ಭಾರತದಲ್ಲಿ ನೀವು ನೋಡಬಹುದಾದ 19 ಪಾರಂಪರಿಕ ತಾಣಗಳು: ವಿಶ್ವ ಪಾರಂಪರಿಕ ದಿನ ವಿಶೇಷ

ಇಂದು World Heritage day ಪ್ರಯುಕ್ತ ಭಾರತದಲ್ಲಿನ ಯುನೆಸ್ಕೋ ಪಾರಂಪರಿಕ ತಾಣಗಳ ಬಗ್ಗೆ ತಿಳಿಯೋಣ.
-ಸುವರ್ಣಲಕ್ಷ್ಮಿ
ಯುನೆಸ್ಕೋ ಸಂಸ್ಥೆ 1946ರಲ್ಲಿ ಅಸ್ತಿತ್ವಕ್ಕೆ ಬಂದಿತು. International council of monuments and sites ಎಂಬ ಅಂಗಸಂಸ್ಥೆಯನ್ನು1965ರಲ್ಲಿ ಅಸ್ತಿತ್ವಕ್ಕೆ ತಂದಿತು. ಈ ಸಂಸ್ಥೆಯು ಸಾಂಸ್ಕೃತಿಕ ಹಾಗೂ ನೈಸರ್ಗಿಕವಾಗಿ ನಿರ್ಮಿತವಾಗಿರುವ ತಾಣಗಳ ಪ್ರಾಮುಖ್ಯತೆಯನ್ನು ಪರಿಗಣಿಸಿ ಅವುಗಳಿಗೆ ವಿಶ್ವಪಾರಂಪರಿಕ ತಾಣ ಅನ್ನುವ ಹಣೆಪಟ್ಟಿಯನ್ನು ಕೊಡುವ ಮೂಲಕ ಮುಂದಿನ ಪೀಳಿಗಾಗಿ ಅವುಗಳನ್ನು ರಕ್ಷಿಸುವ ಕಾರ್ಯ ಮಾಡುತ್ತಿದೆ. ಭಾರತದಲ್ಲಿ ಯುನೆಸ್ಕೋ ಸಂಸ್ಥೆ 38 ಪಾರಂಪರಿಕ ತಾಣಗಳನ್ನು ಗುರುತಿಸಿದ್ದು ಅವುಗಳಲ್ಲಿ 30 ಸಾಂಸ್ಕೃತಿಕ ತಾಣಗಳು 7, ನಿಸರ್ಗ ನಿರ್ಮಿತ ಹಾಗೂ 1 ಸ್ಥಳ ಸಾಂಸ್ಕೃತಿಕ ಹಾಗೂ ನಿಸರ್ಗ ನಿರ್ಮಿತ ಎರಡನ್ನೂ ಒಳಗೊಂಡಿದೆ. International council of monuments and sites ಸಂಸ್ಥೆ ಯು 1983ರಿಂದ ಈ ಪಾರಂಪರಿಕ ತಾಣಗಳ ರಕ್ಷಣೆ, ಪ್ರಚಾರ, ಅವುಗಳ ಪ್ರಾಮುಖ್ಯತೆ ಜನರಿಗೆ ತಿಳಿಸುವ ಸಲುವಾಗಿ ಏಪ್ರಿಲ್ 18 ಅನ್ನು World Heritage Day ಆಗಿ ಘೋಷಣೆ ಮಾಡಿದೆ. ನಾವು ಭಾರತದ 19 ಪಾರಂಪರಿಕ ತಾಣಗಳ ಕಿರು ಪರಿಚಯ ಮಾಡಿಕೊಳ್ಳಣ.
1) ತಾಜ್ ಮಹಲ್

ಇದು ಆಗ್ರಾದಲ್ಲಿ ಯಮುನಾ ನದಿಯ ದಡದಲ್ಲಿ ಷಹಜಹಾನ್ ತನ್ನ ಹೆಂಡತಿ ಮಮ್ತಾಜ್ ಮಹಲ್ ನೆನಪಿನಲ್ಲಿ ನಿರ್ಮಿಸಿದ್ದು ಇದರ ನಿರ್ಮಾಣ 1653ರಲ್ಲಿ ಪೂರ್ತಿ ಆಗಿದ್ದು ಅಮೃತಶಿಲೆಯ ಈ ಭವನ ನಿರ್ಮಾಣಕ್ಕೆ ಆಗಿನ ಕಾಲಕ್ಕೆ 32 ಮಿಲಿಯನ್ ಹಣ ವೆಚ್ಚವಾಗಿತ್ತು.
2) ಖಜುರಾಹೊ

ಮಧ್ಯಪ್ರದೇಶದ ಖಜುರಾಹೊ ಒಂದು ದೇವಾಲಯಗಳ ಸಮುಚ್ಚಯವಾಗಿದ್ದು ಇದರಲ್ಲಿ ಹಿಂದೂ ಹಾಗೂ ಜೈನ ದೇವಾಲಯಗಳು ಇವೆ. ಈ ಸಮುಚ್ಚಯದಲ್ಲಿ ಒಟ್ಟು 85 ದೇವಾಲಯಗಳಿದ್ದು, ಒಟ್ಟು 20 ಕಿಮೀನಷ್ಟು ಪ್ರದೇಶವನ್ನು ಒಳಗೊಂಡಿದೆ. ಇದು ಮಧ್ಯಪ್ರದೇಶದ ಝಾನ್ಸಿಯಿಂದ 175ಕಿಮೀ ದೂರದಲ್ಲಿದೆ. ಸಮೃದ್ಧ ಶಿಲ್ಪಕಲೆಗೆ ಹೆಸರಾಗಿರುವ ಖಜುರಾಹೊ ಶಿಲ್ಪ ಚಿತ್ರಗಳಿಗೆ ನೆಲೆವೀಡಾಗಿದೆ. ಇಲ್ಲಿನ ಬಹುತೇಕ ದೇವಾಲಯಗಳನ್ನು 950-1050ರ ನಡುವೆ ಚಂದೇಲ ರಾಜರು ನಿರ್ಮಿಸಿದರು ಅನ್ನುತ್ತದೆ ಇತಿಹಾಸ.
3) ಹಂಪೆ
ಕರ್ನಾಟಕದಲ್ಲಿ ಹಂಪೆಯ ಹೆಸರು ಕೇಳದವರಿಲ್ಲ

ಇದು ಕೃಷ್ಣದೇವರಾಯನ ರಾಜಧಾನಿಯಾಗಿ ಇದ್ದು ಮುತ್ತು ರತ್ನಗಳನ್ನು ರಾಶಿ ಹಾಕಿ ಮಾರಿದ, ಸಾವಿರ ದೇವಾಲಯಗಳನ್ನು ಹೊಂದಿದ್ದ ನಗರ. ಇಲ್ಲಿ ವಿರೂಪಾಕ್ಷ ದೇವಾಲಯ ಪ್ರಮುಖವಾಗಿದ್ದು, ಕಡಲೆ ಕಾಳು, ಸಾಸಿವೆ ಕಾಳು ಗಣಪ ಹೇಮಕೂಟ, ಕಲ್ಲಿನ ರಥ, ಕಮಲ ಮಹಲ್, ಬಡವಿಲಿಂಗ ಇನ್ನೂ ಹಲವಾರು ಆಲಯಗಳು ಕಟ್ಟಡಗಳು ಇವೆ. ಆನೆಗಳವಾಸಕ್ಕೂ ಕಲಾತ್ಮಕ ಕಟ್ಟಡ ಕಟ್ಟಿರುವುದು ಈ ರಾಯನ ವಿಶೇಷ. ಇವೆಲ್ಲ ವೂ ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿವೆ.
4) ಅಜಂತಾ

