ಅ.19.2023; ನವರಾತ್ರಿಯ ಐದನೆಯ ದಿನ “ಸ್ಕಂದಮಾತೆ”ಯ ಆರಾಧನೆ
ಆಶ್ವಯುಜ ಮಾಸದ ಶುಕ್ಲಪಕ್ಷದ ಪಂಚಮಿಯಂದು ದುರ್ಗಾ ದೇವಿಯ ಅವತಾರವಾದ ಸ್ಕಂದಮಾತೆಯನ್ನು ಆರಾಧಿಸಲಾಗುತ್ತದೆ. ಸ್ಕಂದಮಾತೆಯ ಹಿನ್ನಲೆ ಮತ್ತು ವೈಶಿಷ್ಟ್ಯತೆ ಹಾಗೂ ಮೈಸೂರು ದಸರಾ 2023 ಕಾರ್ಯಕ್ರಮಗಳ ಕುರಿತಾದ ಲೇಖನ.
● ಉಜ್ವಲಾ ವಿ ಯು
ಸ್ಕಂದ (ಕಾರ್ತಿಕೇಯ) ನನ್ನು ಮಡಿಲಿನಲ್ಲಿ ಕೂರಿಸಿಕೊಂಡ ರೂಪದಲ್ಲಿರುವುದರಿಂದ ಇವಳನ್ನು “ಸ್ಕಂದಮಾತೆ” ಎಂದು ಕರೆಯಲಾಗುತ್ತದೆ. ಸ್ಕಂದ ಮಾತೆಗೆ ನಾಲ್ಕು ಭುಜಗಳಿದ್ದು, ಒಂದು ಕೈಯಲ್ಲಿ ಸ್ಕಂದನನ್ನು ಹಾಗೂ ಎರಡು ಕೈಯಲ್ಲಿ ಕಮಲದ ಹೂವನ್ನು ಹಿಡಿದಿರುತ್ತಾಳೆ. ಇನ್ನೊಂದು ಹಸ್ತವು ಅಭಯ ಮುದ್ರೆಯಲ್ಲಿರುತ್ತದೆ.
ತಾರಕಾಸುರನ ವಧೆಗೆಂದೇ ಶಿವ ಪಾರ್ವತಿಯರ ಸುತನಾಗಿ ಜನಿಸಿದವನು ಸ್ಕಂದ. ಸ್ಕಂದನ ಮಾತೆಯಾಗಿರುವುದರಿಂದ ಪಾರ್ವತಿಗೆ “ಸ್ಕಂದಮಾತಾ” ಎಂದು ಕರೆಯಲಾಗುತ್ತದೆ. ಈಕೆಯು ಇಡೀ ಬ್ರಹ್ಮಾಂಡವನ್ನು ನಿಯಂತ್ರಿಸುವ ಮತ್ತು ಸಲಹುವ ತಾಯಿಯಾಗಿದ್ದಾಳೆ.
ಸ್ಕಂದಮಾತೆಯು ಬುಧಗ್ರಹದ ಮೇಲೆ ಆಧಿಪತ್ಯವನ್ನು ಹೊಂದಿದ್ದಾಳೆ. ಯಾರು ಭಕ್ತಿಯಿಂದ ಇವಳನ್ನು ಆರಾಧಿಸುತ್ತಾರೋ ಅವರಿಗೆ ಸಂಪತ್ತು, ಶಾಂತಿ, ನೆಮ್ಮದಿಯನ್ನು ನೀಡುವವಳಾಗಿದ್ದಾಳೆ.
ಮೈಸೂರು ದಸರಾ 3ನೇ ದಿನದಂದು ಅರಮನೆ ವೇದಿಕೆಯಲ್ಲಿ ಆಯೋಜಿತ ಕಾರ್ಯಕ್ರಮಗಳ ವಿವರ:
ಅರಮನೆ ವೇದಿಕೆಯಲ್ಲಿ ಇಂದು ಸಂಜೆ 4.30 ರಿಂದ 5ರ ತನಕ ವಿಶೇಷ ಚೇತನ ಕಲಾವಿದರಿಂದ ಸಂಗೀತ ನೃತ್ಯ ಸಮ್ಮಿಲನ. ನಂತರ ವಿದ್ವಾನ್ ಮೈಸೂರು ಹರೀಶ್ ಪಾಂಡವ್ ಮತ್ತು ವೃಂದದಿಂದ ಸ್ಯಾಕ್ಸೋಫೋನ್ ಫ್ಯೂಷನ್. ಅದಾದ ನಂತರ ಕರ್ನಾಟಕ ಕಲಾಶ್ರೀ ವಿದ್ಯಾ ರವಿಶಂಕರ್ ಮತ್ತು ತಂಡದಿಂದ ಶ್ರೀ ರಾಜರಾಜೇಶ್ವರಿ ನೃತ್ಯರೂಪಕ. ನಂತರ ಲಾಲ್ಗುಡಿ ಜಿಜೆ ಆರ್ ಕೃಷ್ಣನ್ ಮತ್ತು ಲಾಲ್ಗುಡಿ ವಿಜಯಲಕ್ಷ್ಮಿ ಅವರಿಂದ ವಯೋಲಿನ್ ವಾದನ. ಅನಂತರ ವಿದ್ವಾನ್ ಟಿಎಂ ಕೃಷ್ಣ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ.
ಜಗನ್ಮೋಹನ ಅರಮನೆ ವೇದಿಕೆಯಲ್ಲಿ ಇಂದು ಅಕ್ಟೋಬರ್ 19 ಸಂಜೆ 6ರಿಂದ 6.45ರ ತನಕ ತುಮಕೂರು ಕೀರ್ತನ ರಂಗ ಬಳಗದಿಂದ ಕಥಾಕೀರ್ತನ. ನಂತರ ವಿಜಯನಗರ ಪಲ್ಲವಿ ಆರ್ ಮತ್ತು ತಂಡದಿಂದ ಶಾಸ್ತ್ರೀಯ ಸಂಗೀತ. ಮೈಸೂರು ಸಾಕ್ಷಿ ಎನ್ ನಾಯಕ್ ಅವರಿಂದ ನೃತ್ಯ ರೂಪಕ. ಆಮೇಲೆ ಶರಣಪ್ಪ ಹೆಚ್ ಭಜಂತ್ರಿ ಅವರಿಂದ ಹಿಂದೂಸ್ತಾನಿ ಸಂಗೀತ.ಹೀಗೆ 10 ವಿವಿಧ ಸ್ಥಳಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