ಬೆಂಗಳೂರನ್ನು ಮೊದಲ ಬಾರಿ ನೋಡಿದ ಕುಂದಾಪುರದ ಹುಡುಗಿಯ ಪಯಣದ ಕಥೆ
ಭಾಗ್ಯಶ್ರೀ ಶೆಟ್ಟಿ ಮೂಲತಃ ಕುಂದಾಪುರದ ಹುಡುಗಿ. ಬೆಂಗಳೂರಿನ ಹೆಚ್.ಜಿ.ಎಸ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ . ಮೊದಲ ಬಾರಿ ಬೆಂಗಳೂರಿಗೆ ಹೋದಾಗ ಉದ್ಯಾನ ನಗರಿ ಅಚ್ಚರಿ, ಕುತೂಹಲ , ಖುಷಿಯನ್ನುಂಟು ಮಾಡಿತ್ತು. ಮೊದಲ ಬಾರಿ ನೋಡಿದ ಘಾಟಿ ಸುಬ್ರಮಣ್ಯ ಮತ್ತು ದೇವರಾಯನ ದುರ್ಗ ಬೆಟ್ಟದ ಅನುಭವದ ಕುರಿತು ಚಂದದ ಕತೆಯನ್ನು ಬರೆದಿದ್ದಾರೆ.
- ಭಾಗ್ಯಶ್ರೀ ಶೆಟ್ಟಿ
ಆಗಷ್ಟೇ ಪದವಿ ಮುಗಿದಿತ್ತು. ಉದ್ಯೋಗ ಅರಸಿ ಬೆಂಗಳೂರು(bangalore) ನಗರಕ್ಕೆ ಕಾಲಿಟ್ಟಿದೆ. ಬೆಂಗಳೂರಿಗೆ ಮೊದಲ ಬಾರಿ ಹೋಗಿದ್ದು. ಕುಂದಾಪುರದ(kundapura) ಆಸುಪಾಸಿನಲ್ಲಿ ಓದಿದ್ದ ನನಗೆ, ಒಮ್ಮೆಲೆ ಬೆಂಗಳೂರು ನೋಡಿದಾಗ ಆಶ್ಚರ್ಯ, ಕುತೂಹಲ, ಖುಷಿ ಎಲ್ಲವೂ ಆಗಿತ್ತು.
ಹಳ್ಳಿಯಲ್ಲಿ ಒಂದೆರಡು ಅಡ್ಡ ರಸ್ತೆಗಳ ದಾರಿ ಇದ್ದರೆ, ಇಲ್ಲಿ ಹತ್ತಾರು, ನೂರಾರು! ಯಾವ ದಾರಿ ಎಲ್ಲಿ ತಲುಪುತ್ತದೆ ಎಂದು ತಿಳಿಯಲು ಕೂಡ ವರ್ಷಗಳೇ ಬೇಕಾಗಬಹುದು ಅಂದುಕೊಂಡೆ. ಮೊದಲ ಬಾರಿ ಬೆಂಗಳೂರಿಗೆ ಹೋದಾಗ ಹೊಸ ಜಾಗಗಳನ್ನು ನೋಡಬೇಕು ಎನ್ನುವ ಆಸೆಯಿತ್ತು . ಆ ಆಸೆಯಂತೆ ಮೊದಲ ಬಾರಿ ನೋಡಿದ್ದು ಘಾಟಿ ಸುಬ್ರಮಣ್ಯ ದೇವಸ್ಥಾನ ಮತ್ತು ದೇವರಾಯನ ದುರ್ಗ ಬೆಟ್ಟ.
ಮೊದಲ ಬಾರಿ ನೋಡಿದ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ
ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ (ghati subramanya temple) ಬಗ್ಗೆ ಕೇಳಿದ್ದೆ. ಫೋಟೋಗಳನ್ನೂ ನೋಡಿದ್ದೆ. ಆದರೆ ಎಂದೂ ನೋಡಿರಲಿಲ್ಲ. ಮೊದಲ ಬಾರಿಗೆ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನಾನು ಹೋದಾಗ ಕಿರು ಷಷ್ಠಿಯ ದಿನ. ಬೆಂಗಳೂರಿನಲ್ಲಿ ಸಂಬಂಧಿಕರ ಮನೆಯಲಿದ್ದ ನಾನು ಸೇರಿದಂತೆ ೫ ಜನ ಕಿರು ಷಷ್ಠಿಯ ದಿನ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿದ್ದೆವು.