ಮಹಾರಾಷ್ಟ್ರದಲ್ಲಿ ಇರುವ ಅಜಂತಾದಲ್ಲಿ ಶಿಲ್ಪಕಲೆ, ಚಿತ್ರಕಲೆ ಗಳಿಂದ ಕೂಡಿದ 31 ಗುಹೆಗಳು ಇದ್ದು, ಪ್ರಪಂಚದಾದ್ಯಂತದಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ಶಾತವಾಹನ ಹಾಗೂ ವಕಾಟಕ ರಾಜರು ನಿರ್ಮಿಸಿದ ಈ ಗುಹೆಗಳಲ್ಲಿ ಬುದ್ಧನ ಜೀವನದ ಬಗ್ಗೆ ಶಿಲ್ಪಗಳನ್ನು ಕಾಣಬಹುದು. ಭಾರತದ ಶಿಲ್ಪಕಲೆಯ ಶಾಸ್ತ್ರೀಯ ಪ್ರಾರಂಭ ಇಲ್ಲಿಂದಲೇ ಎಂದು ಹೇಳುತ್ತಾರೆ.
5) ಎಲ್ಲೋರ

ಎಲ್ಲೋರ ಸಹ ಮಹಾರಾಷ್ಟ್ರದಲ್ಲಿ ಇರುವ ಗುಹಾಂತರ ದೇವಾಲಯ. ಇದು ಔರಂಗಾಬಾದಿನಿಂದ 29 ಕಿಮೀ
ದೂರದಲ್ಲಿದೆ. ಇದು ಭಾರತೀಯ ಶಿಲ್ಪಕಲೆಗೆ ಸಾಕ್ಷಿಯಾಗಿ ನಿಂತಿದೆ. ಇಲ್ಲಿ ಒಟ್ಟು 34ಗುಹೆಗಳು ಇದ್ದು ಹಿಂದೂ, ಜೈನ, ಬೌದ್ದ ಎಲ್ಲಾ ಧರ್ಮಗಳಿಗೆ ಸಂಬಂಧಿಸಿದ ಚಿಕ್ಕ ದೊಡ್ಡ ಅತಿದೊಡ್ಡ ಶಿಲ್ಪಗಳಿವೆ. ಇಲ್ಲಿನ ಕೈಲಾಸ ದೇವಸ್ಥಾನ ತುಂಬಾ ಪ್ರಸಿದ್ಧವಾದುದು.ಇವುಗಳನ್ನು 5 ರಿಂದ 10ನೇ ಶತಮಾನಗಳ ಮಧ್ಯೆ ನಿರ್ಮಿಸಲ್ಪಟ್ಟಿದ್ದು, ಪ್ರಸ್ತುತ ಸರಿಯಾದ ನಿರ್ವಹಣೆ ಇಲ್ಲದೇ ಬಾವಲಿಗಳ ವಾಸಸ್ಥಾನವಾಗಿದೆ.
ನೀವು ಇದನ್ನು ಇಷ್ಟಪಡಬಹುದು: ಒಂದು ವರ್ಷದ ಮಗು ಋತುವಿಗೆ ಹಂಪಿ ತೋರಿಸಿದ ಹಿಪ್ಪೀ ರಾಣಿ: ಮಕ್ಕಳ ಜೊತೆ ಟೂರ್ ಹೋಗುವುದು ಹೀಗೆ!
6) ಭೋಧಗಯಾ

