಸಿದ ಹುಡುಗ ಒಬ್ಬ ದೂತನನ್ನು ಹುಡುಕುತ್ತಾನೆ. ಆತನನ್ನು ‘ಫ್ರಿಂಪಾ’ ಅನ್ನುತ್ತಾರೆ. ಅವನು ತೀರ ಅಸಾಂಪ್ರದಾಯಿಕವಾಗಿ ಹೋಗಿ ಹುಡುಗಿಯ ತಂದೆ-ತಾಯಿಯರನ್ನು ಒಪ್ಪಿಗೆಯಿದೆಯೇ ಎಂದು ಕೇಳುತ್ತಾನೆ. ಅವರ ಒಪ್ಪಿಗೆಯ ನಂತರ ಹುಡುಗನ ತಂದೆ-ತಾಯರೊಂದಿಗೆ ಅವನೇ ಮಾತನಾಡುತ್ತಾನೆ. ಎರಡೂ ಕಡೆ ಸಮ್ಮತಿ ದೊರೆತ ನಂತರ ಹುಡುಗನ ಮನೆಯ ಯಾರಾದರೂ ಹಿರಿಯರು ಹುಡುಗಿಯ ಮನೆಗೆ ‘ ಖದಾ’ ಮತ್ತು ‘ಛಾಂಗ್’ ಸಮೇತ ಹೋಗಬೇಕು.
ಖದಾ ಎಂದರೆ ವಲ್ಲಿ. ಛಾಂಗ್ ಎಂಬುದು ಮೊನ್ ಪಾಗಳ ಪಾಲಿನ ಪವಿತ್ರ ಜಲ. ಕೆಟ್ಟದ್ದಕ್ಕೂ ಬೇಕು; ಒಳ್ಳೆಯದಕ್ಕೂ ಬೇಕು . ಹುಡುಗಿಯ ತಂದೆಯ ಕೊರಳಿಗೆ ಹಾಕಿದ ಖದಾವನ್ನು ಆತ ಸ್ವೀಕರಿಸಿ ಛಾಂಗನ್ನು ಕುಡಿದನೆಂದರೆ ಅಲ್ಲಿಗೆ ಮದುವೆಗೆ ಒಪ್ಪಿಗೆ ಎಂದರ್ಥ. ಎರಡನೆ ಹಂತವೆಂದರೆ ಮೊದಲ ಸಮಾರಂಭದ ಕೆಲವು ದಿನಗಳ ನಂತರ ಹುಡುಗನ ಕಡೆಯವರು ಇನ್ನೊಮ್ಮೆಖದಾ-ಛಾಂಗ್ ಒಯ್ದು ಹುಡುಗಿಯ ತಂದೆಗೆ ಒಪ್ಪಿಸುತ್ತಾರೆ. ಅಲ್ಲಿಗೆ ಮದುವೆ ಖಾತರಿಯಾಯಿತಂದೇ.ಇನ್ನು ಮೂರನೆಯ ಹಂತ .ಇದಕ್ಕೆ ಮದುವೆ ಅನ್ನಬಹುದು. ಮತ್ತದೇ ಖದಾ- ಛಾಂಗ್ ತಂದು ಹಿರಿಯರಿಗೆ ಒಪ್ಪಿಸಿ ಹುಡುಗಿಯನ್ನು ಹುಡುಗನ ಕಡೆಯವರು ಕರೆತಂದು ಬಿಡುತ್ತಾರೆ. ಅವಳನ್ನು ಎಂದು, ಹೇಗೆ ,ಯಾವ ಹೊತ್ತಿಗೆ ಮತ್ತು ಯಾವ ದಿಕ್ಕಿನಿಂದ ಕರೆತರಬೇಕು ಎಂಬುದನ್ನು ಧರ್ಮಗುರುಗಳಾದ ಲಾಮಾ ನಿರ್ಧರಿಸುತ್ತಾನೆ. ಆತನ ನಿರ್ಣಯವೇ ಅಂತಿಮ.
ಕೆಲವೊಮ್ಮೆ ಹುಡುಗಿಯನ್ನು ಕಿಟಕಿಯಿಂದ ಮನೆಯೊಳಕ್ಕೆ ಕರೆತರಬೇಕು ಎಂಬ ಆಜ್ಞೆ ಆದರೆ ಅಕ್ಷರಶಃ ಅದನ್ನೇ ಪಾಲಿಸಬೇಕಾಗುತ್ತದೆ. ಕೆಲವೊಮ್ಮೆ ಗೋಡೆ ಕೆಡವಿಯೂ ತರುವುದುಂಟು. ಲಾಮಾ ಮಾತನ್ನು ಮೀರುವಂತಿಲ್ಲ .ಹೀಗೆ ಹುಡುಗಿಯನ್ನು ಕರೆತಂದ ಸಂದರ್ಭದಲ್ಲಿ ಇಡೀ ಹಳ್ಳಿ ಮದುಮಗನ ಮನೆಗೆ ಬಂದು ಖದಾ ಛಾಂಗ್ ಅರ್ಪಿಸುತ್ತದೆ. ಬಂದವರಿಗೆ ಕರುಳ ತುಂಬಾ ಛಾಂಗ್ ಕುಡಿಸಿ ಹೊಟ್ಟೆತುಂಬಾ ಮಾಂಸ ಉಣಿಸುತ್ತಾರೆ .ಅಲ್ಲಿಗೆ ಮದುವೆ ಮುಗಿಯಿತು!