ಬೆಳಿಗ್ಗೆ ೩. ೩೦ಗೆ ಹೊರಡಲು ತಯಾರಾದೆವು. ಆದರೆ ಕೆಲವು ಕಾರಣಗಳಿಂದ ಮನೆಯಿಂದ ಹೊರಡುವಾಗಲೇ ಸುಮಾರು ೫.೩೦ ಆಗಿತ್ತು. ಗುರುಗುಂಟೆ ಪಾಳ್ಯ(gurugunte pallya)ದಿಂದ ನಾವು ಘಾಟಿ ಸುಬ್ರಹ್ಮಣ್ಯ ದೇವಸ್ಥಾನದದತ್ತ ಪಯಣ ಬೆಳೆಸಿದೆವು.
ನೀವುಇದನ್ನುಇಷ್ಟಪಡಬಹುದು: ಕೋಲಾರದ ಹುಡುಗಿ ಮೊದಲ ಬಾರಿ ಉತ್ತರ ಕರ್ನಾಟಕ ನೋಡಿದ ಕತೆ: ಚಂದನಾ ರಾವ್ ಬರೆದ ಒಂದೂರಿನ ಕಥನ
ಮೊದಲ ಬಾರಿ ಪೊಂಗಲ್ ತಿಂದಿದ್ದು
ದೇವಸ್ಥಾನ ತಲುಪುವಾಗ ಗಂಟೆ ೮.೩೦ ಆಗಿತ್ತು. ಷಷ್ಠಿಯಾಗಿದ್ದ ಕಾರಣ ಸಾಕಷ್ಟು ಭಕ್ತರು ನೆರೆದಿದ್ದರು. ಸರತಿ ಸಾಲಿನಲ್ಲಿ ನಿಂತುಕೊಂಡು ದೇವರ ದರ್ಶನ ಪಡೆಯಬೇಕಿತ್ತು. ಬೆಳಗ್ಗಿನ ಆ ತಣ್ಣನೆಯ ವಾತಾವರಣ ಮನಸಿಗೆ ಹಿತ ನೀಡುತ್ತಿತ್ತು.
ದೇವರ ದರ್ಶನ ಮಾಡುವ ವೇಳೆಗೆ ಸಮಯ ಸುಮಾರು ೧೦.೩೦. ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ಪೊಂಗಲ್ ನೀಡುತ್ತಿದ್ದರು. ಪೊಂಗಲ್ ರುಚಿ ನೋಡಿದ್ದೂ ಮೊದಲ ಬಾರಿ. ಪೊಂಗಲ್ ರುಚಿಯಾಗಿತ್ತು. ನಾವೆಲ್ಲ ಪೊಂಗಲ್ ಸೇವಿಸಿ, ಅಲ್ಲಿದ್ದ ಪುಟ್ಟ ಮೇಕೆ ಮರಿಗಳಿಗೆ ಪೊಂಗಲ್ ತಿನಿಸಿ ಖುಷಿ ಪಟ್ಟೆವು.
ಶ್ರೀ ಭೋಗಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ
ಘಾಟಿ ಸುಬ್ರಹ್ಮಣ್ಯ ನೋಡಿದ ಬಳಿಕ ನಂದಿ ಹಿಲ್ಸ್ (nandi hills) ನೋಡಬೇಕು ಎಂದು ಹೊರಟಿದ್ದೆವು. ಆದರೆ ನಂದಿ ಹಿಲ್ಸ್ ನಲ್ಲಿ ಕಿಮೀಗಟ್ಟಲೇ ಟ್ರಾಫಿಕ್ ಜಾಮ್ ಇತ್ತು.
