ಕರಾವಳಿಯಲ್ಲಿದೆ ಹಚ್ಚ ಹಸಿರಾದ ಶ್ರೀಮಂತಿಕೆ – ಅಡ್ಯಾರ್ ಜಲಪಾತ
ಕರಾವಳಿ ಭಾಗಗಳಲ್ಲಿ ಜಲಪಾತ, ನದಿಗಳಿಗೇನೂ ಬರವಿಲ್ಲ. ಅದರಲ್ಲೂ ಹಸಿರಿನ ಸಿರಿಯ ನಡುವೆ ಕದ್ದು ಕುಳಿತಂತೆ ಇರುವ ಜಲಪಾತ, ನದಿಗಳು ಸಾಕಷ್ಟಿವೆ. ಹಸಿರಿನೊಡಲಿನಲ್ಲಿ ಬೆಚ್ಚಗೆ ಕುಳಿತಿರುವ ಮಂಗಳೂರು ಸಮೀಪದ ಅಡ್ಯಾರ್ ಜಲಪಾತದ ಪರಿಚಯ ಇಲ್ಲಿದೆ.
- ಅನುಪ್ರಿಯ
ಕಡಲಿನ ಕಿನಾರೆಯ ದಡದಲ್ಲಿದೆ ಮಂಗಳೂರು ನಗರ. ಇಲ್ಲಿದೆ ನೋಡುವಂತಹ ಹಲವು ಪ್ರದೇಶಗಳು. ಇಲ್ಲಿನ ಪ್ರವಾಸಿ ತಾಣಗಳು, ಪ್ರಸಿದ್ಧ ದೇವಸ್ಥಾನಗಳು ಹಾಗೂ ಬೀಚ್ ಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ತಮ್ಮ ಒತ್ತಡದ ಜೀವನದಲ್ಲಿ ಆರಾಮವನ್ನು ಬಯಸುವವರು, ಮನಸ್ಸಿಗೆ ಮುದ ನೀಡುವಂತಹ ಪ್ರದೇಶವನ್ನು ಹುಡುಕಿಕೊಂಡು ಬರುವವರ ಸಂಖ್ಯೆ ಹೆಚ್ಚಿದೆ.
ಬೀಚ್, ಜಲಪಾತ ಅಂತಹ ತಾಣಗಳು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಆದರೆ ಇಲ್ಲಿನ ಕೆಲವು ಪ್ರದೇಶಗಳು ಮೂಲ ಸೌಕರ್ಯದ ಕೊರತೆಯಿಂದಾಗಿ ಜನಪ್ರಿಯತೆಯನ್ನು ಪಡೆಯಲಿಲ್ಲ. ಅಂತಹ ಸ್ಥಳಗಳಲ್ಲಿ ಅಡ್ಯಾರ್ ಜಲಪಾತವು ಕೂಡಾ ಒಂದು.
ಹಚ್ಚ ಹಸಿರಾದ ಪ್ರಕೃತಿ, ದಟ್ಟ ಕಾಡು ಅದರ ಮದ್ಯೆ ಝುಳು ಝಳು ಸದ್ದಿಯೊಂದಿಗೆ ರಮಣೀಯವಾಗಿ ಹರಿಯುವ ನೀರು, ಮನಕ್ಕೆ ಮುದ ನೀಡುವ ಆ ದೃಶ್ಯ ನೋಡಲು ಎರಡು ಕಣ್ಣುಗಳು ಸಾಲದು.
