ಹುಬ್ಬಳ್ಳಿ-ಧಾರವಾಡದ ಅತಿ ಸುಂದರ ಜಲಪಾತ ವರವಿ ಸಿದ್ದೇಶ್ವರ ಕೊಳ್ಳ: ಬೈಕರ್ ಪ್ರದೀಪ್ ತುಮ್ಮರಮಟ್ಟಿ ಪರಿಚಯಿಸಿದ ಅಚ್ಚರಿ ತಾಣ
ಪ್ರದೀಪ ಕೆ ತುಮ್ಮರಮಟ್ಟಿ ಧಾರವಾಡದ ಅತ್ಯುತ್ಸಾಹಿ ತರುಣ. ಬೈಕ್ ಹತ್ತಿಕೊಂಡು ಪ್ರವಾಸ ಹೋಗುವುದು ಅವರ ಆಸೆ, ಹವ್ಯಾಸ, ಹಂಬಲ. ಒನ್ ಫೈನ್ ಡೇ ಬೈಕ್ ಹತ್ತಿ ಹೊರಟಾಗ ಸಿಕ್ಕ ಚಂದದ ತಾಣವನ್ನು ಅವರು ಪರಿಚಯಿಸಿದ್ದಾರೆ.
ವಾರದ ರಜೆಯ ಮಜಾ ಪಡೆಯಲು ನಾವು ಗೆಳೆಯರೆಲ್ಲರೂ ಬೈಕ್ ಹತ್ತಿ ಹೊರಟೆವು ದಾರಿ ಮಧ್ಯೆ ಸಿಗುವ ದೇವಸ್ಥಾನ ಗಳ ದರ್ಶನ ಪಡೆಯುತ್ತ ಮುಂದೆ ಹೊರಟಾಗ ಅಲ್ಲೊಂದು ಸಣ್ಣ ಜಲಪಾತದ ಸೂಚನೆ ಸಿಕ್ಕಿತು.
ಕೆಲವು ಗೆಳೆಯರು ಬೇಡವೆಂದರೂ ಹೇಗಾದರೂ ಮಾಡಿ ಅಲ್ಲಿಗೆ ಹೋಗಲೇಬೇಕೆಂದು ಅವರ ಮನ ಒಲಿಸಿ ಎಲ್ಲರು ಹೊರಟೆವು. ಜಲಪಾತದ ಹತ್ತಿರ ಬೈಕ್ ಹೋಗಲಾರದ ಕಾರಣ ನಾವು ಬೈಕ್ ಗಳನ್ನ ಅಲ್ಲೇ ನಿಲ್ಲಿಸಿ ನಡೆದುಕೊಂಡು ಚಾರಣ ಹೊರಟೆವು.
ಆ ಪ್ರದೇಶದಲ್ಲಿ ಕಲ್ಲು ಗುಡ್ಡಗಳಿಂದ ಮತ್ತು ಬಿರು ಬಿಸಿಲಿನಿಂದ ಕೂಡಿತ್ತು ಮತ್ತು ಕೆಲವು ಗೆಳೆಯರು ಇಲ್ಲಿ ಜಲಪಾತ ಇರಲು ಸಾಧ್ಯವಿಲ್ಲ ತಿರುಗಿ ಹೋಗೋಣ ನಡೆಯಿರಿ ಎಂದು ಹಠ ಹಿಡಿಯುತ್ತಿದ್ದರು ಆದರೂ ಏನೇನೋ ಹೇಳಿ ಅವರನ್ನ ಕರೆದುಕೊಂಡು ಹೊರಟೆ.
ನೀವು ಇದನ್ನು ಇಷ್ಟಪಡಬಹುದು: 4 ವರ್ಷ, 17 ದೇಶ, ಸುತ್ತಾಟದಲ್ಲಿಯೇ ದಿನ ಕಳೆಯುತ್ತಿರುವ ಅವಿನಾಶ್, ರುಚಿಕ
ದಾರಿ ಮಧ್ಯೆ ಸಿಕ್ಕ ಅಚ್ಚರಿ
ಆ ಕಲ್ಲು ಗುಡ್ಡಗಳ ಮಧ್ಯ ಕಿರಿದಾದ ದಾರಿ ಹುಡುಕುತ್ತ ಹೊರಟಾಗ ನೀರಿನ ಹರಿವು ಸಿಗಲಾರಂಭಿಸಿತು. ಸೊಂಪಾದ ಗಾಳಿ ಎಲ್ಲರ ಬೇಸರ ನೀಗಿಸಿತ್ತು. ಸುತ್ತಲೂ ಪಕ್ಷಿಗಳ ಕಲರವ ಮನಸಿಗೆ ತಾಜಾ ಅನುಭವ ಕೊಡುತ್ತಿತ್ತು. ಹಾಗೆ ಮುಂದೆ ಹೋಗುತ್ತಾ ಅಲ್ಲಿ ದೂರದಲ್ಲಿ ಜಲಪಾತದ ಜುಳುಜುಳು ಶಬ್ದ ಕೇಳತೊಡಗಿತು. ಇನ್ನೇನು ಜಲಪಾತದ ಸನಿಹವೇ ಬರುತ್ತಿದ್ದಂತೆ ಆ ಬಿರುಬಿಸಿಲಿನ ತಾಪ ನೀಗಿ ತಂಪಾದ ಅನುಭವ ಶುರುವಾಯಿತು. ನೋಡ ನೋಡುತ್ತಿದ್ದಂತೆ ಆ ಕಲ್ಲಿನ ಗುಡ್ಡದ ಮೇಲಿಂದ ಬಿಳುತ್ತಿರುವ ಸುಂದರ ಮತ್ತು ಮನಮೋಹಕ ಜಲಪಾತದ ದೃಶ್ಯ ಎಲ್ಲರ ಮುಖದಲ್ಲಿ ಮಂದಹಾಸ ಮತ್ತು ಆಶ್ಚರ್ಯ ಮೂಡಿಸಿತ್ತು.
