ಅಘನಾಶಿನಿಗೊಂದು ಮುಂಜಾನೆಯ ಪ್ರವಾಸ
ಅಘನಾಶಿನಿ, ಉತ್ತರ ಕನ್ನಡದ ಪ್ರಸಿದ್ಧ ಪ್ರವಾಸಿ ತಾಣ. ಮುಂಜಾನೆ ಇಲ್ಲಿಗೆ ಭೇಟಿ ನೀಡಿದ, ಮನಸಿಗೆ ಶಾಂತಿ, ನೆಮ್ಮದಿ ಸಿಕ್ಕಿದ ಚಿಕ್ಕದೊಂದು ಪ್ರವಾಸದ ಕಥೆ ಹೇಳಿದ್ದಾರೆ ಮಧುರಾ.
- ಮಧುರಾ ಎಲ್ ಭಟ್
ಅವತ್ತು ನಮ್ಮ ಮನೆ ತುಂಬಾ ಜನ ಜಂಗುಳಿ, ಜನರು ಅಂದ್ರೆ ತುಂಬಾ ಏನಲ್ಲ ಒಂದು 15 ಜನ ಇದ್ದರಷ್ಟೇ. ಇವತ್ತಿನ ಫ್ಯಾಮಿಲಿಗೆ ಹೋಲಿಸಿದರೆ ಇದು ಸ್ವಲ್ಪ ಜಾಸ್ತಿ ಅನಿಸಿತು ಅದಕ್ಕೆ ಹೇಳಿದೆ. ನಮ್ಮ ಮನೆಗೆ ಬಂದ ಅತಿಥಿಗಳೆಲ್ಲ ಸುಮಾರು 30ರ ಆಸುಪಾಸಿನವರೇ, ಅಂದರೆ ಕೇಳಬೇಕಾ? ಅಲ್ಲಿ ಮೋಜು ಮಸ್ತಿ ಸ್ವಲ್ಪ ಜಾಸ್ತಿಯಾಗಿಯೇ ಇರುತ್ತದೆ.
ನಾವೆಲ್ಲಾ ಕಸಿನ್ಸ್ ಸೇರಿ ರಾತ್ರಿಯೆಲ್ಲಾ ಹರಟೆ ಹೊಡೆದು ಮಾರನೇ ದಿನ ಒಂದು ಚಿಕ್ಕ ಪ್ರವಾಸ ಮಾಡುವ ಪ್ಲ್ಯಾನ್ ಮಾಡಿದೆವು. ಅದು ಮುಂಜಾನೆಯ ಪ್ರವಾಸ. ಅಘನಾಶಿನಿ ಎಂಬ ಬೆಟ್ಟಕ್ಕೆ ತೆರಳಿ ಸೂರ್ಯೋದಯವನ್ನು ಕಾಣುವ ಉತ್ಸಾಹದ ಪ್ರವಾಸ. ಹಾಗೆ ಸರಿಯಾಗಿ ಪ್ಲಾನ್ ಮಾಡಿ ಊಟ ಎಲ್ಲಾ ಮುಗಿಸಿ ಮಲಗಿದೆವು.
ಮಾರನೇ ದಿನ ಬೆಳಗ್ಗೆ ಸರಿಯಾಗಿ 5 ಗಂಟೆಗೆ ನನಗೆ ಎಚ್ಚರಿಕೆಯಾಯಿತು. ಆಗ ಕಣ್ಣು ಬಿಟ್ಟು ನೋಡಿದರೆ. ಧೋ ಎಂದೂ ಮಳೆರಾಯ ಒಂದೇ ಸಮನೆ ಧರೆಗಿಳಿದು ಬರುತ್ತಿದ್ದ. ಹಾಗೆ ನನ್ನ ಕಣ್ಣಲ್ಲೂ ಮಳೆಯ ನೀರಿನ ಹಾಗೆ ಕಣ್ಣೀರು ಬರತೊಡಗಿತು. ಎಷ್ಟೋ ಆಸೆ ಇಟ್ಟುಕೊಂಡು ರಾತ್ರಿಯೆಲ್ಲ ತುಂಬಾ ಯೋಚನೆ ಮಾಡಿ ಮಲಗಿದ್ದೆವು.
ಈ ಮಳೆಯಿಂದ ಎಲ್ಲಾ ಹಾಳಾಯಿತು ಎಂದು ಮಳೆಗೆ ಬೈದು ಹಾಗೆ ಮುಸುಕಲು ಹಾಕಿ ಮತ್ತೆ ಮಲಗಿಕೊಂಡೆ. ಹಾಗೆ ಸುಮಾರು 6 ಗಂಟೆಯ ಹೊತ್ತಿಗೆ ಮಳೆ ಸ್ವಲ್ಪ ಕಡಿಮೆಯಾದ್ದರಿಂದ ಸೂರ್ಯೋದಯ ನೋಡದಿದ್ದರೂ ಪರವಾಗಿಲ್ಲ ಆ ಜಾಗಕ್ಕೆ ಒಮ್ಮೆ ಹೋಗಿಯೇ ತೀರಬೇಕು ಎಂದೂ ಎಲ್ಲರೂ ಅಘನಾಶಿನಿ ಬೆಟ್ಟಕ್ಕೆ ಹೋಗಲು ಅಣಿಯಾದೆವು.