ಇನ್ನು ಇವರ ಸಾವಿನ ನಂತರದ ಕಾರ್ಯಕ್ಕೆ ಬಂದರೆ ಇಲ್ಲಿ ಪ್ರಾಣ ಹೋದ ನಂತರ ಮೃತದೇಹದ ಮೇಲೆ ಬಿಳಿ ಬಟ್ಟೆ ಹೊಗಿಸಲಾಗುತ್ತದೆ.ಆದರೆ ಹೆಣವನ್ನು ಮಲಗಿಸುವುದಿಲ್ಲ. ಅದನ್ನು ಮಡಚಿದ ಮೊಳಕಾಲುಗಳ ಮೇಲೆ ಕೊಂಚ ಬಾಗಿಸಿದಂತೆ ಕುಳ್ಳಿರಿಸಿ ಇಡೀ ದೇಹವನ್ನು ಖದಾದಂತಹ ಬಟ್ಟೆಯಿಂದ ಸುತ್ತಿ ಕಟ್ಟುತ್ತಾರೆ.
ಸತ್ತ ವರ್ತಮಾನ ದೊರೆತ ಕೂಡಲೇ ಅಲ್ಲಿಗೆ ಲಾಮಾ ತಲುಪಿ ತನ್ನ ‘ಛೀಥಾಂಗ್’ ಎಂಬ ಪುಸ್ತಕ ತೆಗೆದು ಪಂಚಾಂಗ ಪರೀಕ್ಷೆಯಂತಹುದನ್ನು ನಡೆಸಿ ಹೆಣವನ್ನು ಎಷ್ಟು ದಿನದ ನಂತರ ಸಂಸ್ಕಾರ ಮಾಡಬೇಕೆಂದು ಸೂಚಿಸುವನು. ಇದು ಕೆಲವೊಮ್ಮೆ ಐದು ದಿನಗಳೂ ಮೀರಬಹುದು.ನಂತರ ಇವರ “ವಿಶೇಷ ಕ್ರಿಯೆ” ಆರಂಭ. ಶವಯಾತ್ರೆ ಮುಗಿದ ನಂತರ ಹೆಣವನ್ನು ನದಿ ಸಮೀಪಕ್ಕೆ ಕೊಂಡೊಯ್ಯಲಾಗುತ್ತದೆ. ನಂತರ ಅದಕ್ಕೆ ಹೊದಿಸಿದ್ದ ಬಟ್ಟೆ ತೆಗೆದು ನಾಲ್ಕು ಜನ ಬಲವಾಗಿ ಹಿಡಿದು ಬಂಡೆಯ ಮೇಲೆ ಹೆಣವನ್ನು ಅಂಗಾತ ಮಲಗಿಸುತ್ತಾರೆ. ನಂತರ ನದಿಯಿಂದ ಎರಡು ಬಾರಿ ಹೆಣದ ಮೇಲೆ ನೀರು ಸುರಿಸಲಾಗುತ್ತದೆ.
ಆಮೇಲೆ ಅದರಲ್ಲೊಬ್ಬ ಮುಂದೆ ಬಂದು ತನ್ನ ಹರಿತವಾದ ಖಡ್ಗದಿಂದ ಮಂತ್ರವನ್ನು ಜಪಿಸುತ್ತಾ ಶವದ ರುಂಡವನ್ನು ಹಾರಿಸುತ್ತಾನೆ. ಅನಂತರ ಅದರ ಎರಡೂ ಕೈಗಳನ್ನು ಹಿಡಿದು ತೊಡೆಗಳ ಬಳಿ ಕತ್ತರಿಸುತ್ತಾನೆ. ತುಸು ಸಮಯದ ನಂತರ ಶವ ಚೂರುಚೂರಾಗಿ ಹೋಗುತ್ತದೆ .ನಂತರ ಕತ್ತರಿಸಿದ ತುಂಡುಗಳನ್ನು ಹರಿಯುವ ನದಿಯೊಳಗೆ ಎಸೆಯಲಾಗುತ್ತದೆ. ಒಟ್ಟು ಒಂದುನೂರ ಎಂಟು ತುಂಡುಗಳಾಗಬೇಕು. ಆಗ ಮಾತ್ರ ಸತ್ತವರಿಗೆ ಮುಕ್ತಿ ಸಿಗುತ್ತದೆ ಎಂಬುದು ಅವರ ನಂಬಿಕೆ .
ಇಷ್ಟೇ ಅಲ್ಲ ಮೊನ್ ಪಾಗಳ ಇನ್ನೂ ಕೆಲ ಸನ್ಯಾಸಿಯರ ಜೀವನ, ಮಾಟ ಮಂತ್ರಗಳು, ಹಬ್ಬದಾಚರಣೆ ಮುಂತಾದ ಸಂಸ್ಕೃತಿಗಳು ನಮಗೆ ಕೋಲಾಹಲ ಹುಟ್ಟಿಸುವಂಥದ್ದಾಗಿದೆ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.