ಅದಕ್ಕೆ ನಂದಿ ಹಿಲ್ಸ್ ಬದಲಾಗಿ. ತುಮಕೂರಿನ ದೇವರಾಯನ ದುರ್ಗ ಬೆಟ್ಟದ ತುದಿಯಲ್ಲಿರುವ ಶ್ರಿ ಭೋಗಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನಕ್ಕೆ(shree bhogalakshmi narasimhaswami temple) ಹೊರಟೆವು. ಆದರೆ, ನಮಗ್ಯಾರಿಗೂ ದಾರಿ ಗೊತ್ತಿರಲಿಲ್ಲ. ಆದರೆ ಹೇಗೋ ಸುತ್ತಿ ಕೊನೆಗೆ ದೇವಸ್ಥಾನ ತಲುಪಿದೆವು.
ದೇವಸ್ಥಾನ ತಲುಪುವಾಗ ಗಂಟೆ ೧ ಆಗಿತ್ತು. ಅಲ್ಲಿ ದೇವರ ದರ್ಶನದ ಬಳಿಕ ಊಟ ಮಾಡಿದೆವು. ಕರಾವಳಿಯ ಊಟಕ್ಕಿಂತ ಭಿನ್ನವಾಗಿತ್ತು, ರುಚಿಯಾಗಿತ್ತು. ಅನಂತರ ದೇವಸ್ಥಾನದಿಂದ ಹೊರಟಿದ್ದು ದೇವರಾಯನ ದುರ್ಗ ಬೆಟ್ಟಕ್ಕೆ(devarayana durga temple).
ಸುಂದರ ದೇವರಾಯನ ದುರ್ಗ ಬೆಟ್ಟ.
ದೇವರಾಯನ ದುರ್ಗ ಬೆಟ್ಟ ಬೆಂಗಳೂರಿನಿಂದ ಸರಿ ಸುಮಾರು ೬೫ ಕಿಮೀ ದೂರದಲ್ಲಿದೆ. ಶ್ರೀ ಭೋಗ ಲಕ್ಷ್ಮೀ ನರಸಿಂಹ ದೇವಸ್ಥಾನದಿಂದ ದೇವರಾಯನ ದುರ್ಗಾದೇವರಾಯನ ದುರ್ಗ ಬೆಟ್ಟದ ಚೆಂದವನ್ನು ನೋಡಿ ಕಣ್ತುಂಬಿಕೊಂಡು , ಅಲ್ಲಿದ್ದ ಮಂಡಕ್ಕಿ ಉಪ್ಕರಿಯ ಅಂಗಡಿಯಲ್ಲಿ ಮಂಡಕ್ಕಿ ಉಪ್ಕರಿ ರುಚಿ ಸವಿದೆವು. ಉಪ್ಕರಿಯು ತುಂಬಾ ರುಚಿಯಾಗಿತ್ತು. ಅದರ ರುಚಿ ಇನ್ನೂ ನೆನಪಿದೆ. ಉಪ್ಕರಿಯ ರುಚಿ ಕಂಡು ೪ ಗಂಟೆಯ ಸುಮಾರಿಗೆ ಮತ್ತೆ ಪಯಣ ಹೊರಟಿದ್ದು ಗುರುಗುಂಟೆ ಪಾಳ್ಯದ ಮನೆ ಕಡೆಗೆ.
ಗ್ರಾಮೀಣ ಭಾಗದಲ್ಲೇ ಬೆಳೆದ ನಮಗೆ ಬೆಂಗಳೂರು ಇಂದಿಗೂ ಮುಗಿಯದ ಅಚ್ಚರಿಯ ಗಣಿ! ಇದು ನಾನು, ಸಣ್ಣ ಪಟ್ಟಣದ ಹುಡುಗಿ, ಬೆಂಗಳೂರಿನ ಸಣ್ಣ ತುಣುಕನ್ನು ಮೊದಲ ಬಾರಿಗೆ ಬಿಡುಗಣ್ಣಿನಿಂದ ನೋಡಿದ ಕಥೆ!
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