ನಮ್ಮ ಮನೆಯಲ್ಲಿ ಇರುವ ಕಾರನ್ನು ತೆಗೆದುಕೊಂಡು ಒಬೊಬ್ಬರಿಗೂ ಒಂದೊಂದು ಛತ್ರಿಯನ್ನು ತೆಗೆದುಕೊಂಡು ಅಘನಾಶಿನಿಯ ಕಡೆ ಸಾಗಿದೆವು. ಆ ಅಘನಾಶಿನಿ ನಮ್ಮ ಮನೆಯಿಂದ ಸರಿ ಸುಮಾರು 10 ಕಿಮೀಟರ್ ನಷ್ಟು ದೂರ ಇದೆ ಅಷ್ಟೇ. ಹಾಗೆ ಅಘನಾಶಿನಿ ಬೆಟ್ಟಕ್ಕೆ ಹೋಗಬೇಕು ಅಂದುಕೊಂಡು ಹೊರಟ ನಾವು ಅರಬ್ಬೀಸಮುದ್ರ ಮತ್ತು ಅಘನಾಶಿನಿ ನದಿ ಸೇರುವ ಸ್ಥಳಕ್ಕೆ ಹೋದೆವು. ಅದೊಂದು ಅದ್ಭುತವಾದ ಸ್ಥಳ.
ಒಂದು ಕಡೆ ಬೆಟ್ಟಗುಡ್ಡಗಳು ಹಸಿರು ಹಸಿರಾಗಿ ಕಾಣುತಿದ್ದರೆ . ಇನ್ನೊಂದು ಕಡೆ ಸಮುದ್ರ ಮತ್ತು ನದಿ ಸಂಘಮವಾಗುವ ಸ್ಥಳ. ಹಾಗೆ ಮತ್ತೊಂದು ಕಡೆ ಘಜನಿ. ಈಗ ತಾನೆ ನೆಟ್ಟಿ ಮಾಡಿದ ಗದ್ದೆ. ಹೀಗೆ ಸುತ್ತ ಮುತ್ತಲು ಒಂದೊಂದು ರೀತಿಯಲ್ಲಿ ಆ ಸ್ಥಳ ಸುಂದರವಾಗಿ ಕಾಣುತ್ತಿದೆ. ನಾವು ಸ್ವಲ್ಪ ಮಳೆ ಇರುವುದರಿಂದ ಛತ್ರಿಯನ್ನು ತೆಗೆದುಕೊಂಡು ಹೋಗಿ ಅಲ್ಲೆ ಆ ವ್ಯುವ್ ಪಾಂಟ್ ಅಲ್ಲಿ ಕುಳಿತುಕೊಂಡೆವು.
ನೀವುಇದನ್ನುಇಷ್ಟಪಡಬಹುದು: ಉತ್ತರ ಕನ್ನಡ ಕಡೆ ಹೊರಟವರು ಈ 13 ತಾಣಗಳನ್ನು ಮನಸ್ಸಲ್ಲಿಟ್ಟುಕೊಳ್ಳಿ
ಅಲ್ಲಿ ಒಂದು ಚಿಕ್ಕದಾದ ಶಿವಲಿಂಗವಿದೆ. ಅದರಿಂದ ನೇರವಾಗಿ ನಮಗೆ ಗೋಕರ್ಣ ಕ್ಷೇತ್ರವು ಕಾಣಿಸುತ್ತದೆ. ಅಲ್ಲಿನ ಆ ಸ್ಥಳವನ್ನು ನೋಡಿದರೆ ಅಲ್ಲಿಂದ ಬರಲು ಮನಸ್ಸೇ ಆಗುವುದಿಲ್ಲ. ಅದು ನಾವು ಹೋದಾಗ ಮಳೆಯೂ ಇದ್ದರಿಂದ ಆ ಮಳೆ, ಚಳಿ, ಹಸಿರು ಹಸಿರು ಬೆಟ್ಟ ಗುಡ್ಡ, ಆ ಸಮುದ್ರದ ಬೋರ್ಗೆರೆತ, ನದಿಯ ಪ್ರಶಾಂತತೆ . ಅಬ್ಬಾ! ಅದನ್ನು ಬಾಯಿ ಮಾತಲ್ಲಿ ಹೇಳತೀರದು.
ಆ ಅದ್ಭುತ ಸ್ಥಳವನ್ನು ನೋಡಿಕೊಂಡು ಹಾಗೆ ಅಘನಾಶಿನಿ ಬೆಟ್ಟಕ್ಕೆ ಹೋದೆವು. ಆಗ ಸ್ವಲ್ಪ ಮಳೆ ಕಡಿಮೆಯಾದ್ದರಿಂದ. ಸೂರ್ಯ ತನ್ನ ಇರುವಿಕೆಯನ್ನು ತೋರಿಸಲು ಮೇಘಗಳನ್ನೂ ಸರಿಸಿ ಸ್ವಲ್ಪ ಸ್ವಲ್ಪವೇ ನಮಗೆ ಗೋಚರವಾಗುತ್ತಿದ್ದ. ನಾವು ಆ ಗುಡ್ಡದ ಮೇಲೆ ಹತ್ತಿ ಸುತ್ತ ಮುತ್ತಲಿನ ಪರಿಸರವನ್ನು ವೀಕ್ಷಿಸಿ ಕಣ್ಣನ್ನು ತಂಪುಗೊಳಿಸಿಕೊಂಡು ಹಾಗೆ ಅಲ್ಲಿಂದ ಹೊರಟೆವು.
ಇದು ನಮ್ಮ ಮುಂಜಾನೆಯ ಪ್ರವಾಸವಾಗಿತ್ತು. ಒಂದು ಏಕಾಂತತೆಯನ್ನು ಪಡೆಯಲು ಅದೊಂದು ವರ್ಣಾತೀತ ಸ್ಥಳವಾಗಿದೆ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