ಇಲ್ಲಿನ ದೃಶ್ಯವನ್ನು ನೋಡಿದಾಗ ಹಚ್ಚ ಹಸಿರಾದ ಗಿಡ-ಮರಗಳ ಮಧ್ಯೆ ಪ್ರಕೃತಿ ಮಾತೆ ಹಸಿರು ಸೀರೆಯನ್ನು ತೊಟ್ಟು ನಿಂತಂತೆ ಭಾಸವಾಗುತ್ತದೆ. ಇಂತಹ ಸೌಂದರ್ಯವನ್ನು ನೋಡಲು ನಾವು ಪಶ್ಚಿಮ ಘಟ್ಟಕ್ಕೆ ಹೋಗಬೇಕಾಗಿಲ್ಲ. ಇಲ್ಲಿಯೇ ಮಂಗಳೂರು ಸಮೀಪದಲ್ಲಿರುವ ಅಡ್ಯಾರ್ ಗೆ ಹೋದರೆ ಸಾಕು ಪ್ರಕೃತಿಯ ಸೌಂದರ್ಯಯನ್ನು ಸವಿಯಲು ಇದು ಸೂಕ್ತ ತಾಣವಾಗಿದೆ.
ಅಡ್ಯಾರ್ ಜಲಪಾತ ಅಥವಾ ವಳಚ್ಚಿಲ್ ಜಲಪಾತ ಅಡ್ಯಾರ್ ಫಾಲ್ಸ್ ಎಂದೇ ಪ್ರಖ್ಯಾತಿಯಾಗಿದೆ. ಇದು ಮಂಗಳೂರು ನಗರದಿಂದ ೧೦ ಕಿ.ಮೀ ದೂರವಿರುವ ಅಡ್ಯಾರ್ ಎಂಬ ಪ್ರದೇಶದಲ್ಲಿ ಈ ಜಲಪಾತ ಇದೆ. ಅಡ್ಯಾರ್ ರಾಷ್ಟ್ರೀಯ ಹೆದ್ದಾರಿದಿಂದ ವಳವಚ್ಚಿಲ್ ನಿಂದ ಎಡಕ್ಕೆ ಸಾಗಿದರೆ ಈ ಫಾಲ್ಸ್ ನ ದರ್ಶನವಾಗುತ್ತದೆ.
ಗುಡ್ಡದ ಮಧ್ಯದಲ್ಲಿ ಇರುವ ಈ ಜಲಪಾತವನ್ನು ನೋಡಲು ಹಚ್ಚ- ಹಸಿರಾದ ಪ್ರಕೃತಿ ಸೌಂದರ್ಯದ ಮಧ್ಯೆ ನಡೆದುಕೊಂಡು ಹೋಗಬೇಕಾಗಿದೆ. ಹೆಚ್ಚಾಗಿ ಯುವಜನತೆಯನ್ನು ಆಕರ್ಷಿಸುವ ಈ ಜಲಪಾತ ಸೆಲ್ಫಿಗೂ ಹೇಳಿ ಮಾಡಿಸಿದ ತಾಣವಾಗಿದೆ. ಕಲ್ಲು- ಬಂಡೆಗಳ ಮೇಲೆ ಜಿಗಿಯುತ್ತ, ನರ್ತಿಸುತ್ತ ಧುಮ್ಮಿಕ್ಕಿ ಹರಿಯುವ ಈ ಜಲಪಾತ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತದೆ.
ನೀವುಇದನ್ನುಇಷ್ಟಪಡಬಹುದು: ಪಟ್ಲದ ಸೊಬಗಿನ ಖಣಿ ‘ತೊಟ್ಟಿಲ್ ಪಾದೆ’ ಜಲಪಾತ
ಬೆಟ್ಟದ ತುತ್ತತುದಿಯಿಂದ ಸುಮಾರು ೪೦ ಅಡಿ ಎತ್ತರದಿಂದ ವಯ್ಯಾರದಿಂದ ಹರಿಯುವ ಈ ಜಲಪಾತ ಅಪಾಯಕರವಾಗಿಲ್ಲ. ಇತರ ಜಲಪಾತಗಳು ರಭಸವಾಗಿ ಹರಿಯುವುದರಿಂದ ಅನಾಹುತಗಳು ಸಂಭವಿಸಬಹುದು ಎಂಬ ಭಯದಿಂದ ನೀರಿಗೆ ಇಳಿಯಲು ಆಲೋಚನೆ ಮಾಡಬೇಕಾಗುತ್ತದೆ.
ಆದರೆ ಅಡ್ಯಾರ್ ಜಲಪಾತ ನಾಜೂಕಾಗಿ ಹರಿಯುವುದರಿಂದ ಯಾವುದೇ ಭಯಪಡದೇ ನೀರಿನಲ್ಲಿ ಆಡಬಹುದು. ಆದ್ದರಿಂದ ಹೆಚ್ಚಿನ ವಿದ್ಯಾರ್ಥಿಗಳಿಗೆ ಇದು ಫೇವರೀಟ್ ಸ್ಪಾಟ್ ಆಗಿದೆ. ಮಳೆಗಾಲದಲ್ಲಿ ಮೈತುಂಬಿ ಹರಿಯುವ ಈ ಜಲಪಾತ ಬೇಸಿಗೆ ಕಾಲದಲ್ಲಿ ನೀರಿನ ಸದ್ದಿಲ್ಲದೇ ಶಾಂತವಾಗಿರುತ್ತದೆ.
ಪ್ರಕೃತಿಯ ಸೌಂದರ್ಯವನ್ನು ಸವಿಯಬೇಕಾದರೆ ಮಳೆಗಾಲದ ಸಮಯದಲ್ಲಿ ಈ ಜಲಪಾತಕ್ಕೆ ಹೋಗುವುದು ಸೂಕ್ತವಾಗಿದೆ. ಜೂನ್ ನಿಂದ ನವೆಂಬರ್ ವರೆಗೆ ಈ ಜಲಪಾತ ತುಂಬಿ ಹರಿಯುದರಿಂದ ನೋಡಲು ಸುಂದರವಾಗಿರುತ್ತದೆ. ಸ್ರ್ಗವೇ ಧರೆಗಿಳಿದು ಬಂದಂತೆ ಭಾಸವಾಗುತ್ತದೆ. ಆದರೆ ಜಲಪಾತವು ಮಂಗಳೂರು ನಗರದಿಂದ ದೂರವಿರುವುದರಿಂದ ಹೆಚ್ಚಿನ ಜನರಿಗೆ ಇಲ್ಲಿಗೆ ಬರಲು ಕಷ್ಟವಾಗುತ್ತದೆ.
ಹಾಗೆಯೇ ಜಲಪಾತಕ್ಕೆ ಹೋಗಲು ಸರಿಯಾದ ದಾರಿ ವ್ಯವಸ್ಥೆ ಇಲ್ಲದೇ ಇರುವುದು, ವಾಹನಗಳು ಫಾಲ್ಸ್ ವರೆಗೆ ಹೋಗದೇ, ನಡೆದುಕೊಂಡು ಹೋಗಬೇಕಾಗಿದೆ. ಇನ್ನೊಂದೆಡೆ ಕೆಲವರು ಪ್ಲಾಸ್ಟಿಕ್ ಚೀಲಗಳು, ಮದ್ಯದ ಬಾಟಲ್ ಗಳನ್ನು ಅಲ್ಲಿಯೇ ಬಿಸಾಡುವುದರಿಂದ ಇದು ಜಲಪಾತದ ಸೌಂದರ್ಯಕ್ಕೆ, ಅಲ್ಲಿನ ಪ್ರಕೃತಿಯ ಸೊಬಗಿಗೆ ದಕ್ಕೆ ತಂದಿದೆ. ಆದ್ದರಿಂದ ಜಲಪಾತವನ್ನು ವೀಕ್ಷಿಸಲು ಬರುವ ಪ್ರವಾಸಿಗರು ಅಲ್ಲಿನ ಸೌಂದರ್ಯವನ್ನು ಕಾಪಾಡುವುದು ಅಗತ್ಯ ಹಾಗೂ ಇದು ನಮ್ಮ ಕರ್ತವ್ಯವಾಗಿದೆ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.