ಬಿಹಾರದ ಪಾಟ್ನಾದಿಂದ 96ಕಿಮೀ ದೂರದಲ್ಲಿರುವ ಭೋಧಗಯಾ ಸಿದ್ಧಾರ್ಥನು ಬುದ್ಧನಾಗಿ ಜ್ಞಾನೋದಯ ಪಡೆದ ಸ್ಥಳವಾಗಿದ್ದು, ಸಾಮ್ರಾಟ ಅಶೋಕನು ಕ್ರಿ ಪೂ 250ರಲ್ಲಿ ನಿರ್ಮಿಸಲಾದ ಬುದ್ಧನ ದೇವಾಲಯವಿದ್ದು ಇದೇ ಬುದ್ಧನ ಅತ್ಯಂತ ಹಳೆಯ ದೇವಾಲಯವಾಗಿದೆ. ಇದಲ್ಲದೆ ಬುದ್ಧನ 50 ಅಡಿ ಎತ್ತರದ ಪ್ರತಿಮೆ ಹಾಗೂ ಭೋಧಿವೃಕ್ಷ ಮುಂತಾದ ಆರು ಸಂದರ್ಶನೀಯ ಸ್ಥಳಗಳು ಇವೆ.
7) ಕೋನಾರ್ಕ ಸೂರ್ಯದೇವಾಲಯ

ಇದು ಒಡಿಶಾದ ಪುರಿಯ ಬಳಿ ಇದ್ದು ಈ ಸೂರ್ಯ ದೇವಾಲಯವು ರಥದ ಆಕಾರದಲ್ಲಿ ಇದ್ದು, ಚಕ್ರ, ಕಂಬಗಳು, ಗೋಡೆಗಳು, ಕುದುರೆಗಳು ಎಲ್ಲವೂ ಆ ಕಾಲದಲ್ಲಿ ಪ್ರಚಲಿತವಿದ್ದ ಕಳಿಂಗ ಶೈಲಿಯಲ್ಲಿ ಕಲ್ಲಿನಲ್ಲಿ ಕೆತ್ತಲಾಗಿದೆ. ಇದನ್ನು ಗಂಗವಂಶದ 1ನೇ ನರಸಿಂಹದೇವ 13ನೇ ಶತಮಾನದಲ್ಲಿ ನಿರ್ಮಿಸಿದ್ದಾರೆ. ಇದು ಚಂದ್ರಭಾಗಾ ನದಿಯ ದಡದಲ್ಲಿದೆ.
8) ಕೆಂಪು ಕೋಟೆ

ದೆಹಲಿಯಲ್ಲಿ ಇರುವ ಕೆಂಪುಕೋಟೆಯು ಶಷಜಹಾನನು ತನ್ನ ರಾಜಧಾನಿಯನ್ನು ಆಗ್ರಾದಿಂದ ದೆಹಲಿಗೆ ಬದಲಾಯಿಸಿದಾಗ ಕೆಂಪುಕಲ್ಲಿನಿಂದ ಪರ್ಷಿಯನ್, ಇಂಡೋ _ಇಸ್ಲಾಮಿಕ್, ಟಿರಿಮುಡ್ ಶೈಲಿಗಳನ್ನು ಬಳಸಿ ಕಟ್ಟಲಾಯಿತು. ಇದರಲ್ಲಿ ಖಾಸಗಿ ಮಂಟಪಗಳು ಸಣ್ಣ ಸಣ್ಣ ಕಟ್ಟಡಗಳು ಬಹಳ ಕಲಾತ್ಮಕವಾಗಿ ಕಟ್ಟಲಾಗಿದೆ. ಷಹಜಹಾನ್ ಕಾಲದಲ್ಲಿ ಮೊಗಲ್ ಕಲೆ ಮತ್ತು ವಾಸ್ತುಶಿಲ್ಪವು ಉತ್ತುಂಗಕ್ಕೆ ಏರಿತು.
9) ಸಾಂಚಿಯ ಸ್ತೂಪ

ಮಧ್ಯಪ್ರದೇಶದ ಭೋಪಾಲ್ ನಿಂದ 46ಕಿಮೀ ದೂರದಲ್ಲಿರುವ ಈ ಸ್ತೂಪವು 3ನೇ ಶತಮಾನದಲ್ಲಿ ಸಾಮ್ರಾಟ ಅಶೋಕನಿಂದ ನಿರ್ಮಿತವಾಯಿತು. ಅರ್ಧ ಗೋಳಾಕಾರದ ಈ ಕಲ್ಲಿನ ಕಟ್ಟಡ ನಯನ ಮನೋಹರ ವಾಗಿದ್ದು ಆಗಿನ ಬೌದ್ಧ ಬಿಕ್ಷುಗಳಿಗೆ ಆಶ್ರಯತಾಣವಾಗಿತ್ತು. ಶಾತವಾಹನರಿಂದ ನವೀಕರಿಸಲ್ಪಟ್ಟ ಈ ಸ್ತೂಪವು 12ನೇ ಶತಮಾನದಲ್ಲಿ ಬೌದ್ಧ ಧರ್ಮ ತನ್ನ ಜಪಪ್ರಿಯತೆ ಕಡಿಮೆ ಆಗುವವರೆಗೂ ಬೌದ್ಧರ ಪ್ರವಾಸಿ ತಾಣವಾಗಿತ್ತು.
10) ಬೃಹದೀಶ್ವರ ದೇವಾಲಯ

ತಮಿಳುನಾಡಿನ ತಂಜಾವೂರನಲ್ಲಿರುವ ಬೃಹದೀಶ್ವರ ದೇವಾಲಯ ವಿಶ್ವದಲ್ಲೇ ಗ್ರಾನೈಟ್ ಶಿಲೆಯಲ್ಲಿ ಕೆತ್ತಲಾಗಿರುವ ಏಕೈಕ ದೇವಾಲಯವಾಗಿದೆ.ದೇವಶಿಲ್ಪಿ ವಿಶ್ವಕರ್ಮರ ಮಾರ್ಗದರ್ಶನದಲ್ಲಿ ರಾಜರಾಜಕಚೋಳನು ನಿರ್ಮಿಸಿದ ಈ ದೇಗುಲ ಸೂಕ್ಷ್ಮ ಶಿಲ್ಪಕಲೆಗೆ ಹೆಸರುವಾಸಿ ಯಾಗಿದೆ.
11) ಕಾಜಿರಂಗ ವನ್ಯಜೀವಿ ಅಭಯಾರಣ್ಯ ಧಾಮ

ಇದು ಅಸ್ಸಾಂನಲ್ಲಿ ಇರುವ ವನ್ಯಜೀವಿ ಧಾಮ ಇಲ್ಲಿ ಅಪರೂಪದ ಪ್ರಾಣಿಗಳಾದ ಘೇಂಡಾಮೃಗ, ಬೊಗಳುವ ಜಿಂಕೆ, ಸಾಂಬಾರ್ ಜಿಂಕೆ, ಮೀನುಗಾರ ಕಾಡುಬೆಕ್ಕು, ಲಂಗೂರ್ ಗಂಗಾ ಡಾಲ್ಪಿನ್ ಗಳನ್ನು ಸಂರಕ್ಷಿಸಲಾಗಿದೆ. ಅದಲ್ಲದೆ ಹುಲಿಧಾಮವೂ, ಪಕ್ಷಿಧಾಮವೂ ಉಂಟು ಆನೆಗಳೂ, ಚಿರತೆಗಳೂ, ಕರಡಿಗಳೂ ಇವೆ. 420 ಎಕರೆ ಪ್ರದೇಶದಲ್ಲಿ ಹರಡಿರುವ ಈ ವನ್ಯಜೀವಿಧಾಮವು ಲಾರ್ಡ್ ಕರ್ಜನ್ ಅವರು ತಮ್ಮ ಪತ್ನಿಯ ಸಲಹೆ ಮೇರೆಗೆ ಖಡ್ಗಮೃಗ ಹಾಗೂ ಇನ್ನಿತರ ಅಪರೂಪದ ಪ್ರಾಣಿಗಳ ರಕ್ಷಣೆಗಾಗಿ ಸ್ಥಾಪಿಸಿದರು. ಇದರ ಪ್ರಮುಖ ನೀರಿನ ಮೂಲ ಬ್ರಹ್ಮಪುತ್ರ ನದಿ.
12) ಮಹಾಬಲಿಪುರಂ

ತಮಿಳುನಾಡಿನ ರಾಜಧಾನಿ ಚೆನ್ನೈನಿಂದ 58 ಕಿಮೀ ದೂರದಲ್ಲಿದ್ದು ಇಲ್ಲಿ ಪಲ್ಲವ ರಾಜರು ನಿರ್ಮಿಸಿದ ಈ ದೇವಾಲಯದ ಸಮುಚ್ಚಯದಲ್ಲಿ ಶೋರ್ ಟೆಂಪಲ್, ಗಂಗಾವತರಣ, ಪಂಚರಥಗಳು, ಗಣೇಶರಥ, ಹುಲಿಗುಹೆ ಹೀಗೆ ಹಲವಾರು ಉನ್ನತ ಶಿಲ್ಪಕಲೆಯ ಉದಾಹರಣೆಯಾಗಿ ನೆಲೆನಿಂತಿವೆ. ಇಲ್ಲಿ ಒಂದೇ ಟಿಕೆಟ್ ನಿಂದ ಎಲ್ಲಾ ದೇವಾಲಯಗಳನ್ನೂ ನೋಡಬಹುದು. ಗಂಗಾವತರಣ ಶಿಲ್ಪವನ್ನು ನೋಡುವುದೇ ಒಂದು ರೋಚಕ ಅನುಭವ ಈಗಲೂ ಮಹಾಬಲಿಪುರಂನಲ್ಲಿ ಕಲ್ಲಿನ ಕೆತ್ತನೆ ವ್ಯಾಪಕವಾಗಿ ನಡೆಯುತ್ತಿದೆ.
13) ಸುಂದರ ಬನ್ಸ್

ಪಶ್ಚಿಮ ಬಂಗಾಳದ ಗಂಗಾನದಿಯ ಸಾಗರಮುಖದ 10, 000 ಎಕರೆ ಪ್ರದೇಶದಲ್ಲಿ ಹರಡಿರುವ ಮಾಂಗ್ರೋವ್ ಕಾಡುಗಳು ಹಾಗೂ ಹುಲಿ ಮುಂತಾದ ಕಾಡು ಪ್ರಾಣಿಗಳಿಂದ ಕೂಡಿರುವ ಪ್ರದೇಶವೇ ಸುಂದರ್ ಬನ್ಸ್. ಸುಂದರಿ ಮರಗಳಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಇದು ಒಂದು ರಾಷ್ಟ್ರೀಯ ಉದ್ಯಾನವನ ಆಗಿದ್ದು ಇಲ್ಲಿ ಸುಮಾರು 500ಹುಲಿ, ಕಡಲಾಮೆ, ಡಾಲ್ಪಿನ್, ಮಾನಿಟರ್ ಹಲ್ಲಿ, ಹೆಬ್ಬಾವುಗಳನ್ನು ಸಂರಕ್ಷಿಸಲಾಗಿದೆ. ಇಲ್ಲಿ ಉಪ್ಪು ನೀರಿನ ಮೊಸಳೆಯನ್ನೂ ಕಾಣಬಹುದು. ಸುಂದರ್ ಬನ್ಸ್ ಪಾತ್ರದಲ್ಲಿ ಸಣ್ಣ ಸಣ್ಣ ದ್ವೀಪಗಳೂ ಇವೆ.
ನೀವು ಇದನ್ನು ಇಷ್ಟಪಡಬಹುದು: ನೀವು ವಿದೇಶಕ್ಕೆ ಹೋದಾಗ ಈ ಊರಿನ ಹೆಸರು ನೋಡಿ ಬೆರಗಾಗಬೇಡಿ: ನಮ್ಮ ದೇಶದ ಊರಿನ ಹೆಸರನ್ನೇ ಹೊಂದಿರುವ ವಿದೇಶದ 13 ಊರುಗಳು
14) ಹುಮಾಯೂನ್ ಸಮಾಧಿ

ಇದು ದೆಹಲಿಯಲ್ಲಿ ಇದ್ದು ಬಹುತೇಕ ತಾಜ್ ಮಹಲ್ ಅನ್ನು ಹೋಲುತ್ತದೆ. 1565-1572ರ ನಡುವೆ ಹುಮಾಯೂನ್ ನ ಮೊದಲನೇ ಹೆಂಡತಿ ಬೇಗಂ ಬೇಗ ಇದನ್ನು ನಿರ್ಮಿಸಿದರು. ಹುಮಾಯೂನ್ ಸೇರಿದಂತೆ ಅನೇಕ ಮೊಘಲ್ ಪ್ರತಿಷ್ಟಿತರ ಸಮಿಧಿಗಳ ಸಮುಚ್ಚಯವೇ ಈ ಸ್ಥಳ ಈ ಕಟ್ಟಡವು ಮೊಗಲ್ ವಾಸ್ತುಶಿಲ್ಪ ಹಾಗೂ ಕಲೆಗೆ ಉತ್ತಮ ಉದಾಹರಣೆಯಾಗಿದೆ.
15) ಜಂತರ್ ಮಂತರ್

ಇದು ರಾಜಾಸ್ಥಾನದಲ್ಲಿ 18ನೇ ಶತಮಾನದಲ್ಲಿ ರಜಪೂತ್ ವಂಶದ ರಾಜಾ ಸವಾಯಿಸಿಂಗ್ ನಿರ್ಮಿಸಿದ ಖಗೋಳವೀಕ್ಷಣಾಲಯವಾಗಿದೆ.
ಇಲ್ಲಿ ವಿಶ್ವದ ದೊಡ್ಡ ಕಲ್ಲು ಸುಂಡಿಯಾಲ್ ಸೇರಿದಂತೆ
19 ಮಾನವ ನಿರ್ಮಿತ ಖಗೋಳ ಉಪಕರಣಗಳಿವೆ. ಭಾರತದ ಪುರಾತನ ತಾರಾಲಯವಾಗಿದ್ದು ಭಾರತೀಯರ ವೈಜ್ಞಾನಿಕ ಮನೋಧರ್ಮಕ್ಕೆ ಉದಾಹರಣೆಯಾಗಿದೆ.
16) ಆಗ್ರಾ ಕೋಟೆ

ಈ ಕೋಟೆಯು ಕೆಂಪು ಮರಳುಗಲ್ಲಿನಿಂದ ಆಗ್ರಾದಲ್ಲಿ ನಿರ್ಮಿತವಾಗಿದೆ. ಈ ಕೋಟೆಯ ಆವರಣದಲ್ಲಿ ಮೊಘಲ್ ವಾಸ್ತುಶಿಲ್ಪ , ಪರಂಪರೆ, ವೈಭವವನ್ನು ಬಿಂಬಿಸುವ ಶೀಶ್ ಮಹಲ್(ಕನ್ನಡಿ ಮಂದಿರ)
ಖಾಸ್ ಮಹಲ್ , ಜಹಾಂಗೀರ್ ಅರಮನೆ
ಮೋತಿ ಮಸೀದಿ, ದಿವಾನ್ -ಇ-ಆಮ್ ಮುಂತಾದ ಸುಂದರ ಕಟ್ಟಡಗಳಿವೆ . ಷಹಜಹಾನ್ ಇಲ್ಲಿನ ಜೈಲಿನಲ್ಲಿಯೇ ಮರಣ ಹೊಂದಿದ ಅನ್ನುತ್ತದೆ ಇತಿಹಾಸ.
17) ಫತೇಪುರ್ ಸಿಕ್ರಿ

ಅಕ್ಬರ್ ನು ತನ್ನ ರಣತಂಬೋರ್ ಹಾಗೂ ಚಿತ್ತೋರ್ ಗಳ ಮೇಲೆ ಜಯಗಳಿಸಿದಾಗ ಆ ಫತೇಹ್( ವಿಜಯ)
ನೆನಪಿಗಾಗಿ ಆಗ್ರಾದ ಬಳಿ ಫತೇಪುರ್ ಸಿಕ್ರಿಯನ್ನು ನಿರ್ಮಿಸಿದನು. ಇಲ್ಲಿ ಪ್ರಮುಖವಾಗಿ ಬುಲಂದ್ ದರವಾಜ, ಐದು ಅಂತಸ್ತಿನ ಪಂಚಮಹಲ್, ಜಾಡಾಬಾಯಿಮಹಲ್, ಜಮಾಮಸೀದಿಗಳು ಮೊಘಲ್ ಶೈಲಿಯಲ್ಲಿ ನಿರ್ಮಿತ ವಾಗಿದ್ದು ಪ್ರವಾಸಿಗರನ್ನು ಸೆಳೆಯುತ್ತಿದೆ.
18) ರಾಣೀ ಕಿ ವಾವ್

ಬಿಹಾರದ ಪಟಾನ್ ನಲ್ಲಿ ಸೋಲಂಕಿ ರಾಜವಂಶದ 1ನೇ ಭೀಮದೇವ್ ಅವರ ನೆನಪಿಗಾಗಿ ಅವರ ವಿಧವೆ ರಾಣಿ ಉದಯಮತಿ ನಿರ್ಮಿಸಿದ ಕಲಾತ್ಮಕ ಬಾವಿಯೇ ರಾಣೀ ಕಿ ವಾವ್. ಇದು ಬರೀ ಬಾವಿಯಲ್ಲ ಇಲ್ಲಿ ಜಲಸಂಗ್ರಹಣೆ ಅಲ್ಲದೆ, ತಲೆಕೆಳಗಾದ ದೇವಸ್ಥಾನದ ರಚನೆಯಲ್ಲಿ ಈ ಬಾವಿಯನ್ನು ನಿರ್ಮಿಸಲಾಗಿದೆ. ಏಳು ಹಂತದ ಈ ಬಾವಿಯಲ್ಲಿ ವಿಷ್ಣುವಿನ ಅವತಾರಗಳನ್ನು ಸುಂದರವಾಗಿ ಕೆತ್ತಲಾಗಿದೆ .
19) ಪಟ್ಟದಕಲ್ಲು

ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ ನಲ್ಲಿ ಚಾಲುಕ್ಯ ರಾಜರಿಂದ ದ್ರಾವಿಡ ಹಾಗೂ ನಾಗರ ಶೈಲಿಯಲ್ಲಿ ನಿರ್ಮಿತವಾಗಿರುವ ಹಲವಾರು ದೇವಾಲಯಗಳಿದ್ದು
ಶಿಲ್ಪಕಲೆಗೆ ಹೆಸರಾಗಿವೆ. ಇವು ಮಲಪ್ರಭಾ ನದಿಯ ದಡದಲ್ಲಿದೆ. ಅಪರೂಪದ ಕೆತ್ತನೆ ವಾಸ್ತುಶಿಲ್ಪಗಳಿಂದ ನಿರ್ಮಿತವಾದ ಗಳಗನಾಥ ದೇವಾಲಯ, ಪಾಪನಾಥ ದೇವಾಲಯ, ಮಲ್ಲಿಕಾರ್ಜುನ ದೇವಾಲಯ, ಸಂಗಮೇಶ್ವರ ದೇವಾಲಯ, ವಿರೂಪಾಕ್ಷ ದೇವಾಲಯ , ಕಾಶಿವಿಶ್ವನಾಥ ದೇವಾಲಯ ಹಾಗೂ ಜೈನ ದೇವಾಲಯವಿದ್ದು ದೇಶವಿದೇಶಗಳ ಪ್ರವಾಸಿಗರನ್ನು ಸೆಳೆಯುತ್ತಿದೆ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