ಕಾರಣ ಇಷ್ಟು ಬಿರಿದಾದ ಬಿಸಿಲಿನಲ್ಲಿ ಮತ್ತು ಕಲ್ಲು ಗುಡ್ಡಗಳ ಮದ್ಯದಲ್ಲಿ ಹೇಗೆ ಈ ಜಲಪಾತ ಬೀಳುತ್ತಿದೆ ಎನ್ನುವ ಕೂತಹಲ ಕಾಡುತ್ತಿತ್ತು.
ತಂಪಾದ ಮತ್ತು ಯಾವುದೇ ಕಲ್ಮಶ ಇಲ್ಲದ ಸ್ವಚ್ಛ ನೀರು ತುಂಬಾ ಹಿತಕರವಾಗಿತ್ತು. ಸುಮಾರು 100 ಅಡಿ (ಅಂದಾಜು) ಎತ್ತರದಿಂದ ಬೀಳುವ ಜಲಪಾತ ನೋಡಲು ಅದ್ಬುತವಾಗಿತ್ತು.
ಸಿದ್ದೇಶ್ವರ ಸ್ವಾಮಿ ಗುಹೆ
ಇದು ತುಂಬಾ ಜನರಿಗೆ ಗೊತ್ತಿಲ್ಲದ ಕಾರಣ ಈ ಸ್ಥಳ ಸ್ವಚ್ಛವಾಗಿರಬಹುದೆಂದು ನನ್ನ ಮನದಲ್ಲಿ ಅನಿಸಿತು. ಕೇವಲ ಅಲ್ಲಿ ಜಲಪಾತ ಒಂದೇ ಇರದೇ ಪಕ್ಕದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿಯ ಗುಹೆಯು(Sidddeshwara swamy cave) ಕೂಡ ಇತ್ತು.
ನೀರಿನಲ್ಲಿ ಮಿಂದೆದ್ದು ದೇವರ ದರ್ಶನ ಪಡೆದು ಅಲ್ಲಿಂದ ಮತ್ತೆ ಮರಳಿ ಹೊರಟೆವು. ಕಷ್ಟ ಪಟ್ಟು ಆ ಸ್ಥಳಕ್ಕೆ ಹೋದ ನಮ್ಮ ಎಲ್ಲರ ಮುಖದಲ್ಲಿ ಸಂತೋಷ ಮನೆಮಾಡಿತ್ತು.
ಆ ಸ್ಥಳದ ಹೆಸರು ವರವಿ ಶ್ರೀ ಸಿದ್ದೇಶ್ವರ ಕೊಳ್ಳ.(varavi siddeshwara) ಪ್ರಕೃತಿ ಮಾತೆಯು ಇಷ್ಟೆಲ್ಲ ಸುಂದರ ಸ್ಥಳಗಳನ್ನು ನಮಗೆ ಕೊಟ್ಟಿದೆ ಎಂದರೆ ಅದನ್ನು ಸ್ವಚ್ಛವಾಗಿ ಇಡುವುದು ನಮ್ಮೆಲ್ಲರ ಕರ್ತವ್ಯ. ನಾವು ಎಲ್ಲೇ ಹೋದರು ಸ್ವಚ್ಛತೆಯ ಕಡೆಗೆ ಗಮನ ಹರಿಸಲೇಬೇಕು. ಪ್ರಕೃತಿ ನಮಗಾಗಿ ಮತ್ತು ನಮ್ಮ ಮುಂದಿನ ಪೀಳಿಗೆಗಾಗಿ ಎಂಬ ಮಾತು ಮನದಲ್ಲಿರಬೇಕು. ಮನೆ ಮಂದಿಯಲ್ಲ ಸೇರಿ ವಾರದ ರಜೆಯ ಮಜಾ ಪಡೆಯಲು ಈ ಸ್ಥಳಕ್ಕೆ ಬರಬಹುದು ಆದರೆ ತಿಂಡಿ ತಿನಿಸುಗಳನ್ನು ತಂದರೆ ಸ್ವಚ್ಛತೆಯ ಕಡೆಗೆ ಗಮನವಿರಲಿ ಹಾಗು ಕಪಿ ಮಹಾಶಯರು ನಿಮಗೆ ಎಲ್ಲಿ ಬೇಕೆಂದರಲ್ಲಿ ಸಿಗುವ ಕಾರಣ ನಿಮ್ಮ ಮೌಲ್ಯದ ಸಾಮಾನುಗಳ ಬಗ್ಗೆ ಗಮನವಿರಲಿ. ಹೋಗುವ ಮಾರ್ಗ: ಧಾರವಾಡದಿಂದ ಹೊರಟರೆ 71 ಕಿ.ಮೀ ಮತ್ತು ಹುಬ್ಬಳ್ಳಿಯಿಂದ ಸವದತ್ತಿ ಮಾರ್ಗವಾಗಿ ಹೊರಟರೆ 88 ಕಿ.ಮೀ. ಸವದತ್ತಿಯಿಂದ ಕೇವಲ 20 ಕಿ.ಮೀ ದೂರದಲ್ಲಿದೆ. ಮುನವಳ್ಳಿ ಇಂದ ಹೂಲಿ ಕಟ್ಟಿ ಮಾರ್ಗವಾಗಿ ಹೋಗುವ ಮಧ್ಯದಲ್ಲಿ ಶ್ರೀ ವರವಿ ಸಿದ್ದೇಶ್ವರ ಕೊಳ್ಳ ಮಾರ್ಗ ಸಿಗುತ್ತದೆ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ.